ಅನಾಗರಿಕ ವರ್ತನೆ

ಏರ್ ಇಂಡಿಯಾ ವಿಮಾನದಲ್ಲಿ ಇತ್ತೀಚೆಗೆ ನಡೆದ ಘಟನೆ ಮಹಿಳೆಯರನ್ನು ಮಾತ್ರವಲ್ಲ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸಹ ಪ್ರಯಾಣಿಕ ನೊಬ್ಬ ಕುಡಿದ ಮತ್ತಿನಲ್ಲಿ ವಯಸ್ಸಾದ ಮಹಿಳೆ ಮೇಲೆ ಏಕಾಏಕಿ ಮೂತ್ರಿಸುತ್ತಿರ ಬೇಕಾದರೆ ಆ ಮಹಿಳೆಗೆ ಹೇಗಾಗಿರಬೇಡ? ಯಾರೂ ಊಹಿಲಸಾಧ್ಯವಾದ ಘಟನೆ ನಡೆದಾಗ ಆ ಮಹಿಳೆ ಅದೆಷ್ಟು ಆಘಾತಕ್ಕೊಳ ಗಾಗಿರಬೇಕು? ನಾವು ನಮ್ಮದೇ ಮೂತ್ರವನ್ನು ಮುಟ್ಟಿಕೊಳ್ಳಲು ಅಸಹ್ಯ ಪಡುತ್ತೇವೆ ಅಂತಹದರಲ್ಲಿ ಬೇರೆಯವರ ಮೂತ್ರ ನಮ್ಮ ಮೇಲೆ ಬಿದ್ದರೆ ಹೇಗಾಗಬೇಕು ?
ಆ ಯುವಕನ ತಾಯಿಯ ಮೇಲೆ ಬೇರೆ ಯಾರೋ ಒಬ್ಬರು ಮೂತ್ರಿ ಸಿದರೆ ಹೇಗಾಗುತ್ತದೆ ಎಂದು ಅವನು ಯೋಚಿಸಬೇಕು. ಅದು ಬಿಟ್ಟು ಹತ್ತು ಹದಿನೈದು ಸಾವಿರ ಬಿಸಾಕಿ ಕ್ಷಮೆ ಕೇಳಿ ಬಿಟ್ಟರೆ ಸಾಕೆ? ಆಕೆ ಪಟ್ಟ ಆಘಾತ, ಯಾತನೆ, ಮುಜುಗರ, ಅಸಹ್ಯಕ್ಕೆ ಅಷ್ಟೇ ಬೆಲೆಯೇ? ಅಷ್ಟು ಸಾಲದು ಎಂದು ವಿಮಾನದಲ್ಲಿದ್ದ ಸಿಬ್ಬಂದಿ ವರ್ಗದವರೂ ಕ್ರೂರವಾಗಿ ನಡೆದುಕೊಂಡರು. ಆ ಸೀಟನ್ನು ಸ್ವಚ್ಛ ಗೊಳಿಸಿ ಮತ್ತೆ ಅದರಲ್ಲೇ ಕೂರುವಂತೆ ಮಾಡಿದರು. ಬೇರೆ ಯಾವ ಸೀಟು ಸಿಗಲಿಲ್ಲವೆ, ಫರ್ಸ್ಟ್ ಕ್ಲಾಸ್ ನಲ್ಲಿ ನಾಲ್ಕು ಸೀಟುಗಳು ಖಾಲಿ ಇದ್ದವು. ಆಕೆಯನ್ನು ಅಲ್ಲಿ ಕೂರಿಸ ಬಹುದಿತ್ತಲ್ಲವೆ? ಮಾನವೀಯತೆ ಮರೆತು ಬಿಟ್ಟರೆ ಸಿಬ್ಬಂದಿಗಳು? ಮೈಮೇಲೆ ನೀರು ಚೆಲ್ಲಿದಷ್ಟು ಹಗುರವಾಗಿ ತೆಗೆದುಕೊಂಡರಲ್ಲ ವಿಮಾನದ ಸಿಬ್ಬಂದಿಗಳು!

ಇಷ್ಟೆಲ್ಲ ಸಾಲದು ಎಂದು ಆತನ ತಂದೆ ನ್ಯೂಸ್ ಚಾನಲ್ ಗಳಲ್ಲಿ ನೀಡುವ ಅಸಂಬದ್ಧ ಹೇಳಿಕೆ ಕೇಳುತ್ತಿದ್ದರೆ ಮೈಯೆಲ್ಲ ಉರಿದು ಹೋಯಿತು. ಆಕೆ ಬೇಕೆಂದೇ ಇದೆಲ್ಲ ಮಾಡುತ್ತಿದ್ದಾರಂತೆ. ಮಗ ಮೂತ್ರಿ ಸಿದ ಎಂದು ಯಾವ ಸಾಕ್ಷಿ ಇದೆ? ದುಡ್ಡಿ ಗೋಸ್ಕರ ಮಾಡುತ್ತಿದ್ದಾರೆ ಎಂದೆಲ್ಲ ಹೇಳುತ್ತಿದ್ದ ಆ ಕದೀಮ, ಪುತ್ರ ಮೋಹದ ತಂದೆಗೆ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂದಿತ್ತು. ಲಾಂಡ್ರಿ ಖರ್ಚು ಎಂದು ದುಡ್ಡು ಕೊಟ್ಟಿದ್ದಾರೆ ಬೇರೇನು ಬೇಕು ಎನ್ನುತ್ತಿದ್ದ. ಲಾಂಡ್ರಿ ದುಡ್ಡು ಯಾರಿಗೆ ಬೇಕು? ಆಕೆ ಕೂಡ ಬ್ಯುಸಿನೆಸ್ ಕ್ಲಾಸ್ ನಲ್ಲೇ ಪ್ರಯಾಣಿಸುತ್ತಿದ್ದರು ಅಂದರೆ ಅವರಿಗೆ ಲಾಂಡ್ರಿ ದುಡ್ಡು ಕೇಳುವಷ್ಟು ಗತಿ ಕೆಟ್ಟಿಲ್ಲ. ಅದು ಬಿಡಿ, ಆ ಬಟ್ಟೆಗಳನ್ನು ಮತ್ತೆ ಆಕೆ ಧರಿಸುತ್ತಾರೆ ಎಂದು ಯಾವ ನಂಬಿಕೆಯ ಮೇಲೆ ಹೇಳಿದ ಅವನು. ಯಾರಾದರೂ ಅಂತಹ ಕೆಟ್ಟ ಘಟನೆಯನ್ನು ನೆನಪಿಸುವ ಬಟ್ಟೆಗಳನ್ನು ಮತ್ತೆ ಧರಿಸುತ್ತಾರಾ? ಆಕೆಗಾದ ಅನ್ಯಾಯಕ್ಕೆ ನ್ಯಾಯ ಕೇಳುವ ಹಕ್ಕೂ ಇಲ್ಲವೇ ?

ಪೈಲಟ್ ವಿಮಾನ ಇಳಿಸಿದ ಮೇಲೆ ನಿಲ್ದಾಣದಲ್ಲಿ ದೂರು ದಾಖಲಿಸಿ ಬೇಕಿತ್ತು, ಅದನ್ನೂ ಕೂಡ ಮಾಡಿಲ್ಲ, ಬಲವಂತದಿಂದ ರಾಜಿ ಮಾಡಿಸಿ ಕಳುಹಿಸಿ ಬಿಟ್ಟರು. ಮೂತ್ರಿಸಿದ್ದನ್ನು ಮೈಮೇಲೆ ನೀರು ಎರಚಿದಷ್ಟು ಹಗುರವಾಗಿ ತೆಗೆದುಕೊಂಡಿದ್ದು ಎಷ್ಟು ಸರಿ ? ಆಕೆ ಒಂದು ತಿಂಗಳ ನಂತರ ದೂರು ದಾಖಲಿಸಿದ್ದಾರೆ ಎಂದರೆ ಆಕೆಗೆ ಈ ಆಘಾತದಿಂದ ಚೇತರಿಸಿ ಕೊಳ್ಳಲು ಒಂದು ತಿಂಗಳೇ ಬೇಕಾಯಿತು ಎಂದಾಯಿತು. ಹಾಗಾದರೆ ಅದೆಷ್ಟು ಆಘಾತ ವಾಗಿರಬೇಕು ನೀವೇ ಊಹಿಸಿ? ಇನ್ನು ಆಕೆ ಜನ್ಮದಲ್ಲೇ ಒಬ್ಬರೇ ಪ್ರಯಾಣಿಸಲು ಹೆದರಬಹುದು. ಪ್ರಯಾಣ ಯಾಕೆ ಮನೆ ಬಿಟ್ಟು ಹೊರಗೆ ಹೋಗಲು ಸಹ ಭಯ ಪಡಬಹುದು. ಆಕೆ ಮಾತ್ರವಲ್ಲ ಉಳಿದ ಮಹಿಳೆಯರು ಕೂಡ ಒಬ್ಬರೇ ಪ್ರಯಾಣಿಸಲು ಹೆದರಬಹುದು. ಅದಕ್ಕೆಲ್ಲ ಯಾರು ಹೊಣೆ?

