ಭಾಗ – 7


ಪೋಲೀಸರ ತೀವ್ರ ವಿಚಾರಣೆಯಿಂದಾಗಿ ಹೆಣ್ಣು ಮಕ್ಕಳ ಮೇಲೆ ತಾನೇ ಚೇಳು ಹಾಕುತ್ತಿದ್ದೆ ಎಂದು ಒಪ್ಪಿಕೊಂಡ ಆತ ಪೊಲೀಸರು, ಯಾಕೆ ಹಾಗೇ ಮಾಡುತ್ತಿದ್ದೆ ಆ ಹೆಣ್ಣು ಮಕ್ಕಳು ಏನು ಮಾಡಿದ್ದರು ನಿಂಗೆ ಎಂದಾಗ ಕುತೂಹಲಕಾರಿ ಸಂಗತಿಯೊಂದು ಆತನ ಬಾಯಿಯಿಂದ ಹೊರಬಂದಿತು. ಎಲ್ಲ ಯುವಕರಂತೆ ಆತನೂ ಸಹಜವಾಗಿ ಸುಂದರವಾಗಿ ಇದ್ದ. ಆತನ ಹೆಸರು ಸೌರಭ್, ವ್ರತ್ತಿಯಲ್ಲಿ ಇಂಜಿನೀಯರ್ ಆಗಿ ಪ್ರಖ್ಯಾತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಗೀತಾ ಎಂಬ ಗೆಳತಿಯೊಬ್ಬಳಿದ್ದಳು, ಅವಳನ್ನು ಆತ ಬಹಳ ಪ್ರೀತಿಸುತ್ತಿದ್ದ. ಅವಳೂ ಅವನನ್ನು ಬಹಳ ಹಚ್ಚಿಕೊಂಡಿದ್ದಳು. ಅವಳಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಬೇಕೆಂದು ಸೌರಭ್ ಕಾತರದಿಂದ ಕಾಯುತ್ತಿದ್ದ ಆದರೆ ಅವಳೆಲ್ಲಿ ನಿರಾಕರಿಸಿ ಬಿಡುತ್ತಾಳೋ ಎಂಬ ಭಯದಿಂದ ಅವನಿಗೆ ಧೈರ್ಯ ಸಾಲುತ್ತಿರಲಿಲ್ಲ. ಊರಿನಲ್ಲಿದ್ದ ತಂದೆತಾಯಿ ಆದಷ್ಟೂ ಬೇಗ ಅವನ ಮದುವೆ ಮಾಡಲು ಕಾತರರಾಗಿದ್ದರು.

ಹಾಗಾಗಿ ಸೌರಭ್ ತನ್ನ ಹುಟ್ಟಿದ ಹಬ್ಬದ ದಿನದಂದು ಗೀತಾಗೆ ತನ್ನ ಮನೆಗೆ ಬರುವಂತೆ ತಿಳಿಸಿದ್ದ. ಆ ದಿನ ಅವಳಿಗೆ ತನ್ನ ಪ್ರೇಮವನ್ನು ಹೇಳಿಕೊಂಡು ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಬೇಕೆಂದು ನಿರ್ಧರಿಸಿದ. ಸೌರಭ್ ಅವಳಿಗೋಸ್ಕರ ತಾನೇ ಅಡಿಗೆ ಮಾಡಿ ಅವಳನ್ನು ಸಂತೋಷ ಪಡಿಸಬೇಕೆಂಬ ಆಸೆಯಿಂದ ಅಡಿಗೆ ಪ್ರಾರಂಭಿಸಿದ. ಅಡಿಗೆ ಮುಗಿದು ಒಗ್ಗರಣೆಗೆ ಬಾಣಲಿಯಲ್ಲಿ ಎಣ್ಣೆ ಹಾಕುವಾಗಲೇ ಕಾಲಿಂಗ್ ಬೆಲ್ ಸದ್ದಾಯಿತು, ಗೀತಾ ಬಂದಿರಬಹುದೆಂದು ಆತ ಬಾಗಿಲತ್ತ ಧಾವಿಸಿದ, ನೋಡಿದರೆ ಅವನು ಅಂದುಕೊಂಡ ಹಾಗೇ ಗೀತಾ ಅಲ್ಲಿ ನಿಂತಿದ್ದಳು. ಗೀತಾ ಎಂದಿಗಿಂತಲೂ ಬಹಳ ಸುಂದರವಾಗಿ ಕಂಡಳು. ಅವಳನ್ನು ಸಂತಸದಿಂದ ಬರಮಾಡಿಕೊಂಡು ಕುಳ್ಳಿರಿಸಿ ಸಂಭ್ರಮದಿಂದ ತಾನು ಈಗಲೇ ಬರುತ್ತೇನೆಂದು ಅಡಿಗೆ ಮನೆಗೆ ಧಾವಿಸಿದ.

