ಪ್ರಿಯ ಓದುಗರೇ,
ನಾನು ಬರೆದ ಬೇಡವಾದವಳು ಎಂಬ ಕಥೆ ಜುಲೈ ತಿಂಗಳ 2 ನೇ ತಾರೀಖಿನ ತರಂಗ ಸಾಪ್ತಾಹಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ನಾನು ಬರೆದ ಕಥೆಯನ್ನು ಪ್ರಕಟಿಸಿದ ತರಂಗ ಸಾಪ್ತಾಹಿಕ ಪತ್ರಿಕೆಗೆ ಧನ್ಯವಾದಗಳು.
ಸಣ್ಣ ಕಥೆಗಳು
ಪ್ರಿಯ ಓದುಗರೇ,
ನಾನು ಬರೆದ ಬೇಡವಾದವಳು ಎಂಬ ಕಥೆ ಜುಲೈ ತಿಂಗಳ 2 ನೇ ತಾರೀಖಿನ ತರಂಗ ಸಾಪ್ತಾಹಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ನಾನು ಬರೆದ ಕಥೆಯನ್ನು ಪ್ರಕಟಿಸಿದ ತರಂಗ ಸಾಪ್ತಾಹಿಕ ಪತ್ರಿಕೆಗೆ ಧನ್ಯವಾದಗಳು.
ಪ್ರಿನ್ಸ್ ಎಚ್ಚೆತ್ತು ನೋಡಿದಾಗ ತಾನು ಬೀದಿ ಬದಿಯಲ್ಲಿ ಮಲಗಿದ್ದು ಕಂಡು ಅದಕ್ಕೆ ಆಶ್ಚರ್ಯ ವಾಯಿತು. ಅರೆ ತಾನು ಇಲ್ಲಿಗೆ ಹೇಗೆ ಬಂದೆ ಎಂದು ಆತಂಕವಾಗಿ ಸುತ್ತಲೂ ನೋಡಿತು. ಅಪರಿಚಿತ ಜಾಗ, ಎಲ್ಲಿದ್ದೇನೆಂದು ಕ್ಷಣ ಕಾಲ ತಿಳಿಯಲೇ ಇಲ್ಲ. ಕೊನೆಗೆ ನಿನ್ನೆ ರಾತ್ರಿ ಯಜಮಾನನ ಜೊತೆ ಕಾರಿನಲ್ಲಿ ಕುಳಿತು ಲಾಂಗ್ ಡ್ರೈವ್ ಗೆ ಹೋಗಿದ್ದು ನೆನಪಾಯಿತು.
ಲಾಂಗ್ ಡ್ರೈವ್ ಹೋಗುವುದು ತನಗೆ ಯಾವಾಗಲೂ ಇಷ್ಟವೇ. ರಾತ್ರಿ ಹೊತ್ತಿನಲ್ಲಿ ಹೊರಗಿನ ತಂಪಾದ ಗಾಳಿಯನ್ನು ಆಹ್ಲಾದಿಸುತ್ತ ಹೋಗುವ ಮಜವೇ ಬೇರೆ. ಯಜಮಾನ ಖುಷಿಯಾದಾಗ ಹೀಗೆ ತನ್ನನ್ನು ಲಾಂಗ್ ಡ್ರೈವ್ ಗೆ ಕರೆದೊಯ್ಯುತ್ತಾನೆ. ಅರೆ! ಒಂದು ನಿಮಿಷ, ಲಾಂಗ್ ಡ್ರೈವ್ ಗೆ ಬಂದು ಮನೆಗೆ ಯಾಕೆ ವಾಪಾಸು ಹೋಗಿಲ್ಲ? ತಮ್ಮ ಕಾರು ಎಲ್ಲಿ? ಯಜಮಾನ ಎಲ್ಲಿ ? ಎಂದು ಆತಂಕದಿಂದ ಸುತ್ತಲೂ ನೋಡುತ್ತ ಓಡಾಡಿತು. ತಕ್ಷಣ ಯಜಮಾನ ಕತ್ತಲಲ್ಲಿ ತನಗೆ ಇಳಿಯಲು ಹೇಳಿ ಕಾರಿನಲ್ಲಿ ಭರ್ರೆಂದು ವಾಪಾಸು ಹೋಗಿದ್ದು ನೆನಪಾಗಿ ಖಿನ್ನ ಗೊಂಡಿತು.
ಹಿಂದೆಯೇ ಓಡುತ್ತ ಹೋದರೂ ಯಜಮಾನ ಕಾರು ನಿಲ್ಲಿಸಲೇ ಇಲ್ಲ. ಆದರೂ ಆತ ಕಾರು ನಿಲ್ಲಿಸಬಹುದು ಎಂದು ಆಸೆಯಿಂದ ತಾನು ಹಿಂದೆ ಓಡಿದ್ದೆ ಓಡಿದ್ದು, ಕೊನೆಗೆ ಆಯಾಸದಿಂದ ಸಿಟ್ಟೂ ಬಂದಿತು. ಯಜಮಾನನ ಈ ಹೊಸ ಆಟ ತನಗಿಷ್ಟವಾಗಲಿಲ್ಲ ಎಂದು ತೋರಿಸಲು ಹಿಂದೆ ಓಡುವುದನ್ನು ಬಿಟ್ಟು ಅಲ್ಲೇ ಕಾದು ಕುಳಿತೆ. ಆದರೆ ಯಜಮಾನ ಎಂದಿನ ಹಾಗೆ ಕಾರು ತಿರುಗಿಸಿ ಬರಲೇ ಇಲ್ಲ. ಯಜಮಾನನಿ ಗಾಗಿ ಕಾದು ಕಾದು ಅಲ್ಲೇ ನಿದ್ದೆ ಮಾಡಿ ಬಿಟ್ಟಿದ್ದೆ.
ಛೇ ತಾನು ಹಿಂದೆ ಓಡಿ ಕಾರನ್ನು ತಲುಪಬೇಕಿತ್ತು ಹಾಗೆ ಮಾಡಲಿಲ್ಲ ಎಂದು ಯಜಮಾನ ಸಿಟ್ಟಾಗಿರಬೇಕು ಎಂದು ಯೋಚಿಸುತ್ತ ವಾಸನೆಯಿಂದ ಗ್ರಹಿಸುತ್ತ ಮನೆಯ ಕಡೆ ಓಡಿತು. ಎಷ್ಟು ಓಡಿದ್ರೂ ಮನೆ ಸಿಗುತ್ತಿಲ್ಲ. ಓಡಿ ಓಡಿ ಸುಸ್ತಾಗಿ ಅಲ್ಲೇ ಕುಳಿತು ದಣಿವಾರಿಸುತ್ತಾ ಕುಳಿತಾಗ ಹಸಿವೆನಿಸಿತು.
ಸ್ವಲ್ಪ ದೂರದಲ್ಲಿ ಕಸದ ರಾಶಿ ಗೆ ಬೀದಿ ನಾಯಿಗಳು ಮುತ್ತಿಗೆ ಹಾಕಿದ್ದು ಕಂಡು ಅಲ್ಲಿಗೆ ನಡೆದರೂ ಕೊಳೆತ ವಾಸನೆ ಮೂಗಿಗೆ ಬಡಿದು ಛೇ! ನನಗ್ಯಾಕೆ ಕೊಳೆತ ಆಹಾರ, ಮನೆಗೆ ಹೋದರೆ ಯಜಮಾನ ಪರಿಮಳ ಭರಿತ ರುಚಿ ರುಚಿಯಾದ ಆಹಾರ ಕೊಡುತ್ತಾರೆ ಎಂದು ಜೊಲ್ಲು ಸುರಿಸುತ್ತ ಯಜಮಾನನ ಮನೆಯ ಕಡೆ ಧಾವಿಸಿತು. ಕೊನೆಗೂ ಮನೆ ತಲುಪಿದಾಗ ಗೇಟು ಮುಚ್ಚಿತ್ತು. ಅದನ್ನು ತಳ್ಳಿ ತೆರೆಯಲು ನೋಡಿದರೆ ಆಗುತ್ತಿಲ್ಲ, ಛೇ! ಎಂದುಕೊಳ್ಳುತ್ತ ಕಾಂಪೌಂಡ್ ಗೋಡೆ ಹತ್ತಿ ಹೋಗಲು ಪ್ರಯತ್ನಿಸಿತು. ಆದರೆ ಕುಬ್ಜ ಕಾಲುಗಳಿಂದಾಗಿ ಹಿಡಿತ ಗಟ್ಟಿಯಾಗುತ್ತಿಲ್ಲ, ಧಡೂತಿ ದೇಹದ ಭಾರವನ್ನು ಎತ್ತಿ ಕೊಳ್ಳಲೂ ಆಗದೆ ಅದು ಜಾರಿ ಕೆಳಗೆ ಬಿತ್ತು. ಆದರೆ ಅದಕ್ಕೆ ಹೇಗಾದರೂ ಮಾಡಿ ಮನೆಯೊಳಕ್ಕೆ ಹೋಗಲೇ ಬೇಕಿತ್ತು. ಅದು ಮತ್ತೆ ಮತ್ತೆ ಕಾಂಪೌಂಡ್ ಏರಲು ಪ್ರಯತ್ನಿಸಿತು. ಹಲವು ಬಾರಿ ಪ್ರಯತ್ನಿಸಿದ ಬಳಿಕ ಕಾಂಪೌಂಡ್ ಗೋಡೆ ಹತ್ತಿ ಕೊನೆಗೂ ಒಳಗೆ ಹಾರಿತು. ಹುಲ್ಲು ಹಾಸಿನ ಮೇಲೆ ಬಿದ್ದಿದ್ದರಿಂದ ಅದಕ್ಕೇನೂ ಆಗಲಿಲ್ಲ. ಸಾವರಿಸಿಕೊಂಡು ಎದ್ದು ಮನೆಯ ಮುಖ್ಯ ದ್ವಾರದ ಕಡೆ ಧಾವಿಸಿತು. ಬಾಗಿಲನ್ನು ಮೃದುವಾಗಿ ಕೆರೆಯುತ್ತಾ ಕುಯ್ ಕುಯ್ ಎನ್ನುತ್ತ ಯಜಮಾನನಿಗೆ ತಾನು ಬಂದಿರುವ ವಿಷಯ ತಿಳಿಸಿತು. ಇನ್ನೇನು ಯಜಮಾನ ಅವರ ಮಕ್ಕಳು ಎಲ್ಲ ಬಂದು ಬೇಗನೆ ಬಾಗಿಲು ತೆರೆದು ತನ್ನನ್ನು ಮುದ್ದಾಡಬಹುದು ಎಂದು ನಿರೀಕ್ಷಿಸಿಸುತ್ತ ಕಾದು ಕುಳಿತುಕೊಂಡಿತು.
ಆದರೆ ತುಂಬಾ ಹೊತ್ತಾದರೂ ಯಾರೂ ಬರಲಿಲ್ಲ . ಹೋಗಲಿ ಕಾಲಿಂಗ್ ಬೆಲ್ ಒತ್ತೋಣ, ಯಜಮಾನ ತನ್ನನ್ನು ವಾಕಿಂಗ್ ಗೆ ಕರೆದು ಕೊಂಡು ಹೋಗಿ ವಾಪಾಸು ಬರುವಾಗ ಅಲ್ಲಿ ಬೆಲ್ ಒತ್ತಿದ ಮೇಲೆಯೇ ಬಾಗಿಲು ತೆರೆಯುತ್ತಾಳೆ ಗಂಗಾ. ಹಾಗಾದರೆ ತಾನೂ ಈಗ ಬೆಲ್ ಒತ್ತಬೇಕು ಎಂದುಕೊಳ್ಳುತ್ತ ಮೇಲಕ್ಕೆ ಹಾರಿ ಹಾರಿ ತನ್ನ ಕಾಲಿನಿಂದ ಬೆಲ್ ಒತ್ತಲು ಪ್ರಯತ್ನಿಸಿತು. ಆದರೆ ಅದಕ್ಕೆ ಬೆಲ್ ಇರುವ ಎತ್ತರಕ್ಕೆ ಹಾರಲು ಅದರ ಧಡೂತಿ ದೇಹ, ಕುಬ್ಜ ಕಾಲುಗಳು ಈಗಲೂ ಸಹಾಯ ಮಾಡಲಿಲ್ಲ. ಆದರೂ ಅದು ತನ್ನ ಪ್ರಯತ್ನ ಮುಂದುವರೆಸಿತು. ತಾನು ಈಗ ಬೆಲ್ ಒತ್ತಿದರೆ ಯಜಮಾನನಿಗೆ ಖುಷಿಯಾಗಿ ತನ್ನನ್ನು ಮುದ್ದಾಡಬಹುದು ಎಂದು ಆಸೆಯಿಂದ ಮತ್ತೆ ಮತ್ತೆ ಮೇಲಕ್ಕೆ ಹಾರಿತು. ಆದರೆ ಹಾರಿ ಹಾರಿ ದಣಿವಾಯಿತೇ ಹೊರತು ಬೆಲ್ ಇರುವ ಕಡೆಗೆ ಹಾರಲು ಆಗಲೇ ಇಲ್ಲ . ಇನ್ನು ಉಳಿದಿರುವ ದಾರಿ ಎಂದರೆ ಬೊಗಳುವುದು, ಆಗಲಾದರೂ ಯಜಮಾನ ಓಡೋಡಿ ಬರಬಹುದು ಎಷ್ಟೆಂದರೂ ತಾನು ಆತನ ಮುದ್ದಿನ ಪ್ರಿನ್ಸ್ ಎಂದುಕೊಳ್ಳುತ್ತ ಬೊಗಳಲು ಶುರು ಮಾಡಿತು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಅರೆ! ಯಾರೂ ಮನೆಯಲ್ಲಿ ಇಲ್ಲವೇ ಎಂದು ಯೋಚಿಸುತ್ತ ಕಿಟಕಿ ಬಳಿ ಧಾವಿಸಿತು. ಕಿಟಕಿ ಮುಚ್ಚಿತ್ತು. ಆದರೆ ಮಕ್ಕಳು ಪಿಸು ದನಿಯಲ್ಲಿ ಮಾತನಾಡುವುದು ಕೇಳಿಸಿ ಸಂತಸದಿಂದ ಜೋರಾಗಿ ಬೊಗಳಿತು. ಆದರೆ ಮಕ್ಕಳ ಪಿಸು ದನಿ ನಿಂತು ಹೋಯಿತೇ ಹೊರತು ಅವರ್ಯಾರೂ ಕಿಟಕಿ ಬಳಿಯೂ ಬರಲಿಲ್ಲ, ಬಾಗಿಲೂ ತೆರೆಯಲಿಲ್ಲ. ಪ್ರಿನ್ಸ್ ಗೆ ಬಹಳ ದುಃಖವಾಯಿತು. ಯಾಕೆ ಇವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ? ನಾನು ಮಾಡಿದ ತಪ್ಪಾದರೂ ಏನು? ಎಂದು ಯೋಚಿಸಿತು. ಅಷ್ಟರಲ್ಲಿ ಮನೆಯ ಬಾಗಿಲು ತೆರೆಯಿತು. ಪ್ರಿನ್ಸ್ ಸಂತಸದಿಂದ ಬಾಗಿಲ ಕಡೆ ಧಾವಿಸಿತು. ಆದರೆ ಬಂದವಳು ಗಂಗಾ, ಮನೆಯ ಕೆಲಸದಾಕೆ. ಅವಳ ಕೈಯಲ್ಲೊಂದು ದೊಡ್ಡ ಕೋಲು. ಬಟ್ಟೆಯಿಂದ ಮುಖ ಮುಚ್ಚಿಕೊಂಡೆ ಕೋಲಿನಿಂದ ಹಚ ಹಚಾ ಎನ್ನುತ್ತ ಪ್ರಿನ್ಸ್ ನನ್ನು ಓಡಿಸಲು ಪ್ರಯತ್ನಿಸಿದಳು. ಪ್ರಿನ್ಸ್ ಕಕ್ಕಾಬಿಕ್ಕಿಯಾಗಿ ಯಾಕೆ ಇವಳು ಬೀದಿ ನಾಯಿಯನ್ನು ಓಡಿಸುವಂತೆ ಹಚಾ ಹಚಾ ಎನ್ನುತ್ತಿದ್ದಾಳೆ? ಕೈಯಲ್ಲಿ ಕೋಲು ಯಾಕಿದೆ? ಯಾಕೆ ಇವಳು ನನ್ನನ್ನು ಓಡಿಸಲು ನೋಡುತ್ತಿದ್ದಾಳೆ? ಎಂದು ಅದಕ್ಕೆಅವಮಾನವಾಯಿತು ಜೊತೆಗೆ ಸಿಟ್ಟು ಬಂದಿತು. ಗುರ್ ಗುರ್ ಎನ್ನುತ್ತ ಆಕೆಗೆ ತನ್ನ ಹಲ್ಲುಗಳನ್ನು ಪ್ರದರ್ಶಿಸಿ ಹೆದರಿಸಲು ನೋಡಿತು. ಏ, ಹೋಗೋ ನಾಯಿ, ನಿನ್ನಿಂದ ನಮಗೆಲ್ಲ ಕೋರೋನ ಬಂದು ನಾವು ಸತ್ರೆ.. ? ತೊಲಗು ಪೀಡೆ, ಎನ್ನುತ್ತ ಕೋಲಿನಿಂದ ಬಾರಿಸಲು ಬಂದಾಗ ಪ್ರಿನ್ಸ್ ಗೆ ಅವಮಾನ ದುಃಖ ಎಲ್ಲವೂ ಒಟ್ಟಿಗೆ ಬಂದು ಇವರಿಗೆ ನಾನು ಬೇಡವಾಗಿ ಬಿಟ್ಟೆನೇ ಎಂದು ತಲೆ ತಗ್ಗಿಸಿ ಕೊಂಡು ನಿಧಾನವಾಗಿ ಅಲ್ಲಿಂದ ಹೊರ ಬಂದಿತು.
ಸ್ವಲ್ಪ ದೂರ ನಡೆದಾಗ ಬೀದಿಯ ಬದಿಯಲ್ಲಿ ಪಕ್ಕದ ಮನೆಯ ನಾಯಿ ರಾಣಿ ಅಲ್ಲಿತ್ತು, ಬಹುಶಃ ಅದನ್ನೂ ಮನೆಯ ಯಜಮಾನ ಹೊರ ಹಾಕಿರಬೇಕು ಏನಾಗಿದೆ ಇವರಿಗೆಲ್ಲ? ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ರಾಣಿಯನ್ನು ಕೇಳಿತು. ಎಲ್ಲರೂ ಕೋರೋನ ಕೊರೋನ ಅಂತಿದ್ದಾರೆ, ಅದು ಏನು ಅಂತ ನನಗೂ ಗೊತ್ತಿಲ್ಲ ಅಂದಿತು. ಅಷ್ಟರಲ್ಲಿ ಇಬ್ಬರು ಹರಕಲು ಬಟ್ಟೆಯ ಪುಟ್ಟ ಹುಡುಗರು ಆ ದಾರಿಯಾಗಿ ಬಂದವರು ಮುದ್ದಾದ ನಾಯಿಗಳನ್ನು ಕಂಡು ಎತ್ತಿಕೊಂಡು ಮುದ್ದಾಡಿದರು. ಪ್ರೀತಿಗಾಗಿ ಹಲುಬುತ್ತಿದ್ದ ಪ್ರಿನ್ಸ್ ಮತ್ತು ರಾಣಿ ಆ ಹರಕಲು ಬಟ್ಟೆ ಹುಡುಗರ ಪ್ರೀತಿಗೆ ಕರಗಿ ಹೋದವು. ಇಬ್ಬರೂ ನಾಯಿಗಳನ್ನು ಎತ್ತಿಕೊಂಡು ತಮ್ಮ ಹರಕಲು ಜೋಪಡಿಯತ್ತ ಹೊರಟರು.
ಆ ಹುಡುಗರ ಮನೆಯವರು ನಾಯಿಗಳನ್ನು ಆಶ್ಚರ್ಯದಿಂದ ನೋಡಿ ನಂತರ, ಈ ಕೋರೋನದಿಂದ ನಮ್ಗೆ ಹೊಟ್ಟೆಗೆ ಸರಿಯಾಗಿಲ್ಲ, ಇನ್ನು ಇವಕ್ಕೆ ಎಲ್ಲಿಂದ ತಂದು ಹಾಕ್ತೀಯಾ, ಎಲ್ಲಿಂದ ತಂದ್ರೋ ಅಲ್ಲೇ ಬಿಟ್ಟು ಬನ್ನಿ ಎಂದು ಗದರಿದಾಗ ಪ್ರಿನ್ಸ್ ಮತ್ತು ರಾಣಿ ಮಂಕಾದವು. ಹುಡುಗರು ಮಾತ್ರ, ನಾವು ಏನು ತಿಂತಿವೋ ಅದನ್ನೇ ಅವಕ್ಕೆ ಸ್ವಲ್ಪ ಕೊಟ್ಟರಾಯಿತು. ಬೇಡಿ ಕೊಂಡು ತಂದಾ ದರೂ ಹಾಕ್ತೀವಿ ಬಿಟ್ಟು ಬಾ ಅಂತ ಮಾತ್ರ ಹೇಳಬೇಡ ಎನ್ನುತ್ತಿದ್ದಂತೆ ಅವರ ಅಪ್ಪ ಮನೆಗೆ ಬಂದವನು ದುಬಾರಿ ಜಾತಿಯ ನಾಯಿಗಳು ಮಕ್ಕಳ ಕೈಯಲ್ಲಿರುವುದನ್ನು ಕಂಡು ಲಾಟರಿ ಹೊಡೆದವರಂತೆ ಏ, ಎಲ್ಲಿ ಸಿಕ್ತೋ ಇವು, ಇವನ್ನ ಮಾರಿದ್ರೆ ಲಕ್ಷ ಲಕ್ಷ ಬರುತ್ತೆ ಕಣ್ರೋ ಎಂದಾಗ ಮಕ್ಕಳಿಗೆ ಬೇಸರವಾದರೂ ದುಡ್ಡು ಸಿಗುತ್ತಲ್ಲ ಎಂದು ಖುಷಿ ಪಟ್ಟರು. ಆವತ್ತಿನಿಂದ ಹುಡುಗರ ಅಪ್ಪ ಎಲ್ಲೆಲ್ಲಿಂದನೋ ಮಾಂಸದ ತುಣುಕುಗಳನ್ನು, ಮೀನು ಎಲ್ಲ ನಾಯಿಗಳಿಗಾಗಿ ತರತೊಡಗಿದ. ಹೊಸ ಆಹಾರ ಸ್ವಲ್ಪ ಹಳಸಲಾಗಿದ್ದರೂ ಎಲ್ಲರ ಪ್ರೀತಿ ದೊರಕುತ್ತಲ್ಲ ಎಂದು ಎರಡೂ ನಾಯಿಗಳೂ ಒಗ್ಗಿಕೊಂಡವು. ಅವು ಸ್ವಚ್ಛಂದ ವಾಗಿ ಓಡಾಡುತ್ತಿದ್ದವು. ಹಾಗೆ ಮಾಡಬೇಡ ಹೀಗೆ ಮಾಡಬೇಡ ಎನ್ನುವ ನಿರ್ಭಂದ ಗಳಿಲ್ಲದೆ ನಿರ್ಭಿಡೆಯಾಗಿ ಬದುಕುವ ಈ ಜೀವನ ಹಿಂದಿನ ರಾಜ ವೈಭವದ ಮನೆಯ ಬದುಕಿಗಿಂತ ಬಹಳ ಇಷ್ಟವಾಯಿತು. ಬಂದವರಿಗೆ ಕೈ ಕುಲುಕುವುದು, ಮನೆಯ ಯಜಮಾನ ಹೇಳಿದಂತೆ ಮಾಡಿದರೆ ಬಿಸ್ಕಿಟ್ ಸಿಗುತ್ತಿತ್ತು. ಇಲ್ಲಿ ಹಾಗಿಲ್ಲ ಹಾಗೆ ಮಾಡು ಹೀಗೆ ಮಾಡಬೇಡ ಎನ್ನುವವರೇ ಇಲ್ಲ. ಜೊತೆಗೆ ಸರಪಳಿ ಬಂಧನವೂ ಇಲ್ಲ. ಎರಡೂ ನಾಯಿಗಳು ಹೊಟ್ಟೆಗೆ ಸರಿಯಾಗಿಲ್ಲದೆ ಸ್ವಲ್ಪ ಸೊರಗಿದರೂ ಸಿಕ್ಕಿದ ಸ್ವಾತಂತ್ರ್ಯವನ್ನು ಅನುಭವಿಸುತ್ತ ಹಾಯಾಗಿದ್ದವು.