ಅಷ್ಟೇ ಅಲ್ಲ ಆತ ಈಗ ತಾನು ಆಕೆಯ ಮೇಲೆ ಮೂತ್ರ ಮಾಡಿದ್ದೆ ಇಲ್ಲ ಎಂದು ಕೋರ್ಟ್ ನಲ್ಲಿ ವಾದಿಸುತ್ತಿದ್ದಾನಂತೆ! ಅವನ ವಕೀಲೆ ಸ್ವತಃ ಮಹಿಳೆಯಾಗಿ, ‘ಆಕೆ ತಾನೇ ಮೂತ್ರ ಮಾಡಿಕೊಂಡಿದ್ದಾಳೆ, ಆ ಮಹಿಳೆ ಒಬ್ಬ ಕಥಕ್ ನೃತ್ಯ ಕಲಾವಿದೆ ಹಾಗಾಗಿ ಅಂತಹವರಿಗೆ ಒಮ್ಮೊಮ್ಮೆ ಹೀಗಾಗುತ್ತದೆ’ ಎಂದು ವಾದಿಸಿದರಂತೆ! ಆಕೆ ಸ್ವತಃ ಮಹಿಳೆಯಾಗಿ ಹೀಗೆ ಹೇಳಬಹುದೇ? ಒಬ್ಬ ಮಹಿಳೆ ಹೇಗೆ ತನ್ನ ಮೇಲೆ ಎರಚಿದಂತೆ ಮೂತ್ರ ಮಾಡಿಕೊಳ್ಳಬಹುದು? ಎಷ್ಟು ಹಾಸ್ಯಾಸ್ಪದ ಅಲ್ಲವೇ? ಆಕೆ ಬಹುದೊಡ್ಡ ವಕೀಲೆಯಾಗಿ ಅಷ್ಟೂ ಸಾಮಾನ್ಯ ಜ್ಞಾನ ಇಲ್ಲವೇ ? ಆಕೆಯ ಮೇಲೆ ಮೂತ್ರ ಮಾಡಿದ್ದು ಸಾಲದು ಎಂದು ಈಗ ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಕೆಸರೆರೆಚುತ್ತಿದ್ದಾರೆ. ಎಷ್ಟೊಂದು ಅಮಾನವೀಯ ಅಲ್ಲವೇ ? ಆತ ದುಡ್ಡಿನ ಬಲದಿಂದ ಈ ಪ್ರಕರಣವನ್ನು ಸಂಪೂರ್ಣವಾಗಿ ತಿರುಚಲು ಬಹುದು ಅಥವಾ ಮುಚ್ಚಿ ಹೋಗಲು ಬಹುದು.
ಆತನ ಬಾಸ್ ಆತನನ್ನು ಕೆಲಸದಿಂದ ವಜಾ ಮಾಡಿದ್ದು ಸರಿಯಾಗಿಯೇ ಇದೆ ಇಲ್ಲದಿದ್ದರೆ ಆತ ವಿಮಾನದಲ್ಲಿ ಮಾಡಿದ್ದನ್ನು ಕಚೇರಿಯಲ್ಲಿ ಕೂಡ ಮಾಡಬಹುದು! ಹಾಗಾಗಿ ಅವನಿಗೆ ತಕ್ಕ ಶಿಕ್ಷೆ ಆಗಲೇಬೇಕು. ಮಾತ್ರವಲ್ಲ
ಆತನಿಗೆ ಕಠಿಣ ಶಿಕ್ಷೆ ಯಾಗಬೇಕು. ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇಂತಹ ಹಲವು ಘಟನೆಗಳು ನಡೆಯಬಹುದು. ಅಷ್ಟೇ ಯಾಕೆ? ಇನ್ನು ಮುಂದೆ ಬಸ್, ರೈಲುಗಳಲ್ಲೂ ಸಹ ನಡೆಯಬಹುದು.ಅಷ್ಟು ಮಾತ್ರವಲ್ಲ ಇನ್ನು ವಿದೇಶಿ ಪ್ರಯಾಣಿಕರು ಭಾರತೀಯ ಪುರುಷರ ಜೊತೆ ಪ್ರಯಾಣಿಸಲು ನಿರಾಕರಿಸಬಹುದು. ಭಾರತೀಯ ಪುರುಷರನ್ನು ಅವಮಾನಿಸಲೂ ಬಹುದು.

ಒಬ್ಬನ ಕೆಟ್ಟ ವರ್ತನೆಯಿಂದಾಗಿ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಇಂತಹ ವರ್ತನೆಗೆ ಅವರ ಪೋಷಕರು ಕೂಡ ಕಾರಣರಾಗಿರುತ್ತಾರೆ. ಗಂಡು ಮಕ್ಕಳು ಏನು ಮಾಡಿದರೂ ಸರಿ, ಹೇಗೆ ಮಾಡಿದರೂ ಸರಿ ಎನ್ನುವ ಧೋರಣೆ. ಗಲ್ಲಿ ಗಲ್ಲಿಗಳಲ್ಲಿ ಇಂತಹ ಪುರುಷರು ಬಹಿರ್ದೆಸೆಗೆ ನಿಲ್ಲುವುದನ್ನು ಈಗಲೂ ಕಾಣಬಹುದು.
ಈಗಾಗಲೇ ಜಾಲತಾಣಗಳಲ್ಲಿ ಹಲವು ವಿದೇಶಿಯರು ಭಾರತೀಯ ಪುರುಷರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಭಾರತೀಯ ಪುರುಷರು ಮನೆಗೆ ಬಂದವರು ಲಾನ್ ನಲ್ಲಿ ಮೂತ್ರ ಮಾಡಿದ್ದಾರೆ,ಪಾತ್ರೆಗಳಲ್ಲಿ ಮೂತ್ರ ಮಾಡಿದ್ದಾರೆ, ಬಾಟಲಿಗಳಲ್ಲಿ ಮೂತ್ರ ಮಾಡಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಅದೆಲ್ಲ ಎಷ್ಟು ನಿಜವೋ ಎಷ್ಟು ಸುಳ್ಳೋ ಯಾರಿಗೆ ಗೊತ್ತು. ಆದರೆ ಮರ್ಯಾದೆ ಹೋಗುವುದು ಭಾರತೀಯ ಪುರುಷರದ್ದು. ಇನ್ನು ಪರಿಹಾರ ಎಷ್ಟು ಕೊಟ್ಟರೂ ಅದನ್ನು ಆಕೆ ಸ್ವೀಕರಿಸುವುದು ಸಂದೇಹ ಯಾಕೆಂದರೆ ಆ ಹಣ ಎಲ್ಲಿಂದ ಬಂತು ಎಂಬ ವಿಷಯ ಆಕೆಯನ್ನು ಆ ಘಟನೆ ಯ ಬಗ್ಗೆ ಯಾವಾಗಲೂ ನೆನಪಿಸುತ್ತಿರುತ್ತದೆ.
ಅವನಿಗೆ ಸರಿಯಾದ ಶಿಕ್ಷೆ ಎಂದರೆ ಒಂದು ವಾರ ಅವನ ಮೇಲೆ ಮೂತ್ರ ಎರಚಿ ಗಂಟೆಗಟ್ಟಲೆ ಹಾಗೇ ಕೂರುವಂತೆ ಮಾಡಬೇಕು. ಇದರಿಂದಲಾದರೂ ಅವನಿಗೆ ಬುದ್ಧಿ ಬರಬಹುದು. ಇನ್ನು ಮುಂದೆ ಅಂತಹ ವರ್ತನೆ ತೋರಿಸಲು ಅಂತಹ ವಿಕೃತ ಮನಸ್ಸಿನವರು ಹೆದರಬೇಕು.

