ಈರುಳ್ಳಿ ಮಹಾತ್ಮೆ

ಎಲ್ಲಾ ಕಡೆಯೂ ಈಗ ಈರುಳ್ಳಿ ವಿಷಯವೇ ಚರ್ಚೆಯಾಗುತ್ತಿದೆ. ಕಾರಣ ಹೇಳಬೇಕಿಲ್ಲ ಅಲ್ಲವೇ. ಇದುವರೆಗೂ ಈರುಳ್ಳಿಯನ್ನು ಕಾಲ ಕಸದಂತೆ ಕಾಣುತ್ತಿದ್ದ ಜನರಿಗೆ ಈರುಳ್ಳಿ ತನ್ನ ಮಹತ್ವವನ್ನು ತಿಳಿಸಿಕೊಟ್ಟಿದೆ. ಎಲ್ಲರಿಗೂ ಒಂದು ಕಾಲ ಬಂದೇ ಬರುತ್ತದೆ ಈಗ ನನ್ನ ಕಾಲ ಎಂದು ಈರುಳ್ಳಿ ಮಹಾರಾಜ ಹೆಮ್ಮೆಯಿಂದ ಬೀಗುತ್ತಿದ್ದಾನೆ!

ಬಡವರು ಈರುಳ್ಳಿಯನ್ನು ನೆಂಚಿಕೊಳ್ಳುತ್ತಾ ನೆಮ್ಮದಿಯಿಂದ ಊಟ ಮಾಡುತ್ತಿದ್ದವರು ಈಗ ಈರುಳ್ಳಿಯನ್ನು ನೆನೆಸಿಕೊಂಡು ಕಣ್ಣೀರಿಡುತ್ತಾ ಊಟ ಮಾಡುತ್ತಿದ್ದಾರೆ. ಬಡವರ ಮನೆಯ ನೆಚ್ಚಿನ ತರಕಾರಿಯಾದ ಈರುಳ್ಳಿ ಈಗ ಶ್ರೀಮಂತಿಕೆಯ ಸಂಕೇತವಾಗಿ ಬೆಳೆದು ಬಿಟ್ಟಿದೆ. ಮಾಂಸಾಹಾರಿಗಳು ಈರುಳ್ಳಿ ಇಲ್ಲದೆ ಬಿರಿಯಾನಿ ಮಾಡಲೂ ಆಗದೆ ಒದ್ದಾಡುತ್ತಿದ್ದರೆ ಸಸ್ಯಾಹಾರಿಗಳು ಸಾಂಬಾರಿಗೆ ಈರುಳ್ಳಿ ಇಲ್ಲದೆ ಒದ್ದಾಡುತ್ತಿದ್ದಾರೆ. ಹೋಟೆಲುಗಳಲ್ಲಿ ಈರುಳ್ಳಿ ಬಜ್ಜಿ , ಈರುಳ್ಳಿ ದೋಸೆ ಮಾಯವಾಗುತ್ತಿವೆ. ಅನೇಕ ಖಾದ್ಯಗಳು ಈರುಳ್ಳಿ ಇಲ್ಲದೆ ಸತ್ವ ಹೀನವಾಗಿ ತಮ್ಮ ಮೌಲ್ಯ ಕಳೆದು ಕೊಂಡಿವೆ.

ಟಿಕ್ ಟಾಕ್ ನಲ್ಲಂತೂ ಈರುಳ್ಳಿ ರಾಜನಾಗಿ ಮೆರೆಯುತ್ತಿದ್ದಾನೆ. ಕೆಲವರು ತಮ್ಮ ಚಿನ್ನವಿಡುವ ಕಪಾಟಿನಲ್ಲಿ ಈರುಳ್ಳಿಗೂ ಸ್ಥಾನ ಕೊಟ್ಟು ಈರುಳ್ಳಿಯ ಬೆಲೆಯನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಒಂದು ವಿಡಿಯೋ ನನಗೆ ತುಂಬಾ ಮೆಚ್ಚಿಗೆಯಾಗಿದ್ದು ರಿಕ್ಷಾದಲ್ಲಿ ಬಂದ ಯುವಕ ಬಾಡಿಗೆಯನ್ನು ಈರುಳ್ಳಿ ರೂಪದಲ್ಲಿ ಕೊಡುತ್ತಾನೆ! ರಿಕ್ಷಾದವ ಚಿಲ್ಲರೆಯಾಗಿ ಚಿಕ್ಕ ಚಿಕ್ಕ ಈರುಳ್ಳಿಯನ್ನು ಕೊಡುತ್ತಾನೆ!!

ಇದುವರೆಗೂ ಸೇಬಿನ ಹಾರಕ್ಕೆ ಮಹತ್ವ ಕೊಡುವ ರಾಜಕಾರಣಿಗಳು ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಗೆದ್ದವರು ಈರುಳ್ಳಿ ಹಾರ ಅಪೇಕ್ಷಿಸಬಹುದು! ಆದರೆ ಸೇಬಿನ ಹಾರದಲ್ಲಿನ ಸೇಬಿಗೋಸ್ಕರ ಕಿತ್ತಾಟ ನಡೆಸಿದ ಕಾರ್ಯಕರ್ತರು ಈರುಳ್ಳಿಗೋಸ್ಕರ ಏನೆಲ್ಲಾ ಮಾಡಬಹುದುಎಂದು ಊಹಿಸಲೂ ಭಯವಾಗುತ್ತದೆ!! 

ಇನ್ನು ಈರುಳ್ಳಿ ಬೆಲೆಯಿಂದಾಗಿ ಮನೆ ಮಂದಿಯ ಬಜೆಟ್ ಡೋಲಾಯಮಾನವಾಗಿ ಬಿಟ್ಟಿದೆ. ಮಹಿಳೆಯರು ಈರುಳ್ಳಿ ಕೊಳ್ಳಲೋ ಅಕ್ಕಿ ಕೊಳ್ಳಲೋ ಎಂದು ಯೋಚಿಸುವಂತಾಗಿದೆ. ಕೆಲವರಂತೂ ಈರುಳ್ಳಿ ಹಾಕದೆ ಮಾಡುವ ಖಾದ್ಯಗಳಿಗಾಗಿ ಗೂಗಲಿಸುತ್ತಿದ್ದಾರೆ. ಅಕ್ಕ ಪಕ್ಕದ ಮನೆಯವರ ಜತೆ ಕಾಫಿ ಪುಡಿ ಸಕ್ಕರೆ ಸಾಲ ಪಡೆದುಕೊಳ್ಳುವ ಗೃಹಿಣಿಯರು, ದಿನದಿಂದ ದಿನಕ್ಕೆ ಏರುತ್ತಿರುವ ಈರುಳ್ಳಿ ಬೆಲೆ ಕಂಡು ತಾವು ಜಾಸ್ತಿ ಬೆಲೆ ಕೊಟ್ಟು ಸಾಲ ಮರಳಿಸಬೇಕಾಗುತ್ತದೆ ಎಂಬ ಭಯದಿಂದ ಈರುಳ್ಳಿ ಸಾಲ ಮಾತ್ರ ಕೇಳುತ್ತಿಲ್ಲ! 

ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆಯಾದರೂ ರೈತರಿಗೆ ಮಾತ್ರಯಾವ ಲಾಭವೂ ಸಿಗುತ್ತಿಲ್ಲ. ಅಷ್ಟೇ ಅಲ್ಲ ಅವರು ಕಷ್ಟ ಪಟ್ಟು ಬೆಳೆಸಿದ ಈರುಳ್ಳಿಯನ್ನೂ ಕಳ್ಳರು ಗದ್ದೆಯಿಂದಲೇ ಕಳವು ಮಾಡಿ ರೈತರ ನಿದ್ದೆ ಕೆಡಿಸುತ್ತಿದ್ದಾರೆ. ಈರುಳ್ಳಿ ಬೆಳೆಯುವ ರೈತರಿಗೆ ಹಾಗೂ ಅವರ ಗದ್ದೆಗಳಿಗೆ ಪೊಲೀಸ್ ಭದ್ರತೆ ನೀಡುವ ಪರಿಸ್ಥಿತಿ ಬಂದಿದೆ!

ನಾನಂತೂ ಈರುಳ್ಳಿ ಜೊತೆ ಠೂ ಬಿಟ್ಟಿದ್ದೇನೆ. ಈರುಳ್ಳಿ ಸೋತು ಶರಣಾಗುವವರೆಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂದು ಶಪಥ ಮಾಡಿದ್ದೇನೆ. ಆದರೆ ಇವರ ಮನೆಯಲ್ಲಿ ಈರುಳ್ಳಿ ಇಲ್ಲ ಅಂತ ಮೂಗು ಮುರಿಯುವವರಿಗೆ ಉತ್ತರ ಕೊಡಲು ಮನೆಯಲ್ಲಿ  2 ಈರುಳ್ಳಿಗಳನ್ನು ದಾಸ್ತಾನು ಇಟ್ಟುಕೊಂಡಿದ್ದೇನೆ! ನಮ್ಮ  ಪಕ್ಕದ ಮನೆಯವರ ಪರಿಸ್ಥಿತಿಯಂತೂ ಹೇಳಲಾಗದು. ಎಲ್ಲದಕ್ಕೂ ಈರುಳ್ಳಿ ಬೆರೆಸುವ ಇವರ ಮನೆಯಲ್ಲಿ ಈರುಳ್ಳಿ ಯಾವಾಗಲೂ ಕೇಜಿಗಟ್ಟಲೆ ದಾಸ್ತಾನು ಇರುತ್ತಿತ್ತು. ಈಗ ಬೆರಳೆಣಿಕೆಯಷ್ಟು ಮಾತ್ರ ಇದೆ ಎಂದು ಪಾಪ ನೋವಿನಲ್ಲಿ ಹೇಳುತ್ತಾರೆ. ಜೊತೆಗೆ ಮಾಂಸಾಹಾರ ಕಡಿಮೆ ಮಾಡಿದ್ದಾರೆ. ಮೊದಲೆಲ್ಲ ಯಾವಾಗಲೂ ಅವರ ಮನೆಯಿಂದ ಮಾಂಸಾಹಾರದ ಅಡಿಗೆಯ ಪರಿಮಳವೇ ಬರುತ್ತಿತ್ತು. ಈಗ ಯಾವ ಪರಿಮಳವೂ ಇಲ್ಲ! ಸಧ್ಯಕ್ಕಂತೂ ಈರುಳ್ಳಿ ಪ್ರಿಯರಲ್ಲದವರು ಮಾತ್ರ ಪರಮ ಸುಖಿಗಳು!!

 

ಮಂಗಾಯಣ

ಮೊದಲ ಬಾರಿಗೆ ನಮ್ಮ ಮನೆಯ ಹಿಂದುಗಡೆ ಮಂಗವೊಂದು ಬಂದಾಗ ಅದನ್ನು ಕಂಡು ನನಗೆ ಸಂತಸವಾಯಿತು. ಮಂಗ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಅದರ ಚೇಷ್ಟೆ, ತುಂಟಾಟ, ಒಂದು ಘಳಿಗೆ ಸುಮ್ಮನೆ ಕೂರದೆ ಸದಾ ಚಟುವಟಿಕೆಯಿಂದ ಇರುವುದು ಕಂಡರೆ ಖುಷಿಯಾಗುತ್ತದೆ. ನಾನು ಚಿಕ್ಕವಳಿದ್ದಾಗ ಊರಿನಲ್ಲಿ ಡೊಂಬರಾಟ ಬಂದರೆ ಮಂಗ ಆಡುವ ಆಟಗಳನ್ನು ಆಸಕ್ತಿಯಿಂದ ನೋಡುತ್ತಿದ್ದೆ. ಅದು ತನ್ನ ಯಜಮಾನ ಕೇಳಿದ್ದನ್ನೆಲ್ಲ ತಂದುಕೊಡುವುದು, ಜನರ ಬಳಿ ದುಡ್ಡು ಕೇಳಲು ಬರುವುದು ಕಂಡು ನಾನು ದೊಡ್ಡವಳಾದ ಮೇಲೆ ಒಂದು ಮಂಗವನ್ನು ಸಾಕಿ ಅದಕ್ಕೆ ಮನೆ ಕೆಲಸ ಮಾಡಲು ತರಬೇತಿ ಕೊಟ್ಟು ಅದರಿಂದ ಕೆಲಸ ಮಾಡಿಸುವ ಕನಸು ಕಂಡಿದ್ದೆ ! ಆಮೇಲೆ ಮಾತ್ರ ಅದನ್ನು ನನಸಾಗಿಸುವ ಗೋಜಿಗೇ ಹೋಗಲಿಲ್ಲ ಕಾರಣ ಗಂಡನ ಮನೆಯವರಿಗೆ ನಾಯಿ ಕಂಡರೆನೆ ಆಗುವುದಿಲ್ಲ. ಇನ್ನು ಮಂಗ ಸಾಕುತ್ತೇನೆ ಎಂದರೆ ಬಿಡುತ್ತಾರೆಯೇ.

ಈ ಮಂಗ ಆಗಾಗ ಬಂದು ಅಕ್ಕಪಕ್ಕದವರು ಎಸೆದ ಕಸದಲ್ಲಿ ಏನಾದರೂ ತಿನ್ನಲು ಸಿಗುವುದೋ ಎಂದು ನೋಡುತ್ತಿತ್ತು. ಒಮ್ಮೆಯಂತೂ ಪ್ಲಾಸ್ಟಿಕ್ ಕವರ್ ನಲ್ಲಿ ತಲೆ ಹಾಕಿ ಮತ್ತೆ ತೆಗೆಯಲು ಆಗದೆ  ಹಾಗೆಯೇ ಅತ್ತಿಂದಿತ್ತ ಓಡಾಡಿದಾಗ ನಮಗೆ ನಗುವೋ ನಗು. ಕೊನೆಗೂ ಅದು ಹೇಗೋ ಬಿಡಿಸಿಕೊಂಡಿತು ಅನ್ನಿ. ಒಮ್ಮೆ ನಾನು ಮಾರ್ಕೆಟ್ ಗೆ ಹೋಗಿ ವಾಪಾಸು ಬಂದಾಗ ಮಂಗ ಪಕ್ಕದ ಮನೆಯವರು ಕೆಲ ದಿನಗಳ ಹಿಂದೆ ಎಸೆದ ಅನ್ನ ತಿನ್ನುತ್ತಿತ್ತು. ಅದು ಅಕ್ಕಿಯಂತೆ ಗಟ್ಟಿಯಾಗಿ ಒಣಗಿ ಹೋಗಿದ್ದರೂ ಅದನ್ನು ಕೆರೆಕೆರೆದು ತಿನ್ನುವಾಗ ನನ್ನಲ್ಲಿ ಅನುಕಂಪದ ಮಹಾಪೂರ ಉಕ್ಕಿ ಹರಿದು ಆಗ ತಾನೇ ಖರೀದಿಸಿದ ಬಾಳೆಹಣ್ಣಿನ ಚಿಪ್ಪಿನಿಂದ ಒಂದು ಬಾಳೆಹಣ್ಣು ತೆಗೆದು ಕೊಟ್ಟೆ. ಅದು ಸಂತಸದಿಂದ ದೂರ ಹೋಗಿ ಕುಳಿತು ಬಾಳೆಹಣ್ಣು ತಿನ್ನತೊಡಗಿತು.