ಕೋರೋನ ಕಾಟ ಮುಗಿದ ಮೇಲೆ ಒಂದು ದಿನ ಪ್ರಿನ್ಸ್ ನ ಹಳೆಯ ಯಜಮಾನನ ಮಕ್ಕಳು ಕಾರಿನಲ್ಲಿ ಹೋಗುವಾಗ ಪ್ರಿನ್ಸ್ ಹರಕಲು ಬಟ್ಟೆಯ ಹುಡುಗನ ಜೊತೆ ನಡೆದುಕೊಂಡು ಹೋಗುವುದನ್ನು ಕಂಡು ಖುಷಿಯಿಂದ “ಅಪ್ಪ, ಪ್ರಿನ್ಸ್ ನೋಡಲ್ಲಿ” ಎನ್ನುತ್ತ “ಪ್ರಿನ್ಸ್, ಪ್ರಿನ್ಸ್” ಎಂದು ಕರೆಯತೊಡಗಿದರು. ಪ್ರಿನ್ಸ್ ಗೆ ಮಕ್ಕಳ ಧ್ವನಿ ಕೇಳಿ ಸಂತಸವಾಗಿ ಅವರತ್ತ ನೋಡುತ್ತಿದ್ದಂತೆ ಅದಕ್ಕೆ ಹಿಂದೆ ಅವರು ಅವಮಾನಿಸಿ ಮನೆಯಿಂದ ಹೊರ ಹಾಕಿದ್ದು ನೆನಪಾಗಿ ಹುಡುಗನ ಮರೆಯಲ್ಲಿ ನಿಂತಿತು. ಹುಡುಗ,”ಏ ಇಲ್ಲಿ ಯಾರೂ ಪ್ರಿನ್ಸ್ ಇಲ್ಲ, ಅದು ನನ್ನ ನಾಯಿ ರಾಜ, ಅಲ್ವೇನೋ” ಎನ್ನುತ್ತ ಅದನ್ನು ಎತ್ತಿ ಮುದ್ದಾಡಿದಾಗ ಅದು ಸಂತಸದಿಂದ ಅವನನ್ನು ನೆಕ್ಕಿತು. ಮಕ್ಕಳು ಮಾತ್ರ ಅದು ತಮ್ಮ ಪ್ರಿನ್ಸ್, ತಮಗೆ ಅದನ್ನು ವಾಪಾಸ್ ಕೊಡುವಂತೆ ಹಠ ಮಾಡಿದರು.
ಅದುವರೆಗೂ ಕಾರಿನಲ್ಲಿ ಸುಮ್ಮನೆ ಕುಳಿತಿದ್ದ ಯಜಮಾನ ಕಾರಿನಿಂದ ಇಳಿದು ಬಂದು, “ಏ, ಈ ನಾಯಿ ನಮ್ದು, ಸುಮ್ನೆ ಕೊಟ್ಬಿಡು, ಇಲ್ಲಾಂದ್ರೆ…” ಎನ್ನುತ್ತ ಹೊಡೆಯಲು ಬಂದಾಗ ಹುಡುಗ ಪ್ರಿನ್ಸ್ ನನ್ನು ಎತ್ತಿಕೊಂಡು ಓಡಿದ. ಮಕ್ಕಳು ಅಳತೊಡಗಿದರು. ಯಜಮಾನ ಪೊಲೀಸರಿಗೆ ಫೋನ್ ಮಾಡಿ, ನಮ್ಮ ನಾಯಿಯನ್ನು ಗುಡಿಸಲ ಹುಡುಗರು ಕದ್ದಿದ್ದಾರೆ ಎಂದು ದೂರು ಕೊಟ್ಟು ತಕ್ಷಣ ಬರಲು ತಿಳಿಸಿದರು. ಪೊಲೀಸರು ಬಂದು ಹುಡುಗನ ಜೋಪಡಿ ಹುಡುಕಿ ಪ್ರಿನ್ಸ್ ಮತ್ತು ಹುಡುಗನನ್ನು ಹೊರ ಕರೆ ತಂದರು.
ಪೊಲೀಸರು ಪ್ರಿನ್ಸ್ ನನ್ನು ಎತ್ತಿಕೊಂಡು ಯಜಮಾನ,ಮಕ್ಕಳ ಬಳಿ ತಂದು ಬಿಟ್ಟಾಗ ಅದು ವಾಪಾಸು ಓಡಿ ಬಂದು ಜೋಪಡಿ ಹುಡುಗನ ಕಾಲು ನೆಕ್ಕಿತು. ಅದನ್ನು ಕಂಡು ಪೊಲೀಸರು “ಇದು ನಿಮ್ಮ ನಾಯಿಯಲ್ಲ, ನಿಮ್ಮದಾಗಿದ್ದರೆ ನಿಮ್ಮನ್ನು ಬಿಟ್ಟು ಓಡುತ್ತಿರಲಿಲ್ಲ. ಇದು ಅದರಂತೆ ಇರುವ ನಾಯಿ, ಅವನಿಗೆ ದಾರಿಯಲ್ಲಿ ಸಿಕ್ಕಿದ್ದಂತೆ” ಎಂದಾಗ ಯಜಮಾನ, “ಇಲ್ಲ ಇದು ನಮ್ಮದೇ ನಾಯಿ” ಎನ್ನುತ್ತ “ಪ್ರಿನ್ಸ್… ಬಾ …ಪ್ರಿನ್ಸ್” ಎನ್ನುತ್ತ ಮುದ್ದಿನಿಂದ ಕರೆಯುತ್ತಾ ಹತ್ತಿರ ಬಂದಾಗ ಪ್ರಿನ್ಸ್ ಗುರ್ ಎಂದಿತು. ತನ್ನೆಲ್ಲ ಹಲ್ಲುಗಳನ್ನು ತೋರಿಸುತ್ತ ಹೆದರಿಸಲು ನೋಡಿದಾಗ ಅವರೆಲ್ಲ ಬೇರೆ ದಾರಿ ಕಾಣದೆ ಹೊರಟು ಹೋದರು. ಜೋಪಡಿ ಹುಡುಗ “ನನ್ನ ಮುದ್ದು ರಾಜ” ಎನ್ನುತ್ತ ಅದನ್ನೆತ್ತಿಕೊಂಡು ಮುದ್ದಿಸಿದಾಗ ಅದು ಸಂತಸದಿಂದ ಅವನ ಮುಖವನ್ನು ನೆಕ್ಕಿತು.
ಕ್ರೂರಿ ಕೊರೋನ ಕುಣಿಯುತಲಿದ್ದ
ಕೈಗೆ ಸಿಕ್ಕವರ ನುಲಿಯುತಲಿದ್ದ
ಕ್ರೂರಿ ಕೊರೋನಾ, ಕ್ರೂರಿ ಕೊರೋನಾ||
ವಿಮಾನದಾಗ ಬರೋ ಮಂದಿ ದೇಹ
ಕದ್ದು ಮುಚ್ಚಿ ಸೇರೋ ಖದೀಮಾ
ಕ್ರೂರಿ ಕೊರೋನಾ||
ಸೀನು ಕೆಮ್ಮ ಲ್ಲಿ ಗಾಳಿಗೆ ಹಾರಿ
ಮಂದಿ ದೇಹ ಸೇರೋ ಠಕ್ಕ
ಕ್ರೂರಿ ಕೊರೋನಾ||
ದೂರ ಸರಿಯೋಣ ಮಂದಿ ಗುಂಪಿಂದ
ಅಂತರ ಇಡೋಣ ಇನ್ನೊಬ್ಬರಿಂದ
ಮನೇಲೇ ಕೂರೋಣ ಪ್ರಾಣ ಕಾಪಾಡೋಣ
ಓಡ್ ಸೋಣ ಕ್ರೂರಿ ಕೋರೋನ ನಾ
ಕ್ರೂರಿ ಕೊರೋನಾ||
(ಸಂಗೀತ: ಕುರುಡು ಕಾಂಚಾಣ)
ಕೊರೋನ ಭಯದಿಂದ ಜನ ಅದೆಷ್ಟು ದಿಗಿಲು ಬೀಳುತ್ತಿದ್ದಾರೆ ಅಂದರೆ ಈಗ ಸಾಮಾನ್ಯವಾಗಿ ಕಾಣಿಸಿ ಕೊಳ್ಳುವ ಶೀತ ಜ್ವರ ನೆಗಡಿ ಕೆಮ್ಮು ಬಂದರೂ ಕೊರೋನ ಎಂದೇ ಭಯ ಪಡುತ್ತಿದ್ದಾರೆ. ಕೊರೋನ ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ಮಾತ್ರ ಕೊರೋನ ವೈರಸ್ ಹರಡಲು ಸಾಧ್ಯ. ಆದ್ದರಿಂದ ಅನಗತ್ಯ ಭಯ ಆತಂಕ ಬೇಡ. ಸಾಮಾನ್ಯವಾದ ಶೀತ ನೆಗಡಿ ಗಂಟಲು ನೋವು ಕೆಮ್ಮು ಬಂದರೆ ಶುಂಠಿ ಹಾಗೂ ಕಾಳು ಮೆಣಸಿನ ಕಷಾಯ ಮಾಡಿ ಕುಡಿಯಿರಿ. ಮತ್ತು ಆರೋಗ್ಯ ವಂತರಾಗಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ವೀಡಿಯೋ ನೋಡಿರಿ.
ಅವನು ಹೆಣ್ಣು ನೋಡಲು ತನ್ನ ತಂದೆ ತಾಯಿ ಜೊತೆ ಹೊರಟಿದ್ದ. ಇದುವರೆಗೂ ಅದೆಷ್ಟೋ ಹೆಣ್ಣುಗಳನ್ನು ನೋಡಿದರೂ ಯಾವುದೂ ಸರಿಯಾಗಿ ಕೂಡಿ ಬಂದಿರಲಿಲ್ಲ. ಅವನು ಒಪ್ಪಿದರೆ ಹೆಣ್ಣಿನ ಮನೆಯವರು ಯಾವ್ಯಾವುದೋ ಕಾರಣಕ್ಕೆ ಒಪ್ಪುತ್ತಿರಲಿಲ್ಲ. ಇನ್ನು ಇವನು ಬೇಡವೇ ಬೇಡ ಎಂದು ಬಿಟ್ಟ ಹೆಣ್ಣಿನ ಕಡೆಯವರು ಉತ್ಸಾಹ ತೋರಿಸುತ್ತಿದ್ದರು. ಅವನ ಜೀವನದಲ್ಲಿ ಮೊದಲಿನಿಂದಲೂ ಹೀಗೆ, ಎಲ್ಲವೂ ಉಲ್ಟಾ. ಅವನು ಬೇಕೆಂದೆದು ಅವನಿಗೆ ಸಿಗುತ್ತಿರಲಿಲ್ಲ. ಇದು ಅವನಿಗೆ ಚಿಕ್ಕವನಿದ್ದಾಗಲೇ ತಕ್ಕಮಟ್ಟಿಗೆ ಅಂದಾಜಾ ಗಿದ್ದ ರೂ ಕಾಲೇಜಿಗೆ ಓದಲು ಹೋದ ಮೇಲಂತೂ ಖಾತ್ರಿಯಾಗಿಬಿಟ್ಟಿತು. ಓದಿನಲ್ಲಿ ಸದಾ ಮುಂದಿದ್ದ ಅವನು
ಪಿ ಯು ಸಿ ನಲ್ಲಿ ಡಿಸ್ಟಿಂಕ್ಷನ್ ಬಂದೇ ಬರುತ್ತದೆ, ತಾನು ಇಂಜಿನೀಯರಿಂಗ್ ಓದುತ್ತೇನೆ ಎಂದುಕೊಂಡು ವಿಜ್ಞಾನ ವಿಷಯ ಆರಿಸಿಕೊಂಡರೂ ಅವನು ಬರೇ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದ. ಅವನಿಗೆ ಒಳ್ಳೆಯ ಕಾಲೇಜು ಕೂಡ ಸಿಗದೇ ಕೊನೆಗೆ ಬಿಕಾಂ ಓದಿ ಸಿ. ಎ ಪರೀಕ್ಷೆ ಕಟ್ಟಿದ. ಅವನು ಪರೀಕ್ಷೆಗಳನ್ನು ನಿರುತ್ಸಾಹದಿಂದಲೇ ಬರೆಯುತ್ತಿದ್ದರೂ ಅವನಿಗೆ ಆಶ್ಚರ್ಯ ಆಗುವಷ್ಟು ಅಂಕಗಳು ದೊರೆಯುತ್ತಿದ್ದವು. ಕೊನೆಗೆ ಸಿ ಎ ಕೊನೆಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಯಲ್ಲಿ ಪಾಸಾದಾಗ ಅವನಿಗಂತೂ ನಂಬಲಸಾಧ್ಯವಾಯಿತು. ಕೂಡಲೇ ಒಳ್ಳೆಯ ಕೆಲಸ ಕೂಡ ಸಿಕ್ಕಿತು. ಪ್ರೀತಿಸಿ ಮದುವೆಯಾಗಬೇಕು ಎಂಬ ಹಂಬಲದದಿಂದ ಕಾಲೇಜಿನ ಅದೆಷ್ಟೋ ಹುಡುಗಿಯರ ಹಿಂದೆ ಬಿದ್ದರೂ ಯಾರೂ ಅವನನ್ನು ಇಷ್ಟ ಪಡಲಿಲ್ಲ. ಕೊನೆಗೆ ತನ್ನ ಹಣೆಯಲ್ಲಿ ಪ್ರೀತಿಸಿ ಮದುವೆಯಾಗಿ ಬರೆದಿಲ್ಲವೇನೋ ಎಂದು ನಿರಾಶನಾಗಿ ಅಪ್ಪ ಅಮ್ಮ ನೋಡಿದ ಹೆಣ್ಣನ್ನೇ ಮದುವೆಯಾಗುವುದು ಎಂದು ನಿರ್ಧರಿಸಿದ್ದ. ಅವರು ತೋರಿಸುವ ಹೆಣ್ಣುಗಳನ್ನು ನೋಡುವುದೇ ಅವನ ಕೆಲಸವಾಯಿತು. ಇಂದೂ ಕೂಡ ಹಾಗೇ ಹೊರಟಿದ್ದ.
ಈ ಹುಡುಗಿ ಹೇಗೆ ಇರಲಿ, ನನಗವಳು ಬೇಡ ಫೋಟೋ ನೋಡಿದರೆ ಗೊತ್ತಾಗುತ್ತದೆ
ಅವಳೆಷ್ಟು ಅಲಂಕಾರ ಪ್ರಿಯಳು ಅಂತ. ನನಗೆ ಸರಳವಾಗಿರುವ ಹುಡುಗಿ ಬೇಕು, ನೊಡಲೇನೋ ಸುಂದರವಾಗಿದ್ದಾಳೆ, ಅವಳು ನನ್ನನ್ನು ಒಪ್ಪಬೇಕಲ್ಲ, ಅವಳು ನನ್ನನ್ನು ನಿರಾಕರಿಸುವ ಮೊದಲೇ ನಾನೇ ನಿರಾಕರಿಸಿ ಬಿಡಬೇಕು ಎಂದೆಲ್ಲ ಯೋಚಿಸಿದ.
ಹುಡುಗಿ ಮನೆಯಲ್ಲಿ ಭವ್ಯ ಸ್ವಾಗತ ಕಂಡು ಖುಷಿಯಾದರೂ ಅದೇನೋ ಪೆಚ್ಚು ಕಳೆ ಎಲ್ಲರ ಮುಖದ ಮೇಲಿತ್ತು. ಬಹುಶಃ ನಾನಿವರಿಗೆ ಇಷ್ಟವಾಗಿಲ್ಲ ಅಂತ ಕಾಣುತ್ತೆ, ಪರವಾಗಿಲ್ಲ ನಾನೂ ಹುಡುಗಿ ಬೇಡ ಎಂದು ಮೊದಲೇ ಹೇಳುತ್ತೇನೆ ಎಂದುಕೊಂಡ.
ಹುಡುಗಿ ಬಂದಾಗ ಅವನಿಗೆ ಅಚ್ಚರಿಯಾಯಿತು. ಅವಳು ಸರಳವಾಗಿ ಅಲಂಕಾರ ಮಾಡಿಕೊಂಡಿದ್ದಳು. ಫೋಟೋ ಗಿಂತ ನೋಡೋಕೆ ಚೆನ್ನಾಗಿದ್ದಾಳೆ ಅಂತ ಅಂದುಕೊಂಡ. ರೂಪವೇನೋ ಹಿಡಿಸಿತು ಆದರೆ ಗುಣ. ಮಾತನಾಡಿ ನೋಡಿದ. ಅವಳ ಗುಣ ಸ್ವಭಾವ ಕೂಡ ಅವನಿಗೆ ಹಿಡಿಸಿತು. ಆಗ ತಟ್ಟನೆ ಅವನಿಗೆ ನೆನಪಾಯಿತು, ತಾನು ಇಷ್ಟ ಪಟ್ಟಿದ್ದೆಲ್ಲ ಸಿಗುವುದಿಲ್ಲ ಅಂದರೆ ಈ ಹುಡುಗಿ ನನಗೆ ಸಿಗಲಾರಳು ಎಂದು ಬೇಜಾರು ಪಟ್ಟುಕೊಂಡ. ಅವನ ತಾಯಿ ಹುಡುಗಿ ಫೋಟೋಗಿಂತ ಚೆನ್ನಾಗಿದ್ದಾಳೆ ಎಂದು ಹೇಳಿದಾಗ ಹುಡುಗಿಯ ಅಜ್ಜಿ, “ಅವಳ ಅಮ್ಮ ಅಲಂಕಾರ ಪ್ರಿಯೆ, ಅದಕ್ಕೆ ಇವಳು ಬೇಡ ಅಂದ್ರೂ ಮೇಕಪ್ ಮಾಡಿಸಿ ಫೋಟೋ ತೆಗೆಸಿದ್ದು” ಎನ್ನುತ್ತಾ ಸೊಸೆ ಕಡೆ ನೋಡಿ “ನೋಡಿದ್ಯಾ, ಇನ್ಮೇಲೆ ಹಾಗೆಲ್ಲ ಮೇಕಪ್ ಮಾಡಿಸಬೇಡ. ಅವಳು ಹಾಗೇ ಚೆನ್ನಾಗಿದ್ದಾಳೆ” ಎಂದಾಗ ಅವನಿಗೆ ಟುಸ್ಸೆನಿಸಿತು. ಅಂದರೆ ಅಜ್ಜಿಗೆ ನಾನು ಇಷ್ಟವಾಗಿಲ್ಲ ಅಂದಾಯಿತು ಅಂತ ಅನಿಸಿ ಸಪ್ಪೆ ಮೋರೆ ಹಾಕಿದ. ಅವನ ತಾಯಿ ಇವನ ಬಳಿ ಮೆಲುದನಿಯಲ್ಲಿ” ಏನೋ ನಿಂಗೆ ಹಿಡಿಸಿ ದ್ಲೇನೋ ಅಂತ ಕೇಳಿದಾಗ “ಮೊದ್ಲು ಅವರನ್ನು ಕೇಳು, ಇಷ್ಟೊಂದು ಹುಡುಗೀರನ್ನ ನೋಡಿದಾಗ ಆದ ಅನುಭವ, ಅವಮಾನ ಸಾಕು. ಮೊದ್ಲು ಅವರನ್ನೇ ಕೇಳು ಎಂದವನು ಪಿಸುದನಿಯಲ್ಲಿ ನುಡಿದಾಗ ಅವನ ತಾಯಿ ಹುಡುಗಿಯನ್ನು ನೇರವಾಗಿ ಕೇಳಿದರು. “ಏನಮ್ಮ ನನ್ನ ಮಗ ಇಷ್ಟವಾದನಾ” ಆಕೆ ನಿಧಾನವಾಗಿ ಹೌದೆಂದು ತಲೆಯಾಡಿಸಿದಳು. ಒಂದು ಕ್ಷಣ ಅವನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅಂದರೆ ಹುಡುಗಿಗೂ ನಾನು ಇಷ್ಟವಾದೇ ಅಂದರೆ ಈ ಮದುವೆ ನಡೆಯುತ್ತದೆ, ಕೊನೆಗೂ ನನ್ನ ಜೀವನದಲ್ಲಿ ಉಲ್ಟಾ ನಡೆಯುವುದು ನಿಲ್ಲುತ್ತೆ ಎಂದು ಬಹಳ ಸಂತೋಷ ಪಟ್ಟ. ಅದೇ ಖುಷಿಯಲ್ಲಿ ನನಗೂ ಒಪ್ಪಿಗೆ ಅಂತ ಗಟ್ಟಿಯಾಗಿ ಹೇಳಿದಾಗ ಎಲ್ಲರೂ ನಕ್ಕರು. ಹುಡುಗಿ ಮನೆಯವರು ಇವತ್ತೇ ನಿಶ್ಚಿತಾರ್ಥ ನಡೆಯಲಿ ಎಂದಾಗ ಇವನಿಗೆ ರೋಗಿ ಬಯಸಿದ್ದೂ ಹಾಲು ವೈದ್ಯರೂ ಹೇಳಿದ್ದೂ ಹಾಲು ಎಂದಂತಾಯಿತು. ಸರಳವಾಗಿ ನಿಶ್ಚಿತಾರ್ಥ ದ ಶಾಸ್ತ್ರ ಕೂಡ ಮುಗಿಯಿತು.
ಮದುವೆ ಗೊತ್ತಾದ ಮೇಲಂತೂ ಅವನು ಆಕಾಶದಲ್ಲಿ ತೇಲಾಡುತ್ತಿದ್ದ. ಅಬ್ಬಾ
ಇನ್ನೇನೂ ಚಿಂತೆಯಿಲ್ಲ, ಇನ್ನು ಮುಂದೆ ತಾನು ಇಷ್ಟ ಪಟ್ಟಿದ್ದು ತನಗೆ ಸಿಗುತ್ತದೆ. ಇನ್ನು ತನ್ನ ಜೀವನದಲ್ಲಿ ಉಲ್ಟಾ ಆಗಲಿಕ್ಕಿಲ್ಲ. ಸುಂದರವಾದ ಒಳ್ಳೆ ಗುಣಗಳಿರುವ ಸರಳವಾದ ಹುಡುಗಿ ತನಗೆ ಸಿಕ್ಕಿದ್ದಾಳೆ ಎಂದು ಸ್ನೇಹಿತರಿಗೆ ಹೇಳಿಕೊಂಡು ತಿರುಗಿದ. ಅವನ ಸ್ನೇಹಿತರು ಕೊನೆಗೂ ಜಾಕ್ ಪಾಟ್ ಹೊಡೆದೆಯಲ್ಲೋ ಎಂದು ಮತ್ಸರದಿಂದ ನುಡಿದಾಗ ಅವನು ಉಬ್ಬಿಹೋದ.