ಜಿರಳೆಯ ಕಣ್ಣಲ್ಲಿ ಮನುಷ್ಯರು

ಟಪ ಟಪ ಸದ್ದು ನಿಂತ ಮೇಲೆ ಜಿರಳೆಮ್ಮ ಓಡಿ ಬಂದು ಒಂದೇ ಸಮನೆ ರೋಧಿಸತೊಡಗಿದಳು. “ಅಯ್ಯಯ್ಯೋ,ನಮ್ ಮಕ್ಕಳೆಲ್ಲ ಸತ್ತು ಹೋಗಿ ಬಿಟ್ರಲ್ಲ ಪ್ಪೋ…”ಎನ್ನುತ್ತ ಬಾಯಿ ಬಾಯಿ ಬಡಿದುಕೊಂಡಳು. “ಏನಾಯ್ತು ಕೋರೋನ ನಾ.. “ಪಕ್ಕದ ಮನೆಯ ಕುಕ್ರೆಚ್ ಮಾಸ್ಕ್ ಸಿಕ್ಕಿಸುತ್ತ ಕೇಳಿದ.
“ಅಯ್ಯೋ, ಅಲ್ಲ, ಈ ಮನೆಯ ಮಂಕಾಳಮ್ಮ ನಮ್ಮ ಮಕ್ಕಳನ್ನೆಲ್ಲ ಚಪ್ಪಲಿಯಿಂದ ಟಪ ಟಪ ಹೊಡೆದು ಹೊಸಕಿ ಹಾಕಿಬಿಟ್ಲು. ಇನ್ನು ನಾನು ಹೇಗೆ ಬದುಕಲಿ? ನೂರೆಂಟು ಮಕ್ಕಳ ತಾಯಿಯಾಗಿ ಜಿನ್ನೆಸ್ ರೆಕಾರ್ಡ್ ಮಾಡಬೇಕು ಅಂತ ಕನಸು ಕಂಡಿದ್ದೆ, ಈಯಮ್ಮನಿಂದ ಎಲ್ಲ ಸರ್ವನಾಶ ಆಗೋಯ್ತು.. ಅವಳಿಗೆ ನಮ್ಮನ್ನೆಲ್ಲ ಕಂಡ್ರೆ ಆಗಲ್ಲ, ಉರಿದುರಿದು ಬೀಳ್ತಾಳೆ. ನಾವೇನು ಮಾಡ್ತೀವಂತ ಅಷ್ಟೊಂದು ದ್ವೇಷ ನಮ್ಮೇಲೆ?, ಏನೋ ಕಸದ ಬುಟ್ಟಿಯಲ್ಲಿದ್ದದ್ದು ತಿಂತೀವಿ, ಮಕ್ಕಳು ಮಾತ್ರ ಸ್ವಲ್ಪ ಚಪ್ಪಲಿ ಅದೂ ಇದೂ ಅಂತ ಮೆಲುಕಾಡೋಕೆ ತಿಂತಾರೆ, ಅಷ್ಟಕ್ಕೇ ಅವರನ್ನೆಲ್ಲ ಕೊಂದೇ ಬಿಡುದಾ? ಮನುಷ್ಯತ್ವನೇ ಇಲ್ಲ ಆಕೆಗೆ, ಇಷ್ಟಕ್ಕೂ ನಾವೇನು ಹಗಲು ಹೊತ್ತಲ್ಲಿ ಓಡಾಡಲ್ಲ. ಅವರ ಕಾಲ ಕೆಳಗೆ ಬಿದ್ದು ತುಳಿಸಿ ಕೊಳ್ಳೋದು ಬೇಡ ಅಂತ. ಆದ್ರೂ ರಾತ್ರಿ ಹೊತ್ತಲ್ಲಿ ಆಚಾನಾಕ್ಕಾಗಿ ಬಂದು ಸಿಕ್ಕವರನ್ನೆಲ್ಲ ಕೊಂದು ಬಿಡ್ತಾಳೆ. ಆ ಹಲ್ಲಿಯಪ್ಪ ಬಹಳ ಒಳ್ಳೆಯವ, ನಮ್ಮನ್ನೆಲ್ಲ ತಿನ್ನೋಕೆ ಬರೋದೇ ಇಲ್ಲ, ಆಯಮ್ಮ ತಿಂಡಿ ಪ್ಲೇಟು ಇಟ್ಟು ಆಚೆ ಹೋದ್ರೆ ಸಾಕು ತಿಂಡಿ ನೆಕ್ತಾ ಕೂತಿರ್ತಾನೆ…” ಮೀಸೆ ತಿಕ್ಕುತ್ತ ನುಡಿದಳು ಜಿರಳೆಮ್ಮ.
“ನೀನು ಮರ್ತಿದ್ದೀಯಾ? ಮಂಕಾಳಮ್ಮನ ಹೊಸ ಪ್ಯೂರ್ ಸಿಲ್ಕ್ ಸೀರೆ ಸಖತ್ತಾಗಿದೆ ಅಂತ ನೀನೇ ತಾನೇ ತಿಂದಿದ್ದು, ಅವಳಿಗೆ ಕೋಪ ಬರಲ್ವಾ? ಅದೂ ಅಲ್ಲದೆ ಆಯಮ್ಮ ಯಾವಾಗಲೂ ಶುಚಿ ಮಾಡ್ತಾನೆ ಇರ್ತಾಳೆ, ನಮ್ಮ ಹಿಕ್ಕೆ ವಾಸನೆ ಹೇಗೆ ಸಹಿಸ್ಕೋತಾಳೆ. ಸಿಕ್ಕಿದ್ದಕ್ಕೆಲ್ಲ ಬಾಯಿ ಹಾಕಿದ್ರೆ ಸಿಟ್ಟು ಬಾರದೆ ಇರುತ್ತಾ? ಆದ್ರೆ ನಮ್ಮ ಮನೆಯವರೇ ವಾಸಿಪ್ಪ. ಹಿಂದಿ ಮಾತಾಡೋ ಜನ, ಬಟ್ಟೆ ಒಗ್ಯೋದೆ ಇಲ್ಲ, ಅವರ ಶೂ, ಸಾಕ್ಸ್ ಹತ್ರ ಹೋದ್ರೆ ನಮಗೇ ವಾಕರಿಕೆ ಬರುತ್ತೆ ಅಷ್ಟೊಂದು ಕೆಟ್ಟ ವಾಸನೆ. ಆದ್ರೆ ಅಡಿಗೆ ಮನೇಲಿ ತಿಂಡಿ ಡಬ್ಬ, ತಿಂದು ಬಿಟ್ಟ ಪ್ಲೇಟು ಎಲ್ಲ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ನಮಗಂತೂ ದಿನಾ ಭೂರಿ ಭೋಜನ! ಸ್ನಾನ ಮಾಡೋದೂ ಕೂಡ ಇಲ್ಲ, ಮನೆ ಎಲ್ಲ ಬೆವರಿನ ವಾಸನೆಯಿಂದ ಘಮ ಘಮ ಅಂತಿರುತ್ತೆ! ಒಂದ್ ದಿನ ಕೂಡ ನಮ್ಮ ತಂಟೆಗೆ ಬಂದವರಲ್ಲ, ಕಂಠಮಟ್ಟ ಕುಡಿದು ಮಲಗಿದ್ರೆ ನಾವೆಲ್ಲ ಅವರ ಮೇಲೆ ಹರಿದಾಡಿದ್ರೂ ಗೊತ್ತಾಗಲ್ಲ ಅವ್ರಿಗೆ, ಎಷ್ಟೋ ಸಲ ಟ್ರೆಕ್ಕಿಂಗ್ ಅಂತ ಅವರ ಬಾಯೊಳಗೆ ಹೊಕ್ಕು ವಾಪಾಸ್ ಬಂದಿದೀವಿ, ನೀನೂ ನಮ್ಮನೆಗೆ ಬಂದ್ ಬಿಡು, ಅದ್ಯಾಕೆ ಹಠ ಮಾಡ್ಕೊಂಡು ಈಯಮ್ಮನ ಮನೇಲಿ ಕೂತಿದ್ದೀಯಾ? ಇಲ್ಲೇ ಇದ್ರೆ ನೀನೇ ಉಳಿಯಲ್ಲ ಒಂದಿನ, ನೋಡ್ತಾ ಇರು. ನಮ್ಮನೆ ಬೇಡಾ ಅಂದ್ರೆ ಆ ಎದುರುಗಡೆ ಮನೆಗೆ ಹೋಗು” ಸಲಹೆ ನೀಡಿದ ಕುಕ್ರೆಚ್.
“ಆ ಮನೆನಾ? ಅಲ್ಲಿ ಏನಿದೆ ಅಂತ ಹೋಗೋದು, ಅಲ್ಲಿರೋರು ಸ್ಟೂಡೆಂಟ್ಸ್. ಅಡಿಗೆ ಮಾಡೋದಿಲ್ಲ, ಬೇಕರಿ ತಿಂಡಿ ಕೂಡ ತಂದು ತಿನ್ನಲ್ಲ, ಎಲ್ಲ ಹೊರಗಡೇನೆ ಮುಗಿಸಿ ಬರ್ತಾರೆ. ಡ್ರಗ್ಸ್ ತೊಗೊಂಡು ರಾತ್ರಿ ಎಲ್ಲ ಕುಣಿದು ಕುಪ್ಪಳಿಸುತ್ತಾ ಇರ್ತಾರೆ, ನಮಗಂತೂ ಅಲ್ಲಿದ್ರೆ ಬರಗಾಲನೇ” ಜಿರಲೆಮ್ಮ ನಿಟ್ಟುಸಿರು ಬಿಟ್ಟಳು.
“ಹಾಗಿದ್ರೆ ಆ ಮೂರನೇ ಮನೆಗೆ ಹೋಗು..” “ಅಯ್ಯಯ್ಯೋ ಆ ಮನೆ ಮಾತ್ರ ಬೇಡಾಪಾ ..”
” ಯಾಕೆ.. ?’
ಆ ಮನೇಲಿ ಇರೋದು ಚೀನಾದವರು, ನಮ್ಮನ್ನೆಲ್ಲ ಬಿಸಿ ಬಿಸಿ ಎಣ್ಣೆಯಲ್ಲಿ ಕರಿದು ಕರುಂ ಕುರುಂ ಅಂತ ತಿಂತಾರೆ, ನಮ್ಮ ಮೊಟ್ಟೆಗಳನ್ನು ಸೂಪ್ ಮಾಡಿ ಕುಡಿತಾರೆ, ದೇವರ ದಯೆಯಿಂದ ನಮ್ಮ ಮೊಟ್ಟೆಗಳು ಬಹಳ ಚಿಕ್ಕವು ಇಲ್ಲದಿದ್ರೆ ಆಮ್ಲೆಟ್ ಕೂಡ ಮಾಡಿ ತಿಂತಿದ್ರೇನೋ! ಆಗಾಗ ಅವರು ನಮ್ಮನೆಗೆ ಬರ್ತಾರೆ. ಈ ಮಂಕಾಳಮ್ಮಾ ಒಂದು ಕವರಲ್ಲಿ ನಮ್ಮವರನ್ನೆಲ್ಲ ತುಂಬಿಸಿ ಅವ್ರಿಗೆ ಕೊಡ್ತಾಳೆ!
ಮೊದ್ಲು ನಮ್ಮವರ ಮೇಲೆಲ್ಲ ಸ್ಪ್ರೇ ಮಾಡಿ ಸಾಯಿಸ್ತಿದ್ಲು. ಒಮ್ಮೆ ನೆಲದ ಮೇಲೆ ಬಿದ್ದ ಸ್ಪ್ರೇ ಮೇಲೆ ಕಾಲು ಜಾರಿ ಬಿದ್ದು ಕೈ ಮುರ್ಕೊಂಡ್ಲು, ನಂಗಂತೂ ಅದನ್ನು ನೋಡೋವಾಗ ಬಹಳ ಖುಷಿಯಾಗಿತ್ತು, ಆಮೇಲೆ ಸ್ವಲ್ಪ ದಿನ ನಮ್ಮ ತಂಟೆಗೆ ಬಂದಿಲ್ಲ ಹ ಹಾ…ಅದರ ನಂತರ ಚಪ್ಪಲಿಯಿಂದ ಹೊಡೆಯೋಕೆ ಶುರು ಮಾಡಿದ್ಲು”
“ಹೂಂ.. ಈ ಮನುಷ್ಯರಿಂದ ನಮ್ಗೆ ಉಳಿಗಾಲನೇ ಇಲ್ಲ, ಎಲ್ಲ ಮನುಷ್ಯರು ಕೊರೋನದಿಂದ ಸತ್ ಹೋದ್ರೆ ಎಷ್ಟು ಚೆನ್ನಾಗಿತ್ತು”
“ನಿನ್ನ ತಲೆ, ಅವರಿಲ್ಲಾಂದ್ರೆ ನಾವೂ ಇರಲ್ಲ, ಅವರಿಂದಾಗಿ ನಮ್ಗೆ ಹೊಟ್ಟೆ ತುಂಬಾ ಸಿಗೋದು ಇಲ್ಲಾಂದ್ರೆ ನಮ್ಗೆ ತಿಂಡಿ ಎಲ್ಲ ಎಲ್ಲಿಂದ ಸಿಗಬೇಕು?”
“ಓಹ್! ಹೌದಲ್ವಾ!? ನೀನು ಭಾರಿ ಜಾಣೆ…” ಟಪ್ ಟಪ್.. “ಕೊನೆಗೂ ಇಬ್ರೂ ಸಿಕ್ಕಿಬಿಟ್ರಲ್ವಾ ..” ಮಂಕಾಳಮ್ಮನ ಧ್ವನಿ!