ನಾನು ತೃಪ್ತಿಯಿಂದ ಮಾರ್ಕೆಟಿನಿಂದ ತಂದ ಸಾಮಾನುಗಳನ್ನು ತೆಗೆದಿರಿಸುವುದರಲ್ಲೇ ಮಗ್ನಳಾಗಿ ಬಿಟ್ಟೆ. ಅಷ್ಟರಲ್ಲಿ ಏನೋ ಸದ್ದು ಕೇಳಿಸಿ ಕಿಟಕಿಯ ಬಳಿ ಬಂದು ನಿಂತು ನೋಡಿದರೆ ಅಲ್ಲಿ ಮಂಗಗಳ ದೊಡ್ಡ ಗುಂಪೇ ನಿಂತಿತ್ತು. ನನ್ನನ್ನೇ ನೋಡುತ್ತಾ ಬುರ್ ಬುರ್ ಎಂದಾಗ ನಾನು ಮೊದಲು ಬಂದ ಮಂಗಕ್ಕೆ ಬಾಳೆಹಣ್ಣು ಕೊಟ್ಟಿದ್ದು ಇವಕ್ಕೆಲ್ಲ ಗೊತ್ತಾಗಿ ಬಂದಿರಬೇಕು. ಈಗ ನಾನು ಕೊಡದೆ ಹೋದರೆ ಏನೆಲ್ಲ ದಾಂಧಲೆ ಮಾಡುತ್ತವೆಯೋ ಎಂದು ಭಯವಾಗಿ ಎಲ್ಲ ಬಾಳೆಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ ಎಲ್ಲ ಮಂಗಗಳಿಗೆ ಕೊಟ್ಟೆ. ಅವು ಸಂತಸದಿಂದ ತಿಂದು ಹೋದವು. ಒಂದು ಮರಿಯಂತೂ ಬಾಳೆಹಣ್ಣಿನ ಸಿಪ್ಪೆಯನ್ನು ನೆಕ್ಕುತ್ತಿತ್ತು. ಅದು ಅಷ್ಟಕ್ಕೇ ಮುಗಿಯಲಿಲ್ಲ.

ಮರುದಿನ ಮತ್ತೆ ಅವುಗಳ ಹಿಂಡು ನಮ್ಮ ಮನೆಯತ್ತ ಬಂದಾಗ ನಮ್ಮ ಪಕ್ಕದ ಮನೆಯವರು ಓಡಿಸಿ, ಅವಕ್ಕೆ ತಿಂಡಿ ಕೊಟ್ಟರೆ ದಿನವೂ ಬರುತ್ತವೆ ತಿಂಡಿ ಕೊಡಬೇಡಿ ಅಂದರು. ಅಂದಿನಿಂದ ನಾನು ಯಾವತ್ತೂ ಮಂಗ ಬಂದರೆ ತಿಂಡಿ ಕೊಡಲೇ ಇಲ್ಲ ಎಷ್ಟೋ ಬಾರಿ ಪಾಪ ಏನಾದರೂ ಕೊಡೋಣ ಎಂದು ಅನಿಸುತ್ತಿತ್ತು. ಆದರೆ ಅವೆಲ್ಲ ದಿನವೂ ಬಂದರೆ ಏನು ಮಾಡುವುದು. ಮಂಗಗಳು ಕ್ರಮೇಣ ಬರುವುದನ್ನು ನಿಲ್ಲಿಸಿದವು. ಅಪರೂಪಕ್ಕೆಲ್ಲಾದರೂ ಬರುತ್ತವೆ. ತಿನ್ನಲು ಸಿಕ್ಕರೆ ತಿಂದು ತಮ್ಮ ಪಾಡಿಗೆ ತಾವು ಹೋಗುತ್ತವೆ. ಯಾರಿಗೂ ಯಾವುದೇ ತೊಂದರೆ ಕೊಡದೆ ಬಹಳ ಶಿಸ್ತಿನಿಂದ ಸಾಲಾಗಿ ಬಂದು ಹಾಗೆ ಹೋಗುತ್ತವೆ. ಪಕ್ಕದ ಕಾಡಿನಲ್ಲಿ ಅವುಗಳ ಜಗಳ, ಕಿತ್ತಾಟ, ಚೀರಾಟವೆಲ್ಲ ಕೇಳಿಸುತ್ತಿದ್ದರೂ ನಮ್ಮ ಮನೆಯ ಬಳಿ ಬಂದಾಗ ಬಹಳ ಶಿಸ್ತಿನಿಂದ ವರ್ತಿಸುತ್ತಿದ್ದವು.

ಮೊನ್ನೆ ಮಾತ್ರ ದೊಡ್ಡ ಮಂಗವೊಂದು ಬಂದು ನಾನು ತೆರೆದಿಟ್ಟ ಕಿಟಕಿಯನ್ನು ಹತ್ತಿ ಕುಳಿತು ತನ್ನ ಮುಖವನ್ನು ಕಿಟಕಿಯ ಒಳಗೆ ತೂರಿಸಿಕೊಂಡು ಒಂದು ಕೈಯನ್ನು ಒಳಗೆ ಚಾಚಿ ಬುರ್ ಎಂದಾಗ  ನನಗೆ ಅದು ಎಲ್ಲಿ ಒಳಗೆ ನುಗ್ಗಿ  ಬಿಡುತ್ತದೋ ಎಂದು ಭಯವಾಗಿ  ಹಶ್ ಎನ್ನುತ್ತಾ ಓಡಿಸಿದೆ. ಅದು ಸುಮ್ಮನೆ ಕೆಳಗಿಳಿದು ಹೋಯಿತು. ಅವತ್ತು ರಾತ್ರಿ ನಾನು, ಇಲ್ಲಿನ ಮಂಗಗಳು ಅದೆಷ್ಟು ಒಳ್ಳೆಯವು. ಯಾವುದೇ ತುಂಟಾಟ, ಚೇಷ್ಟೆಗಳಿಲ್ಲ, ನಮಗೂ ತೊಂದರೆ ಕೊಡುವುದಿಲ್ಲ. ತಮ್ಮ ಪಾಡಿಗೆ ತಾವಿರುತ್ತವೆ. ಆದರೆ  ಟೀವಿಯಲ್ಲಿ ಕಂಡ ಉತ್ತರ ಭಾರತದ ಕಡೆ ಮಂಗಗಳು ಅಲ್ಲಿನ ಜನರಿಗೆ ಅದೆಷ್ಟು  ಉಪಟಳವನ್ನು ಕೊಡುತ್ತವೆ.