ಮದುವೆ ಆದಷ್ಟೂ ಬೇಗನೆ ಆದರೆ ಒಳ್ಳೆಯದು ಎಂದು ಅಮ್ಮನನ್ನು ಕಾಡಿ ಬೇಡಿ, ತಿಂಗಳಲ್ಲೇ ಮದುವೆ ನಿಶ್ಚಯಿಸಿದ. ಹುಡುಗಿ ಜೊತೆ ದಿನವೂ ಫೋನಿನಲ್ಲಿ ಮಾತು, ವಾರಕ್ಕೊಮ್ಮೆ ಪಾರ್ಕ್ ಸಿನಿಮಾ ಹೋಟೆಲು ಎಂದೆಲ್ಲ ಸುತ್ತಾಡಿ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡ.
ಮದುವೆ ದಿನವಂತೂ ಅವನ ಸಂತೋಷ ಹೇಳತೀರದು. ಮದುವೆ ಮಂಟಪದಲ್ಲಿ ತನ್ನ ಮನದರಸಿ ಬರುವುದನ್ನೇ ಕಾದು ಕುಳಿತ. ಆದರೆ ಹುಡುಗಿಯ ಅಲಂಕಾರ ಮುಗಿದಿಲ್ಲ, ಬಟ್ಟೆ ಸಿಗ್ತಾ ಇಲ್ಲ ಅಂತ
ಏನೇನೋ ಸಬೂಬು ಹೇಳುತ್ತ ಇನ್ನಷ್ಟು ಕಾಯುವಂತಾದಾಗ ಅವನಿಗೆ ಯೋಚನೆ ಯಾಯಿತು. ದೇವರೇ ಕೊನೆ ಘಳಿಗೆಯಲ್ಲಿ ಉಲ್ಟಾ ಮಾಡಬೇಡಪ್ಪ, ನಂಗೆ ಈ ಹುಡುಗಿ ಜೊತೆ ಮದುವೆಯಾಗೋ ಯೋಗ ಕರುಣಿಸು ಅಂತ ದೇವರಲ್ಲಿ ಬೇಡಿಕೊಂಡ.
ಕೊನೆಗೆ ಮುಹೂರ್ತ ಮೀರುವ ಸಮಯವಾದಾಗ ಪುರೋಹಿತರು ಹೆಣ್ಣನ್ನು ಬೇಗನೆ ಕರೆದುಕೊಂಡು ಬನ್ನಿ ಮುಹೂರ್ತ ಮೀರುತ್ತಿದೆ, ಆಮೇಲೆ ಈ ಮದುವೆ ನಡೆಯಲ್ಲ ಎಂದಾಗ ಹುಡುಗಿಯ ತಂದೆ ಮುಂದೆ ಬಂದು ತಲೆ ತಗ್ಗಿಸಿ ನಿಂತು ಪುರೋಹಿತರೇ, ಈ ಮದುವೆ ನಡೆಯುವುದಿಲ್ಲ ಎಂದಾಗ ಅವನಿಗೆ ಎದೆ ಧಸಕ್ಕೆಂದಿತು. “ಅರೆ, ಯಾಕೆ ಏನಾಯಿತು ಅವಳ ಜೊತೆ ನಾನು ಮಾತಾಡಿದ್ದೆ, ಎಲ್ಲೆಲ್ಲೋ ಸುತ್ತಾಡಿದೆವು, ಈಗ ಅಂಥಾದ್ದು ಏನಾಯ್ತು” ಎಂದವನು ಆತಂಕದಿಂದ ಕೇಳಿದಾಗ “ಅವಳು ಪ್ರೀತಿಸಿದವನ ಜೊತೆ ಓಡಿ ಹೋದಳು, ನಮ್ಮ ಮರ್ಯಾದೆ ಕಳೆದು ಬಿಟ್ಟಳು. ಈ ಮದುವೆ ಒಪ್ಪಿಕೊಂಡ ಹಾಗೆ ನಾಟಕ ಮಾಡಿ ನಮ್ಮ ಮುಖಕ್ಕೆ ಮಸಿ ಬಳಿದು ಬಿಟ್ಟಳು” ಎಂದವರು ಬಿಕ್ಕಿದಾಗ ಅವನಿಗೆ ಭೂಮಿಯೇ ಬಾಯಿ ಬಿಟ್ಟಂತಾಯಿತು. ಆದರೂ ಕೂಡ ಅವನ ಜೀವನದಲ್ಲಿ ಇದುವರೆಗೂ ಅವನಿಷ್ಟದ ವಿರುದ್ಧ ನಡೆಯುವುದೆಲ್ಲ ಅವನ ಒಳ್ಳೆಯದಕ್ಕೆ ಎಂದು ಮಾತ್ರ ಅವನಿಗರಿವಾ ಗಲೇ ಇಲ್ಲ. ಅವನು ತನ್ನ ಗ್ರಹಚಾರ, ದುರಾದೃಷ್ಟ ಎಂದೆಲ್ಲ ಹಳಿದುಕೊಂಡಿದ್ದರೂ ವಿಧಿ ಮಾತ್ರ ಪ್ರತೀ ಸಲವೂ ಅವನನ್ನು ಕಷ್ಟದಿಂದ ಪಾರು ಮಾಡಲು ಪ್ರಯತ್ನಿಸುತ್ತಿತ್ತು.
ಶಾಂತಲಾ ಕೆಲವು ಸಮಯದಿಂದ ಪೇಟೆಗೆ ಹೋದಾಗೆಲ್ಲ ಒಬ್ಬ ಮಹಿಳೆಯನ್ನು ಗಮನಿಸುತ್ತಿದ್ದರು. ಹಸುಕೂಸನ್ನು ಸೆರಗಲ್ಲಿ ಕಟ್ಟಿಕೊಂಡು ಆಕೆ ಅವರಿವರ ಬಳಿ ಭಿಕ್ಷೆ ಬೇಡುತ್ತಿದ್ದಳು. ಅದೆಷ್ಟೋ ಜನ ಅವಳನ್ನು ಕಂಡರೂ ಕಾಣದಂತೆ ಸುಮ್ಮನೆ ಹೋಗುತ್ತಿದ್ದರೂ ಆಕೆ ಅವರನ್ನು ಹಿಂಬಾಲಿಸಿಕೊಂಡು ಅಂಗಲಾಚಿ ಬೇಡಿಕೊಳ್ಳುತ್ತಿದ್ದಳು. ಶಾಂತಲಾಗೆ ಅದನ್ನು ಕಂಡು ಅಯ್ಯೋ ಪಾಪ ಎನಿಸಿ ತಾವೇ ಅವಳ ಬಳಿ ಹೋಗಿ ಹತ್ತು ರೂಪಾಯಿ ಕೊಟ್ಟು ಬರುತ್ತಿದ್ದರು. ಕೆಲವೊಮ್ಮೆ ಬೇಕರಿಯಿಂದ ಬ್ರೆಡ್ಡೋ. ಬನ್ನೋ ಹೀಗೆ ಏನಾದರೂ ಕೊಡಿಸುತ್ತಿದ್ದರು.
ಹೀಗೆ ತಿಂಗಳುಗಳು ಉರುಳಿದಂತೆ ಭಿಕ್ಷುಕಿಯ ಮಗು ಸ್ವಲ್ಪ ದೊಡ್ಡದಾದಂತೆ ಅದನ್ನು ಹೆಗಲಿಗೆ ಹಾಕಿ ಭಿಕ್ಷೆ ಬೇಡಹತ್ತಿದಳು. ಶಾಂತಲಾಗೆ ಆಕೆ ದಿನವಿಡೀ ಬಿರು ಬಿಸಲಲ್ಲಿ ಅಲೆದಾಡುತ್ತ ಮಗುವನ್ನೂ ಬಿಸಿಲಿಗೆ ಒಡ್ಡುತ್ತಾ ಭಿಕ್ಷೆ ಬೇಡುವ ಬದಲು ಯಾವುದಾದರೂ ಕೆಲಸ ಮಾಡಬಹುದಲ್ಲವೇ ಎನಿಸಿದರೂ ಮಗು ಇನ್ನೂ ಸ್ವಲ್ಪ ದೊಡ್ಡದಾದ ಮೇಲೆ ತಾನೇ ಹೋಗಬಹುದು ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡರು.
ವರುಷ ಕಳೆದು ಮಗು ನಡೆದಾಡಲು ಶುರು ಮಾಡಿದ ಮೇಲೂ ಆಕೆ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿಲ್ಲ. ಅಷ್ಟೇ ಅಲ್ಲ ಈಗ ಆ ಪುಟ್ಟ ಕಂದನಿಂದಲೂ ಭಿಕ್ಷೆ ಬೇಡಿಸತೊಡಗಿದಳು. ಅದನ್ನು ಕಂಡು ಶಾಂತಲಾಗೆ ಕರುಳು ಚುರುಕ್ಕೆಂದಿತು. ಸೀದಾ ಅವಳ ಬಳಿಗೆ ಹೋಗಿ, ಆ ಮಗು ಕೈಯ್ಯಲ್ಲೂ ಭಿಕ್ಷೆ ಬೇಡಿಸ್ತಿಯಲ್ಲ ನಿಂಗೆ ಮನಸ್ಸಾದರೂ ಹೇಗೆ ಬರುತ್ತದೆ. ಆಟವಾಡಿ ಸಂತೋಷವಾಗಿ ಇರಬೇಕಾದ ಕಂದನನ್ನು ಹೀಗೆ ಬಿಸಿಲಲ್ಲಿ ಅಲೆದಾಡಿಸ್ತಿಯಲ್ಲ, ನಾಚಿಕೆಯಾಗಲ್ವಾ ಎಂದು ಅವಳನ್ನು ಗದರಿಸಿದರು.
ಅಷ್ಟರಲ್ಲಿ ಆ ಪುಟ್ಟ ಕಂದ ಇವರ ಸೀರೆಯನ್ನು ಜಗ್ಗುತ್ತ ತನ್ನ ಪುಟ್ಟ ಕೈಯನ್ನು ಇವರ ಮುಂದೆ ಚಾಚಿದಾಗ ಅದರ ಮುಗ್ಧ ಮುಖ ಕಂಡು ಅಯ್ಯೋ ಪಾಪ ಎನಿಸಿ ಮನಸ್ಸು ಕರಗಿ ಅಲ್ಲೇ ಇದ್ದ ಬೇಕರಿಗೆ ಹೋಗಿ ಬಿಸ್ಕೆಟ್ ಪೊಟ್ಟಣ ಖರೀದಿಸಿ ತಂದು ಆ ಮಗುವಿನ ಕೈಯಲ್ಲಿಟ್ಟರು. ನಂತರ ಅವಳನ್ನು ನೋಡುತ್ತಾ, ನೋಡು ಹೀಗೆ ಭಿಕ್ಷೆ ಬೇಡುವ ಬದಲು ಯಾವುದಾದರೂ ಕೆಲಸ ಮಾಡು. ಮಗುವನ್ನು ಅಂಗನವಾಡಿಯಲ್ಲಿ ಬಿಡಬಹುದು. ಅಲ್ಲಿ ಮಗುವಿಗೆ ಮಧ್ಯಾಹ್ನದ ಊಟ ಕೊಡ್ತಾರೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀನು ನಿನ್ನ ಪಾಡಿಗೆ ಆರಾಮವಾಗಿ ಕೆಲಸ ಮಾಡಬಹುದು. ನೀನು ಭಿಕ್ಷೆ ಬೇಡಿದ್ದು ಸಾಲದು ಅಂತ ನಿನ್ನ ಮಗನೂ ಮುಂದೆ ಜೀವನ ಪೂರ್ತಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕಾ, ಅವನನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡು. ತಾಯಿಯಾದವಳು ಮಗುವಿನ ಬಾಳು ಹಸನು ಮಾಡಲು ಎಷ್ಟೆಲ್ಲಾ ಕಷ್ಟ ಪಡುತ್ತಾಳೆ. ನೀನು ಮಾತ್ರ ನಿನ್ನ ಮಗುವಿನ ಬಾಳಿಗೆ ಶತ್ರು ಆಗಿ ಬಿಟ್ಟಿದ್ದೀಯಾ ಎಂದೆಲ್ಲ ಗದರಿಸಿದರು.
ಅಷ್ಟಕ್ಕೇ ಅವಳಿಗೆ ಸಿಟ್ಟು ಬಂದು ಶಾಂತಲಾರನ್ನು ದುರುಗುಟ್ಟಿ ನೋಡುತ್ತಾ, ಏನಮ್ಮ ಸುಮ್ನೆ ಇದ್ದೀನಂತ ಬಾಯಿಗೆ ಬಂದ ಹಾಗೆ ಮಾತಾಡ್ತೀರಾ, ಏನೋ ನಾಲ್ಕು ಕಾಸು ಕೊಟ್ಟಿದೀನಿ ಅಂತ ಜಮಾಯ್ಸೋಕೆ ಬರ್ತೀರಾ, ಅವನು ನನ್ನ ಮಗ, ನಾನು ಏನಾದ್ರೂ ಮಾಡಿಸ್ತೀನಿ, ಅದನ್ನು ಕಟ್ಕೊಂಡು ನಿನಗೇನು ಆಗ್ಬೇಕಿದೆ, ಸುಮ್ನೆ ನಿನ್ನ ಪಾಡಿಗೆ ನೀನು ಹೋಯ್ತಾ ಇರು ಎನ್ನುತ್ತಾ ಮಗು ತಿನ್ನುತ್ತಿದ್ದ ಬಿಸ್ಕೆಟ್ ಪ್ಯಾಕೆಟ್ ನ್ನು ಅದರ ಕೈಯಿಂದ ಕಿತ್ತುಕೊಂಡು ಎಸೆದಳು. ಆ ಪುಟ್ಟ ಬಾಲಕ ಅಳತೊಡಗಿದ. ಅವಳು ಅವನನ್ನು ದರದರನೆ ಎಳೆದುಕೊಂಡು ಮುಂದೆ ಸಾಗಿದಳು.
ಭಿಕ್ಷುಕಿಯ ಅಹಂಕಾರದ ಮಾತುಗಳನ್ನು ಕೇಳಿ ಶಾಂತಲಾಗೆ ಗರಬಡಿದಂತಾಯಿತು. ಯಕಃಶ್ಚಿತ್ ಭಿಕ್ಷೆ ಬೇಡುವವಳ ಬಳಿ ಉಗಿಸಿಕೊಂಡೆನಲ್ಲ. ಇಷ್ಟಕ್ಕೂ ತಾನೇ ಅವಳಿಗೆ ಅದೆಷ್ಟೋ ಬಾರಿ ಭಿಕ್ಷೆ ಕೊಟ್ಟಿದ್ದುಂಟು. ಆದರೂ ಅವಳಿಗೆ ಅದೆಷ್ಟು ಕೊಬ್ಬು. ನನಗಾದರೂ ಯಾಕೆ ಬೇಕಿತ್ತು ಅವಳ ಸಹವಾಸ. ಸುಮ್ನೆ ಅವಳ ಕೈಯ್ಯಲ್ಲಿ ಉಗಿಸಿಕೊಂಡೆನಲ್ಲ ಎಂದು ಅವರಿಗೆ ಬೇಸರವಾಯಿತು. ಈ ಕಾಲದಲ್ಲಿ ಯಾರಿಗೂ ಬುದ್ಧಿ ಹೇಳುವ ಹಾಗೆ ಇಲ್ಲ. ಅವಳು ಏನೇ ಮಾಡಿಕೊಂಡು ಸಾಯಲಿ ನನಗೇನು ಎನ್ನುತ್ತಾ ಅಪಮಾನದಿಂದ ತಲೆತಗ್ಗಿಸಿ ಅಲ್ಲಿಂದ ಹೊರಟರು.
ಮನೆಗೆ ಬಂದಾಗ ಪತಿ, ಮಕ್ಕಳು ಇವರ ಮ್ಲಾನವದನ ಕಂಡು ಏನಾಯಿತೆಂದು ಆತಂಕದಿಂದ ವಿಚಾರಿಸಿದರು. ಆದರೆ ಶಾಂತಲಾ ಭಿಕ್ಷುಕಿಗೆ ಬುದ್ಧಿ ಹೇಳಲು ಹೋಗಿ ಅವಳ ಕೈಲಿ ತಾನು ಬೈಸಿಕೊಂಡೆ ಎಂದು ಹೇಳಿದರೆ ಎಲ್ಲರೂ ತನ್ನನ್ನೇ ಗದರಿಸುವರು. ನಿನಗ್ಯಾಕೆ ಬೇಕಿತ್ತು ಅದೆಲ್ಲ. ಅವಳು ಏನಾದರೂ ಮಾಡ್ಲಿ ನಿನಗೇನು ಎಂದು ಅನ್ನಬಹುದು ಎಂದುಕೊಳ್ಳುತ್ತಾ, ಏನಿಲ್ಲ ತುಂಬಾ ಸುಸ್ತಾಗಿದೆ ಅಷ್ಟೇ ಎನ್ನುತ್ತಾ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತರು. ಅದನ್ನು ನೋಡಿ ಅವರ ಪತಿ ಇಷ್ಟೊಂದು ಸುಸ್ತಾಗುತ್ತೆ ಅಂದರೆ ಇನ್ನು ಮುಂದೆ ನಾನು ಅಥವಾ ಮಕ್ಕಳು ಸಾಮಾನು ತಂದು ಕೊಡುತ್ತೇವೆ. ನೀನು ಮನೆಯಲ್ಲೇ ಇರು ಎಂದಾಗ ಅವರಿಗೂ ಮತ್ತೆ ಆ ಭಿಕ್ಷುಕಿಯ ಮುಖ ನೋಡಲು ಮನಸ್ಸಿಲ್ಲವಾದ್ದರಿಂದ, ಹಾಗೇ ಆಗಲಿ ಎಂದರು.
ಆನಂತರ ಏನೇ ಬೇಕಿದ್ದರೂ ಮಕ್ಕಳು ಅಥವಾ ಪತಿಯೇ ತಂದು ಕೊಡಲು ಶುರು ಮಾಡಿದರು. ನಿಧಾನವಾಗಿ ಅವರು ಭಿಕ್ಷುಕಿಯಿಂದ ಆದ ಅಪಮಾನವನ್ನು ಮರೆಯತೊಡಗಿದರು. ಕೆಲವು ಸಮಯದ ನಂತರ ಅವರಿಗೆ ಬ್ಯಾಂಕಿಗೆ ಹೋಗಲೆಬೇಕಾಗಿ ಬಂದಾಗ ಆ ಭಿಕ್ಷುಕಿಯ ನೆನಪಾಗಿ ಅವಳು ಸಿಕ್ಕಿದರೆ ಅವಳತ್ತ ನೋಡಲೇ ಬಾರದೆಂದು ನಿರ್ಧರಿಸಿದರೂ ಕಣ್ಣುಗಳು ಮಾತ್ರ ಅವಳನ್ನೇ ಹುಡುಕತೊಡಗಿದವು. ಆದರೆ ಅವಳೆಲ್ಲೂ ಕಾಣಿಸಲಿಲ್ಲ. ನಿಟ್ಟುಸಿರು ಬಿಡುತ್ತ ಶಾಂತಲಾ ಬ್ಯಾಂಕಿನ ಕಡೆ ಹೆಜ್ಜೆ ಹಾಕಿದರು. ಮತ್ತೆ ಅವರು ಆ ಕಡೆ ತಲೆ ಹಾಕಲೇ ಇಲ್ಲ.
ಕೆಲಸಮಯದ ನಂತರ ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುವಾಗ ಶಾಂತಲಾ, ಸುಮ್ಮನೆ ಮಕ್ಕಳಿಗೆ ತೊಂದರೆ ಯಾಕೆ ಅವರ ಸಮಯ ಯಾಕೆ ದಂಡ ಮಾಡೋದು ಅವರು ಚೆನ್ನಾಗಿ ಓದಿ ಕೊಳ್ಳಲಿ ಎಂದುಕೊಂಡು ತಾವೇ ಪೇಟೆಗೆ ಹೋಗಲು ಶುರು ಮಾಡಿದರು. ಆದರೆ ಆ ಭಿಕ್ಷುಕಿ ಅವರಿಗೆ ಮತ್ತೆಂದೂ ಕಾಣಿಸಲಿಲ್ಲ. ಅವಳಿಗೆ ಏನಾಗಿರಬಹುದು, ನಾನು ಮತ್ತೆ ಅವಳ ತಂಟೆಗೆ ಬಂದರೆ ಎಂದು ಬೇರೆ ಕಡೆ ಹೋಗಿ ಭಿಕ್ಷೆ ಬೇಡುತ್ತಿರಬಹುದೇ, ಅವಳು ಎಲ್ಲಿದ್ದಾಳೆ ಎಂದು ಇಲ್ಲಿ ಯಾರ ಬಳಿಯಾದರೂ ಕೇಳಲೇ ಅಂದುಕೊಂಡರು.
ಆದರೆ ನಾನು ಆ ಭಿಕ್ಷುಕಿ ಬಗ್ಗೆ ಯಾಕೆ ಕೇಳುತ್ತಿದ್ದೇನೆ ಎಂದು ಅವರು ಕೇಳಿದರೆ ಏನು ಹೇಳಲಿ, ಬೇಡ, ನನಗೆ ಅಷ್ಟೊಂದು ಅಪಮಾನ ಮಾಡಿದ ಅವಳ ಬಗ್ಗೆ ನನಗೇಕೆ ಇಷ್ಟೊಂದು ಕಾಳಜಿ, ಅವಳು ಎಲ್ಲೇ ಇರಲಿ, ಎಲ್ಲೇ ಹೋಗಲಿ ನನಗೇನು ಎಂದುಕೊಳ್ಳುತ್ತ ತಾವು ಖರೀದಿಸಿದ ಸಾಮಾನುಗಳನ್ನು ರಿಕ್ಷಾದಲ್ಲಿ ಹಾಕಿ ರಿಕ್ಷಾ ಹತ್ತಬೇಕು ಅನ್ನುವಷ್ಟರಲ್ಲಿ ಯಾರೋ ತನ್ನ ಕಾಲುಗಳನ್ನುಬಿಗಿಯಾಗಿ ಹಿಡಿದಂತಾಗಿ ಗಾಬರಿಯಿಂದ ಕೆಳಗೆ ನೋಡಿದಾಗ ಆ ಭಿಕ್ಷುಕಿ ! ಅರೆ ಇವಳು ತನ್ನ ಕಾಲು ಯಾಕೆ ಹಿಡೀತಾಳೆ ಅವತ್ತು ಅಷ್ಟೆಲ್ಲ ಅಂದವಳು ಎಂದು ಅವರು ಯೋಚಿಸುವಷ್ಟರಲ್ಲಿ ಅವಳು ಅಮ್ಮಾ ನನ್ನನ್ನು ಕ್ಷಮಿಸಿ ಬಿಡಮ್ಮ, ಅವತ್ತು ನಿಮಗೆ ಏನೇನೋ ಹೇಳಿಬಿಟ್ಟೆ. ನೀವು ಕ್ಷಮಿಸಿದೆ ಅನ್ನೋವರೆಗೂ ನಾನು ನಿಮ್ಮ ಕಾಲು ಬಿಡಲ್ಲ ಅನ್ನುತ್ತ ಅವರ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಳು.