ವ್ಯಾಕ್ಸಿನ್- ನನ್ನ ಅನುಭವ

ಕೊರೋನ ಲಸಿಕೆ ಬಂದರೂ ಜನರಿಗೆ ಅದೇನೋ ಅವ್ಯಕ್ತ ಭಯ. ಲಸಿಕೆ ತೆಗೆದುಕೊಂಡರೆ ಹಾಗಾಗುತ್ತಂತೆ, ಹೀಗಾಗುತ್ತಂತೆ, ಏನೇನೋ ಅಡ್ಡ ಪರಿಣಾಮಗಳೂ ಆಗುತ್ತಂತೆ ಎಂದೆಲ್ಲ ಗಾಳಿ ಸುದ್ದಿಗಳು ನಿಜವೇನೋ ಎಂದು ಜನರೆಲ್ಲ ನಂಬಿ ಭಯಭೀತರಾಗಿದ್ದರು. ಒಂದು ಕಡೆ ಕೊರೋನ ಇನ್ನೊಂದು ಕಡೆ ಲಸಿಕೆ! ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿತ್ತು ನಮ್ಮ ಜನರ ಪರಿಸ್ಥಿತಿ. ನಾನೂ ಇದಕ್ಕೆ ಹೊರತಾಗಿರಲಿಲ್ಲ! ಕೋರೋನದಿಂದ ತಪ್ಪಿಸಿಕೊಳ್ಳೋಣ ಎಂದರೆ ಲಸಿಕೆ ಗುಮ್ಮನಂತೆ ಕಾಡುತ್ತಿತ್ತು. ಲಸಿಕೆ ತೆಗೆದುಕೊಂಡವರು ಜ್ವರ, ಮೈ ಕೈ ನೋವು, ಇತ್ಯಾದಿ ಹೇಳುವಾಗಲೇ ನನಗೆ ಜ್ವರ ಬಂದಂತೆ ಆಗುತ್ತಿತ್ತು. ಆದರೂ ಕೋರೋನದಿಂದ ಬಚಾವಾಗಲು ಅದೊಂದೇ ದಾರಿಯಾಗಿತ್ತು. ಹೀಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಲಸಿಕೆ ಹಾಕಿಸಿ ಕೊಳ್ಳುವ ನಿರ್ಧಾರ ಮಾಡಿದೆ. ಧೈರ್ಯಕ್ಕೆ ಮಗನ ಸ್ನೇಹಿತರೊಬ್ಬರು (ಡಾಕ್ಟರ್) ಊರಿನಲ್ಲಿ ಇರುವ ಸಮಯದಲ್ಲೇ ಲಸಿಕೆ ಹಾಕಿಸಿಕೊಳ್ಳುವುದು ಎಂದು ತೀರ್ಮಾನವಾಯಿತು. ನನಗೆ ಏನೇ ಆದರೂ ತಕ್ಷಣ ಬಂದು ಸಹಾಯ ಮಾಡುತ್ತೇನೆ ಎಂದು ಅವರ ಎರಡು ಫೋನ್ ನಂಬರ್ ಗಳನ್ನು ಕೊಟ್ಟರು. ಅದೇ ಧೈರ್ಯದಲ್ಲಿ ಲಸಿಕೆ ಹಾಕಿಸಿ ಕೊಳ್ಳಲು ರಿಜಿಸ್ಟರ್ ಮಾಡಿಸಿದೆ.
ಮನೆಯಿಂದ ಹೊರಟಾಗ ಕ್ಷೇಮವಾಗಿ ಮನೆಗೆ ಮರಳುವಂತೆ ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಲಸಿಕಾ ಕೇಂದ್ರದತ್ತ ನನ್ನ ಸವಾರಿ ಹೊರಟಿತು. ಅಲ್ಲಿ ಮೊದಲು ಕಂಡ ಸಿಸ್ಟರ್ ಹತ್ತಿರ ನನ್ನ ಭಯ ತೋಡಿಕೊಂಡೆ. “ಹಾಗೇನೂ ಆಗಲ್ಲ, ಸ್ವಲ್ಪ ಜ್ವರ ಮೈ ಕೈ ನೋವು ಕಾಣಿಸಿಕೊಳ್ಳಬಹುದು, ಎಷ್ಟೆಂದರೂ ಅದು ಆಂಟಿಬಾಡಿ ಅಲ್ವಾ, ನಿಮ್ಮ ದೇಹದೊಳಕ್ಕೆ ಹೋದಾಗ ಪ್ರತಿರೋಧ ಸಹಜ. ಆದರೆ ಅದೆಲ್ಲ ಎರಡು ಮೂರು ದಿನದೊಳಗೆ ನಿಲ್ಲುತ್ತದೆ. ಗಾಬರಿ ಪಡಬಾರದು. ಲಸಿಕೆ ತೆಗೆದುಕೊಳ್ಳುವಾಗ ಹೊಟ್ಟೆ ತುಂಬಿರಬೇಕು, ಧೈರ್ಯವಾಗಿರಿ ಏನೂ ಆಗುವುದಿಲ್ಲ, ಎಷ್ಟೋ ಜನ ಹಾಕಿಸಿಕೊಂಡಿದ್ದಾರೆ ಏನೂ ಆಗಿಲ್ಲ” ಎಂಬ ಸಿಸ್ಟರ್ ಮಾತಿಗೆ ಕೊಂಚ ನಿರಾಳವಾದೆ.