ಅಲ್ಲಿಯಂತೂ ಮಂಗಗಳ ಕಾಟ ತಡೆಯಲಾಗದು. ಐಸ್ಕ್ರೀಮ್ ಮಾರುವವ ಸ್ವಲ್ಪ ಅತ್ತ ಕಡೆ ಹೋದರೂ ಸಾಕು ಅವನ ಐಸ್ ಕ್ರೀಮ್ ಇರುವ ಪೆಟ್ಟಿಗೆಯ ಮುಚ್ಚಳ ತೆರೆದು ಐಸ್ ಕ್ರೀಮ್ ಎಲ್ಲ ಖಾಲಿ ಮಾಡಿ ಬಿಡುತ್ತವೆ. ಅವಕ್ಕೆ ಅದನ್ನು ಹೇಗೆ ತಿನ್ನುವುದು ಎಂದು ಚೆನ್ನಾಗಿ ಗೊತ್ತು. ಹಾಲಿನ ಪ್ಯಾಕೆಟ್ ಕೂಡ, ಅಂಗಡಿಯವ ಇತರ ಗ್ರಾಹಕರ ಜೊತೆ ಮಗ್ನರಾಗಿರುವಾಗ ಒಂದೊಂದಾಗಿ ಬಂದು ಕೆಳಗಿಳಿದು ಪ್ಯಾಕೆಟ್ ಎತ್ತಿಕೊಂಡು ಹೋಗಿ ಬಾಯಿಂದ ಕಚ್ಚಿ ಪ್ಯಾಕೆಟ್ ತೆರೆದು ಹಾಲು ಕುಡಿಯುತ್ತವೆ. ಜನರ ಕೈಯಿಂದ ತರಕಾರಿ ಚೀಲವನ್ನೇ ಕಸಿದು ಓಡುವ ಮಂಗಗಳಿಗೆ ಹೋಲಿಸಿದರೆ ಇಲ್ಲಿನ ಮಂಗಗಳು ಅದೆಷ್ಟು ಒಳ್ಳೆಯವು ಬಹುಶ ನಮ್ಮ ಕಡೆಯ ವಾತಾವರಣದ ಪ್ರಭಾವ ಇರಬೇಕು. ಈ ಬಗ್ಗೆ ಒಂದು ಲೇಖನ ಬರೆಯಬೇಕು ಎಂದುಕೊಳ್ಳುತ್ತ ನಿದ್ದೆ ಹೋದೆ.

ಮರುದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಅಡಿಗೆ ಮನೆಯಲ್ಲೇನೋ ಶಬ್ದವಾದಂತಾಗಿ ಹೋಗಿ ನೋಡಿದೆ. ಆದರೆ ಅಲ್ಲಿ ಎಲ್ಲವೂ ಯಥಾಸ್ಥಿತಿಯಲ್ಲಿತ್ತು. ನನಗೆ ಅನುಮಾನವಾಗಿ ಪ್ರತಿಯೊಂದು ರೂಮನ್ನು ಅದರ ಕಿಟಕಿಗಳನ್ನು ಪರಿಶೀಲಿಸಿದೆ, ಏನೂ ಕಾಣಲಿಲ್ಲ, ಬಳಿಕ ನಾನು ಹಿಂದುಗಡೆ ಒಗೆದು ಒಣಗಿಸಲು ಹಾಕಿದ ಬಟ್ಟೆಗಳಿದ್ದ ಕಡೆ ಹೋದಾಗ ನನಗೆ ದಿಗ್ಭ್ರಾಂತವಾಯಿತು. ಕೆಲ ಪುಟ್ಟ ಮಂಗಗಳು ನಾನು ಒಣಗಲು ಹಾಕಿದ ಬಟ್ಟೆಗಳ ಮೇಲೆಲ್ಲ ಹಾರುತ್ತ ಕುಣಿಯುತ್ತ ಅತ್ತಿಂದಿತ್ತ ಓಡಾಡುತ್ತಿದ್ದವು. ಕೆಲವು ದೊಡ್ಡ ಮಂಗಗಳೂ ಅವುಗಳೊಂದಿಗೆ ಆಟವಾಡುತ್ತಿದ್ದವು. ಒಣ ಹಾಕಿದ ಬಟ್ಟೆಗಳು ಜೋಲುಮೋರೆ ಹಾಕಿಕೊಂಡು ಅಸಹಾಯಕರಾಗಿ ನೇತಾಡತೊಡಗಿದವು. ಅದನ್ನು ಕಂಡು ನನಗೆ ತುಂಬಾ ಸಿಟ್ಟು ಬಂದಿತು. ಕೊನೆಗೂ ನಿಮ್ಮ ಮಂಗ ಬುದ್ಧಿ ತೋರಿಸಿಯೇ ಬಿಟ್ಟಿರಲ್ಲ ಎಂದು ಅಸಮಾಧಾನವೂ ಆಯಿತು.

ಮೊದಲೇ ಮಳೆಗಾಲವಾದ್ದರಿಂದ ಬಟ್ಟೆಗಳು ಬೇಗನೆ ಒಣಗುವುದಿಲ್ಲ, ಅಂಥಾದ್ದರಲ್ಲಿ ಒಣಗಿದ್ದ ಬಟ್ಟೆಗಳ ಮೇಲೆ ಮಂಗಗಳ ಚೆಲ್ಲಾಟ ಕಂಡು ಇನ್ನು ಅದನ್ನೆಲ್ಲ ಮತ್ತೆ ಒಗೆಯಬೇಕಲ್ಲ ಎಂದುಕೊಂಡು ಸಿಟ್ಟು ಬಂದು ಒಂದು ಕೋಲು ಹಿಡಿದುಕೊಂಡು ಅವುಗಳನ್ನು ಓಡಿಸಲು ಹೋದೆ. ಅವುಗಳು ಕ್ಯಾರೆ ಮಾಡಲ್ಲಿಲ್ಲ!  ಬಟ್ಟೆಗಳ ಮೇಲಿನ ಓಡಾಟ ನಿಲ್ಲಿಸಲೂ ಇಲ್ಲ!. ಅಲ್ಲಿ  ಯಾವಾಗಲೂ ಬರುತ್ತಿದ್ದ ಆ ದೊಡ್ಡ ಮಂಗವೂ ಇದ್ದಿತು. ಆದರೆ ಅದು ಮಾತ್ರ  ಇವುಗಳ ತುಂಟಾಟಗಳ ಪರಿವೆಯೇ ಇಲ್ಲದಂತೆ ದಂಡೆಯ ಮೇಲೆ  ಗೋಡೆಗೆ ಆತುಕೊಂಡು ಕುಳಿತು ಭೋರೆಂದು ಸುರಿಯುತ್ತಿದ್ದ ಮಳೆಯನ್ನು  ದಿಟ್ಟಿಸುತ್ತಿತ್ತು. ನಾನು ಕೋಲನ್ನು ಗೋಡೆಗೆ ಬಡಿದು ಶಬ್ದ ಮಾಡಿದೆ. ಆ ದೊಡ್ಡ ಮಂಗ ನನ್ನತ್ತ ತಿರುಗಿ ನೋಡಿ ಗುರ್ ಎನ್ನುತ್ತಾ ಹಲ್ಲು ಕಿರಿಯಿತು. ಅದನ್ನು ಕಂಡು ಆ ಮಂಗಗಳೆಲ್ಲ ಸೇರಿ ನನ್ನ ಮೇಲೆ ಆಕ್ರಮಣ ಮಾಡಿದರೆ ನಾನೊಬ್ಬಳೆ ಏನು ಮಾಡಲಿ ಎಂದು ಭಯವಾದರೂ ಬಟ್ಟೆಗಳನ್ನು ಕಾಪಾಡುವ ಸಲುವಾಗಿ ಅವುಗಳೊಂದಿಗೆ ಹೋರಾಡಲು ಸಿದ್ಧವಾದೆ. 