ಅಲ್ಲಿ ಎಣ್ಣೆ ಕಾದು ಹಬೆ ಏಳುತ್ತಿತ್ತು. ತಕ್ಷಣ ಒಗ್ಗರಣೆ ಹಾಕಲು ಬಗ್ಗಿದಾಗ ಇದ್ದಕಿದ್ದಂತೆ ಎಣ್ಣೆಗೆ ಬೆಂಕಿ ಹತ್ತಿಕೊಂಡು ಅವನ ಬಲಬದಿಯ ಕೆನ್ನೆಯನ್ನೆಲ್ಲ ಸುಟ್ಟು ಬಿಟ್ಟಿತು. ಅವನು ಚೀರುತ್ತಾ ನೋವು ತಾಳಲಾರದೆ ಒದ್ದಾಡುತ್ತಿದುದನ್ನು ಕಂಡ ಅವನ ಗೀತಾ ಧಾವಿಸಿ ಬಂದು ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಬೆಂಕಿಯಿಂದಾಗಿ ಅವನ ಮುಖ ವಿರೂಪಗೊಂಡಿತ್ತು. ಅದನ್ನು ನೋಡಲಾಗದೆ ದುಃಖ ಪಡುತ್ತ ಗೀತಾ ಅವನಿಗೆ ಚಿಕಿತ್ಸೆ ಮಾಡಿಸಿ ಮನೆಗೆ ಕರೆದುಕೊಂಡು ಬಂದುಬಿಟ್ಟು ತನ್ನ ಮನೆಗೆ ಹೋದವಳು ಮತ್ತೆ ಅವನತ್ತ ತಿರುಗಿಯೂ ನೋಡಲಿಲ್ಲ. ಅವನು ಹೇಗಿದ್ದಾನೆಂದು ನೋಡಲೂ ಬರಲಿಲ್ಲ ವಿಚಾರಿಸಲೂ ಇಲ್ಲ. ಇದರಿಂದ ತೀವ್ರವಾಗಿ ಆತಂಕಗೊಂಡ ಸೌರಭ್ ಅವಳ ಜೊತೆ ಮಾತನಾಡಲು ಮಾಡದ ಪ್ರಯತ್ನಗಳಿರಲಿಲ್ಲ. ತನ್ನ ಸುಟ್ಟ ಮುಖವನ್ನೂ ಲೆಕ್ಕಿಸದೆ ಅವಳ ಮನೆಗೆ ಅಲೆದಾಡಿದ ಆದರೆ ಅವಳು ಯಾವಾಗಲೂ ಹೇಗಾದರೂ ಮಾಡಿ ಅವನಿಂದ ತಪ್ಪಿಸಿಕೊಳ್ಳುತ್ತಿದ್ದಳು.