ಶಾಂತಲಾ ನಿರ್ಲಿಪ್ತರಾಗಿ, ನನ್ನ ಹತ್ತಿರ ಕ್ಷಮೆ ಕೇಳೋ ಅಗತ್ಯ ಇಲ್ಲ, ನಾನ್ಯಾರು ನಿಂಗೆ ಬುದ್ಧಿ ಹೇಳೋಕೆ, ಹಾಗೆ ನೋಡಿದ್ರೆ ನಾನೇ ನಿನ್ನ ಬಳಿ ಕ್ಷಮಾಪಣೆ ಕೇಳಬೇಕು, ನಿನ್ನ ಬದುಕಿನ ಬಗ್ಗೆ ಮಾತನಾಡುವ ಹಕ್ಕಿರಲಿಲ್ಲ ನನಗೆ. ಆದರೂ ಮಾತಾಡ್ದೆ ನೋಡು ಅದಕ್ಕೆ ಎನ್ನುತ್ತಾ ತಮ್ಮ ಎರಡೂ ಕೈಗಳನ್ನು ಜೋಡಿಸಿದಾಗ ಅವಳು ಧಿಗ್ಗನೆದ್ದು ದಯವಿಟ್ಟು ಹಾಗೆಲ್ಲ ಮಾಡಬೇಡೀಮ್ಮಾ, ಅವತ್ತು ನೀವು ಹಾಗೆಲ್ಲ ಹೇಳಿದ ಮೇಲೆ ಜೋಪಡಿಗೆ ಹೋಗಿ ಹಾಗೇ ಯೋಚಿಸ್ತಾ ಕೂತ್ಕೊಂಡೆ. ಆಗ ನೀವು ಹೇಳಿದ್ದು ದಿಟ ಅಂತ ಅನ್ನಿಸ್ತು. ನನ್ನ ಬಾಳಿನ ಹಾಗೆ ಮಗನ ಬಾಳು ಹಾಳಾಗಬಾರದು. ಅವನನ್ನು ಚೆನ್ನಾಗಿ ಓದಿಸಬೇಕು ಅಂತ ಅವತ್ತೇ ನಿರ್ಧಾರ ಮಾಡ್ಕೊಂಡೆ. ಮಾರನೆ ದಿನಾನೇ ಕೂಲಿ ಕೆಲ್ಸಕ್ಕೆ ಸೇರ್ಕೊಂಡೆ. ನೀವು ಹೇಳ್ದ ಹಾಗೇ ಮಗೂನ ಅಂಗನವಾಡಿಲಿ ಬಿಟ್ಟೆ. ಈವಾಗ ನೀವು ಹೇಳ್ದ ಹಾಗೆ ನನ್ನ ಬದುಕು ಚೆನ್ನಾಗಿದೆ. ಅವತ್ತಿಂದ ನಾನು ನಿಮ್ಮ ಹತ್ರ ಕ್ಷಮೆ ಕೇಳಬೇಕು ಅಂತ ನಿಮಗೋಸ್ಕರ ಹುಡುಕಾಡಿದೆ. ಆದರೆ ನಾನು ಕೆಲಸ ಮುಗಿಸಿ ಬರೋವಾಗ ಕತ್ತಲಾಗ್ತಿತ್ತು. ಅದೂ ಅಲ್ಲದೆ ನಿಮ್ಮ ಮನೆ ಎಲ್ಲಿದೆ ಅಂತ ಕೂಡ ಗೊತ್ತಿಲ್ಲ. ಯಾವಾಗ್ಲಾದ್ರೂ ನೀವು ನೋಡೋಕೆ ಸಿಗಬಹುದು ಅಂತ ಆಗಾಗ ಈ ಕಡೆ ಬರ್ತಾ ಇರ್ತೀನಿ. ಇವತ್ತು ಸಿಕ್ಕಿದ್ರಲ್ಲ ನನ್ನ ಪುಣ್ಯ. ನಿಮ್ಮ ಆಶೀರ್ವಾದ ನನ್ನ ಹಾಗೂ ನನ್ನ ಮೇಲಿರಲಿ ತಾಯಿ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ಎಂದು ಅವಳು ಅಂಗಲಾಚಿ ಬೇಡಿಕೊಂಡಳು.
ಶಾಂತಲಾ ಅವಳನ್ನು ಹಿಡಿದು ಮೇಲಕ್ಕೆತ್ತಿ, ಚೆನ್ನಾಗಿ ಬಾಳು. ಮಗನನ್ನು ಚೆನ್ನಾಗಿ ನೋಡ್ಕೋ ಎಂದು ಹರಸಿದರು. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಂಬಾ ದೊಡ್ಡ ಮನಸ್ಸು ತಾಯಿ ನಿಮ್ಮದು ಎನ್ನುತ್ತಾ ತನ್ನ ಸೀರೆಯ ಸೆರಗಿನಿಂದ ಕಣ್ಣೊರೆಸುತ್ತ, ನಾನು ಬರ್ತೀನಿ ತಾಯಿ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹೇಳಿ ಹೊರಟು ಹೋದಳು. ಅಷ್ಟೂ ಹೊತ್ತು ಮೂಕ ಪ್ರೇಕ್ಷಕನಾಗಿ ನಿಂತಿದ್ದ ರಿಕ್ಷಾದವ, ಅಮ್ಮಾ ನೀವು ತುಂಬಾ ಒಳ್ಳೇ ಕೆಲಸ ಮಾಡಿದ್ರಿ ಎಂದಾಗ ಶಾಂತಲಾ ನಿಟ್ಟುಸಿರು ಬಿಟ್ಟರು.
ಗಾಢ ನಿದ್ದೆಯಲ್ಲಿದ್ದ ಹೇಮಂತನಿಗೆ ಮಕ್ಕಳ ರೂಮಿನಲ್ಲಿ ಏನೋ ಧೊಪ್ಪನೆ ಬಿದ್ದ ಸದ್ದಿನಿಂದ ಎಚ್ಚರವಾಯಿತು. ಏನದು ಶಬ್ದ ? ಮನೆಯಲ್ಲಿ ತನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಹೆಂಡತಿ, ಮಕ್ಕಳ ಜೊತೆ ತವರು ಮನೆಗೆ ಹೋಗಿದ್ದಾಳೆ. ಹಾಗಾದರೆ ಕಳ್ಳ ಬಂದಿರಬಹುದೇ ಎಂದು ಅವನಿಗೆ ಆತಂಕ ಶುರುವಾಯಿತು. ಎದ್ದು ಹೋಗಿ ನೋಡಲೂ ಅವನಿಗೆ ಭಯವಾಯಿತು. ಕಳ್ಳನ ಬಳಿ ಚಾಕು ಚೂರಿ ಅಥವಾ ಗನ್ ಇದ್ದರೆ ಸುಮ್ಮನೆ ಜೀವಕ್ಕೆ ಅಪಾಯ ತಂದುಕೊಂಡಂತೆ ಆಗುತ್ತದೆ. ಆದರೆ ಕಳ್ಳ ಏನಾದರೂ ಹೊತ್ತುಕೊಂಡು ಹೋದರೆ ಎಂದೂ ಆತಂಕವಾಯಿತು. ಚಿನ್ನ ಒಡವೆ ಇರುವ ಕಪಾಟು ತನ್ನ ರೂಮಿನಲ್ಲೇ ಇದೆಯಾದರೂ ದೇವರ ಕೋಣೆಯಲ್ಲಿ ಬೆಳ್ಳಿ ವಿಗ್ರಹಗಳು, ದೀಪಗಳೆಲ್ಲ ಇದೆಯಲ್ಲ ಎಂದುಕೊಳ್ಳುತ್ತಾ ಮೆಲ್ಲನೆದ್ದ. ಲೈಟು ಹಾಕಲೂ ಅವನಿಗೆ ಭಯವಾಯಿತು. ತನ್ನ ಫೋನಿನ ಬೆಳಕಿನಲ್ಲಿ ಮೆಲ್ಲನೆ ಹೆಜ್ಜೆಯಿಡುತ್ತ ಮಕ್ಕಳ ರೂಮಿನತ್ತ ನಡೆದ.
ಮಕ್ಕಳ ರೂಮಿನ ಬಾಗಿಲು ಅರೆ ತೆರೆದಿತ್ತು. ಅರೆ! ನಾನು ರಾತ್ರಿ ಮಲಗುವ ಮುನ್ನ ರೂಮಿನ ಬಾಗಿಲು ಹಾಕಿದ್ದೆನಲ್ಲ, ಈಗ ತೆರೆದಿದೆ ಅಂದರೆ ಖಂಡಿತವಾಗಿಯೂ ಕಳ್ಳ ಬಂದಿದ್ದಾನೆ ಅಂತಾಯ್ತು. ಈಗ ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಅವನ ಫೋನಿಗೆ ಯಾವುದೋ ಹೊಸ ನಂಬರಿನಿಂದ ಕರೆ ಬಂದಿತು. ಹೇಮಂತನಿಗೆ ಅಚ್ಚರಿಯಾಯಿತು. ರಾತ್ರಿ ಎರಡುವರೆ ಕಳೆದಿದೆ. ಇಷ್ಟೊತ್ತಿನಲ್ಲಿ ತನಗೆ ಫೋನ್ ಮಾಡುತ್ತಿರುವವರು ಯಾರು, ತನ್ನ ಹೆಂಡತಿ ಇರಬಹುದೇ, ಎಂದುಕೊಂಡ. ಆದರೆ ಮರುಕ್ಷಣ ಅವಳು ಅವಳ ಫೋನ್ ಬಿಟ್ಟು ಯಾಕೆ ಬೇರೆ ನಂಬರ್ ನಿಂದ ಕಾಲ್ ಮಾಡುತ್ತಾಳೆ ಎಂದು ಅನಿಸಿದರೂ ಯಾರೆಂದು ನೋಡಲು ಕುತೂಹಲವಾಗಿ ಅವನು ಫೋನ್ ಎತ್ತಿ ಹಲೋ ಎಂದ.
ಅತ್ತ ಕಡೆಯಿಂದ ವಿಕೃತವಾದ ನಗು ಕೇಳಿಸಿ ಹೇಮಂತ ಬೆಚ್ಚಿ ಬಿದ್ದ. ಅದರ ಜೊತೆ ಗೊಗ್ಗರು ಧ್ವನಿಯಲ್ಲಿ ಹಲೋ ಎಂದು ಕೇಳಿಸಿತು. ಅದರ ಜೊತೆಯಲ್ಲೇ ಮತ್ತೆ ವಿಕಟ ನಗೆ, ಅವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಅವನ ಕೈಕಾಲುಗಳು ಗಡಗಡ ನಡುಗಲು ಆರಂಭಿಸಿದವು.
ಅಷ್ಟರಲ್ಲಿ ಅವನ ಮುಂದೆ ಆಕೃತಿಯೊಂದು ಹಾದು ಹೋದಂತಾಯಿತು. ಹೇಮಂತನಿಗೆ ಪ್ರಜ್ಞೆ ತಪ್ಪುವುದೊಂದೇ ಬಾಕಿ. ಗಾಬರಿಯಿಂದ ಅವನ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದು ಬ್ಯಾಟರಿ ಎಲ್ಲ ಹೊರಬಂದಿತು. ಅವನಿಗೆ ಅದನ್ನು ಎತ್ತಿಕೊಳ್ಳಲೂ ಭಯವಾಗಿ ಅಲ್ಲಿಂದ ಒಂದೇ ಉಸಿರಿನಲ್ಲಿ ತನ್ನ ರೂಮಿಗೆ ಓಡಿ ಹೋಗಿ ಬಾಗಿಲನ್ನು ಭದ್ರವಾಗಿ ಹಾಕಿಕೊಂಡ. ಅವನ ಎದೆ ನಗಾರಿಯಂತೆ ಬಡಿಯುತ್ತಿತ್ತು. ತಾನು ನೋಡಿದ್ದು ದೆವ್ವವನ್ನೇ ಅಥವಾ ಕಳ್ಳನನ್ನೇ ಎಂದು ಅವನಿಗೆ ಗೊಂದಲವಾಯಿತು. ಅದರ ಜೊತೆಗೆ ಫೋನ್ ನಲ್ಲಿ ಮಾತನಾಡಿದವರ್ಯಾರು, ಅದು ಮನುಷ್ಯರ ಸ್ವರದಂತಿರಲಿಲ್ಲವಲ್ಲ, ಅಬ್ಬ ಅದೆಷ್ಟು ಕ್ರೂರತೆ ಆ ಧ್ವನಿಯಲ್ಲಿ, ಅದು ದೆವ್ವವಾಗಿರಬಹುದೇ ಎಂದು ಮನಸ್ಸಿಗೆ ಬಂದಾಗ ಚಳಿ ಬಂದವರಂತೆ ಮತ್ತಷ್ಟು ಗಡಗಡ ನಡುಗತೊಡಗಿದ.
ಈಗ ನೋಡಿದ್ದು ದೆವ್ವವೇ ಇರಬಹುದೇ, ಹೇಗೆ ತಾನು ದೆವ್ವದಿಂದ ತಪ್ಪಿಸಿ ಕೊಳ್ಳಲಿ. ತಾನು ಎದ್ದು ಬಂದಿದ್ದು ಅದಕ್ಕೆ ತಿಳಿದಿದೆ ಎಂದು ನನಗೆ ತಿಳಿಸಲು ಫೋನ್ ಮಾಡಿತೇ, ಅದು ಇಲ್ಲಿಗೆ ಬಂದಿದ್ದಾದರೂ ಏಕೆ, ಈಗ ಅದು ತನ್ನ ರೂಮಿಗೆ ಬಂದು ಬಿಟ್ಟರೆ ಏನು ಮಾಡುವುದು, ದೆವ್ವಗಳಿಗೆ ಬಾಗಿಲು ಕಿಟಕಿ ಯಾವುದೂ ತಡೆಯಾಗುವುದಿಲ್ಲ ಎಂದು ಸಿನಿಮಾಗಳಲ್ಲಿ ನೋಡಿದ ನೆನಪು. ಹಾಗೆ ಅದು ಬಂದರೆ ತಾನು ಏನು ಮಾಡಲಿ ಎಂದುಕೊಳ್ಳುತ್ತಿದ್ದಂತೆ ಮತ್ತಷ್ಟು ಭಯವಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಹನುಮಾನ್ ಚಾಲಿಸಾ ಪಠಿಸಲು ಶುರು ಮಾಡಿದ. ಆದರೂ ಅವನ ಭಯ ಮಾತ್ರ ಸ್ವಲ್ಪ ಕೂಡ ಕಡಿಮೆಯಾಗಲಿಲ್ಲ. ತಾನು ಕಣ್ಣು ಮುಚ್ಚಿಕೊಂಡರೆ ದೆವ್ವ ಬಂದರೆ ತನಗೆ ತಿಳಿಯುವುದಾದರೂ ಹೇಗೆ ಎಂದು ಮತ್ತಷ್ಟು ಭಯವಾಗಿ ಕಣ್ಣು ತೆರೆಯುತ್ತಿದ್ದಂತೆ ಅವನ ಮುಂದೆ ವಿಕಾರವಾದ ಆಕೃತಿಯೊಂದು ನಿಂತಂತೆ ಭಾಸವಾಗಿ ಅವನು ಅಲ್ಲೇ ಪ್ರಜ್ಞೆ ತಪ್ಪಿ ನೆಲದಲ್ಲಿ ಬಿದ್ದ.
ಬೆಳಗ್ಗೆ ಹೇಮಂತನಿಗೆ ಎಚ್ಚರವಾದಾಗ ರಾತ್ರಿ ನಡೆದ ಘಟನೆ ನೆನಪಾಗಿ ಧಿಗ್ಗನೆದ್ದು ಕುಳಿತ. ಅರೆ, ತಾನು ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಮಂಚದ ಮೇಲೆ ಹೇಗೆ ಬಂದೆ.ಅಂದರೆ ತಾನು ನೋಡಿದ್ದು ಕನಸಿರಬಹುದೇ ಎಂದುಕೊಳ್ಳುತ್ತಿದ್ದಂತೆ ಅವನ ಗಮನ ಬಾಗಿಲಿನತ್ತ ಹರಿಯಿತು. ಅರೆ! ತನ್ನ ರೂಮಿನ ಬಾಗಿಲಿಗೆ ಬೋಲ್ಟ್ ಹಾಕಿದೆ ಅಂದರೆ ದೆವ್ವ ಬಂದಿದ್ದು ಕನಸಿನಲ್ಲಿ ಅಲ್ಲ ನಿಜವಾಗಿಯೂ ಬಂದಿತ್ತು! ತಾನು ಮಲಗುವ ಮುಂಚೆ ಬಾಗಿಲು ತೆರೆದೇ ಇಟ್ಟಿದ್ದೆ. ಮನೆಗೆ ಯಾರಾದರೂ ನುಗ್ಗಿದರೆ ಗೊತ್ತಾಗಲಿ ಎಂದು ಬಾಗಿಲು ಹಾಕಿರಲಿಲ್ಲ. ಈಗ ನೋಡಿದರೆ ಬೋಲ್ಟ್ ಹಾಕಿದೆ, ಅದು ನಾನು ರಾತ್ರಿ ದೆವ್ವದಿಂದ ತಪ್ಪಿಸಿಕೊಂಡು ರೂಮಿಗೆ ಬಂದ ಮೇಲೆ ಹಾಕಿದ್ದು ಎಂದುಕೊಳ್ಳುತ್ತಿದ್ದಂತೆ ಮತ್ತೆ ಅವನಿಗೆ ಭಯವಾಯಿತು.
ದೆವ್ವ ಈಗಲೂ ಇಲ್ಲೇ ಇರಬಹುದೇ ಎಂದು ಅವನಿಗೆ ಆತಂಕವಾಯಿತು. ತಾನು ನೋಡಿದ ಹಾರರ್ ಸಿನಿಮಾಗಳಲ್ಲಿ ದೆವ್ವಗಳು ರಾತ್ರಿ ಹೊತ್ತು ಮಾತ್ರವೇ ಅಡ್ಡಾಡುತ್ತವೆ. ಅಂದರೆ ಈಗ ದೆವ್ವ ಇರಲಿಕ್ಕಿಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತ ಮೆಲ್ಲನೆ ತನ್ನ ರೂಮಿನ ಬಾಗಿಲು ತೆರೆದು ಬಗ್ಗಿ ಅತ್ತಿತ್ತ ನೋಡಿದ. ಎಲ್ಲೂ ಏನೂ ಕಾಣಿಸದಾಗ ಅವನಿಗೆ ತನ್ನ ಫೋನ್ ಮಕ್ಕಳ ರೂಮಿನ ಹೊರಗೆ ಬಿದ್ದಿದ್ದು ನೆನಪಾಗಿ ಬಾಗಿಲು ತೆರೆದು ಅದನ್ನು ನೋಡಲು ಓಡಿದ. ಆದರೆ ಅಲ್ಲಿ ಅವನ ಫೋನ್ ಇರಲಿಲ್ಲ! ಅವನಿಗೆ ಆಶ್ಚರ್ಯವಾಗಿ ಫೋನ್ ಗಾಗಿ ಎಲ್ಲ ಕಡೆ ಹುಡುಕಲು ಶುರು ಮಾಡಿದ. ಆದರೆ ಅಲ್ಲೆಲ್ಲೂ ಅವನ ಫೋನ್ ಕಾಣಿಸಲಿಲ್ಲ.
ರಾತ್ರಿ ಬಂದ ದೆವ್ವ ತನ್ನ ಫೋನ್ ಕದ್ದೊಯ್ಯಿತೆ ಎಂದು ಅಂದುಕೊಂಡ. ಆದರೆ ಮರುಕ್ಷಣವೇ ತನ್ನ ಮೂರ್ಖತನಕ್ಕೆ ಅವನಿಗೆ ನಗು ಬಂದಿತು. ದೆವ್ವಗಳಿಗೆ ಫೋನ್ ಯಾತಕ್ಕೆ ಬೇಕು, ಛೆ, ತಾನು ಮೂರ್ಖನಂತೆ ಯೋಚಿಸುತ್ತಿದ್ದೇನೆ ಎಂದು ಅವನಿಗೆ ಅರಿವಾದರೂ ನೆಲದ ಮೇಲೆ ಬಿದ್ದ ಫೋನ್ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಮಾತ್ರ ಅವನಿಗೆ ಉತ್ತರ ದೊರಕಲಿಲ್ಲ. ಕೊನೆಗೆ ವಾಪಾಸು ತನ್ನ ರೂಮಿಗೆ ಬಂದ. ಬೆಡ್ ನ ಪಕ್ಕದ ಕಾರ್ನರ್ ಟೇಬಲ್ ಮೇಲೆ ತನ್ನ ಫೋನ್ ಇದ್ದಿದ್ದು ಕಂಡು ಅವನಿಗೆ ಮತ್ತಷ್ಟು ಆಶ್ಚರ್ಯವಾಯಿತು. ನನ್ನ ಫೋನ್ ಇಲ್ಲಿ ಬಂದಿದ್ದಾದರೂ ಹೇಗೆ, ದೆವ್ವ ತನ್ನ ಫೋನ್ ಬ್ಯಾಟರಿ ಎಲ್ಲ ಹಾಕಿ ಇಲ್ಲಿ ತಂದು ಬಿಟ್ಟಿತೆ ಎಂದುಕೊಳ್ಳುತ್ತಿರುವಷ್ಟರಲ್ಲಿ ಅವನಿಗೆ ಮತ್ತೆ ತಾನು ಮೂರ್ಖನಂತೆ ಯೋಚಿಸುತ್ತಿದ್ದೇನೆ ಎಂದು ಅನಿಸತೊಡಗಿತು.
ಆದರೆ ದೆವ್ವವಲ್ಲದೆ ಬೇರೆ ಇನ್ನಾರು ಇದ್ದರು ಈ ಮನೆಯಲ್ಲಿ? ಏನಾಗುತ್ತಿದೆ ಇದೆಲ್ಲ? ಛೆ! ಹೆಂಡತಿ ಮಕ್ಕಳನ್ನು ಯಾಕಾದರೂ ಕಳುಹಿಸಿದೇನೋ ಅವರೆಲ್ಲ ಇದ್ದಿದ್ದರೆ ದೆವ್ವ ಬರುತ್ತಿರಲಿಲ್ಲವೇನೋ ಅಂದುಕೊಂಡಾಗ ಅವನಿಗೆ, ದೆವ್ವಕ್ಕೆ ತನ್ನ ಮೇಲೆ ಏನಾದರೂ ಸಿಟ್ಟಿದ್ದು ಅದನ್ನು ತೀರಿಸಲೆಂದು ಹೆಂಡತಿ ಮಕ್ಕಳಿಲ್ಲದ ಸಮಯದಲ್ಲಿ ಬಂದಿರಬಹುದೇ ಎಂದು ಯೋಚನೆ ಬರುತ್ತಿದ್ದಂತೆ ಜೀವ ಝಲ್ಲೆಂದಿತು. ಅವನ ಎದೆ ಮತ್ತ ನಗಾರಿಯಂತೆ ಹೊಡೆದುಕೊಳ್ಳಲು ಶುರುವಾಯಿತು. ಆಗ ಅವನಿಗೆ ತನ್ನ ಫೋನ್ ಗೆ ರಾತ್ರಿ ಹೊತ್ತು ಕಾಲ್ ಬಂದ ನೆನಪಾಗಿ ನಿಜವಾಗಿಯೂ ದೆವ್ವ ಬಂದಿದ್ದರೆ ಅದರ ಫೋನ್ ಕಾಲ್ ನಿಂದ ತಿಳಿಯುತ್ತದೆ ಎಂದುಕೊಂಡು ಅವನು ಫೋನ್ ಕೈಗೆತ್ತಿಕೊಂಡು ನೋಡಿದಾಗ ಫೋನ್ ನಿರ್ಜೀವವಾಗಿತ್ತು. ಛೆ! ಇದೂ ಈಗಲೇ ಕೈ ಕೊಡಬೇಕೇ ಎಂದುಕೊಳ್ಳುತ್ತ ಅವನು ಅತುರಾತುರದಿಂದ ಅದನ್ನು ಚಾರ್ಜರ್ ಗೆ ಸಿಕ್ಕಿಸಿ ಫೋನ್ ಚಾರ್ಜ್ ಮಾಡಲು ಇಟ್ಟ. ಸ್ವಲ್ಪ ಚಾರ್ಜ್ ಆಗಲಿ ಆಮೇಲೆ ನೋಡಿದರಾಯಿತು, ಅದುವರೆಗೂ ಬಾತ್ ರೂಮಿಗೆ ಹೋಗಿ ಬರುತ್ತೇನೆ ಎಂದು ಹೊರಟ.