ಕೋಲು ತೆಗೆದುಕೊಂಡು ಅವುಗಳತ್ತ ಬೀಸಿದೆ. ಅವುಗಳೆಲ್ಲ ಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದರೂ ಆ ಮಂಗ ಮಾತ್ರ ಕದಲದೆ, ನನ್ನನ್ನು ನೀನು ಅಲುಗಾಡಿಸಲೂ ಸಾಧ್ಯವಿಲ್ಲ ಎನ್ನುವಂತೆ ನನ್ನತ್ತ ನೋಡುತ್ತಾ ನನ್ನ ಮುಂದಿನ ನಡೆಗಾಗಿ ಸಿದ್ಧವಾಯಿತು. ಅದನ್ನು ಕಂಡು  ಭಯವಾಗಿ  ನಾನು ಬೇಗನೆ ಎಲ್ಲ ಬಟ್ಟೆಗಳನ್ನು ತೆಗೆದುಕೊಂಡು ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಅಬ್ಬಾ ಬಚಾವಾದೆ ಎಂದು ನಿಟ್ಟುಸಿರು ಬಿಟ್ಟೆ. ನಂತರ  ಕಿಟಕಿಯಿಂದ ನೋಡಿದಾಗ ಆ ಮಂಗ ನಿಧಾನವಾಗಿ ಕೆಳಗಿಳಿದು ಹೋಗುವುದು ಕಂಡಿತು.

ನಾನು ಬಟ್ಟೆಗಳನ್ನು ಮತ್ತೆ ಒಗೆಯಲು ಆರಂಭಿಸಿದೆ. ಅಷ್ಟರಲ್ಲಿ ಏನೋ ಸದ್ದಾಯಿತು, ನಾನು ಏನೆಂದು ನೋಡಲು ಧಾವಿಸಿದೆ. ಮರಿ ಮಂಗವೊಂದು ರೂಮಿನ ಕಿಟಕಿಯ ಬಾಗಿಲು ಸರಿಯಲು ಯತ್ನಿಸುತ್ತಿತ್ತು ! ಅದಕ್ಕೆ ಬಾಗಿಲು ಸರಿಸಲೂ ಗೊತ್ತಿದೆ ! ನಾನು ಮತ್ತೆ ಕೋಲು ಹಿಡಿದುಕೊಂಡು ಧಾವಿಸಿದೆ. ಅದು ಸರ್ರನೆ ಕೆಳಗಿಳಿದು ಹೋಯಿತು. ಹಾಲ್ ನಲ್ಲಿ ಉದ್ದನೆಯ ಕಿಟಕಿಗೆ ಗಾಜಿನ ಬಾಗಿಲು ಹಾಕಿತ್ತು. ಆದರೆ ಮಂಗಗಳಿಗೆ ಅದು ತೆರೆದಿರಬೇಕು ಎಂದು ಅನಿಸಿ ಸಂತಸದಿಂದ ಧಾವಿಸಿ ಬಂದು  ಡಿಕ್ಕಿ ಹೊಡೆದವು. ನನಗೆ ಅವುಗಳ ಪೆದ್ದುತನಕ್ಕೆ ನಗು ಬಂದರೂ ತಡೆದುಕೊಂಡೆ. ಕಾರಣ ನನಗೆ ನೆನಪಾದ ಒಂದು ಘಟನೆ.

 ಅದು ನೆದರ್ಲ್ಯಾಂಡ್ ದೇಶದಲ್ಲಿ ನಡೆದಿದ್ದು. ಒಬ್ಬ ವಯಸ್ಸಾದ ಮಹಿಳೆ ಆಗಾಗ್ಗೆ ಅಲ್ಲಿನ ಮೃಗಾಲಯಕ್ಕೆ ಬೇಟಿ ನೀಡುತ್ತಿದ್ದಳು. ಅಲ್ಲಿನ ಬೋಕಿಟೋ ಎನ್ನುವ ಹೆಸರಿನ ಗೊರಿಲ್ಲಾ ಅವಳನ್ನು ಬಹುವಾಗಿ ಆಕರ್ಷಿಸಿತು. ಕಾರಣ ಅದು ಅವಳನ್ನು ಕಂಡಾಗೆಲ್ಲ ಹಲ್ಲು ಕಿರಿಯುತ್ತಿತ್ತು. ಅದು ತನ್ನನ್ನು ಕಂಡು ನಗುತ್ತಿದೆ ಎಂದು ಭಾವಿಸಿದ ಮಹಿಳೆ ತಾನೂ ಹಲ್ಲು ಕಿರಿದಳು. ಅಂದಿನಿಂದ ದಿನವೂ ಮಹಿಳೆ  ಹೆಚ್ಚಾಗಿ ಆ ಗೊರಿಲ್ಲದ ಮುಂದೆ ಕುರ್ಚಿ ಹಾಕಿಕೊಂಡು ಕುಳಿತು ಹಲ್ಲು ಕಿರಿಯುತ್ತಿದ್ದಳು. ಅದಕ್ಕೆ ಪ್ರತಿಯಾಗಿ ಆ ಗೊರಿಲ್ಲಾ ಕೂಡ ಅವಳನ್ನು ಕಂಡು ಹಲ್ಲು ಕಿರಿಯತೊಡಗಿತು.  ತನಗೂ ಆ ಗೊರಿಲ್ಲಾಗೂ ಯಾವುದೋ ಜನ್ಮದ ನಂಟು ಇರಬೇಕು ಎಂದು ಭಾವಿಸಿ ಆ ಮಹಿಳೆ ಸಂತಸ ಪಟ್ಟಳು.

ಆದರೆ ಒಂದು ದಿನ  ಆ ಗೊರಿಲ್ಲಾ ತನ್ನ ಗೂಡಿನಿಂದ ಹೇಗೋ ತಪ್ಪಿಸಿಕೊಂಡು ಬಂದು ಆ ಮಹಿಳೆಯ ಮೇಲೆ ಆಕ್ರಮಣ ಮಾಡಿತು. ಆಮೇಲೆ ಅವಳಿಗೆ ತಿಳಿಯಿತು, ಅದು ಅವಳನ್ನು ಕಂಡು ನಗುತ್ತಿರಲಿಲ್ಲ ಅದರ ಬದಲಾಗಿ ಸಿಟ್ಟಿನಿಂದ ತನ್ನ ಚೂಪಾದ ಹಲ್ಲುಗಳನ್ನು ತೋರಿಸಿ ಅವಳನ್ನು ಹೆದರಿಸಲು ಯತ್ನಿಸುತ್ತಿತ್ತು ಎಂದು. ಅವಳ ನಗೆ ಅದಕ್ಕೆ ಪ್ರತಿಸ್ಪರ್ಧಿಯಂತೆ ಕಂಡು ಮತ್ತಷ್ಟು ಸಿಟ್ಟಿಗೆಬ್ಬಿಸುತ್ತಿತ್ತು. ಕೊನೆಗೆ ಸಿಟ್ಟು ತಡೆಯಲಾಗದೆ ಒಂದು ದಿನ ಆಕ್ರಮಣ ಮಾಡಿಯೇ ಬಿಟ್ಟಿತು. ನಾನು ನಕ್ಕರೆ ನನಗೂ ಅಂಥದೇ ಗತಿಯಾದೀತು ಎಂದು ಭಯವಾಯಿತು.

ಹಾಗೂ ಹೀಗೂ ಮಂಗಗಳನ್ನು ಓಡಿಸಿ ಒಗೆದ ಬಟ್ಟೆಗಳನ್ನು ಎಲ್ಲಿ ಒಣಗಿಸಲಿ ಎಂದು ಯೋಚಿಸುತ್ತ ಕುಳಿತೆ. ಮಂಗಗಳು ಎಲ್ಲಿದ್ದರೂ ಮಂಗಗಳೇ, ಅವುಗಳ ಮೇಲಿದ್ದ ನನ್ನ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲೆಂದೇ ಅವುಗಳೆಲ್ಲ ಈ ರೀತಿ ವರ್ತಿಸಿರಬಹುದೇ ಎಂದು ನಂಗೆ ಅನುಮಾನವಾಯಿತು. ಎರಡು ವರುಷಗಳಿಂದಲೂ ಒಳ್ಳೆಯವರಾಗೇ ವರ್ತಿಸುತ್ತಿದ್ದ ಮಂಗಗಳು ಇದ್ದಕ್ಕಿದ್ದಂತೆ ಈ ರೀತಿ ತೊಂದರೆ ಕೊಡಲು ಕಾರಣವೇನು. ಮೊನ್ನೆ ರಾತ್ರಿ ನಾನು ಅವುಗಳ ಬಗ್ಗೆ ಯೋಚಿಸಿದ್ದು ಅವುಗಳಿಗೆ ತಿಳಿಯಿತೇ?!