ಕೊನೆಗೆ ಒಂದು ದಿನ ಗೀತಾ ಅವನ ಕಾಟ ತಡೆಯಲಾಗದೆ ಇದಕ್ಕೆಲ್ಲ ಒಂದು ಕೊನೆ ಕಾಣಿಸಬೇಕೆಂದು ಒಂದು ನಿರ್ಧಾರಕ್ಕೆ ಬಂದು ಅವನಿಗೆ ಫೋನ್ ಮಾಡಿ, ಇನ್ನು ಮುಂದೆ ತನ್ನನ್ನು ಹೀಗೆ ಕಾಡಿಸಬೇಡ, ನನಗೆ ನಿನ್ನ ಭಯಾನಕ ಮುಖ ನೋಡುವಾಗ ಹೆದರಿಕೆಯಲ್ಲದೆ ಬೇರೆ ಯಾವ ಭಾವನೆಗಳೂ ಮೂಡುವುದಿಲ್ಲ. ಹಾಗಿರುವಾಗ ನಿನ್ನ ಜೊತೆ ಜೀವನ ಪರ್ಯಂತ ಇರಲು ಹೇಗೆ ಸಾಧ್ಯ ಎಂದವಳೇ ಅವನ ಮಾತಿಗೆ ಕಾಯದೆ ಫೋನ್ ನಲ್ಲಿದ್ದ ಸಿಮ್ ತೆಗೆದು ಬಿಸಾಕಿ ಆ ಊರನ್ನೇ ಬಿಟ್ಟು ಹೊರಟು ಹೋದಳು. ಅವನ ಮನಸ್ಸಿಗೆ ತಡೆಯಲಸಾಧ್ಯ ನೋವಾಯಿತು. ಮತ್ತೆ ಅವಳ ಫೋನ್ ಗೆ ಪ್ರಯತ್ನಿಸಿದಾಗ ಸಾಧ್ಯವಾಗದೆ ಅವಳ ಮನೆಯತ್ತ ಧಾವಿಸಿದ. ಆದರೆ ಮನೆಗೆ ಬೀಗ ಹಾಕಿತ್ತು, ಅವಳನ್ನು ಹುಡುಕುತ್ತ ಹುಚ್ಚನಂತೆ ಬೀದಿ ಬೀದಿ ಅಲೆದಾಡಿದ. ಕೊನೆಗೆ ಅವಳು ಊರನ್ನೇ ತೊರೆದು ಹೋದ ವಿಷಯ ತಿಳಿದಾಗ ತೀರಾ ದುಃಖ ಪಟ್ಟ. ತಾನು ಇಷ್ಟೊಂದು ಅವಳನ್ನು ಪ್ರೀತಿಸಿ ಅವಳಿಗಾಗಿ ಅಡಿಗೆ ಮಾಡಲು ಹೋಗಿ ತನ್ನ ಮುಖವನ್ನೇ ವಿರೂಪ ಮಾಡಿಕೊಂಡೆ. ಆದರೆ ಆಕೆ ಬರೀ ಬಾಹ್ಯ ಸೌದರ್ಯಕ್ಕೆ ಒತ್ತುಕೊಟ್ಟು ತನ್ನನ್ನು ನಿರಾಕರಿಸಿದಳಲ್ಲ ಎಂದು ಅವಳ ಮೇಲೆ ರೋಷ ಉಕ್ಕಿತು.

ಮುಖದ ಮೇಲಿನ ಸುಟ್ಟ ಗಾಯದ ನೋವಿಗಿಂತ ಅವಳು ಕೊಟ್ಟ ಮನಸ್ಸಿನ ನೋವು ಸಹಿಸಲಾಗದೆ ಅವನಿಗೆ ಮನೆಯಿಂದ ಹೊರಗೆ ಕಾಲಿಡಲು ಮನಸ್ಸಾಗಲಿಲ್ಲ. ಅದರನಂತರ ಅವನು ತನ್ನ ಬಾಸ್ ನನ್ನು ಭೇಟಿಯಾಗಿ ತನ್ನ ಪರಿಸ್ಥಿತಿ ತಿಳಿಸಿ ತಾನು ಮನೆಯಿಂದಲೇ ಕೆಲಸ ಮಾಡುವುದಾಗಿ ತಿಳಿಸಿದಾಗ ಬಾಸ್ ಗೆ ಅವನ ಮನಸ್ಥಿತಿಯ ಅರಿವಾಗಿ ಸಹಾನುಭೂತಿಯಿಂದ ಒಪ್ಪಿಗೆ ಕೊಟ್ಟ ಮೇಲೆ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತ ತನ್ನ ನೋವನ್ನು ಮರೆಯಲು ಯತ್ನಿಸಿದ.  ಮನೆಗೆ ಬೇಕಾದ ಸಾಮಾನುಗಳನ್ನು  ಆದಷ್ಟೂ ಫೋನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳಲು ನೋಡುತ್ತಾ ಹೊರಗೆ ಕಾಲಿಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.