ಅಲ್ಲಿಯೇ ಇದ್ದು ಕಾಯುತ್ತ ಇದ್ದಂತೆ ಒಳಗಿನಿಂದ ಲಸಿಕೆ ತೆಗೆದುಕೊಂಡ ಮಹಿಳೆಯೊಬ್ಬಳು ಹೊರ ಬರುತ್ತಿರುವುದು ಕಾಣಿಸಿತು. ಆಕೆಯ ಒಂದು ಕೈಗೆ ಬ್ಯಾಂಡೇಜ್, ಒಂದು ಕಾಲು ಸ್ವಲ್ಪ ಎಳೆದುಕೊಂಡೆ ನಡೆಯುತ್ತಿದ್ದಳು. ಆಕೆಯನ್ನು ಕಂಡ ಮೇಲಂತೂ ನನ್ನಲ್ಲಿ ಧೈರ್ಯ ತುಂಬಿ ತುಳುಕಾಡಿತು. ನನ್ನ ಸರದಿ ಬಂದಾಗ ಧೈರ್ಯದಿಂದಲೇ ಹೋದೆ. ಸೂಜಿ ಚುಚ್ಚಿದಾಗ ನೋವಾಗಲಿಲ್ಲ. ಸಿಸ್ಟರ್ ಗೆ ಹೇಳಿದೆ. ಮನೆಯಲ್ಲಿ ಇರುವೆ ಕಚ್ಚಿ ಕಚ್ಚಿ ಈಗ ಇಂಜೆಕ್ಷನ್ ನೋವೇ ಗೊತ್ತಾಗುತ್ತಿಲ್ಲ ಎಂದು. ಅವರೆಲ್ಲ ಹೋ ಎಂದು ನಕ್ಕರು. ಜ್ವರ ಬಂದರೆ ಮಾತ್ರೆ ತೆಗೆದುಕೊಳ್ಳಿ ಎಂದು ಹೇಳಿ ಬರೆದು ಕೊಟ್ಟರು. ಅರ್ಧ ಗಂಟೆ ಅಲ್ಲೇ ಕುಳಿತುಕೊಳ್ಳಲು ಸ್ಥಳ ತೋರಿಸಿದರು.

ಸುಮಾರು ಕಾಲು ಗಂಟೆ ನಂತರ ಟೀ, ಕಾಫಿ ಬಂದಿತು. ನಾನು ತೆಗೆದುಕೊಳ್ಳಲಿಲ್ಲ. ಅಷ್ಟೊಂದು ಬಿಸಿ, ಸ್ಟ್ರಾಂಗ್ ನಾನು ಕುಡಿಯುವುದೇ ಇಲ್ಲ. ಅರ್ಧ ಗಂಟೆಯ ನಂತರ ನಾನು ಅಲ್ಲಿಂದ ಹೊರಟು ಬಂದೆ. ಮೆಡಿಕಲ್ ಶಾಪ್ ಗೆ ಹೋಗಿ ಜ್ವರದ ಮಾತ್ರೆ ಕೇಳಿದೆ. ಆ ಹುಡುಗಿ ಹಿಂದೆ ತಿರುಗಿ ಅಲ್ಲಿ ನಿಂತಿದ್ದವನ ಬಳಿ ಮಾತ್ರೆ ಕೊಡಿ ಎಂದು ಹೇಳಿದಳು. ಹಿಂಬದಿಯಲ್ಲಿ ನಿಂತಿದ್ದವ ಕಣ್ಣುಗಳನ್ನು ದೊಡ್ಡದಾಗಿಸಿಕೊಂಡು ಭಯದಿಂದಲೇ ನನ್ನತ್ತ ನೋಡಿದ. ನನಗೆ ಕೋರೋನ ಆಗಿರಬೇಕು ಅಂತ ಅನುಮಾನ ಅವನಿಗೆ! “ನಾನು ವ್ಯಾಕ್ಸೀನ್ ತೆಗೆದುಕೊಂಡಿದ್ದೇನೆ, ಜ್ವರ ಬಂದರೆ ಇರಲಿ ಅಂತ ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದೆ.
ಮಾತ್ರೆ ಕೊಂಡುಕೊಂಡು ಅಲ್ಲಿಂದ ಮನೆಯತ್ತ ಹೊರಟೆ. ದಾರಿಯಲ್ಲಿ ಹೋಗುವಾಗ ತರಕಾರಿ ಅಂಗಡಿ ಕಾಣಿಸಿತು. ನನಗಿಷ್ಟವಾದ ತರಕಾರಿಗಳು ತುಂಬಿ ತುಳುಕುತ್ತಿದ್ದವು. ಬಾಯಲ್ಲಿ ನೀರೂರಿತು. ಈಗ ತಾನೇ ವ್ಯಾಕ್ಸೀನ್ ತೆಗೆದುಕೊಂಡೆ, ಭಾರ ಹೊರಲು ಆಗದಿದ್ದರೆ…? ಬೇಡ ಎನಿಸಿತು ಸೀದಾ ನಡೆದುಕೊಂಡು ಹೋದೆ. ಬಿರು ಬಿಸಿಲಿಗೆ ಲಸಿಕೆ ಪ್ರಭಾವ ಸೇರಿ ತಲೆ ತಿರುಗಿ ಬಿದ್ದರೆ ಎಂದು ಭಯವಾಯಿತು. ದಾರಿಯಲ್ಲಿ ಸಿಕ್ಕ ರಿಕ್ಷಗಳಿಗೆ ಕೈ ತೋರಿಸಿದೆ. ಯಾವುದೂ ನಿಲ್ಲಲಿಲ್ಲ. ದುಡ್ಡು ಉಳೀತು ಅಂದುಕೊಳ್ಳುತ್ತ ಕೊಡೆ ಬಿಡಿಸಿಕೊಂಡು ಆರಾಮವಾಗಿ ನಡೆದುಕೊಂಡು ಹೋಗಿ ಮನೆ ತಲುಪಿದೆ. ಕೈ ಕಾಲು ತೊಳೆದುಕೊಂಡು ಹಾಸಿಗೆ ಮೇಲೆ ಬಿದ್ದೆ.