ಅತ್ತಿಗೆಯೂ, ಜಿರಲೆಯೂ

ಒಳ್ಳೆಯ ಸಿಹಿ ನಿದ್ದೆಯಲ್ಲಿದ್ದ ನನಗೆ ಮೈಮೇಲೆ ಏನೋ ಹರಿದಾಡಿದಂತಾಗಿ ಎಚ್ಚರವಾಯಿತು. ಗಾಬರಿಯಾಗಿ  ಮೈಯನ್ನು ಜೋರಾಗಿ ಕೊಡವಿಕೊಂಡು ಧಡಕ್ಕನೆದ್ದು ಲೈಟು ಹಾಕಿದೆ. ಲೈಟು ಬೆಳಕಿಗೆ ಪಕ್ಕದಲ್ಲೇ ಮಲಗಿದ್ದ ಅತ್ತಿಗೆಗೆ ಎಚ್ಚರವಾಯಿತು. ಏನಾಯಿತಮ್ಮ ಎನ್ನುತ್ತಾ ನಿದ್ದೆಯ ಅಮಲಿನಿಂದ ಕಣ್ಣುಗಳನ್ನು ತೆರೆಯಲು ಆಗದೆ ಕಣ್ಣು ಮುಚ್ಚಿಕೊಂಡೇ ಕೇಳಿದರು. ನನಗೆ ಅವರ ಅವಸ್ಥೆ ಕಂಡು ನಗು ಬಂದರೂ, ಪಾಪ ಇಡೀ ದಿನ ಮನೆ ಕೆಲಸ, ಅದೂ ಇದೂ ಅಂತ ಒಂದು ಘಳಿಗೆಯೂ ಸುಮ್ಮನೆ ಕೂರದ ಜೀವಕ್ಕೆ ಅಷ್ಟೇ ನಿದ್ದೆ ಬೇಕಲ್ಲವೇ ಎಂದುಕೊಳ್ಳುತ್ತ ಅತ್ತಿಗೆ, ನೀವು ಮಲಗಿಕೊಳ್ಳಿ, ಒಂದೇ ನಿಮಿಷ ಲೈಟು ಆಫ್ ಮಾಡಿಬಿಡುತ್ತೇನೆ ಎನ್ನುತ್ತಾ ನನ್ನ ಕಣ್ಣುಗಳನ್ನು ಸುತ್ತಲೂ ಹರಿದಾಡಿಸಿದೆ.

ನೆಲದ ಮೇಲೆ ಪ್ರಾಣಭಯದಿಂದ ಓಡುತ್ತಿದ್ದ ಜಿರಲೆ ಕಂಡು, ಅಯ್ಯೋ ದೇವರೇ ಎಂದು ಕಿರುಚುತ್ತ ಮಂಚದ ಮೇಲೆ ಹಾರಿದೆ. ಪಾಪ ಅತ್ತಿಗೆ ಬೆಚ್ಚಿಬಿದ್ದು, ಏನಾಯಿತೇ ಸುಮಾ ಯಾಕೆ ಹಂಗೆ ಕಿರುಚ್ದೆ ಎನ್ನುತ್ತಾ ಏಳಲಾಗದೆ ಕಣ್ಣು ಬಿಡಲಾಗದೆ ಪಡಿಪಾಟಲು ಪಡುವುದನ್ನು ಕಂಡು, ಜಿರಲೆ ಅತ್ತಿಗೆ ಎಂದೇ ಅಷ್ಟೇ! ಅವರ ನಿದ್ದೆ ಮಾರುದ್ದ ದೂರ ಹಾರಿ ಹೋಯಿತು. ಅದುವರೆಗೂ ಕಣ್ಣು ತೆರೆಯಲು ಕಷ್ಟ ಆಡುತ್ತಿದ್ದ ಅತ್ತಿಗೆ ಕಣ್ಣುಗಳನ್ನು ದೊಡ್ಡದಾಗಿ ಅರಳಿಸುತ್ತಾ, ಏನು ಜಿರಲೆನಾ, ಅಯ್ಯೋ ದೇವರೇ ಏನು ಮಾಡ್ಲೀಪಾ, ಇವುಗಳ ಕಾಟ ತಡೆಯೋಕೆ ಆಗ್ತಿಲ್ಲ. ಫ್ಲಾಟ್ ನಲ್ಲಿದ್ದ್ರೆ ಇದೆ ಖರ್ಮ, ಬೇರೆಯವರ ಮನೆ ಜಿರಲೆ ನಮ್ಮ ಮನೆ ಸೇರುತ್ವೆ. ಅವುಗಳನ್ನು  ಸಾಯಿಸೋಕೆ ಅಂತ ಔಷಧಿ  ತಂದರೆ ಒಂದೇ ವಾರದಲ್ಲಿ ಖಾಲಿಯಾದರೂ ಜಿರಲೆ ಮಾತ್ರ ರಕ್ತ ಬೀಜಾಸುರನಂತೆ ದಿನೇದಿನೇ ಜಾಸ್ತಿಯಾಗ್ತಾನೇ ಇದೆ. ನನ್ನ ಎರಡು ಒಳ್ಳೆ ಸೀರೆನಾ ತಿನ್ಧಾಕಿವೆ, ಇವರ್ದು ಅದೇನೋ ಕೇಬಲ್ ತಿಂದು ಹಾಕಿದೆ ಅಂತಿದ್ರು ಎನ್ನುತ್ತಾ ಅತ್ತಿಗೆ ಪಟ್ಟಿ ಮಾಡುತ್ತಲೇ  ಓಡಿ ಹೋಗಿ ಚಪ್ಪಲಿ ತಂದು ಜಿರಲೆಗೆ ರಪ್ಪನೆ ಬಡಿದರು. ಒಂದೇ ಏಟಿಗೆ ಜಿರಲೆ ಗೊಟಕ್ !

 ನಾನು ಜೋರಾಗಿ ಆಕಳಿಸುತ್ತಾ, ಅಷ್ಟೇ ಅಲ್ಲ ಅತ್ತಿಗೆ, ಮೊನ್ನೆ ಅದ್ಯಾವುದೋ ಪೇಪರ್ ನಲ್ಲಿ ಓದ್ದೆ.  ಚೀನಾದಲ್ಲಿ ಒಬ್ಬನ ಕಿವಿಯಿಂದ ಡಾಕ್ರು ಬರೋಬ್ಬರಿ 26 ಜಿರಳೆಗಳನ್ನು ತೆಗೆದ್ರಂತೆ ಅಂದಾಗ ಅತ್ತಿಗೆ ನಗೆಯಾಡುತ್ತ, ಚೀನಾದಲ್ಲಿ ಜನಸಂಖ್ಯೆ ಜಾಸ್ತಿ ಅಲ್ವೇ ಅದಕ್ಕೆ ಪಾಪ, ಜಾಗ ಇಲ್ಲದೆ ಮನುಷ್ಯರ ಕಿವಿಯೊಳಗೆ ಮನೆ ಮಾಡಿಕೊಂಡಿರಬೇಕು ಎನ್ನುತ್ತಾ ಹೊದಿಕೆಯನ್ನು ಸರಿ ಮಾಡಿಕೊಳ್ಳುತ್ತ ಮಂಚದ ಮೇಲೆ ಪವಡಿಸಿದರು. ನಾನು ಅತ್ತಿಗೆ, ಕಾಟನ್ ಎಲ್ಲಿದೆ ಎಂದು ಕೇಳಿದೆ. ಇಷ್ಟೊತ್ತಲ್ಲಿ ಕಾಟನ್ ಯಾಕೆ ನಿಂಗೆ, ನಾಳೆ ಬೆಳಿಗ್ಗೆ ಕೊಡ್ತೀನಿ, ಇವಾಗ ಮಲಕ್ಕೋ ಎನ್ನುತ್ತಾ ಕಣ್ಣು ಮುಚ್ಚಿಕೊಂಡರು.