ಆದರೆ ಯಾವಾಗಲೊಮ್ಮೆ ಅನಿವಾರ್ಯವಾಗಿ ಹೊರಗೆ ಹೋಗಬೇಕಾಗಿ ಬಂದಾಗ ಅವನ ಮುಖ ಕಂಡ ಯುವತಿಯರು ಮುಖ ತಿರುವಿಕೊಳ್ಳುತ್ತಿದ್ದುದನ್ನು ಕಂಡ ಸೌರಭ್ ಗೆ ಗೀತಾಳ ನೆನಪಾಗಿ ಅವರ ಮೇಲೆ ರೋಷ ಉಕ್ಕಿ ತನಗಾದ ನೋವು ಅವರೂ ಅನುಭವಿಸಬೇಕೆಂಬ ರೋಷದಿಂದ ನಿರ್ಧರಿಸಿ ಕೊನೆಗೆ ಅವರ ಮೇಲೆ ಚೇಳು ಹಾಕುವ ನಿರ್ಧಾರ ಕೈ ಗೊಂಡ. ಯಾರೆಲ್ಲ ತನ್ನ ಮುಖ ನೋಡಿ ಕಿವಿಚಿ ಕೊಳ್ಳುತ್ತಾರೋ ಅವರನ್ನು ಹಿಂಬಾಲಿಸಿ ಅವರ ದಿನಚರಿ ನೋಡಿ ನಂತರ ಸಮಯ ಸಾಧಿಸಿ ಅವರನ್ನು ಹಿಂಬಾಲಿಸಿ ತನ್ನ ಪರಿಚಯವಾಗದಂತೆ ಮುಖಕ್ಕೆ ಮೀಸೆ ಗಡ್ಡ ಅಂಟಿಸಿ ಬಗೆ ಬಗೆಯ ಟೋಪಿ ಧರಿಸಿ ಅವರ ಮೇಲೆ ಚೇಳು ಹಾಕಿ ಅವರು ಒದ್ದಾಡುವುದನ್ನು ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದ. ಆದರೆ ಅವನಿಗೆ ಅವರನ್ನೆಲ್ಲ ಕೊಲ್ಲುವ ಉದ್ದೇಶವಿಲ್ಲದಿದ್ದರೂ ಆ ಹುಡುಗಿಯರು ಸತ್ತಾಗ ಮಾತ್ರ ಅವನಿಗೆ ವಿಲಕ್ಷಣ ಆನಂದವಾಗಿತ್ತು. ಹಾಗಾಗಿ ಅದನ್ನು ಮುಂದುವರೆಸಿಕೊಂಡು ಬಂದಿದ್ದ. ಅವನ ವಿಚಿತ್ರ ಕಥೆಯನ್ನು ಕೇಳಿ ಪೊಲೀಸರು ದಂಗಾದರು. ಮಾಧ್ಯಮಗಳಲ್ಲಿ ಚೇಳು ಹಾಕಿ ಹೆಣ್ಣು ಮಕ್ಕಳಲ್ಲಿ ಭೀತಿಯನ್ನು ಹುಟ್ಟಿಸಿದವನ ಹುಟ್ಟಡಗಿಸಿ ಅವನನ್ನು ಸೆರೆ ಹಿಡಿದ ವಿಷಯ ಪ್ರಸಾರವಾದಾಗ ಹೆಣ್ಣುಮಕ್ಕಳೆಲ್ಲ ನಿಟ್ಟುಸಿರು ಬಿಟ್ಟರು.

(ಮುಗಿಯಿತು).

ನಿಮ್ಮ ಟಿಪ್ಪಣಿ ಬರೆಯಿರಿ

This site uses Akismet to reduce spam. Learn how your comment data is processed.