ಮನೆಯಿಂದ ಹೊರಡುವ ಮುನ್ನವೇ ಎರಡು ದಿನಗಳಿಗಾಗುವಷ್ಟು ಅಡಿಗೆ, ಮನೆ ಕೆಲಸ ಎಲ್ಲ ಮುಗಿಸಿಕೊಂಡು ಹೋಗಿದ್ದೆ. ಹಾಗಾಗಿ ಮಾಡಲು ಕೆಲಸವಿಲ್ಲದೆ ಹಾಯಾಗಿ ಮಲಗಿದೆ. ಸಂಜೆವರೆಗೂ ಚೆನ್ನಾಗಿಯೇ ಇದ್ದೆ. ಇಪ್ಪತ್ನಾಲ್ಕು ಗಂಟೆಯ ಬಳಿಕ ಜ್ವರ ಮೈ, ಕೈ ನೋವು ಬರಬಹುದು ಎಂದು ಹೇಳಿದ್ದರಿಂದ ಆರಾಮವಾಗಿ ಇದ್ದೆ.
ರಾತ್ರಿ ಊಟ ಮುಗಿಸಿ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ಟೀವಿ ನೋಡುತ್ತ ಕುಳಿತೆ. ರಾತ್ರಿ ಎಂಟೂವರೆ ಗಂಟೆಯ ಅಷ್ಟೊತ್ತಿಗೆ ಚಳಿಯ ಅನುಭವವಾಯಿತು. ಸ್ಪಲ್ಪ ಹೊತ್ತಿನಲ್ಲೇ ಚಳಿ ತಡೆಯಲಾಗದೆ ಮೈ ಗಡಗಡ ನಡುಗಲು ಶುರುವಾಯಿತು! ಇಂಥಾ ಬೇಸಿಗೆಯಲ್ಲಿ ಯಾಕೆ ಇಷ್ಟೊಂದು ಚಳಿಯಾಗುತ್ತಿದೆ ಅನಿಸಿ ಬ್ಲಾಂಕೆಟ್ ಹೊದ್ದುಕೊಂಡೆ. ಆರಾಮವೆನಿಸಿತು. ಸ್ವಲ್ಪ ಹೊತ್ತಿನ ಬಳಿಕ ಚಳಿ ಇನ್ನಷ್ಟು ಜಾಸ್ತಿಯಾಯಿತು. ಮೈ ಮೇಲೆ ಬಂದವರಂತೆ ನನ್ನ ಮೈ ನಡುಗುತ್ತಿತ್ತು! ಹಲ್ಲುಗಳು ಕಟಕಟ ಶಬ್ದ ಮಾಡಲು ಶುರು ಮಾಡಿದವು! ಬೇಗನೆ ಹೋಗಿ ಸ್ವೆಟರ್ ಧರಿಸಿದೆ. ಇದು ಲಸಿಕೆ ಪರಿಣಾಮ! ಇನ್ನೂ ಏನೆಲ್ಲ ಕಾದಿದೆಯೋ ಎಂದು ಭಯವಾಗಿ ಟಿವಿ ಆಫ್ ಮಾಡಿ ಮಲಗಿದೆ. ಸುಮಾರು ಹತ್ತು ಕಾಲು ಗಂಟೆಗೆ ಮೈಯೆಲ್ಲ ವಿಪರೀತ ಬಿಸಿಯೇರತೊಡಗಿತು. ನನಗೆ ಭಯವಾಗಿ ಹೊದ್ದ ಬ್ಲಾಂಕೆಟ್, ಸ್ವೆಟರ್ ಕಿತ್ತು ಬಿಸಾಕಿದೆ. ಥರ್ಮಾಮೀಟರ್ ಬಾಯಲ್ಲಿಟ್ಟು ನೋಡಿದರೆ ನೂರ ಮೂರನ್ನೂ ಕೂಡ ದಾಟಿ ಮುಂದಕ್ಕೆ ಓಡುತ್ತಿತ್ತು. ಭಯವಾಗಿ ಅದನ್ನು ನೋಡದೆ ಹಾಗೆ ಇಟ್ಟೆ. ಬೇಗನೆ ಮಾತ್ರೆ ತೆಗೆದುಕೊಳ್ಳಬೇಕು ಎಂದುಕೊಂಡೆ. ಆದರೆ ಖಾಲಿ ಹೊಟ್ಟೆ ಬೇಡ ಎಂದು ಫ್ರಿಜ್ಜಿನಲ್ಲಿದ್ದ ಚಪಾತಿ ತೆಗೆದು ಬಿಸಿ ಮಾಡಿ ಸಕ್ಕರೆ ಹಾಕಿಕೊಂಡು ತಿಂದೆ. ಜೊತೆಗೆ ಹಾಲು ಬಿಸಿ ಮಾಡಿ ಕುಡಿದು ಮಾತ್ರೆ ತೆಗೆದುಕೊಂಡೆ. ಒಂದು ಗಂಟೆಯಾದರೂ ಜ್ವರ ಇಳಿಯುವ ಲಕ್ಷಣ ಕಾಣಿಸಲಿಲ್ಲ. ಹೇಗೋ ಎದ್ದು ನೀರನ್ನು ಫ್ರೀಜರ್ ನಲ್ಲಿ ತಣ್ಣಗಾಗಲು ಇಟ್ಟೆ. ಒಂದು ತೆಳ್ಳಗಿನ ಬಟ್ಟೆ ತಂದಿಟ್ಟೆ. ನೀರು ಸ್ವಲ್ಪ ತಣ್ಣಗಾದ ಮೇಲೆ ಎದ್ದುಹೋಗಿ ನೀರಿನ ಪಾತ್ರೆ ತಂದು ಬಟ್ಟೆಯನ್ನು ನೀರಲ್ಲಿ ಮುಳುಗಿಸಿ ಹಿಂಡಿ ಹಣೆಯ ಮೇಲಿಟ್ಟುಕೊಂಡು ಮಲಗಿದೆ. ನಿದ್ದೆ ಬರಲಿಲ್ಲ. ಆಗಾಗ ತಣ್ಣೀರ ಬಟ್ಟೆ ಪಟ್ಟಿ ಹಣೆಯ ಮೇಲೆ, ಹೊಟ್ಟೆಯ ಮೇಲೆ ಇಡುತ್ತಾ ಬಂದೆ. ಅಷ್ಟೆಲ್ಲ ಆದರೂ ನನಗೆ ಡಾಕ್ಟರ್ ನೆನಪೇ ಆಗಲಿಲ್ಲ!

ರಾತ್ರಿ ಎರಡೂವರೆ ನಂತರ ಜ್ವರ ಕಡಿಮೆಯಾಗಿ ನಿದ್ದೆ ಬಂದಿತು. ಬೆಳಗ್ಗೆ ಎದ್ದಾಗ ಜ್ವರ ಬಿಟ್ಟು ಸ್ವಲ್ಪ ಬೆವರು ಕೂಡ ಬಂದಿತು. ಅಬ್ಬಾ ಎನ್ನುತ್ತ ಖುಷಿಪಟ್ಟೆ. ಮಗನ ಸ್ನೇಹಿತ ಡಾಕ್ಟರ್ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಜ್ವರ ಮತ್ತೆ ಬರುತ್ತದೆ, ನಾಳೆ ಬೆಳಿಗ್ಗೆ ಪೂರ್ತಿಯಾಗಿ ಹುಶಾರಾಗುತ್ತಿರಿ ಎಂದರು. ಮಗನೂ ಆಗಾಗ ವಿಚಾರಿಸುತ್ತಿದ್ದ. ಅವತ್ತು ಸ್ವಲ್ಪ ಮನೆಕೆಲಸ ಮಾಡಿದೆ. ಇಂಜೆಕ್ಷನ್ ಚುಚ್ಚಿದ ಕೈ ನೋಯಲು ಶುರುವಾಯಿತು. ಮಧ್ಯಾಹ್ನದ ಹೊತ್ತಿಗೆ ಸಣ್ಣಗೆ ಜ್ವರ ಶುರುವಾಯಿತು. ಆದರೂ ಟಿವಿ ನೋಡುತ್ತ ಕುಳಿತೆ. ರಾತ್ರಿ ಊಟ ಮಾಡಿ ಟಿವಿ ನೋಡುತ್ತಿದ್ದೆ. ಮತ್ತೆ ಸ್ವಲ್ಪ ಚಳಿ ಶುರುವಾಯಿತು. ಜ್ವರ ಬಂದಂತಾಯಿತು. ಥರ್ಮಾಮೀಟರ್ ಇಟ್ಟು ನೋಡಿದರೆ 102 ಡಿಗ್ರಿ ತೋರಿಸುತ್ತಿತ್ತು. ಓಹ್! ನಿನ್ನೆಯ ಪುನರಾವರ್ತನೆ ಆಗುತ್ತದೆ ಎಂದು ಭಯವಾಗಿ ಬೇಗನೆ ಮಾತ್ರೆ ತೆಗೆದುಕೊಂಡು ಮಲಗಿದೆ. ಮಲಗುವ ಮುನ್ನ ಎರಡು ಪಾತ್ರೆ ಗಳಲ್ಲಿ ನೀರು ಹಾಕಿ ಫ್ರೀಜರ್ ನಲ್ಲಿಟ್ಟೆ. ಜ್ವರ ಏರಿದರೆ ತಣ್ಣೀರ ಬಟ್ಟೆ ಪಟ್ಟಿ ಹಾಕಲು ಬೇಕಾಗುತ್ತದಲ್ಲ. ಕುಡಿಯಲು ನೀರನ್ನು ಹಾಸಿಗೆಯ ಬಳಿ ತಂದಿಟ್ಟು ಮಲಗಿದೆ. ಜ್ವರ ಜಾಸ್ತಿಯಾಗದಿದ್ದರೆ ತಣ್ಣೀರ ಬಟ್ಟೆ ಪಟ್ಟಿ ಬೇಡ ಎಂದುಕೊಂಡು ಮಲಗಿದೆ.