ನಾನು, ನೀವು ಎಲ್ಲಿದೆ ಅಂತ ಹೇಳಿ ನಾನೇ ತೊಗೋತೀನಿ ಅಂದಾಗ ಅವರು, ಏನು ಅದು ಅಷ್ಟು ಅರ್ಜೆಂಟು, ಏನಾಯಿತು ಮೈ ಕೈ ಏನಾದರೂ ಗಾಯ ಆಗಿದ್ಯಾ ಎನ್ನುತ್ತಾ ಕಾಳಜಿಯಿಂದ ಎದ್ದು ಬಂದು ದೇವರ ಗೂಡಿನಲ್ಲಿದ್ದ ಹತ್ತಿಯನ್ನು ಸ್ವಲ್ಪ ಮುರಿದು ನನ್ನ ಕೈಗೆ ತಂದಿಟ್ಟು ನೀರು ಕುಡಿಯಲು ಅಡಿಗೆ ಮನೆಗೆ ಹೋದರು. ಅಡಿಗೆಮನೆಯಲ್ಲಿ  ಅತ್ತಿಗೆ ಏನೋ ಶಬ್ದ ಮಾಡುತ್ತಿರುವುದನ್ನು ಕಂಡು ಅತ್ತಿಗೆ ಇಷ್ಟೊತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂದು ನೋಡಲು ನಾನೂ ಅಡಿಗೆ ಮನೆಗೆ ನಡೆದೆ. ನೋಡಿದರೆ ಅತ್ತಿಗೆ ಚಪ್ಪಲಿಯಿಂದ ಜಿರಲೆಗಳನ್ನು ಹೊಡೆದು ಸಾಯಿಸುವುದರಲ್ಲಿ ಮಗ್ನರಾಗಿದ್ದರು.

 ನಾನು ಸತ್ತ ಜಿರಲೆಗಳನ್ನು ಎಣಿಸಲು ಆರಂಭಿಸಿದೆ. ಒಟ್ಟು ಹನ್ನೆರಡು ಜಿರಲೆಗಳು, ಜೊತೆಗೆ ಸಣ್ಣ ಪುಟ್ಟ ಮರಿಗಳೂ ಇದ್ದವು. ನಾನು ಅತ್ತಿಗೆಗೆ, ಜಿರಲೆ ಎಲ್ಲಿಂದ ಬರುತ್ತದೆ ಎಂದು ನೋಡಿ ಆ ದಾರಿ ಮುಚ್ಚಿಡಬಹುದಲ್ಲ ಎಂದು ಸಲಹೆ ಮಾಡಿದೆ. ಅಯ್ಯೋ ಅದೆಲ್ಲ ಮಾಡಾಯ್ತು, ಬಾಗಲ ಸಂದಿನಿಂದ, ಕಿಟಕಿ ಸಂದಿನಿಂದ, ಎಲ್ಲೆಲ್ಲಿಂದಾನೋ ಬರ್ತಾವೆ. ಬಹಳಷ್ಟು ಸಂದಿಗಳನ್ನು ಮುಚ್ಚಿ ಬಿಟ್ಟಿದೀನಿ, ಅದರೂ ಜಿರಲೆ ಬರೋದು ಮಾತ್ರ ನಿಂತಿಲ್ಲ ಎಂದಾಗ ನಾನು, ಅತ್ತಿಗೆ ನೀವು ಬೆಕ್ಕು ಸಾಕಬಹುದಲ್ವೆ ಎಂದೆ.ಅವರು, ನನಗೆ ಬೆಕ್ಕು ಕಂಡ್ರೆನೆ ಆಗಲ್ಲ,  ಬೆಳಗ್ಗೆನೇ ಶುರು ಆದ್ರೆ ಅದ್ರ ಪಿರಿಪಿರಿ ರಾತ್ರಿ ಅದರೂ ನಿಲ್ಲಲ್ಲ. ಅದಕ್ಕಿಂತ ಜಿರಲೇನೆ ವಾಸಿ, ಅವುಗಳದೇನಿದ್ರೂ ರಾತ್ರಿ  ಮಾತ್ರ ಕಾರುಬಾರು ಎಂದರು. ಜಿರಲೆಗಳ ಮಾರಣ ಹೋಮ ಮುಗಿಸಿ ಎಲ್ಲವನ್ನು ಸ್ವಚ್ಛ ಮಾಡಿ ಇಬ್ಬರೂ ಮಲಗುವ ಕೋಣೆಗೆ ಬಂದೆವು.

 ನಾನು ಅತ್ತಿಗೆ ಕೊಟ್ಟ ಹತ್ತಿಯನ್ನು ಎರಡು ಭಾಗವನ್ನಾಗಿ ಮಾಡಿಕೊಂಡು ಉಂಡೆ ಮಾಡಿ ನನ್ನ ಎರಡೂ ಕಿವಿಯೊಳಗೆ ತುರುಕಿಸಿ ಬಿಟ್ಟೆ. ಅತ್ತಿಗೆ ಅಚ್ಚರಿಯಿಂದ ನನ್ನನ್ನು ನೋಡುತ್ತಾ, ಹೋ ನಿನಗೆ ಆ ಚೀನಾದವನ ನೆನಪಾಯಿತಾ, ನಮ್ಮನೆಯಲ್ಲಿ ತುಂಬಾನೇ ಜಾಗ ಇದೆ ಕಣೆ ಜಿರಲೆಗಳಿಗೆ, ನೀನು ಹೆದರ್ಕೋಬೇಡ ಬಾ ಮಲಕ್ಕೋ ಎಂದರು. ಆದರೂ ನಾನು ಹತ್ತಿಯನ್ನು ಕಿವಿಯಿಂದ ತೆಗೆಯದೆ, ಪರವಾಗಿಲ್ಲ ನನಗೆ ತುಂಬಾನೇ ಭಯ ಆಗ್ತಿದೆ. ಎನ್ನುತ್ತಾ ಲೈಟು ಆಫ್ ಮಾಡಿ ಅವರ ಪಕ್ಕದಲ್ಲೇ ಉರುಳಿಕೊಂಡೆ. ಅತ್ತಿಗೆ ಅಷ್ಟರಲ್ಲೇ ನಿದ್ದೆ ಹೋಗಿದ್ದರು. ಅತ್ತಿಗೆ ಬಹಳ ಪುಣ್ಯವಂತರಪ್ಪ, ನಿದ್ದೆ ಬಹಳ ಚೆನ್ನಾಗಿ ಬರುತ್ತೆ ಅಂದುಕೊಳ್ಳುತ್ತ ನಾನು ತಿರುಗುತ್ತಿದ್ದ ಫ್ಯಾನನ್ನು ದಿಟ್ಟಿಸಿ ನೋಡುತ್ತಾ ಮಲಗಿದೆ.