ಅವನು ಹಲ್ಲುಜ್ಜುತ್ತಿದ್ದಂತೆ ಡಬ್ ಎಂದು ಜೋರಾಗಿ ಶಬ್ದ ಕೇಳಿಸಿತು. ಹೇಮಂತನಿಗೆ ದೆವ್ವ ಮತ್ತೆ ಬಂದು ಬಿಟ್ಟಿತೆ ಎಂದು ಭಯವಾಯಿತು. ಅವನಿಗೆ ಏನು ಮಾಡವುದೆಂದು ಎಂದು ತೋಚಲಿಲ್ಲ. ದೇವರೇ ನನಗೆ ಯಾಕೆ ಇಂಥಾ ಶಿಕ್ಷೆ ಕೊಡುತ್ತಿದ್ದಿಯಾ, ನಾನು ಯಾರಿಗೂ ಏನೂ ಅನ್ಯಾಯ ಮಾಡಿಲ್ಲ. ಈ ದೆವ್ವ ನನ್ನನ್ನು ಯಾಕೆ ಹೀಗೆ ಕಾಡುತ್ತಿದೆ. ದಯವಿಟ್ಟು ನನ್ನನ್ನು ಈ ದೆವ್ವದಿಂದ ಪಾರು ಮಾಡು ಎಂದು ದೇವರಲ್ಲಿ ಕಳಕಳಿಯಿಂದ ಮನವಿ ಮಾಡಿದ. ನಂತರ ಮೆಲ್ಲನೆ ಬಾತ್ ರೂಮಿನ ಬಾಗಿಲು ತೆರೆದು ಹೊರಬಂದ. ಶಬ್ದವಾಗಿದ್ದು ಏನು ಎಂದು ಸುತ್ತಲೂ ನೋಡುವಾಗ ಅವನ ಮೂಗಿಗೆ ಸುಟ್ಟ ವಾಸನೆ ಬಡಿಯಿತು.
ಅವನ ಗಮನ ಫೋನ್ ನತ್ತ ಹರಿದು ಅದನ್ನು ನೋಡಿ ಬೆಚ್ಚಿ ಬಿದ್ದ. ಚಾರ್ಜ್ ಗೆ ಇಟ್ಟ ಫೋನ್ ಸುಟ್ಟು ಹೋಗಿ ಹೊಗೆ ಏಳುತ್ತಿತ್ತು ! ಅಯ್ಯೋ ದೇವರೇ, ಇದು ದೆವ್ವದ ಕೆಲಸವಾಗಿರಬಹುದೇ, ಹಾಗಿದ್ದರೆ ದೆವ್ವ ನಿಜವಾಗಿಯೂ ಬಂದಿತ್ತೆ ನಿನ್ನೆ, ತಾನು ಕಂಡಿದ್ದು ಕನಸೇ ಅಲ್ಲ.. ನಿಜವೇ ಆಗಿರಬಹುದೇ, ಅಥವಾ ರಾತ್ರಿ ಹೊತ್ತು ತಾನೇ ಎದ್ದು ರೂಮಿನ ಬೋಲ್ಟ್ ಹಾಕಿರಬಹುದೇ, ನಿದ್ದೆಯ ಅಮಲಿನಲ್ಲಿ ಅದು ತನಗೆ ಮರೆತು ಹೋಯಿತೇ, ಹಾಗಿದ್ದರೆ ಫೋನ್ ಸುಟ್ಟಿದ್ದಾದರೂ ಹೇಗೆ ಎಂದು ಹಲವು ಪ್ರಶ್ನೆಗಳು ಅವನ ತಲೆ ತಿನ್ನತೊಡಗಿದವು. ಆದರೆ ವಾಸ್ತವ ಏನೆಂದು ತಿಳಿಯಲು ಫೋನ್ ನಲ್ಲಿ ಇದ್ದ ಒಂದು ಸುಳಿವು ಕೂಡ ಫೋನ್ ಜೊತೆಗೆ ಸುಟ್ಟುಹೋಯಿತಲ್ಲ. ಈಗ ನಿಜವೇನೆಂದು ತಿಳಿಯುವ ಬಗೆಯಾದರೂ ಹೇಗೆ ಎಂದು ಅವನ ತಲೆ ಗೊಂದಲದ ಗೂಡಾಯಿತು.
ಪಕ್ಕದ ಮನೆಯ ಎದುರು ಒಂದು ಕಾರು ಬಂದು ನಿಂತಾಗ ಹನುಮಂತಯ್ಯ ಕುತೂಹಲದಿಂದ ತನ್ನ ಕನ್ನಡಕವನ್ನು ಸರಿ ಮಾಡಿಕೊಳ್ಳುತ್ತ ಕಣ್ಣುಗಳನ್ನು ಕಿರಿದು ಗೊಳಿಸಿ ಕಾರಿನಿಂದ ಯಾರು ಇಳಿಯುತ್ತಿದ್ದಾರೆ ಎಂದು ನೋಡಿದರು. ಎದುರಿನ ಸೀಟಿನಿಂದ ಯುವಕನೊಬ್ಬ ಇಳಿದು ಕಾರಿನ ಹಿಂದಿನ ಬಾಗಿಲು ತೆರೆದು ನಿಂತ. ಒಬ್ಬ ವಯಸ್ಸಾದ ಮಹಿಳೆಯೊಬ್ಬಳು ಇಳಿಯುತ್ತಿರುವುದನ್ನು ಕಂಡು ಮತ್ತಷ್ಟು ಕುತೂಹಲದಿಂದ ತಮ್ಮ ಮನೆಯ ವರಾಂಡದ ತುದಿಯಲ್ಲಿ ನಿಂತು ನೋಡ ತೊಡಗಿದರು.
ಆ ಮಹಿಳೆ ಇಳಿಯುವಾಗ ಯುವಕ ಅವರ ಸಹಾಯಕ್ಕಾಗಿ ನೀಡಿದ ಕೈಯನ್ನು ಆಕೆ ತಿರಸ್ಕರಿಸುತ್ತ ಅತ್ತ ತಳ್ಳಿ ನಿಧಾವಾಗಿ ಇಳಿದು ತಲೆ ತಗ್ಗಿಸಿ ನಡೆಯುತ್ತಾ ಮನೆಯೊಳಕ್ಕೆ ಹೋದರು. ಅವರ ತಲೆಯ ತುಂಬಾ ಬಿಳಿ ಕೂದಲು ನೋಡಿ ಹನುಮಂತಯ್ಯ ನವರಿಗೆ ತಕ್ಷಣಕ್ಕೆ ಯಾರೆಂದು ತಿಳಿಯದಿದ್ದರೂ ಅದು ಶಾಂತಿ ಇರಬಹುದೇ ಎಂದು ಯೋಚಿಸುತ್ತ ನಿಂತರು. ಅವರ ಮನಸ್ಸು ಹಿಂದಕ್ಕೋಡಿತು. ನೆನಪುಗಳು ಮತ್ತೆ ಹಸಿರಾಗತೊಡಗಿತು.
ಪಕ್ಕದ ಮನೆಯ ಶಾಂತಿ ಹಾಗೂ ಹನುಮಂತಯ್ಯ ಜೊತೆಯಲ್ಲೇ ಆಡಿ ಬೆಳೆದವರು. ಅವಳ ಅಣ್ಣ ಶಾಂತರಾಮ ಹನುಮಂತಯ್ಯನವರ ಸ್ನೇಹಿತ ಹಾಗೂ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಶಾಂತಿ ಅವರಿಗಿಂತ ನಾಲ್ಕು ವರುಷ ಚಿಕ್ಕವಳಾದರೂ ಅವರಿಬ್ಬರಿಗಿಂತ ತಾನೇ ಹಿರಿಯವಳು ಅನ್ನುವ ತರಹ ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಳು. ಆಗ ಅವಳ ಮನೆಯವರೆಲ್ಲ ಅದನ್ನು ನೋಡಿ ಈಗಲೇ ಹೀಗಾದರೆ ಇನ್ನು ಇವಳು ತನ್ನ ಗಂಡನ ಮೇಲೆ ಅಧಿಕಾರ ಇನ್ನೆಷ್ಟು ಚಲಾಯಿಸುತ್ತಾಳೋ ಎಂದು ಆತಂಕಗೊಂಡಿದ್ದರು.
ಆದರೆ ಹನುಮಂತಯ್ಯನಿಗೆ ಅವಳು ತನ್ನ ಮೇಲೆ ಅಧಿಕಾರ ಚಲಾಯಿಸುವ ರೀತಿ ತುಂಬಾ ಇಷ್ಟವಾಗುತ್ತಿತ್ತು. ನೋಡಲೂ ಸುಂದರವಾಗಿದ್ದ ಅವಳ ಮೇಲೆ ಹನುಮಂತಯ್ಯನಿಗೆ ಪ್ರೀತಿ ಹುಟ್ಟಿತು. ಆದರೆ ಅವನು ಅದನ್ನು ಮಾತ್ರ ಅವಳೊಂದಿಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲ. ಆದರೂ ಮನೆಯಲ್ಲಿ ತನ್ನ ತಾಯಿಯ ಬಳಿ ತಾನು ಮದುವೆಯಾಗುವುದಾದರೆ ಶಾಂತಿಯನ್ನೇ ಎಂದು ಹೇಳಿದಾಗ ಅವನ ಅಮ್ಮ ನಕ್ಕು ಬಿಟ್ಟಿದ್ದರು. ಜೊತೆಗೆ ಅವಳನ್ನು ಮದುವೆಯಾದರೆ ನೀನು ಅವಳ ಗುಲಾಮನಾಗಬೇಕಾಗುತ್ತದೆ, ಅವಳು ನಿನ್ನ ಮಾತು ಕೇಳುವವಳಲ್ಲ ಎಂದು ಗೇಲಿ ಮಾಡುತ್ತಿದ್ದರು.
ಮಗ ಇನ್ನೂ ಚಿಕ್ಕವ, ಸುಮ್ಮನೆ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದ ಗಾಯತ್ರಿಗೆ ಅವನು ದೊಡ್ಡವನಾಗಿ ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೂ ಅದೇ ಮಾತನ್ನು ಹೇಳಿದಾಗ ಗಾಯತ್ರಿಗೆ ಹಿಡಿಸಲಿಲ್ಲ. ಅಂತಹ ಗಂಡುಬೀರಿ ಹೆಣ್ಣು ತಮ್ಮ ಮನೆಯ ಸೊಸೆಯಾಗುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು. ಶಾಂತಿ ಹತ್ತನೆಯ ತರಗತಿಯಲ್ಲಿ ಫೈಲಾದಾಗ ಗಾಯತ್ರಿ ಅವಳನ್ನು ಬೇಡವೆನ್ನುವುದಕ್ಕೆ ಇನ್ನೊಂದು ಕಾರಣವೂ ಸಿಕ್ಕಿತು. ಅವಳು ದಡ್ಡಿ, ಅವಳನ್ನು ಮದುವೆಯಾದರೆ ಮುಂದೆ ನಿನ್ನ ಮಕ್ಕಳೂ ದಡ್ಡರಾಗುತ್ತಾರೆ ಎಂದು ಮಗನಿಗೆ ಹೆದರಿಸಿದ್ದಳು.
ಶಾಂತಿಯ ಮನೆಯವರಿಗೂ ತಮ್ಮ ಪಕ್ಕದ ಮನೆಯ ಹುಡುಗನಿಗೆ ತಮ್ಮ ಹುಡುಗಿಯನ್ನು ಕೊಡುವುದು ಇಷ್ಟವಿರಲಿಲ್ಲ. ಆದರೆ ಶಾಂತಿಯ ಮನಸ್ಸಿನಲ್ಲಿ ಏನಿದೆ ಎಂದು ಅವಳೆಂದೂ ಬಾಯಿ ಬಿಟ್ಟಿರಲಿಲ್ಲ. ಅವಳಿಗೆ ಹನುಮಂತಯ್ಯನ ಜೊತೆ ಮದುವೆಯಾಗುವುದು ಬೇಡವೆಂದಾಗ ಅವಳು ವಿರೋಧಿಸಲೂ ಇಲ್ಲ. ಹಾಗಾಗಿ ಎರಡೂ ಮನೆಯವರ ವಿರೋಧದಿಂದ ಹನುಮಂತಯ್ಯನ ಪ್ರೀತಿಗೆ ಕಡಿವಾಣ ಬಿದ್ದಿತು. ಶಾಂತಿಯ ಮನೆಯವರು ಅವಳಿಗೆ ಬೇರೆ ಹುಡುಗನನ್ನು ಗೊತ್ತು ಮಾಡಿ ಮದುವೆಯನ್ನು ಮುಗಿಸಿಯೂ ಬಿಟ್ಟರು. ಆದರೆ ಹನುಮಂತಯ್ಯನಿಗೆ ಮಾತ್ರ ಇದು ಸಹಿಸಲಾಗದೆ ಅವತ್ತೀಡಿ ದಿನ ರೂಮು ಸೇರಿಕೊಂಡು ಅತ್ತಿದ್ದ.
ನಂತರ ವರುಷಗಳು ಉರುಳಿದಂತೆ ಶಾಂತಿಯ ನೆನಪೂ ಮಸುಕಾಗತೊಡಗಿತು. ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದ. ಕಾಲ ಕ್ರಮೇಣ ಅವಳನ್ನು ಮರೆತು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾದ. ಅವನಿಗೆ ನಾಲ್ಕು ಗಂಡು ಮಕ್ಕಳೂ ಆದವು. ಆಮೇಲೆ ಹನುಮಂತಯ್ಯ ಶಾಂತಿಯನ್ನು ನೋಡಿರಲೇ ಇಲ್ಲ. ಅವಳು ಮುಂಬೈನಲ್ಲಿ ಇದ್ದಾಳೆ ಎಂದು ಮಾತ್ರ ತಿಳಿದಿತ್ತು. ಅವಳು ತವರು ಮನೆಗೂ ಬರುತ್ತಿರಲಿಲ್ಲ. ಅವಳನ್ನು ನೋಡಿಕೊಂಡು ಬರಲು ತಾಯಿ ಮನೆಯವರೇ ಮುಂಬೈಗೆ ಹೋಗಿ ಬರುತ್ತಿದ್ದರು.
ವರುಷಗಳು ಕಳೆದಂತೆ ಹನುಮಂತಯ್ಯನ ಮಕ್ಕಳೆಲ್ಲ ದೊಡ್ಡವರಾಗಿ, ವಿದ್ಯಾವಂತರಾಗಿ ಒಳ್ಳೆಯ ಕೆಲಸವೂ ದೊರಕಿತು. ಆಗ ಹನುಮಂತನ ತಾಯಿ, ನೀನು ಶಾಂತಿಯನ್ನು ಮದುವೆಯಾಗಿದ್ದಿದ್ದರೆ ನಿನ್ನ ಮಕ್ಕಳೆಲ್ಲ ಹೀಗಿರುತ್ತಿರಲಿಲ್ಲ ಎಂದು ಛೇಡಿಸಿದ್ದರು. ಶಾಂತಿಗೆ ಮಕ್ಕಳಾಗಿದೆಯೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಅವಳ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. ಶಾಂತರಾಮ ದುಬೈ ಸೇರಿ ಅಲ್ಲೇ ನೆಲೆ ನಿಂತ. ಯಾರನ್ನಾದರೂ ವಿಚಾರಿಸೋಣವೆಂದರೆ ಮದುವೆಯಾದ ಮಹಿಳೆಯ ಬಗ್ಗೆ ವಿಚಾರಿಸಲು ಧೈರ್ಯ ಸಾಲುತ್ತಿರಲಿಲ್ಲ.
ಎರಡು ವರುಷಗಳ ಹಿಂದೆ ಹನುಮಂತಯ್ಯನ ಹೆಂಡತಿ ಕಾಯಿಲೆ ಬಂದು ತೀರಿಕೊಂಡ ಮೇಲೆ ಶಾಂತಿಯ ನೆನಪು ಅವನಿಗೆ ಬಹುವಾಗಿ ಕಾಡಿತ್ತು. ಹೆಂಡತಿಗೆ ಸಾಯುವ ಮುನ್ನ ತನ್ನ ಮಕ್ಕಳ ಮದುವೆ ನೋಡಲು ಆಸೆಯೆಂದು ಬೇಗ ಬೇಗನೆ ಅವರ ಮದುವೆಯನ್ನೂ ಮಾಡಿಸಿದ್ದಾಯಿತು. ಮಕ್ಕಳೆಲ್ಲ ರೆಕ್ಕೆ ಬಂದ ಹಕ್ಕಿಯಂತೆ ಹಾರಿ ಹೋದಾಗ ಹನುಮಂತಯ್ಯ ಒಬ್ಬಂಟಿಗರಾಗಿ ಬಿಟ್ಟಿದ್ದರು.
ಹೆಂಡತಿ ತೀರಿಕೊಂಡ ಮೇಲೆ ಹನುಮಂತಯ್ಯ ತಮ್ಮ ಊರಿಗೆ ಬಂದು ತಮ್ಮ ಮನೆಯನ್ನು ರಿಪೇರಿ ಮಾಡಿಸಿ ಅಲ್ಲೇ ಇರತೊಡಗಿದರು. ಮಕ್ಕಳು ಆಗಾಗ ಬಂದು ಹೋಗುತ್ತಿದ್ದರೂ ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿತ್ತು. ಅದೆಷ್ಟೋ ಬಾರಿ ಮಕ್ಕಳು ಅವರಿಗೆ ತಮ್ಮ ಜೊತೆ ಬಂದಿರಲು ಹೇಳಿದ್ದರೂ ಹನುಮಂತಯ್ಯ ಮಾತ್ರ ತಾನು ತನ್ನ ಮನೆಯನ್ನು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಬೇರೆ ದಾರಿ ಕಾಣದೆ ಮಕ್ಕಳು ಅಡಿಗೆ ಮತ್ತು ಮನೆಕೆಲಸ ಮಾಡಲು ಜನ ನೇಮಿಸಿದ್ದರು.
ಈಗ ಸುಮಾರು ಮೂವತ್ತು ವರುಷಗಳಾದ ಮೇಲೆ ಶಾಂತಿಯನ್ನು ನೋಡಿದಾಗ ಅವಳು ಹೌದೋ ಅಲ್ಲವೋ ಎಂದು ಗೊಂದಲವಾಯಿತು. ಆದರೆ ಸಂಜೆಯ ಹೊತ್ತಿಗೆ, ಬಂದಿರುವುದು ಶಾಂತಿಯೇ ಎಂದು ಅಡಿಗೆಯ ಸುಂದರಮ್ಮನಿಂದ ತಿಳಿಯಿತು. ಅವಳು ಬಂದ ದಿನ ಅವಳ ಬೋಳು ಹಣೆ ನೋಡಿದ ನೆನಪಾಗಿ ಹನುಮಂತಯ್ಯನಿಗೆ ಶಾಂತಿಯನ್ನು ನೋಡಬೇಕು ಅವಳ ಜೊತೆ ಮಾತನಾಡಬೇಕು ಎಂದು ಹಂಬಲವಾಯಿತು. ಜೊತೆಗೆ ಹಿಂದಿನ ನೆನಪುಗಳು ಮತ್ತೆ ಬಲವಾಗಿ ಕಾಡತೊಡಗಿದವು. ದಿನವೂ ಹನುಮಂತಯ್ಯ ಶಾಂತಿ ಏನಾದರೂ ಕಾಣುವಳೇ ಎಂದು ಪಕ್ಕದ ಮನೆಯತ್ತ ಯಾವಾಗಲೂ ನೋಡುತ್ತಿದ್ದರು. ಆದರೆ ಶಾಂತಿ ಮಾತ್ರ ಹೊರಗೆಲ್ಲೂ ಕಾಣಿಸಲಿಲ್ಲ.
ಒಂದು ದಿನ ಅವರು ವಾಕಿಂಗ್ ನಿಂದ ಬರುತ್ತಿರುವಾಗ ಶಾಂತಿ ವರಾಂಡದಲ್ಲಿ ನಿಂತು ತಮ್ಮ ಮನೆಯತ್ತ ನೋಡುತ್ತಾ ನಿಂತಿದ್ದು ಕಂಡು ಹನುಮಂತಯ್ಯನಿಗೆ ಸಂತೋಷವಾಗಿ ಲಗುಬಗೆಯಿಂದ ಅವಳ ಮನೆಯತ್ತ ಹೆಜ್ಜೆ ಹಾಕಿದರು. ಹೇ ಶಾಂತಿ ಹೇಗಿದ್ದೀಯಾ ಎಂದು ಹಿಂದಿನ ಸಲುಗೆಯಿಂದಲೇ ಕೇಳಿದಾಗ ಶಾಂತಿ ತನ್ನ ಕನ್ನಡಕವನ್ನು ಸರಿ ಮಾಡಿ ಕೊಳ್ಳುತ್ತಾ, ಯಾರು, ಹನುಮನಾ ಎಂದು ಕೇಳಿದಳು. ನಂತರ ಗೇಟು ತೆರೆದು ಬಂದು, ನೀನು ಇದ್ದ ಹಾಗೆ ಇದ್ದೀಯಲ್ಲೋ, ಮುಖದ ಮೇಲೆ ನಾಲ್ಕು ಗೆರೆ ಬಿಟ್ಟರೆ ಏನೂ ವ್ಯತ್ಯಾಸವಾಗಿಲ್ಲ ಎಂದಾಗ ಹನುಮಂತಯ್ಯನಿಗೆ ಸಂತಸವಾಗಿ, ಬಾ ನಮ್ಮ ಮನೆಗೆ, ನಿನ್ನ ಬಳಿ ಮಾತನಾಡುವುದಿದೆ ಎಂದಾಗ ಶಾಂತಿ ನಗುತ್ತ ಇನ್ನೂ ನಿನ್ನ ಹಳೆಯ ಚಾಳಿ ಬಿಟ್ಟಿಲ್ಲವೇನೋ ಎನ್ನುತ್ತಾ ಅವನ ಹಿಂದೆಯೇ ಬರುತ್ತಾ ಅವನ ಮನೆಯ ಕಡೆ ನಡೆದಳು.