ರಾತ್ರಿಯಲ್ಲಿ ಯಾವಾಗಲೋ ಎಚ್ಚರವಾಯಿತು. ಮೈಯೆಲ್ಲ ಬೆವರಿ ಧರಿಸಿದ ಬಟ್ಟೆ ಎಲ್ಲ ಒದ್ದೆಯಾಗಿತ್ತು. ಜ್ವರ ಪೂರ್ತಿಯಾಗಿ ಬಿಟ್ಟಿತು ಎಂದು ಖುಷಿಯಾಯಿತು. ಬೆಳಗ್ಗೆ ಎದ್ದಾಗ ಉಲ್ಲಾಸದಿಂದ ಇದ್ದೆ. ಕೈ ನೋವು ಕೂಡ ಮಾಯವಾಗಿತ್ತು. ಪೂರ್ತಿ ಹುಷಾರಾದೆ ಎಂದು ಖುಷಿಯಾಯಿತು. ಈಗ ನಾನು ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ನನ್ನ ಹಾಗೆ ನೀವು ಭಯ ಪಡಬೇಡಿ. ಏನೂ ಆಗುವುದಿಲ್ಲ, ಕೆಲವರಿಗೆ ನನ್ನಷ್ಟು ಜ್ವರ ಕೂಡ ಬರಲಿಲ್ಲ. ಇನ್ನೂ ಕೆಲವರಿಗೆ ಏನೂ ಆಗಲಿಲ್ಲ. ಆದ್ದರಿಂದ ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಿ.
ಲಸಿಕೆ ತೆಗೆದುಕೊಳ್ಳುವ ಮೊದಲು ನೀವು ಮಾಡಬೇಕಾಗಿರುವುದು.
ನೀವು ನಿಮ್ಮ ಅಗತ್ಯದ ಕೆಲಸಗಳನ್ನೆಲ್ಲ ಮೊದಲೇ ಮುಗಿಸಿ. ಒಬ್ಬರೇ ಇದ್ದರೆ ಮನೆಗೆ ಬೇಕಾಗುವ ಸಾಮಾನುಗಳನ್ನೆಲ್ಲ ಮೊದಲೇ ತರಿಸಿಡಿ.
ಜ್ವರದ ಮಾತ್ರೆಯನ್ನು ಡಾಕ್ಟರ್ ಬಳಿ ಕೇಳಿ ಮೊದಲೇ ತಂದಿಟ್ಟುಕೊಳ್ಳಿ.
ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಡಿ.
ತಣ್ಣೀರ ಬಟ್ಟೆ ಪಟ್ಟಿಗೆ ಮೊದಲೇ ಸಿದ್ಧ ಪಡಿಸಿ.
ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಕೈಗೆ ವ್ಯಾಯಾಮ ಮಾಡಬೇಕು. ತೀರಾ ಜಾಸ್ತಿ ನೋವಿದ್ದರೆ ತಣ್ಣೀರ ಬಿಟ್ಟೆಯಿಂದ ಒರೆಸಿ. ನಂತರ ಹದಿನೈದು ದಿನ ಜಾಸ್ತಿ ಹೊರಗೆ ಓಡಾಡಬೇಡಿ. ಎಲ್ಲರೂ ಲಸಿಕೆ ಹಾಕಿಕೊಂಡರೆ ಕೊರೋನ ತಾನಾಗಿಯೇ ತೊಲಗುತ್ತದೆ. ಇಸ್ರೇಲ್ ಹಾಗೂ ಯು. ಕೆ. ದೇಶದವರು ಮಾಡಿದ್ದು ಅದನ್ನೇ. ಎಲ್ಲರೂ ಆರಾಮವಾಗಿ ಹೊರಗೆ ಓಡಾಡಿಕೊಂಡು ಆರೋಗ್ಯದಿಂದ ಇರಬೇಕಾದರೆ ವ್ಯಾಕ್ಸಿನ್ ಒಂದೇ ದಾರಿ. ನೀವೂ ಲಸಿಕೆ ಹಾಕಿಸಿ ಕೊಳ್ಳಿ. ನಿಮ್ಮ ಮನೆಯವರಿಗೂ ಲಸಿಕೆ ಹಾಕಿಸಿ.

ಪ್ರೇರಣೆ

… ಮೊದಲು ನಿಮ್ಮ ಕುಟುಂಬವನ್ನು ಪ್ರೀತಿಸಿ, ಮನೆಯಲ್ಲಿರುವ ಹಿರಿಯರನ್ನು ಆದರಿಸಿ ಗೌರವಿಸಿ, ನಿಮ್ಮ ಪತಿಗೆ ನೆರಳಾಗಿ ನಿಂತು ಸಹಾಯ ಮಾಡಿ, ಮಕ್ಕಳಿಗೆ ಒಳ್ಳೆಯ ಸ್ನೇಹಿತರಾಗಿ, ನೆರೆಹೊರೆಯವರಿಗೆ ಸಹಾಯ ಮಾಡಿ …” ತಾನು ಮಹಿಳಾ ಮಂಡಳಿಯಲ್ಲಿ ಮಾಡಿದ ಭಾಷಣವನ್ನು ಮನೆಯಲ್ಲಿ ಎಲ್ಲರೂ ಪುನಃ ಪುನಃ ಕೇಳುತ್ತಿರುವುದನ್ನು ಗಮನಿಸಿದ ರಜನಿ”ಅಲ್ಲ, ನಿಮಗೆಲ್ಲ ನನ್ನ ಭಾಷಣ ಅಷ್ಟೊಂದು ಇಷ್ಟವಾಯಿತೇ?!”ಎಂದು ಕೇಳಿದಳು. ಅವಳ ಪತಿ ಮಹಾಶಯ”ಹಾಗೇನಿಲ್ಲ, ಭಾಷಣದಲ್ಲಿ ಹೇಳಿದ ಮಾತುಗಳು ನಿನಗೇ ಪ್ರೇರಣೆಯಾಗಿ ನಿನ್ನಲ್ಲಿ ಬದಲಾವಣೆಯಾದರೆ ನಮಗೆಲ್ಲ ಒಳ್ಳೆಯದಾಗಬಹುದೇನೋ ಎಂದು ನಾವೆಲ್ಲ ಸೇರಿ ಪ್ರಯತ್ನ ಮಾಡುತ್ತಿದ್ದೇವೆ!”

ಸಿಹಿ ಗೆಣಸಿನ ಒಬ್ಬಟ್ಟು

ಸುಲಭವಾಗಿ ಮಾಡಬಹುದಾದ ಸಿಹಿ ಗೆಣಸಿನ ಒಬ್ಬಟ್ಟನ್ನು ಮಾಡಿದ್ದೀರಾ? ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಈ ಒಬ್ಬಟ್ಟು ಮಾಡಿ ನೋಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ. ತಿನ್ನಲೂ ಸ್ವಾದಿಷ್ಟ ವಾಗಿರುತ್ತದೆ. ಇದನ್ನು ಮಾಡುವ ವಿಧಾನ ತಿಳಿಯಲು ಈ ಕೆಳಗಿನ ವೀಡಿಯೋ ನೋಡಿ.

ಅವಲಕ್ಕಿ ಮಿಕ್ಸ್ ಚರ್

ಅವಲಕ್ಕಿ ಮಿಕ್ಸ್ ಚರ್ ರುಚಿಕರವಾದ ಒಂದು ಬೇಕರಿ ತಿನಿಸು. ಇದಕ್ಕೆ ಜಾಸ್ತಿ ಎಣ್ಣೆ ಬೇಕಾಗಿಲ್ಲ. ಸುಲಭವಾಗಿ ಇದನ್ನು ಮನೆಯಲ್ಲೇ ಮಾಡಬಹುದು. ಮಕ್ಕಳಿಗೂ ಇದು ತುಂಬಾ ಇಷ್ಟ. ನೀವೂ ಇದನ್ನು ಮಾಡಿ ನೋಡಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ವೀಡಿಯೊವನ್ನು ನೋಡಿ.

ಚಾಕೊಲೇಟ್ ಕೇಕ್

ಚಾಕೊಲೇಟ್ ಕೇಕ್ ಈಗ ಮನೆಯಲ್ಲಿ ಮಾಡಿ ನೋಡಿ. ಇದಕ್ಕೆ ಮೊಟ್ಟೆ ಬೇಕಾಗಿಲ್ಲ, ಓವನ್ ಕೂಡ ಬೇಕಾಗಿಲ್ಲ. ಮನೆಯಲ್ಲಿರುವ ಪ್ರೆಷರ್ ಕುಕ್ಕರ್ ಬಳಸಿ ಸುಲಭವಾಗಿ ತಯಾರಿಸಬಹುದು. ಬಹಳ ಕಡಿಮೆ ಖರ್ಚಿನಲ್ಲಿ ಸ್ವಾದಿಷ್ಟ ವಾದ ಚಾಕೊಲೇಟ್ ಕೇಕ್ ಮಾಡಿ. ಮಕ್ಕಳಿಗಂತೂ ಇದು ತುಂಬಾ ಇಷ್ಟ ವಾಗುತ್ತದೆ. ಚಾಕೊಲೇಟ್ ಕೇಕ್ ಮಾಡುವ ವಿಧಾನ ತಿಳಿಯಲು ಈ ಕೆಳಗಿನ ವೀಡಿಯೋ ನೋಡಿರಿ.

ಓದನ್ನು ಮುಂದುವರೆಸಿ

ಬೂದು ಕುಂಬಳ ಕಾಯಿ ಬರ್ಫಿ

ಬೂದು ಕುಂಬಳ ಕಾಯಿಯ ಬರ್ಫಿ ಮನೆಯಲ್ಲಿ ಮಾಡಿದ್ದೀರಾ, ತುಂಬಾ ರುಚಿಕರ ವಾದ ಈ ಸಿಹಿ ಮಕ್ಕಳಿಗಂತೂ ತುಂಬಾ ಇಷ್ಟ ವಾಗುತ್ತದೆ. ದೊಡ್ಡವರೂ ಕೂಡ ಬಹಳ ಇಷ್ಟ ಪಡುವ ಈ ಬರ್ಫಿ ಯನ್ನು ಮಾಡುವ ವಿಧಾನ ಗೊತ್ತಿಲ್ಲವೇ, ಹಾಗಿದ್ದರೆ ಈ ಕೆಳಗಿನ ವೀಡಿಯೋ ನೋಡಿ ಸುಲಭದಲ್ಲೇ ಕಲಿತು ಮನೆಯಲ್ಲಿ ಮಾಡಿ ತಿಂದು ಆನಂದಿಸಿರಿ.

ದೀಪಾವಳಿ ಶುಭಾಶಯಗಳು

ಈ ವರ್ಷದ ಆರಂಭದಿಂದಲೇ ಎಲ್ಲರೂ ಕಷ್ಟ, ದುಃಖ, ನಷ್ಟ, ನೋವುಗಳನ್ನು ಅನುಭವಿಸುವಂತಾಯಿತು. ಇದೆಲ್ಲವೂ ಇಲ್ಲಿಯೇ ಕೊನೆಯಾಗಲಿ. ಈ ದೀಪಾವಳಿಯು ಎಲ್ಲರ ಬಾಳಿನಲ್ಲಿ ಬೆಳಕು, ಸಂತಸ, ಸಮೃದ್ಧಿ, ಆಯುರಾರೋಗ್ಯ, ಸಂತಸ ಹಾಗೂ ನೆಮ್ಮದಿ ಕರುಣಿಸಲಿ ಎಂದು ನನ್ನ ಹಾರೈಕೆ. ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಹಾಡಿನ ಚಾಟಿ

ಅದೊಂದು ಅಪಾರ್ಟ್ಮೆಂಟ್. ಅಲ್ಲಿ ರಾಘವೇಂದ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕರೆಂಟ್ ಹೋದರೆ ಜನರೇಟರ್ ಹಾಕುವ ಕೆಲಸ ಅವನದ್ದು. ಆದರೆ ಅವನು ಬಹಳ ಸೋಮಾರಿಯಾಗಿದ್ದ. ಕರೆಂಟ್ ಹೋಗಿ ಬಹಳ ಹೊತ್ತಾದರೂ ಅವನಿಗೆ ಜನರೇಟರ್ ಹಾಕಬೇಕೆಂದು ಅನಿಸುತ್ತಿರಲ್ಲಿಲ್ಲ. ಅಲ್ಲಿನ ಮನೆಯವರೆಲ್ಲ ಜನರೇಟರ್ ಹಾಕೋ ಎಂದು ಗಲಾಟೆ ಮಾಡಿದಾಗಲೇ ಅವನು ಎದ್ದು ಹೋಗಿ ಹಾಕುತ್ತಿದ್ದ. ಇವನ ಕಾಟ ತಡೆಯಲು ಅಸಾಧ್ಯವಾಗಿತ್ತು. ಅದೊಂದು ದಿನ ಕತ್ತಲಾದ ಮೇಲೆ ಕರೆಂಟ್ ಕೈ ಕೊಟ್ಟಿತು. ಯಥಾ ಪ್ರಕಾರ ರಾಘವೇಂದ್ರ ಜನರೇಟರ್ ಹಾಕದೇ ಸುಮ್ಮನೆ ಕುಳಿತಿದ್ದ. ಫ್ಲಾಟ್ ನ ಜನ ಎಲ್ಲ ಒಬ್ಬೊಬ್ಬರಾಗಿ ಅವನನ್ನು ಕರೆದು ಜನರೇಟರ್ ಹಾಕಲು ಹೇಳಿದರೂ ಅವನು ಮಾತ್ರ ತೂಕಡಿಸುತ್ತಾ ಕುಳಿತಿದ್ದ. ಅಷ್ಟರಲ್ಲಿ ಜನರೆಲ್ಲ ರೋಸಿ ಹೋಗಿ ಗಲಾಟೆ ಮಾಡತೊಡಗಿದರು. ಅದರ ಮಧ್ಯೆ ಕೀರಲು ಧ್ವನಿಯೊಂದು ಆಲಾಪ ಶುರು ಮಾಡಿತು. ಆ ..ಆ…ಆ…..ಆ ಕರ್ಣ ಕಠೋರ ಸ್ವರಕ್ಕೆ ಬೆಚ್ಚಿ ಎಲ್ಲರೂ ಸ್ತಬ್ಧರಾಗಿ ಬಿಟ್ಟರು. ಆ ಧ್ವನಿ ಹಾಡಲು ಶುರು ಮಾಡಿತು.
ರಾಘವೇಂದ್ರಾ… ರಾಘವೇಂದ್ರಾ ….
ನೀ ಮೌನವಾದರೆ ನಮ್ಮ ಗತಿಯೇನು….ನಿನ್ನ ಜನರೇಟರ್ ನ ಜ್ಯೋತಿ ನಮ್ಮ ಮನೆಯನು ಬೆಳಗುವ ತನಕಾ .. ಬಿಡೆನು ಇನ್ನು ನಾನು… ಹಾಡದೆ ಇರೆನು ಇನ್ನು ನಾನು …
ಗಂಟಲು ಬಿರಿಯಲಿ… ಕಿವಿಯೂ ಹರಿಯಲಿ.. ಏನೇ ಆದರೂ ಹಾಡದೆ ಬಿಡೆನು.. ಬಿಡೆನು ಇನ್ನು ನಾನು .. ಬಿಡೆನು ಇನ್ನು ನಾನು…
ಜನರೇಟರನು ಹಾಕುವ ತನಕ… ಅಂಧಕಾರವನು ಅಳಿಸುವ ತನಕ ..ಬಿಡೆನು ಇನ್ನು ನಾನು.. ಹಾಡದೇ ಇರೆನು ಇನ್ನು ನಾನು.. ಬಿಡೆನು ಇನ್ನು ನಾನು…
ತಕ್ಷಣವೇ ಜನರೇಟರ್ ಶಬ್ದ ಕೇಳಿಸಿತು. ಅದರ ಜೊತೆಗೆ ದೀಪಗಳೆಲ್ಲ ಬೆಳಗಿದವು. ಹಾಡು ನಿಂತುಹೋಯಿತು. ಮತ್ತೆಂದೂ ಆ ಸ್ವರಕ್ಕೆ ಹಾಡಲು ಅವಕಾಶ ಸಿಗಲೇ ಇಲ್ಲ!!

ಹಾಡಿಗೆ ಪ್ರೇರಣೆ : ಬಿಡೆನು ನಿನ್ನ ಪಾದ – ಚಲನಚಿತ್ರ – ನಾ ನಿನ್ನ ಬಿಡಲಾರೆ .