ಇಬ್ಬರೂ ತಮ್ಮ ತಮ್ಮ ಸಂಸಾರದ ಬಗ್ಗೆ ಮಾತನಾಡಿಕೊಂಡರು. ಆಗ ಶಾಂತಿ ನಾನು ನಿನ್ನನ್ನು ಬಿಟ್ಟು ದೊಡ್ಡ ತಪ್ಪು ಮಾಡಿದೆ ಅಂತ ನನಗೆ ಮದುವೆಯಾದ ಮೇಲೆ ತಿಳೀತು. ಮದುವೆಗೆ ಮೊದಲು ಗಂಡ ಶ್ರೀಮಂತ, ಜೊತೆಗೆ ಮುಂಬೈ ನಲ್ಲಿ ಇರುವವರು ಎಂದು ಕುಣಿದಾಡಿ ಬಿಟ್ಟಿದ್ದೆ. ನನ್ನ ಗಂಡನ ಮನೆಯವರು ಶ್ರೀಮಂತರೇನೋ ನಿಜ, ಆದರೆ ನನ್ನ ಗಂಡ ಮಾತ್ರ ಮಹಾ ಕುಡುಕ, ಕುಡಿದ ಅಮಲಿನಲ್ಲಿ ಆತ ದಿನವೂ ನಡೆಸುತ್ತಿದ್ದ ರಂಪ ರಾಮಾಯಣ ನೋಡಿ ಎಷ್ಟೋ ಸಲ ನಿನ್ನಂಥಾ ಒಳ್ಳೆಯ ಹುಡುಗನನ್ನು ಬಿಟ್ಟೆನಲ್ಲ ಎಂದು ಅದೆಷ್ಟೋ ಬಾರಿ ಅತ್ತಿದ್ದುಂಟು.
ತಮ್ಮ ಮಗನಿಗೆ ಜೋರಿನ ಹುಡುಗಿ ಸಿಕ್ಕಿದರೆ ಅವಳೇ ತನ್ನ ಗಂಡನನ್ನು ಸರಿ ಮಾಡುತ್ತಾಳೆ ಎಂದು ಅವನ ತಾಯಿ ನನ್ನನ್ನು ಆರಿಸಿದ್ದರು. ಆದರೆ ಅವನ ರಂಪಾಟದ ಮುಂದೆ ನನ್ನದೇನೂ ನಡೆಯಲೇ ಇಲ್ಲ. ಕೊನೆಗೆ ಅವನು ಕುಡಿದು ಕುಡಿದೇ ಸತ್ತು ಬಿಟ್ಟ. ಹುಟ್ಟಿದ ಒಬ್ಬ ಮಗನಿಗೂ ನಾನು ಬೇಕಾಗಿಲ್ಲ. ಅವನಿಗೆ ಅಮೆರಿಕಾದಲ್ಲಿ ಒಳ್ಳೆ ಕೆಲಸ ಸಿಕ್ಕಿ ಬಿಟ್ಟಿದೆ. ಅದಕ್ಕೆ ನಮ್ಮ ಅತ್ತಿಗೆ ಇಲ್ಲಿ ಬಂದಿರು ಅಂತ ಹೇಳಿದ್ಲು, ಅಣ್ಣನೂ ಇಲ್ಲ ಅವರಿಗೆ ಮಕ್ಕಳೂ ಇಲ್ಲ, ಅವಳಿಗೂ ಒಂಟಿತನ ಬೇಜಾರು ಬಂದು ಬಿಟ್ಟಿದೆ, ಅದಕ್ಕೆ ನನ್ನ ಮಗ ಇಲ್ಲಿ ಕರೆತಂದು ಬಿಟ್ಟು ಹೋದ ಎಂದು ಹೇಳಿ ತನ್ನ ಕಥೆಯನ್ನು ಮುಗಿಸಿದಳು.
ಹನುಮಂತಯ್ಯ, ನನಗೂ ಹೆಂಡತಿ ತೀರಿಕೊಂಡ ಮೇಲೆ ಒಂಟಿ ಬಾಳು ಸಾಕಾಗಿದೆ. ನೀನು ಒಪ್ಪೊದಾದ್ರೆ ನಾನು ಈಗ್ಲೂ ನಿನ್ನನ್ನು ಮದ್ವೇಯಾಗೋಕೆ ರೆಡಿ, ನಿನ್ನನ್ನು ಮದುವೆಯಾಗಬೇಕು ಎನ್ನುವ ಆಸೆ ಇನ್ನೂ ಜೀವಂತವಾಗೇ ಇದೆ ಎಂದಾಗ ಶಾಂತಿ ನಾಚುತ್ತ, ಥೂ ಈ ವಯಸ್ಸಿನಲ್ಲೇ? ಜನ ಕೇಳಿದ್ರೆ ನಕ್ಕಾರು, ಊರು ಹೋಗಿ ಕಾಡು ಹತ್ತಿರ ಬಂತು ಅನ್ನೋ ಸಮಯದಲ್ಲಿ, ಹೋಗ್ಲಿ ನಿನ್ನ ಮಕ್ಕಳು ಏನೂ ಅನ್ನೋಲ್ವಾ ಎಂದಾಗ ಹನುಮಂತಯ್ಯ ಆತುರಾತುರವಾಗಿ, ಅದಕ್ಕೆಲ್ಲ ನೀನು ತಲೆ ಕೆಡಿಸಿಕೊ ಬೇಡಾ ನೀನು ಹೂಂ ಅನ್ನು ಸಾಕು, ಪ್ರೀತಿಗೆ ವಯಸ್ಸನ್ನೋದು ಇಲ್ಲ ಎಂದಾಗ ಶಾಂತಿಯ ಮುಖ ಲಜ್ಜೆಯಿಂದ ಕೆಂಪೇರಿತು. ಅದನ್ನು ನೋಡಿ ಹನುಮಂತಯ್ಯನಿಗೆ ಯೌವ್ವನ ಮರುಕಳಿಸಿದಂತಾಯಿತು.
ಬಸ್ಸಿನಲ್ಲಿ ಕುಳಿತಿದ್ದ, ಎರೆಡೆರಡು ಚಿನ್ನದ ಸರ ಧರಿಸಿ ಜರತಾರಿ ಸೀರೆಯುಟ್ಟ ಮಹಿಳೆಯೊಬ್ಬಳು ಹಿಂದಕ್ಕೆ ತಿರುಗಿ ಬಲಬದಿಯ ಹಿಂದಿನ ಸೀಟಿನಲ್ಲಿದ್ದ ಬಡ ಹೆಂಗಸಿನ ಮಡಿಲಲ್ಲಿದ್ದ ಪುಟ್ಟ ಮಗುವನ್ನು ದಿಟ್ಟಿಸಿ ನೋಡುತ್ತಲೇ ಇದ್ದಳು. ಆ ಮಗು ಕಪ್ಪಗಿದ್ದರೂ ನೋಡಲು ಲಕ್ಷಣವಾಗಿತ್ತು. ಆ ಮಗುವನ್ನು ತದೇಕ ಚಿತ್ತದಿಂದ ನೋಡುತ್ತಿದ್ದ ಮಹಿಳೆಗೆ ಬಸ್ಸು ಹೊರಟರೂ ಅವಳ ದೃಷ್ಟಿ ಬದಲಾಗಲಿಲ್ಲ. ಇವಳನ್ನೇ ಗಮನಿಸುತ್ತಿದ್ದ ಆ ಮಗುವಿನ ತಾಯಿ ಈಕೆಯನ್ನು ನೋಡಿ ಮುಗುಳ್ನಕ್ಕಳು. ಅದನ್ನು ನೋಡಿ ಉತ್ತೇಜಿತಳಾಗಿ ಆ ಮಹಿಳೆ ನಗುತ್ತ, ಏನು ಮಗು ಎಂದು ಕೇಳಿದಾಗ ಆ ಹೆಂಗಸು ಹೆಣ್ಣು ಮಗು ಎಂದು ನಿರುತ್ಸಾಹದಿಂದಲೇ ಹೇಳಿದಳು.
ಆ ಹೆಂಗಸಿನ ಸೀಟಿನ ಹಿಂದೆ ಸುಮಾರು ಮೂರು ವರುಷ ವಯಸ್ಸಿನ ಪುಟ್ಟ ಹುಡುಗಿ ಕುಳಿತಿದ್ದಳು. ಜೊತೆಗೆ ಅವಳ ಅಜ್ಜಿಯೂ ಅವಳ ಬಳಿ ಕುಳಿತಿದ್ದಳು. ಇದ್ದಕ್ಕಿದ್ದಂತೆ ಆ ಪುಟ್ಟ ಹುಡುಗಿ ಅಮ್ಮಾ ಅಮ್ಮಾ ಎಂದು ಕರೆದಾಗ ಮಗುವನ್ನೆತ್ತಿಕೊಂಡು ಕುಳಿತಿದ್ದ ಹೆಂಗಸು ಹಿಂದೆ ತಿರುಗಿ ನೋಡುತ್ತಾ ಸುಮ್ನೆ ಕೂತ್ಕೋ ಎಂದು ಗದರಿದಳು. ಈಗ ಈ ಮಹಿಳೆಗೆ ಮಾತಿಗೆ ಇನ್ನೊಂದು ವಿಷಯ ಸಿಕ್ಕಂತಾಯಿತು. ಆಕೆಯನ್ನು ಮಹಿಳೆ, ಆ ಮಗೂನೂ ನಿನ್ನದೇನಾ ಎಂದು ಕೇಳಿದಳು. ಆ ಬಡ ಹೆಂಗಸು ನಿರ್ಲಿಪ್ತಳಾಗಿ ಹೂಂ ನಮ್ಮ, ಇಬ್ಬರೂ ಹೆಣ್ ಮಕ್ಳೆಯಾ ಎಂದು ಹೇಳಿದಳು.
ಬಸ್ಸು ಖಾಲಿಯಿದ್ದುದರಿಂದ ಆ ಮಹಿಳೆ ಮತ್ತೆ ಮಾತು ಮುಂದುವರಿಸಿದಳು. ನಿನ್ನ ಮಗು ತುಂಬಾ ಮುದ್ದಾಗಿದೆ ಎಂದಳು. ಅದನ್ನು ಕೇಳಿ ಆ ಬಡ ಹೆಂಗಸಿನ ಮುಖ ಸ್ವಲ್ಪ ಅರಳಿತು. ಅಷ್ಟರಲ್ಲಿ ಆ ಪುಟ್ಟ ಮಗು ಅಳಲಾರಂಬಿಸಿತು. ಆ ಹೆಂಗಸು ಮಗುವಿನ ಬೆನ್ನಿಗೆ ತಟ್ಟುತ್ತ ಅದಕ್ಕೆ ಸಮಾಧಾನ ಮಾಡಲೆತ್ನಿಸಿದಳು. ಆದರೆ ಮಗುವಿನ ಅಳು ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ. ಆ ಮಹಿಳೆ ಇನ್ನೂ ಹಾಗೇ ನೋಡುತ್ತಾ ಕುಳಿತಿದ್ದಳು. ಆ ಹೆಂಗಸು ಮಗುವಿಗೆ ಮುದ್ದು ಮಾಡಿದರೂ ಮಗುವಿನ ಅಳು ನಿಲ್ಲದಾಗ ಆ ಮಹಿಳೆಗೆ ಚಡಪಡಿಕೆ ಶುರುವಾಯಿತು. ಪಾಪ ಹಸಿವಾಗ್ತಿದೆಯೋ ಏನೋ ಎಂದು ಹೇಳಿದಳು.
ಆದರೆ ಆ ಹೆಂಗಸು ಅವಳ ಮಾತಿಗೆ ಪ್ರತಿಕ್ರಯಿಸದೆ ಮಗುವನ್ನು ಎತ್ತಿಕೊಂಡು ಕಿಟಕಿಯ ಹೊರಗೆ ನೋಡುವಂತೆ ಹೇಳಿ ಅದರ ಗಮನ ಬೇರೆಡೆ ಸೆಳೆಯಲು ಯತ್ನಿಸಿದಳು. ಆದರೆ ಆ ಮಗು ಮಾತ್ರ ತನ್ನ ಅಳು ನಿಲ್ಲಿಸಲೇ ಇಲ್ಲ. ಮಗುವಿನ ನಿರಂತರ ಅಳು ಕೇಳಿಸಿ ಎಲ್ಲರ ಗಮನ ಆ ಬಡ ಹೆಂಗಸಿನ ಮಗುವಿನತ್ತ ಹರಿಯಿತು. ಎದುರುಗಡೆ ಕುಳಿತಿದ್ದ ಆ ಮಹಿಳೆಗೆ ಮಗುವಿನ ಅಳು ನೋಡಿ ಸಹಿಸಲಾಗದೆ ಅಲ್ಲಿಂದ ಎದ್ದು ಆ ಹೆಂಗಸಿನ ಬಳಿ ಬಂದಳು. ಇಲ್ಲಿ ಕೊಡು ನಾನು ಸಮಾಧಾನ ಮಾಡುತ್ತೇನೆ ಎಂದಾಗ ಆ ಬಡ ಹೆಂಗಸಿಗೆ ಅಚ್ಚರಿಯಾಯಿತು.
ನಮ್ಮಂತವರು ತಮ್ಮ ಬಳಿ ಕುಳಿತರೆ ತಮ್ಮ ಬಟ್ಟೆಗೆಲ್ಲಿ ಕೊಳೆಯಾಗುವುದೋ, ತಮ್ಮ ಘನತೆಗೆ ಕಡಿಮೆಯಾಗುವುದೋ ಎಂದು ಯೋಚಿಸುವ ಜನರ ನಡುವೆ ಈ ಮಹಿಳೆ ತನ್ನ ಮಗುವನ್ನು ಎತ್ತಿಕೊಳ್ಳಲು ಬಂದಿದ್ದಾಳಲ್ಲ. ಅದೂ ಜರತಾರಿ ಸೀರೆಯುಟ್ಟವರು ಎಂದು ಅಚ್ಚರಿ ಪಡುತ್ತ, ಬೇಡಾಮ್ಮ ನಿಮ್ಮ ಸೀರೆ ಕೊಳೆಯಾದೀತು ಎಂದಾಗ ಆ ಮಹಿಳೆ, ಏನಿಲ್ಲ ಮಗೂನ ಇಲ್ಲಿ ಕೊಡು ಎನ್ನುತ್ತ ಅವಳ ಕೈಯಿಂದ ಮಗುವನ್ನು ಕಿತ್ತುಕೊಂಡು ತನ್ನ ಸೀಟಿಗೆ ಹೋಗಿ ಮಗುವಿಗೆ ಸಮಾಧಾನ ಮಾಡುತ್ತ ಕುಳಿತಳು.
ಆ ಮಗು ಈಕೆಯ ಒಡವೆ ಜರತಾರಿ ಸೀರೆ ಎಲ್ಲವನ್ನು ಕಂಡು ಅಚ್ಚರಿ ಪಡುತ್ತ ಆಕೆಯ ಸರದೊಂದಿಗೆ ಆಟವಾಡುತ್ತ ತನ್ನ ಅಳುವನ್ನು ನಿಲ್ಲಿಸಿತು. ಅದನ್ನು ಕಂಡು ಆ ಬಡ ಹೆಂಗಸಿಗೆ ನಿರಾಳವಾಯಿತು. ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಈ ಅಚ್ಚರಿಯನ್ನು ನೋಡುತ್ತಾ ಕುಳಿತಿದ್ದರು. ಆ ಮಹಿಳೆ ಮಗುವನ್ನು ಮುದ್ದಾಡಿ ಇನ್ನು ತಾನು ಇಳಿಯಬೇಕಾದ ಸ್ಟಾಪ್ ಬಂದಿತು ಎಂದು ಎದ್ದು ಆ ಹೆಂಗಸಿನ ಬಳಿ ಬಂದಾಗ ಅವಳು ಹಿಂದಕ್ಕೆ ತಿರುಗಿ ತನ್ನ ಮಗಳೊಂದಿಗೆ ಏನೋ ಮಾತನಾಡುತ್ತಿದ್ದಳು. ಅದನ್ನು ಗಮನಿಸಿದ ಆ ಮಹಿಳೆ ತಕ್ಷಣವೇ ಮಗುವಿನೊಂದಿಗೆ ದಡಬಡನೆ ಬಸ್ಸಿನಿಂದಿಳಿದು ಅಲ್ಲಿಯೇ ನಿಂತಿದ್ದ ರಿಕ್ಷಾ ಹತ್ತಿ ಹೊರಟು ಹೋದಳು.
ಕ್ಷಣ ಮಾತ್ರದಲ್ಲಿ ನಡೆದ ಘಟನೆಯಿಂದ ಜನರೆಲ್ಲಾ ಒಂದು ಕ್ಷಣ ದಿಗ್ಮೂಢರಾಗಿ ಬಿಟ್ಟರು. ಆದರೆ ಆ ಹೆಂಗಸು ಇದ್ಯಾವುದರ ಪರಿವೆಯೇ ಇಲ್ಲದೆ ತನ್ನ ಮಗಳೊಂದಿಗೆ ಮಾತನಾಡುತ್ತ ಕುಳಿತಿದ್ದಳು. ಅದನ್ನು ನೋಡಿ ಜನರೆಲ್ಲಾ ಒಮ್ಮೇಲೆ, ಅಯ್ಯೋ ನೋಡಮ್ಮಾ ನಿನ್ನ ಮಗೂನ ಆಕೆ ಎತ್ಕೊಂಡ್ ಹೋದರು ಎಂದು ಬೊಬ್ಬೆ ಹೊಡೆದರು. ಕ್ಷಣ ಕಲ ವಿಚಲಿತಳಾದ ಆಕೆ ಬಸ್ಸಿನಿಂದ ಹೊರಗೆ ಇಣುಕಿ ನೋಡಿದಾಗ ಆಕೆ ಆಗಲೇ ಜಾಗ ಖಾಲಿ ಮಾಡಿದ್ದು ಕಂಡು ಪುನಃ ತನ್ನ ಸೀಟಿನಲ್ಲಿ ಕುಳಿತಳು. ಅವಳ ನಿರ್ಲಿಪ್ತತೆ ಕಂಡು ನಿರ್ವಾಹಕ, ಏನಮ್ಮಾ ನಿಂಗೆ ನಿನ್ನ ಮಗು ಬೇಡವೇ, ಹೋಗಿ ಪೋಲೀಸ್ ಕಂಪ್ಲೇಟ್ ಕೊಡೋದಿಲ್ಲವೇ, ಅವಳು ನಿನ್ನ ಮಗೂನ ಎತ್ಕೊಂಡು ಹೋಗಿ ಬಿಟ್ಳಲ್ಲ ಎಂದಾಗ ಆ ಬಡ ಹೆಂಗಸು ಏನು ಮಾಡಾಣಾ ಸಾಮಿ, ಹೋಗ್ಲಿ ಬಿಡಿ, ನಮಗೇ ಹೊಟ್ಟೆಗಿಲ್ಲ, ನಮ್ಮ ಜೊತೆ ಇದ್ದು ಆ ಮಗು ಸುಖ ಪಡೋದು ಅಷ್ಟರಲ್ಲೇ ಇದೆ. ಆಯಮ್ಮನ ಜೊತೆ ಆದರೂ ಸುಖವಾಗಿರ್ಲಿ ಎನ್ನುತ್ತಾ ನಿರ್ಲಿಪ್ತಳಾಗಿ ಕುಳಿತು ಬಿಟ್ಟಳು.
ಅವಳ ಮಾತಿಗೆ ಬಸ್ಸಿನಲ್ಲಿದ್ದವರೆಲ್ಲ ದಿಗ್ಭ್ರಾಂತರಾದರು. ಹೀಗೂ ಉಂಟೇ, ಹೆತ್ತ ತಾಯಿ ತನ್ನ ಮಗುವನ್ನು ಬೇರೆ ಯಾರೋ ಕದ್ದೊಯ್ಯುವಾಗಲೂ ಇಷ್ಟೊಂದು ನಿರ್ಲಿಪ್ತರಾಗಿ ಇರಲು ಸಾಧ್ಯವೇ, ಅವಳು ಆ ಮಗುವಿನ ಮೇಲಿನ ಪ್ರೀತಿಯಿಂದ ಹಾಗೆ ಹೇಳಿದಳೋ ಅಥವಾ ಅವಳಿಗೆ ಆ ಮಗು ಬೇಡದ ಮಗುವಾಗಿತ್ತೋ ಎಂದು ಅವರಿಗೆಲ್ಲ ಗೊಂದಲವಾಯಿತು. ಕೆಲವರು ಆಕೆ ಅದೆಂಥಾ ತಾಯಿ ತನ್ನ ಕರುಳ ಕುಡಿಯನ್ನೇ ಬೇರೆಯವರು ಕದ್ದುಕೊಂಡು ಹೋದರೂ ಸುಮ್ನೇ ಕೂತಿದ್ದಾಳಲ್ಲ, ಆಕೆ ತಾಯಿ ಹೆಸರಿಗೇನೆ ಕಳಂಕ ಎಂದು ಮಾತನಾಡಿಕೊಂಡರೆ ಇನ್ನು ಕೆಲವರು, ಪಾಪ ತಾಯಿ ಹೃದಯ ತನ್ನ ಸ್ವಾರ್ಥ ಬಿಟ್ಟು ಮಗುವಿನ ಸುಖ ಬಯಸಿತು. ಆಕೆ ಎಂಥಾ ತ್ಯಾಗಮಯಿ, ತನ್ನ ಮಗುವನ್ನು ಆ ಮಹಿಳೆ ಕದ್ದೊಯ್ದರೂ ಏನೂ ಮಾಡದೆ ಮಗುವಿನ ಶ್ರೇಯಸ್ಸು ಬಯಸಿ ಸುಮ್ಮನಿದ್ದಾಳೆ ಎಂದರೆ ಆಕೆ ಜೀವನದಲ್ಲಿ ಅದೆಷ್ಟು ಕಷ್ಟ ಪಟ್ಟಿರಬೇಕು ಎಂದು ವಾದಿಸಿದರು. ಇವರ ತರ್ಕ ವಿತರ್ಕದ ನಡುವೆ ಬಸ್ಸು ಮುಂದಕ್ಕೋಡಿತು.
ಸುಧಾ ಆಸ್ಪತ್ರೆಯಿಂದ ಹೊರಡುವಾಗಲೇ ಲೇಟಾಗಿತ್ತು. ಇವತ್ತೇ ಎ ಟಿ ಎಂ ಗೆ ಹೋಗಿ ದುಡ್ಡು ಡ್ರಾ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತ ಸುಧಾ ತನ್ನ ನಡಿಗೆಯನ್ನು ತೀವ್ರಗೊಳಿಸಿದಳು. ಎ ಟಿ ಎಂ ಹತ್ತಿರ ಬರುತ್ತಲೇ ಅದಕ್ಕೆ ಶಟ್ಟರ್ ಎಳೆದಿರುವುದನ್ನು ನೋಡಿ ಸುಧಾ ಕಂಗಾಲಾದಳು. ಛೆ ಅರ್ಜೆಂಟಿಗೆ ಬೇಕಾದಾಗೆಲ್ಲ ಈ ಎ ಟಿ ಎಂ ತೆರೆದಿರುವುದೇ ಇಲ್ಲ ಎಂದುಕೊಳ್ಳುತ್ತ ಇನ್ನೊಂದು ಬ್ಯಾಂಕಿನ ಎ ಟಿ ಎಂ ಕಡೆ ಧಾವಿಸಿದಳು.
ಅಲ್ಲಿ ನೋಡಿದರೆ ಅದೂ ಬಂದ್, ಅರೆ ಏನಿವತ್ತು ಎಲ್ಲ ಬೇಗ ಬಂದ್ ಆಗಿ ಬಿಟ್ಟಿದೆ, ಜನರ ಬಳಿ ದುಡ್ಡು ಜಾಸ್ತಿಯಾಗಿ ಅವರೆಲ್ಲ ದುಡ್ಡು ತೆಗೆದು ತೆಗೆದೂ ಖಾಲಿ ಮಾಡಿರಬೇಕು. ನಾಳೆ ಬೆಳಗ್ಗೆ ಬ್ಯಾಂಕ್ ಗೆ ಹೋಗಿ ತೆಗೆದರಾಯಿತು. ಅಮ್ಮನಿಗೆ ನಾಳೆ ಆಪರೇಶನ್ ಬೇರೆ ಇದೆ, ಡಾಕ್ಟರ್ ಮೂವತ್ತು ಸಾವಿರ ರೂಪಾಯಿ ಜಮೆ ಮಾಡಲು ತಿಳಿಸಿದ್ದಾರೆ. ನಾಳೆ ಬೇಗ ಬ್ಯಾಂಕಿಗೆ ಹೋಗಬೇಕು ಎಂದುಕೊಳ್ಳುತ್ತ ಅವಸರದ ಹೆಜ್ಜೆ ಹಾಕುತ್ತ ಮನೆಯ ಕಡೆ ನಡೆದಳು.
ಮನೆಗೆ ಬಂದು ನೋಡಿದಾಗ ಅವಳ ಅಪ್ಪ ಆಗಲೇ ಊಟ ಮಾಡಿ ಮಲಗಿದ್ದರು. ಇವತ್ತು ಅಪ್ಪನಿಗೆ ಕುಡಿದಿದ್ದು ಜಾಸ್ತಿಯಾಗಿರಬೇಕು ಎಂದುಕೊಳ್ಳುತ್ತ ಕೈ ಕಾಲು ತೊಳೆದುಕೊಂಡು ಒಂದು ತಟ್ಟೆಯಲ್ಲಿ ಊಟ ಬಡಿಸಿಕೊಂಡು ಟೀವಿ ನೋಡುತ್ತಾ ಉಣ್ಣ ತೊಡಗಿದಳು. ಇದ್ದಕ್ಕಿದ್ದಂತೆ ಬ್ರೆಕಿಂಗ್ ನ್ಯೂಸ್ ಎಂದು ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಬಂದ ಸುದ್ದಿ ನೋಡಿ ಸುಧಾಳ ಕೈಯಲ್ಲಿದ್ದ ತುತ್ತು ತಟ್ಟೆಗೆ ಬಿತ್ತು.
ಅಯ್ಯೋ ದೇವರೇ, ಅಮ್ಮನ ಆಪರೇಶನ್ ಗೆ ಎಂದು ಮೊನ್ನೆಯೇ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ತಂದಿಟ್ಟಿದ್ದೆ, ಅದೆಲ್ಲವೂ ಹೋಯಿತೇ ಹಾಗಾದರೆ ಎಂದು ಆತಂಕ ಪಟ್ಟುಕೊಳ್ಳುವಷ್ಟರಲ್ಲಿ ಟೀವಿಯಲ್ಲಿ, ಜನರು ತಮ್ಮಲ್ಲಿದ್ದ ನೋಟುಗಳನ್ನು ಬ್ಯಾಂಕಿಗೆ ಕೊಟ್ಟು ಬದಲಾಯಿಸಿಕೊಳ್ಳಬಹುದು ಎಂಬ ಮಾಹಿತಿ ಬಂದಾಗ ಅವಳಿಗೆ ಹೋದ ಜೀವ ಬಂದಂತಾಯಿತು. ಆದರೆ ಮರುಕ್ಷಣದಲ್ಲೇ ಒಬ್ಬರು ಕೇವಲ ನಾಲ್ಕು ಸಾವಿರ ರೂಪಾಯಿ ಮಾತ್ರ ಬದಲಾಯಿಸಿಕೊಳ್ಳಬಹುದು ಎಂದು ತಿಳಿದಾಗ ಮತ್ತೆ ಅವಳಿಗೆ ಆತಂಕ ಶುರುವಾಯಿತು.
ಗಾಬರಿಯಿಂದ ತಂದೆಯನ್ನು ಎಬ್ಬಿಸಲು ಓಡಿದಳು. ಆದರೆ ಕುಡಿದ ಮತ್ತಿನಲ್ಲಿದ್ದ ಅವಳ ತಂದೆಗೆ ಎಚ್ಚರವಾಗಲಿಲ್ಲ. ಅವಳಿಗೆ ಗಾಬರಿಯಾಗಿ ಏನು ಮಾಡುವುದು ಎಂದು ತಿಳಿಯಲಿಲ್ಲ. ಹಾಗೇ ಯೋಚಿಸುತ್ತ ಕುಳಿತಳು. ತಟ್ಟೆಯಲ್ಲಿದ್ದ ಅನ್ನ ತಣ್ಣಗಾದರೂ ಅವಳಿಗೆ ಏನು ಮಾಡುವುದು ಎಂದು ಹೊಳೆಯಲಿಲ್ಲ. ದೇವರೇ ನೀನೇ ನಮ್ಮನ್ನು ಕಾಪಾಡಬೇಕು. ನನಗೆ ಈ ಜಗತ್ತಿನಲ್ಲಿ ನನ್ನವರು ಅಂತ ಇರೋದು ನನ್ನ ಅಮ್ಮ ಮಾತ್ರ. ಅಪ್ಪ ಇದ್ದರೂ ಹೆಸರಿಗೆ ಮಾತ್ರ. ಕೆಲಸ ಮಾಡುವುದು ಮತ್ತು ಕುಡಿಯುವುದು ಬಿಟ್ಟರೆ ಅವರಿಗೆ ಬೇರೆ ಏನೂ ಬೇಕಾಗಿಲ್ಲ. ಪ್ರೀತಿ ಮಮತೆ ಅವರ ಜಾಯಮಾನದಲ್ಲೇ ಇಲ್ಲ ಎಂದುಕೊಳ್ಳುತ್ತ ಊಟ ಬಿಟ್ಟು ಎದ್ದಳು.
ನಾಳೆಯೇ ದುಡ್ಡು ಕಟ್ಟಬೇಕೆಂದು ಡಾಕ್ಟರ್ ಮೊದಲೇ ತಾಕೀತು ಮಾಡಿದ್ದರು. ಈಗ ದುಡ್ಡು ಕಟ್ಟದಿದ್ದರೆ ಅಮ್ಮನಿಗೆ ಆಪರೇಶನ್ ಮಾಡುವುದಿಲ್ಲ, ಸಧ್ಯದ ಪರಿಸ್ಥಿತಿಯಲ್ಲಿ ಆಪರೇಶನ್ ಮಾಡದಿದ್ದರೆ ಅಮ್ಮ ಉಳಿಯುವುದಿಲ್ಲ. ನಾಳೆ ಬೇಗನೆ ಬ್ಯಾಂಕಿಗೆ ಹೋಗಬೇಕು ಎಂದುಕೊಳ್ಳುತ್ತ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಬೇಗನೆ ಮಲಗಿದಳು. ಸುಸ್ತಾದ ಜೀವಕ್ಕೆ ಸೊಂಪಾದ ನಿದ್ರೆ ಬಂದಿತು.
ಬೆಳಿಗ್ಗೆ ಬೇಗನೆ ಎದ್ದು ಮನೆ ಕೆಲಸವನ್ನೆಲ್ಲಾ ಮುಗಿಸಿ ಅಪ್ಪನಿಗೆ ತಿಂಡಿ ಕೊಟ್ಟು ಟೀವಿಯಲ್ಲಿ ಬಂದ ಸುದ್ದಿಯ ಬಗ್ಗೆ ಹೇಳಿದಾಗ ಆತ ಅದು ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಎತ್ತಲೋ ನೋಡುತ್ತಾ ತಿಂಡಿ ಮುಗಿಸಿ ಹೊರಗೆ ಹೊರಟಾಗ ಅವಳಿಗೆ ಇಂಥಾ ಕಷ್ಟ ಕಾಲದಲ್ಲೂ ತಂದೆಯಿಂದ ತನಗೆ ಯಾವುದೇ ರೀತಿಯ ಸಹಾಯ ಇಲ್ಲದ್ದು ಕಂಡು ದುಃಖವಾಗಿ ಅಳು ಒತ್ತರಿಸಿ ಬಂದಿತು. ಆದರೂ ಈಗ ಅಳುತ್ತ ಕೂರುವ ಸಮಯವಲ್ಲ ಎಂದುಕೊಂಡು ಬಂದ ಅಳುವನ್ನು ನುಂಗಿಕೊಂಡು ಮನೆಗೆ ಬೀಗ ಹಾಕಿ ಬ್ಯಾಂಕ್ ನತ್ತ ಓಡಿದಳು. ಗಂಟೆ ಒಂಭತ್ತುವರೆಯಾದರೂ ಉದ್ದದ ಜನರ ಸಾಲು ಕಂಡು ಅವಳಿಗೆ ಕಣ್ಣು ಕತ್ತಲು ಬಂದಂತಾಯಿತು.
ದೇವರೇ ಇಷ್ಟೊಂದು ಜನರಿದ್ದಾರೆ. ತನ್ನ ಸರದಿ ಬರಲು ಎಷ್ಟು ಹೊತ್ತಾಗುವುದೋ ಏನೋ ಎಂದುಕೊಳ್ಳುತ್ತ ಎ ಟಿ ಎಂ ನತ್ತ ಧಾವಿಸಿದಳು. ಅಲ್ಲಿಯೂ ಉದ್ದದ ಸರತಿಯ ಸಾಲು ಕಂಡು ಕಂಗಾಲಾಗಿ, ದೇವರೇ ನೀನೆ ಏನಾದರೂ ದಾರಿ ತೋರಿಸಬೇಕು, ನನ್ನ ತಾಯಿಯನ್ನು ಉಳಿಸಿಕೊಳ್ಳಲು ನನಗೆ ದುಡ್ಡು ಬೇಕು, ಅದಕ್ಕೆ ದಾರಿ ತೋರಿಸು, ನನ್ನ ಕೈ ಬಿಡಬೇಡ ಎಂದು ಮನಸ್ಸಿನಲ್ಲೇ ಬೇಡಿಕೊಳ್ಳುತ್ತ ಮತ್ತೆ ಬ್ಯಾಂಕ್ ನತ್ತ ಓಡಿದಳು. ಸರತಿಯ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದಿತು. ಅರ್ಧ ಗಂಟೆಯಾದರೂ ಅವಳ ಮುಂದೆ ನಿಂತಿದ್ದ ಸಾಲು ಕರಗುವ ಸೂಚನೆಯೇ ಕಾಣಲಿಲ್ಲ.
ಇದರ ನಡುವೆ ಬ್ಯಾಗಿನಲ್ಲಿದ್ದ ಬಿಸಿಯಾದ ತಿಂಡಿಯ ಡಬ್ಬ ಅವಳ ಕೈಗೆ ತಗಲಿದಾಗ ತಾಯಿಗೆ ತಿಂಡಿ ತೆಗೆದುಕೊಂಡು ಹೋಗಬೇಕಿತ್ತು ಎಂದು ನೆನಪಾಯಿತು. ಈ ಸರತಿಯ ಸಾಲಿನಲ್ಲಿ ನಿಂತರೆ ಅಮ್ಮ ಉಪವಾಸ ಇರಬೇಕಾಗುತ್ತದೆ. ನಾನೊಬ್ಬಳೇ ಇಲ್ಲಿಯೂ ನಿಂತು ಅಮ್ಮನಿಗೂ ಹೇಗೆ ತಿಂಡಿ ಕೊಡಲಿ. ಬೇರೆ ಯಾರನ್ನಾದರೂ ಕಳುಹಿಸೋಣ ಎಂದರೆ ತನಗೆ ಸಹಾಯ ಮಾಡುವವರು ಬೇರೆ ಯಾರಿದ್ದಾರೆ. ಕಷ್ಟಕಾಲದಲ್ಲಿ ಎಲ್ಲರೂ ದೂರ ಸರಿಯುವವರೇ, ಏನು ಮಾಡಲಿ ಈಗ ಸಾಲಲ್ಲಿ ನಿಲ್ಲಲೇ ಅಥವಾ ಅಮ್ಮನಿಗೆ ತಿಂಡಿ ಕೊಟ್ಟು ನಂತರ ಪುನಃ ಬರಲೇ ಎಂದು ಯೋಚಿಸಿದಳು.
ಅಮ್ಮ ಅಲ್ಲಿ ಹಸಿವಿನಿಂದ ಕಂಗಲಾಗಿರುತ್ತಾರೆ, ಅವರಿಗೆ ಮಾತ್ರೆ ಬೇರೆ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ನಿಂತುಕೊಳ್ಳದಿದ್ದರೆ ದುಡ್ಡು ಸಿಗುವುದಿಲ್ಲ ಏನು ಮಾಡಲಿ ಎಂದು ತೀವ್ರವಾಗಿ ಯೋಚಿಸಿದಳು. ಇದ್ದಕ್ಕಿದ್ದಂತೆ ಅವಳಿಗೆ ಡಾಕ್ಟರ್ ಗೆ ತಾನು ಚೆಕ್ ಕೊಡಬಹುದಲ್ಲವೇ ಎಂದು ಹೊಳೆಯಿತು. ಅಬ್ಬ ಬದುಕಿದೆ ಎನ್ನುತ್ತಾ ಮೊದಲು ಅಮ್ಮನಿಗೆ ತಿಂಡಿ ಕೊಟ್ಟು ಡಾಕ್ಟರ್ ಗೆ ಚೆಕ್ ಕೊಟ್ಟು ನಂತರ ಬಂದು ದುಡ್ಡು ವಿನಿಮಯ ಮಾಡಿಕೊಳ್ಳಲು ಸಾಲಲ್ಲಿ ನಿಲ್ಲೋಣ ಎಂದುಕೊಂಡು ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದಳು. ಇವತ್ತು ಸಂಜೆ ಅಮ್ಮನಿಗೆ ಅಪರೇಷನ್ ಮಾಡುತ್ತೇನೆ ಎಂದಿದ್ದರು ಡಾಕ್ಟರ್ ಅವರ ಬಳಿ ಮಾತನಾಡಬೇಕು ಎಂದುಕೊಳ್ಳುತ್ತ ಆಸ್ಪತ್ರೆಗೆ ದಾಪುಗಾಲು ಹಾಕುತ್ತ ನಡೆದಳು.
ಆಸ್ಪತ್ರೆಯಲ್ಲಿ ಅಮ್ಮನಿಗೆ ದುಡ್ಡಿನ ಪರಿಪಾಟಲಿನ ಬಗ್ಗೆ ಹೇಳದೆ ಎಂದಿನಂತೆ ನಗುತ್ತ ತಿಂಡಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದಳು. ಅವರ ತಿಂಡಿ ಮುಗಿಯುತ್ತಲೇ ಅವರಿಗೆ ಕೊಡಬೇಕಾದ ಮಾತ್ರೆಗಳನ್ನು ಕೊಟ್ಟು ತಾನು ಡಾಕ್ಟರನ್ನು ನೋಡಲು ಹೋಗುವುದಾಗಿ ತಾಯಿಗೆ ಹೇಳಿ ಡಾಕ್ಟರ್ ನ ಕೊಠಡಿಯತ್ತ ತೆರಳಿದಳು. ಅವಳ ಪುಣ್ಯಕ್ಕೆ ಅಲ್ಲಿ ಡಾಕ್ಟರ್ ಇದ್ದರು. ಅವಳು ಡಾಕ್ಟರ್ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ತಾನು ಇಪ್ಪತ್ತು ಸಾವಿರಕ್ಕೆ ಚೆಕ್ ಕೊಟ್ಟು ಉಳಿದ ಹಣವನ್ನು ಕ್ಯಾಶ್ ಕೊಡಬಹುದೇ ಎಂದಾಗ ಡಾಕ್ಟರ್ ಮೊದಲು ಒಪ್ಪದಿದ್ದರೂ ನಂತರ ಕ್ಷಣ ಕಾಲ ಯೋಚಿಸಿ ಆಗಲಿ ಆದರೆ ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳು ಬೇಡ ಎಂದಾಗ ಅಬ್ಬ ಅಷ್ಟಕ್ಕಾದರೂ ಒಪ್ಪಿದರಲ್ಲ ಎಂದು ಅವಳಿಗೆ ಹೋದ ಜೀವ ಬಂದಂತಾಯಿತು.
ತಾನು ತಂದಿದ್ದ ಇಪ್ಪತ್ತು ಸಾವಿರದ ಚೆಕ್ ಡಾಕ್ಟರ್ ಗೆ ಕೊಟ್ಟಾಗ ಅವರು ಸಂಜೆಯ ಹೊತ್ತಿಗೆ ಇನ್ನುಳಿದ ಹತ್ತು ಸಾವಿರ ಕೊಟ್ಟರೆ ಮಾತ್ರ ಆಪರೇಶನ್ ಮಾಡಲಾಗುವುದು ಎಂದು ಧೃಡವಾಗಿ ಹೇಳಿದಾಗ ಅವಳು ಸುಮ್ಮನೆ ತಲೆಯಾಡಿಸಿದಳು. ಆದರೂ ಅವಳಿಗೆ ಹತ್ತು ಸಾವಿರ ಹೊಂದಿಸುವುದು ಹೇಗೆ ಎಂದು ಯೋಚನೆಯಾಯಿತು. ಅಮ್ಮನ ಬಳಿ ತನಗೆ ಸ್ವಲ್ಪ ಕೆಲಸವಿದೆ ಬೇಗನೆ ಬರುತ್ತೇನೆ ಎನ್ನುತ್ತಾ ಅಲ್ಲಿಂದ ಬ್ಯಾಂಕಿಗೆ ಓಡಿದಳು. ಸರತಿಯ ಸಾಲು ಈಗ ದ್ವಿಗುಣಗೊಂಡಿತ್ತು. ಆಗಲೇ ಗಂಟೆ ಹನ್ನೊಂದುವರೆಯಾಗಿತ್ತು. ಅವಳಿಗೆ ಅಲ್ಲಿ ನಿಲ್ಲಲಾಗದೆ ಬ್ಯಾಂಕ್ ಮ್ಯಾನೇಜರನ್ನು ಹುಡುಕಿಕೊಂಡು ಹೋದಳು.
ತನ್ನ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡಾಗ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತ, ಇಲ್ಲಿಗೆ ಬಂದಿರುವ ಎಷ್ಟೋ ಜನ ನಿಮ್ಮಂತೆಯೇ ದುಡ್ಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಈ ನೋಟಿನ ಸಮಸ್ಯೆಯಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ಕೆಲವರಿಗೆ ಒಂದು ಹೊತ್ತು ಊಟಕ್ಕೂ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ದುಡ್ಡಿದ್ದವರೂ ಬಡತನವನ್ನು ಅನುಭವಿಸುತ್ತಿದ್ದಾರೆ. ನಾನೇನೂ ಮಾಡುವ ಹಾಗಿಲ್ಲ. ದಯವಿಟ್ಟು ಸಾಲಿನಲ್ಲಿ ನಿಂತುಕೊಳ್ಳಿ ಎಂದು ಅವರು ಸೂಚಿಸಿದಾಗ ಅವಳಿಗೆ ಅಳು ಒತ್ತರಿಸಿ ಬಂದಿತು. ಬೇರೆ ಬ್ಯಾಂಕುಗಳಿಗೆ ಹೋಗಿ ನೋಡೋಣ ಎಂದು ಅಲ್ಲಿಂದ ಓಡಿದಳು.
ಅಲ್ಲಿಯೂ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಇರಲಿಲ್ಲ. ಅಲ್ಲಿಂದ ಪೋಸ್ಟ್ ಆಫೀಸ್ ಗೆ ಓಡಿದಳು. ಅಲ್ಲಿ ಸರತಿಯ ಸಾಲು ಚಿಕ್ಕದಾಗಿರುವುದು ಕಂಡು ಸಮಾಧಾನವಾಗಿ ಸಾಲಿನಲ್ಲಿ ನಿಂತಳು. ಅಲ್ಲಿ ಹಣ ಇನ್ನೂ ಬಂದಿಲ್ಲವೆಂದು ಪೋಸ್ಟ್ ಆಫೀಸಿನವರು ಹೇಳಿದಾಗ ಅವಳು ಕಂಗಾಲಾದಳು. ಆದರೂ ಈಗ ಇಲ್ಲಿಂದ ಹೋದರೆ ಸಾಲು ಮತ್ತಷ್ಟು ಉದ್ದವಾದರೆ ಎಂದು ಅಲ್ಲೇ ನಿಂತುಕೊಂಡಳು. ತನ್ನ ವಾಚ್ ನೋಡಿಕೊಂಡಾಗ ಸಮಯ ಹನ್ನೊಂದು ಮುಕ್ಕಾಲು ಆಗಿತ್ತು. ಪರವಾಗಿಲ್ಲ ಇಲ್ಲಿ ಸಾಲು ಚಿಕ್ಕದಾಗಿದೆಯಲ್ಲ ಬೇಗನೆ ದುಡ್ಡು ಸಿಗಬಹುದು ಎಂದುಕೊಳ್ಳುತ್ತ ಸಮಾಧಾನದ ನಿಟ್ಟುಸಿರು ಬಿಟ್ಟಳು. ಸುಮಾರು ಹತ್ತು ನಿಮಿಷಗಳ ಬಳಿಕ ಸಾಲಿಗೆ ಜೀವ ಬಂದಂತಾಗಿ ಎಲ್ಲರೂ ಮುಂದೆ ಮುಂದೆ ಹೋದಾಗ ಅವಳಿಗೆ ಮತ್ತಷ್ಟು ಸಮಾಧಾನವಾಯಿತು.
ತನ್ನ ಸರದಿ ಬಂದಾಗ ನಾಲ್ಕು ಸಾವಿರ ವಿನಿಮಯ ಮಾಡಿಕೊಂಡು ತನ್ನ ತಾಯಿಗೆ ಆಪರೇಶನ್ ಇದೆ, ತನಗೆ ಅರ್ಜೆಂಟಾಗಿ ದುಡ್ಡು ಬೇಕಾಗಿದೆ ಉಳಿದ ಆರು ಸಾವಿರವನ್ನು ಬದಲಾಯಿಸಿ ಕೊಡುವಿರಾ ಎಂದು ವಿನಮ್ರವಾಗಿ ಬೇಡಿಕೊಂಡಳು. ಆದರೆ ಅವರು ಸರಕಾರದ ನಿರ್ದೇಶನದ ಪ್ರಕಾರ ಒಬ್ಬರಿಗೆ ನಾಲ್ಕು ಸಾವಿರ ಮಾತ್ರ ಕೊಡಬಹುದು ತಾವೇನೂ ಮಾಡುವ ಹಾಗಿಲ್ಲ ಎಂದು ಕೈ ಚೆಲ್ಲಿದರು. ಅವಳಿಗೆ ನಿರಾಶೆಯಾದರೂ ಇಷ್ಟಾದರೂ ಸಿಕ್ಕಿತಲ್ಲ ಎಂದುಕೊಂಡು ಉಳಿದ ಹಣಕ್ಕೆ ತನ್ನ ಬಾಸನ್ನು ಕೇಳಿದರಾಯಿತು ಎಂದುಕೊಂಡು ಅಲ್ಲಿಂದ ಬಸ್ಸಿನಲ್ಲಿ ಆಫೀಸಿಗೆ ಹೋದಳು.
ಆದರೆ ಬಾಸ್ ಅಲ್ಲಿರಲಿಲ್ಲ. ತನ್ನ ಸಹೋದ್ಯೋಗಿಗಳ ಬಳಿ ಸಹಾಯ ಯಾಚಿಸಿದಳು. ಆದರೆ ಅವರೆಲ್ಲ ತಾವೂ ದಿನನಿತ್ಯದ ಖರ್ಚಿಗೆ ಪರದಾಡುತ್ತಿದ್ದೇವೆ. ನಿನಗೆಲ್ಲಿಂದ ಕೊಡಲಿ, ಬೇಕಿದ್ದರೆ ಐನೂರರ ನೋಟು ಕೊಡುತ್ತೇವೆ ಎಂದು ಅಸಹಾಯಕರಾಗಿ ಹೇಳಿದಾಗ ಸುಧಾ ತಲ್ಲಣಗೊಂಡಳು. ದೇವರೇ ಏನಾದರೂ ಮಾಡಿ ದಾರಿ ತೋರಿಸು. ಸರಕಾರ ಯಾಕೆ ಇವತ್ತೇ ಈ ನಿರ್ಧಾರ ಕೈಗೊಂಡಿತು. ಒಂದು ದಿನ ಬಿಟ್ಟು ಈ ನಿರ್ಧಾರ ಮಾಡಿದಿದ್ದರೆ ತನ್ನ ತಾಯಿಯ ಆಪರೇಶನ್ ಆದರೂ ಸುಸೂತ್ರವಾಗಿ ನಡೆಯುತ್ತಿತ್ತು ಎಂದು ದುಃಖ ಪಡುತ್ತಿರುವಾಗ ಅವಳ ಸಹೋದ್ಯೋಗಿ ಅವಳಲ್ಲಿದ್ದ ಉಳಿದ ಹಣವನ್ನು ಅವಳ ಖಾತೆಗೆ ಹಾಕಿ ನಂತರ ಅದನ್ನು ಅವಳು ತೆಗೆಯಬಹುದಲ್ಲವೇ ಎಂದಾಗ ಅವಳಿಗೆ ಆಶಾ ಕಿರಣ ಮೂಡಿದಂತಾಗಿ ಅಲ್ಲೇ ಇದ್ದ ತನ್ನ ಬ್ಯಾಂಕಿನ ಬೇರೊಂದು ಬ್ರಾಂಚ್ ಗೆ ಓಡಿದಳು.
ಖಾತೆಗೆ ಹಣ ಹಾಕುವ ಸರತಿಯ ಸಾಲು ಚಿಕ್ಕದಾಗಿರುವುದನ್ನು ನೋಡಿ ಸಮಾಧಾನವಾಗಿ ಬೇಗನೆ ಸ್ಲಿಪ್ ನಲ್ಲಿ ವಿವರ ನಮೂದಿಸಿ ಸಾಲಿನಲ್ಲಿ ನಿಂತುಕೊಂಡಳು. ಆದರೆ ಅವಳ ಸರದಿ ಬಂದಾಗ ಬ್ಯಾಂಕಿನವರ ಊಟದ ಸಮಯವಾದ್ದರಿಂದ ಮಧ್ಯಾಹ್ನ ಎರಡು ಗಂಟೆಯ ನಂತರ ಬರುವಂತೆ ತಿಳಿಸಿದಾಗ ಅವಳಿಗೆ ತುಂಬಾ ನಿರಾಶೆಯಾಯಿತು. ಛೆ ತಾನು ಬೇಗನೆ ಬರಬೇಕಿತ್ತು. ತನಗೆ ಮೊದಲೇ ತಿಳಿದಿದ್ದರೆ ತಾನು ಆಫೀಸಿಗೆ ಹೋಗುವ ಬದಲು ಇಲ್ಲೇ ನಿಂತು ದುಡ್ಡು ತನ್ನ ಖಾತೆಗಾದರೂ ಬೀಳುವಂತೆ ನೋಡಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ಮನೆಯ ಕಡೆ ಧಾವಿಸಿದಳು.
ಮನೆಗೆ ಹೋಗಿ ಬೆಳಿಗ್ಗೆ ಮಾಡಿದ ಅಡಿಗೆಯನ್ನು ಬಿಸಿ ಮಾಡುತ್ತಿರುವಾಗ ಆಸ್ಪತ್ರೆಯಿಂದ ಫೋನ್ ಬಂದಿತು. ಸುಧಾ ಆತಂಕದಲ್ಲಿ ಫೋನ್ ಕೈಗೆತ್ತಿಕೊಂಡಾಗ ಅವಳ ತಾಯಿಯ ಆರೋಗ್ಯ ಹದಗೆಟ್ಟಿರುವುದರಿಂದ ಆಪರೇಶನ್ ಬೇಗನೆ ಮಾಡಬೇಕಾಗಿದೆ. ಉಳಿದ ಹಣವನ್ನು ಜಮೆ ಮಾಡಿದರೆ ಮಧ್ಯಾಹ್ನ ಎರಡುವರೆಗೆ ಆಪರೇಶನ್ ಮಾಡಬಹುದು ಎಂದು ಅವರು ತಿಳಿಸಿದಾಗ ಅವಳಿಗೆ ಕಾಲಬುಡದಲ್ಲಿ ಕುಸಿದ ಅನುಭವ. ದೇವರೇ ಏನು ಮಾಡಲಿ ಯಾರ ಸಹಾಯ ಕೇಳಲಿ ಎಂದುಕೊಳ್ಳುತ್ತ ಅಕ್ಕಪಕ್ಕದ ಮನೆಯವರ ಬಳಿ ಸಹಾಯ ಯಾಚಿಸಲು ಧಾವಿಸಿದಳು.
ಆದ್ರೆ ಅವರೆಲ್ಲರ ಪರಿಸ್ಥಿತಿ ಅವಳಿಗಿಂತ ಭಿನ್ನವಾಗಿರಲಿಲ್ಲ. ಮನೆಗೆ ಸಾಮಾನು ತರಲೂ ಅವರ ಬಳಿ ದುಡ್ಡಿರಲಿಲ್ಲ. ದೇವರೇ ಎಂಥಾ ಕಷ್ಟ ತಂದು ಬಿಟ್ಟೆ. ನಿನ್ನೆವರೆಗೆ ಅಮ್ಮನ ಆಪರೇಶನ್ ಮಾಡಲು ಏನೂ ತೊಂದರೆಯಿಲ್ಲ ಅಂದುಕೊಂಡು ನಿರಾಳವಾಗಿದ್ದವಳಿಗೆ ಈಗೆಂಥಾ ದುರ್ಗತಿ ತಂದು ಬಿಟ್ಟೆ. ನಾನು ಮಾಡಿದ ಅಪರಾಧವಾದರೂ ಏನು ಎಂದುಕೊಳ್ಳುತ್ತ ಗಳಗಳನೆ ಅತ್ತಳು. ಕೈಯಲ್ಲಿದ್ದ ನಾಲ್ಕು ಸಾವಿರ ಕೊಟ್ಟು ಉಳಿದ ಆರು ಸಾವಿರ ನಂತರ ಕೊಡುತ್ತೇನೆ ಎಂದರೆ ಡಾಕ್ಟರ್ ಒಪ್ಪಬಹುದೇನೋ, ಎಷ್ಟಾದರೂ ಡಾಕ್ಟರ್ ಜೀವ ಉಳಿಸುವವರು ಹೃದಯವಂತರು ಎಂದು ಯೋಚಿಸಿ ಆಶಾ ಕಿರಣ ಮೂಡಿದಂತಾಗಿ ಮನೆಗೆ ಬೀಗ ಹಾಕಿ ಆಸ್ಪತ್ರೆಗೆ ಓಡಿದಳು.
ಆದರೆ ಡಾಕ್ಟರ್ ಉಳಿದ ಆರು ಸಾವಿರ ಹಣ ಕೊಟ್ಟರೆ ಮಾತ್ರವೇ ಆಪರೇಶನ್ ಮಾಡುವುದು ಎಂದು ಖಡಾಖಂಡಿತವಾಗಿ ಹೇಳಿದಾಗ ಅವಳು ನಿಂತಲ್ಲೇ ಕುಸಿದಳು. ಪ್ರಾಣ ಉಳಿಸಬೇಕಾದ ಡಾಕ್ಟರ್ ಮಾನವೀಯತೆ ಮರೆತು ದುಡ್ಡಿಗೋಸ್ಕರ ನಿರ್ದಯರಾಗಬಹುದು ಎಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಈಗೇನು ಮಾಡುವುದು ಎಂದು ಅವಳಿಗೆ ತಿಳಿಯಲಿಲ್ಲ. ಉಳಿದ ಹಣಕ್ಕೆ ಪೋಸ್ಟ್ ಡೇಟ್ ನ ಚೆಕ್ ಕೊಡುತ್ತೇನೆ ಎಂದರೂ ಡಾಕ್ಟರ್ ಒಪ್ಪಲಿಲ್ಲ. ನಿಮ್ಮ ಹಾಗೆ ಎಲ್ಲರೂ ಹೇಳಿದರೆ ನಾವು ಬದುಕುವುದು ಹೇಗೆ, ನಮ್ಮ ಕಷ್ಟ ಸ್ವಲ್ಪ ಅರ್ಥ ಮಾಡಿಕೊಳ್ಳಿ ಎಂದು ತಾವು ಮಾಡಿದ್ದೆ ಸರಿ ಎನ್ನುವಂತೆ ಮಾತನಾಡಿದಾಗ ಅವಳಿಗೆ ಏನು ಮಾಡುವುದೆಂದು ತೋಚಲಿಲ್ಲ. ದುಃಖ ಉಮ್ಮಳಿಸಿ ಬಂದು ತಡೆಯಲಾಗದೆ ಅಮ್ಮನನ್ನು ನೋಡಲು ಧಾವಿಸಿದಳು.
ಮಗಳ ನಿಸ್ತೇಜಗೊಂಡ ಮುಖ ನೋಡಿ ತಾಯಿ ಹೃದಯ ಆತಂಕ ಪಟ್ಟಿತು. ತಮ್ಮ ನೋವಿಗಿಂತಲೂ ಮಗಳ ನೋವು ಜಾಸ್ತಿಯಾದಂತೆನಿಸಿ ಅವಳನ್ನು ವಿಚಾರಿಸಿದಾಗ ಸುಧಾ ಬೇರೆ ದಾರಿಯಿಲ್ಲದೆ ಎಲ್ಲ ವಿಷಯವನ್ನು ಹೇಳಿ ತಾನಾಗಲೇ ಮತ್ತೆ ಬ್ಯಾಂಕಿಗೆ ಹೋಗಬೇಕಾಗಿದೆ. ದುಡ್ಡು ತೆಗೆಯಬೇಕಿದೆ, ನೀನು ಧೈರ್ಯವಾಗಿರು ನಾನು ದುಡ್ಡು ತಂದೇ ತರುತ್ತೇನೆ ಎಂದಾಗ ಆ ತಾಯಿ ಹೃದಯ, ತನ್ನಿಂದಾಗಿ ಮಗಳಿಗೆ ಎಷ್ಟು ಕಷ್ಟವಾಗ್ತಿದೆ. ದೇವರೇ ಯಾಕೆ ಇಂಥಾ ಕಷ್ಟ ಕೊಡುತ್ತಿಯಾ, ಅವಳ ತಂದೆಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ. ತಾನಾಯಿತು ತನ್ನ ಕುಡಿತವಾಯಿತು, ಹೆಂಡತಿ ಮಕ್ಕಳು ಇದ್ದಾರೆ ಎಂದು ಮರೆತೇ ಬಿಟ್ಟಿದ್ದಾರೆ. ನಾನು ಆಸ್ಪತ್ರೆ ಸೇರಿದ ಮೇಲೆ ಒಮ್ಮೆಯೂ ನೋಡಲು ಬಂದಿಲ್ಲ. ನನಗೇನಾದರೂ ಆದರೆ ನನ್ನ ಮಗಳ ಗತಿಯೇನು, ಮಗಳಿಗೋಸ್ಕರವಾದರೂ ನನ್ನನ್ನು ಬದುಕಿಸು ದೇವರೇ ಎಂದು ಬೇಡಿಕೊಂಡರು.
ಸುಧಾ ಬ್ಯಾಂಕಿನತ್ತ ನಡೆದಾಗ ಅಲ್ಲಿ ಮತ್ತೆ ಉದ್ದನೆಯ ಸರತಿಯ ಸಾಲು ಕಂಡು ಅವಳಿಗೆ ಜೋರಾಗಿ ಅಳುವಂತಾಯಿತು. ಅಯ್ಯೋ ದೇವರೇ ನಾನು ಸಾಲು ಬಿಟ್ಟು ಮನೆಗೆ ಹೋಗಲೇ ಬಾರದಿತ್ತು. ಈಗ ಸಾಲಲ್ಲಿ ನಿಂತರೆ ಅಮ್ಮನ ಆಪರೇಶನ್ ಆದ ಹಾಗೆ ಎಂದುಕೊಳ್ಳುತ್ತ ಅಲ್ಲಿ ನಿಂತಿದ್ದ ಜನರಲ್ಲಿ ತನಗೆ ಮೊದಲ ಅವಕಾಶ ಕೊಡುವಂತೆ ಬೇಡಿಕೊಂಡಳು. ತನ್ನ ತಾಯಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಆಪರೇಶನ್ ಗೆ ಅರ್ಜೆಂಟಾಗಿ ದುಡ್ಡು ಬೇಕಿದೆ, ದಯವಿಟ್ಟು ನನಗೆ ಮೊದಲು ಹೋಗಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದಳು. ಆದರೆ ಅಲ್ಲಿದ್ದವರ ಯಾರ ಹೃದಯವೂ ಮಿಡಿಯಲಿಲ್ಲ.
ಕೆಲವರು ಮನೆಯಲ್ಲಿ ತಮ್ಮ ಹೆಂಡತಿ ಮಕ್ಕಳು ಹಸಿದುಕೊಂಡಿದ್ದಾರೆ. ಅವರಿಗೆ ನಾವು ತಿಂಡಿ ಕೊಡುವುದು ಬೇಡವೇ ನಮಗೂ ನಿಮ್ಮಂತೆ ಕಷ್ಟ ಇದೆ ಎಂದರೆ ಇನ್ನು ಕೆಲವರು ದುಡ್ಡು ತೆಗೆದುಕೊಳ್ಳೋದಿಕ್ಕೆ ಇದೊಂದು ನಾಟಕ ಮಾಡ್ತಿರಬಹುದು ಎಂದುಕೊಳ್ಳುತ್ತ, ನೋಡಮ್ಮಾ ನಿನ್ನ ನಾಟಕಕ್ಕೆಲ್ಲ ನಾವು ಕರಗೋದಿಲ್ಲ, ನಿನಗೆ ದುಡ್ಡು ಬೇಕಾದರೆ ಸಾಲಲ್ಲಿ ನಿಂತ್ಕೋ, ನೀನು ಲೇಟು ಮಾಡಿದಷ್ಟು ನಿನಗೇ ತೊಂದರೆ ಎನ್ನುತ್ತಾ ತಮ್ಮ ತಮ್ಮ ತಾಪತ್ರಯಗಳನ್ನು ಹೇಳಿ ಕೊಳ್ಳ ತೊಡಗಿದರು.
ಸುಧಾ ಮದ್ಯಾಹ್ನ ಊಟ ಕೂಡ ಮಾಡಿರಲಿಲ್ಲ. ಆದ್ದರಿಂದ ಆಯಾಸ ಹೆಚ್ಚಾಗಿ ಕಣ್ಣು ಕತ್ತಲೆ ಬರುವಂತಾಯಿತು. ಬೆಳಗ್ಗಿನಿಂದಲೂ ಒಂದೇ ಸಮನೆ ದುಡ್ಡಿಗಾಗಿ ಅಲೆದಾಡಿ ಸೋತಿದ್ದಳು. ಇದೆಂಥಾ ಗ್ರಹಚಾರ ಕೈಯಲ್ಲಿ ದುಡ್ಡಿದ್ದರೂ ಇಲ್ಲದಂಥಾ ಪರಿಸ್ಥಿತಿ. ಮೊದಲೇ ಗೊತ್ತಿದ್ದರೆ ಬಾಸ್ ಬಳಿ ತೆಗೆದುಕೊಂಡ ಮುಂಗಡ ಹಣ ತಾನು ಬ್ಯಾಂಕ್ ನಲ್ಲೆ ಇಡುತ್ತಿದ್ದೆ. ಈಗ ಕೇವಲ ಆರು ಸಾವಿರ ಹೊಂದಿಸಲು ಅದೆಷ್ಟು ಕಷ್ಟ ಪಡಬೇಕು. ದೇವರೇ ಯಾಕಿಂಥಾ ಕಷ್ಟ ಕೊಡುತ್ತಿಯಾ ಎಂದುಕೊಳ್ಳುತ್ತಿದ್ದಂತೆ ಅವಳಿಗೆ ಅಳು ಒತ್ತರಿಸಿ ಬಂದು ಜೋರಾಗಿ ಅಳತೊಡಗಿದಳು.
ಅವಳ ಅಳು ನೋಡಿ ಮುದುಕನೊಬ್ಬ, ಬಾಮ್ಮ ನನ್ನ ಜಾಗದಲ್ಲಿ ನಿಂತ್ಕೋ, ನಾನು ನಾಳೆ ಬರುತ್ತೇನೆ ಎಂದು ಹೇಳಿದಾಗ ಸುಧಾಗೆ ಎಲ್ಲಿಲ್ಲದ ಸಂತೋಷವಾಗಿ ಆ ಮುದುಕನನ್ನು ಅಪ್ಪಿಕೊಂಡು ತನ್ನ ಸಂತಸ ವ್ಯಕ್ತ ಪಡಿಸಿದಳು. ಥಾಂಕ್ಸ್ ಅಂಕಲ್, ನಿಮ್ಮಿಂದ ತುಂಬಾ ಉಪಕಾರವಾಯಿತು, ನನ್ನ ತಾಯಿ ಜೀವ ಉಳಿಸಿದ ಪುಣ್ಯ ನಿಮಗೆ ಬರುತ್ತೆ ಎಂದು ಮನಪೂರ್ವಕವಾಗಿ ಹೇಳಿದಾಗ ಆತ ನಗುತ್ತ, ಸರಿಯಮ್ಮ ದುಡ್ಡು ತೆಗೆದುಕೊಂಡು ಅಮ್ಮನಿಗೆ ಆಪರೇಶನ್ ಮಾಡಿಸು ಎಂದು ಹೇಳಿ ಆತ ಹೊರಟುಹೋದ.
ಸುಧಾ ಸಮಯ ನೋಡಿದಾಗ ಎರಡು ಗಂಟೆಯಾಗಿತ್ತು. ಅಯ್ಯೋ ದೇವರೇ ಇನ್ನು ಅರ್ಧ ಗಂಟೆಯಲ್ಲಿ ಆಪರೇಶನ್ ಮಾಡುತ್ತೇನೆ ಎಂದಿದ್ದರು. ಈಗ ದುಡ್ಡು ಕೊಡದೆ ಹೋದರೆ ಆಪರೇಶನ್ ಮಾಡುವುದಿಲ್ಲ ಎಂದು ಗಾಬರಿಯಾಗಿ ತನಗಿಂತ ಮುಂದೆ ನಿಂತಿದ್ದವರನ್ನು ತನಗೆ ಮೊದಲು ಹೋಗಲು ಅವಕಾಶ ಮಾಡಿಕೊಡಿ ಎಂದು ಇನ್ನಿಲ್ಲದಂತೆ ಬೇಡಿಕೊಂಡಳು. ಆದರೆ ಅಲ್ಲಿ ನಿಂತಿದ್ದವರ ಮನಸ್ಸು ಕರಗಲಿಲ್ಲ. ಜನರು ಒಬ್ಬೊಬ್ಬರಾಗಿ ಮುಂದಕ್ಕೆ ಹೋಗುತ್ತಿದ್ದಂತೆ ಸುಧಾ ನಿಂತಲ್ಲೇ ಚಡಪಡಿಸಿದಳು. ದುಡ್ಡು ಡ್ರಾ ಮಾಡಿಕೊಂಡವರ ಬಳಿ ಹಣ ಕೊಡಲು ಕೇಳಿ ಅದರ ಬದಲು ತಾನು ಚೆಕ್ ನೀಡುವೆ ಎಂದು ಬೇಡಿಕೊಂಡಳು.
ಆದರೂ ಜನ ಅವಳ ಮಾತಿಗೆ ಕಿವಿಕೊಡದೆ ತಮಗೆ ದುಡ್ಡು ಸಿಕ್ಕಿದ ಸಂತಸದಿಂದ ಮನೆಯ ಕಡೆ ಧಾವಿಸ ತೊಡಗಿದರು. ಕೊನೆಗೆ ಮಹಿಳೆಯೊಬ್ಬಳು ಅವಳ ಮನವಿಗೆ ಕರಗಿ ತಾನು ತೆಗೆದ ದುಡ್ಡಿನಲ್ಲಿ ಆರು ಸಾವಿರ ರೂಪಾಯಿ ಕೊಟ್ಟು ಅವಳ ಬಳಿ ಚೆಕ್ ಬರೆಸಿಕೊಂಡಳು. ಸುಧಾ ಅತ್ಯಂತ ಸಂತಸದಿಂದ ಆಕೆಗೆ ಧನ್ಯವಾದ ತಿಳಿಸಿ ಆಸ್ಪತ್ರೆಯತ್ತ ಓಡಿದಳು. ಸಮಯ ನೋಡಿದಾಗ ಎರಡು ಮುಕ್ಕಾಲಾಗಿತ್ತು. ಅಯ್ಯೋ ದೇವರೇ ಡಾಕ್ಟರ್ ಅಮ್ಮನಿಗೆ ಆಪರೇಶನ್ ಮಾಡಲು ಶುರು ಮಾಡಿರಬಹುದೇ ಅಥವಾ ನಾನು ಬರಲೆಂದು ಕಾಯ್ತಾ ಕೂತಿರಬಹುದೇ, ಅಮ್ಮ ಹೇಗಿರಬಹುದು ಅವಳಿಗೇನೂ ಆಗದೇ ಇರಲಿ ಎಂದು ಆಶಿಸುತ್ತ ಮತ್ತೆ ಓಡಿದಳು.
ಅಷ್ಟರಲ್ಲಿ ಅವಳ ಫೋನ್ ರಿಂಗಣಿಸಿತು. ಸುಧಾಗೆ ಭಯವಾಗಿ ಬೇಗನೆ ತೆಗೆದು ನೋಡಿದಳು. ಆಸ್ಪತ್ರೆಯಿಂದ ಫೋನ್ ಬಂದಿತ್ತು. ಅವಳು ಫೋನ್ ಎತ್ತಿ ತಕ್ಷಣ, ನಾನು ದುಡ್ಡು ತೆಗೆದುಕೊಂಡು ಬರ್ತಿದ್ದೀನಿ, ಅಮ್ಮನಿಗೆ ಆಪರೇಶನ್ ಶುರು ಮಾಡಿ ಎಂದು ಹೇಳಿದಾಗ ಅತ್ತ ಕಡೆಯಿಂದ, ಇನ್ನು ಅವರಿಗೆ ಆಪರೇಶನ್ ಅಗತ್ಯವಿಲ್ಲ, ನಿಮ್ಮ ತಾಯಿ ತೀರಿಕೊಂಡರು ಎಂದು ಹೇಳಿದಾಗ ಸುಧಾಗೆ ಆಘಾತವಾಗಿ ಅಲ್ಲೇ ಕುಸಿದಳು. ಅಯ್ಯೋ ದೇವರೇ, ಏನಾಗಿ ಹೋಯ್ತಮ್ಮ, ಕೈಯಲ್ಲಿ ಕಾಸಿದ್ದೂ ನಿನ್ನ ಆಪರೇಶನ್ ಮಾಡಿಸಲಾಗಲಿಲ್ಲವಲ್ಲ. ನಿನ್ನನ್ನು ಬಿಟ್ಟು ಬೇರೆ ಯಾರಿದ್ದಾರಮ್ಮ ನನಗೆ, ಯಾಕೆ ನನ್ನನ್ನು ಬಿಟ್ಟು ಹೋದೆ, ನಾನು ಬರುವವರೆಗೂ ಕಾಯಬಾರದಿತ್ತೆ, ನೀನಿಲ್ಲದೆ ನಾನು ಹೇಗೆ ಬದುಕಲಮ್ಮ ಎನ್ನುತ್ತಾ ಸುಧಾ ಒಂದೇ ಸಮನೇ ರೋಧಿಸತೊಡಗಿದಳು.