ನಮ್ಮಣ್ಣ ಶಿವೂ ದೂರದ ಊರಿಗೆಲ್ಲ ಹೋಗಬೇಕಾದ್ರೆ ಪಕ್ಕದ ಊರಿನಲ್ಲೇ ಇದ್ದ ನನ್ನನ್ನು ಅತ್ತಿಗೆ ಕರೆಸಿಕೊಳ್ಳುತ್ತಿದ್ದಳು. ನಾನು ಖುಶಿಯಿಂದಲೇ ಓಡಿ ಬರುತ್ತಿದ್ದೆ. ಗಂಡನಿಗೆ ನಾನು ಆಗಾಗ ತವರಿಗೆ ದೌಡಾಯಿಸುವುದು ಇಷ್ಟವಾಗದೆ ಇದ್ದರೂ ಏನೂ ಹೇಳುತ್ತಿರಲಿಲ್ಲ. ಕಾರಣ ನಮ್ಮತ್ತಿಗೆ. ಅಪ್ಪ ಅಮ್ಮ ಇಲ್ಲದ ನನ್ನನ್ನು ಸ್ವಂತ ತಾಯಿಗಿಂತ ಹೆಚ್ಚಾಗಿ ಅಕ್ಕರೆಯಿಂದ ಕಾಣುತ್ತಿದ್ದಳು.

ನಾನು ಮದುವೆಯಾದ ಮೊದಲಿಗೆ ನನ್ನ ಗಂಡ ವಿನಾ ಕರಣ ಜಗಳ ಮಾಡುತ್ತಿದ್ದರು. ನಿಂಗೆ ತವರಿನವರು ಅದು ಕೊಡಲಿಲ್ಲ ಇದು ಕೊಡಲಿಲ್ಲ ಎಂದು ಕಿಚಾಯಿಸುತ್ತಿದ್ದರು. ಅತ್ತೆ  ಮಾವ ಕೂಡ ಕಿರುಕುಳ ಕೊಡಲು ಶುರು ಮಾಡಿದಾಗ ಅತ್ತಿಗೆ ಬಳಿ ಫೋನಿನಲ್ಲಿ ಹೇಳಿಕೊಂಡು ಅತ್ತಿದ್ದೆ. ಅವಳು ತಕ್ಷಣ ಅಣ್ಣನ ಜೊತೆ ನಮ್ಮ ಮನೆಗೆ ಬಂದು ಎಲ್ಲರಿಗೂ ಚೆನ್ನಾಗಿ ದಬಾಯಿಸಿ ನಮ್ಮ ಹುಡುಗಿಗೆ ಏನೋ ಬೇಕೋ ಅದನ್ನು ನಾವು ಕೊಡ್ತೇವೆ. ನಿಮಗೆ ಏನೋ ಬೇಕೋ ಅದನ್ನು ನೀವೇ ತೊಗೋಬೇಕು, ನನ್ನ ನಾದಿನಿ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ, ನಮ್ಮಣ್ಣ ಪೋಲೀ ಸ್ ಇಲಾಖೆಯಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿದ್ದಾನೆ. ಅವನಿಗೆ ಒಂದು ಫೋನು ಮಾಡಿದ್ರೆ ಸಾಕು, ಮತ್ತೆ ನೀವೆಲ್ಲ ಜೀವನ ಪೂರ್ತಿ ಜೈಲಿನಲ್ಲೇ ಕಳೆಯಬೇಕಾಗುತ್ತೆ ಎಂದು ಎಚ್ಚರಿಸಿದ್ದಳು.

ನನ್ನ ಅಣ್ಣ ಅವಳ ಮಾತು ಕೇಳಿ ಭಾವುಕನಾಗಿ ಕಣ್ಣಲ್ಲಿ ನೀರು ತುಂಬಿಕೊಂಡು, ಸುಧಾ, ನನ್ನ ತಂಗಿ ಎಂದರೆ ನಿನಗೆಷ್ಟು ಪ್ರೀತಿ ಕಣೆ ಎಂದಿದ್ದ. ನನಗೂ ಅತ್ತಿಗೆ ಮೇಲೆ ಅಭಿಮಾನ ಉಕ್ಕಿ ಬಿಟ್ಟಿತ್ತು. ಅಂದಿನಿಂದ ಗಂಡನ ಮನೆಯವರು ನಾನು ಏನು ಮಾಡಿದರೂತುಟಿ ಪಿಟಿಕ್ಕೆನ್ನುತ್ತಿರಲಿಲ್ಲ. ಒಂದು ತಿಂಗಳ ನಂತರ ಅತ್ತಿಗೆ ಅವರ ಅಣ್ಣನೊಂದಿಗೆ ನಮ್ಮ ಮನೆಗೆ ಬಂದಾಗ ನಮ್ಮ ಅತ್ತೆ ಮಾವ ಬೆವರಿಬಿಟ್ಟಿದ್ದರು. ಕೊನೆಗೆ ಅವರು ಬಂದಿದ್ದು ಅವರ ಮಗನ ಬ್ರಹ್ಮೋಪದೇಶಕ್ಕೆ ಆಮಂತ್ರಣ ನೀಡಲು ಎಂದು ತಿಳಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆಗ ಅತ್ತಿಗೆ ನನ್ನತ್ತ ವಾರೆ ನೋಟ ಬೀರಿ ನಕ್ಕಿದ್ದಳು. ಎಲ್ಲ ನೆನಪು ಮಾಡಿಕೊಳ್ಳುತ್ತಲೇ ನಿದ್ದೆ ಹೋದೆ.

ಮರುದಿನ ಬೆಳಗ್ಗೆ ಎದ್ದಾಗ ಅತ್ತಿಗೆಯ ಹಾಡು ಮೆಲ್ಲನೆ ಕೇಳಿಸುತ್ತಿತ್ತು. ಅವರು ಆಗಲೇ ಸ್ನಾನ ಮಾಡಿ ಕಾಫಿ ತಿಂಡಿ ರೆಡಿ ಮಾಡಿ ಆಗಿತ್ತು. ನಾನು ಜಿರಲೆ ಭಯದಿಂದ ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತಾ ಬೆಳಗಿನ ಜಾವದಲ್ಲಿ ನಿದ್ದೆಗೆ ಜಾರಿದ್ದೆ. ಹಾಗಾಗಿ ಅತ್ತಿಗೆ ನನ್ನನ್ನು ಎಬ್ಬಿಸಿರಲಿಲ್ಲ. ನನ್ನನ್ನು ಕಂಡ ಅತ್ತಿಗೆ, ಎದ್ಯಾ ಮುಖ ತೊಳಕೊಂಡು ಬಾ ಕಾಫಿ ಕೊಡ್ತೀನಿ ಅಂದರು, ನಾನು ಹಲ್ಲುಜ್ಜಲು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ. ಹಲ್ಲುಜ್ಜಿಕೊಂಡು ಫ್ರೆಶ್ ಆಗಿ ಹೊರಗೆ ಬರುವಾಗ ಮೇಲಿನಿಂದ ಒಂದು ಹಲ್ಲಿ  ನನ್ನ ಎದುರೇ ಕೆಳಗಿ ಬಿದ್ದು ಬಿಟ್ಟಿತು. ಅದನ್ನು ಕಂಡು ಗಾಬರಿಯಾಗಿ ನಾನು ಕಿರುಚಿದೆ. ಅತ್ತಿಗೆ ನಗುತ್ತ, ಹಯ್ಯೋ ಆ ಹಲ್ಲಿ ನಿನಗೇನೂ ಮಾಡಲ್ಲ ಬಾ. ಮನೆ ತುಂಬಾ ಜಿರಲೆಗಳಿದ್ರೂ ತಾನೇ ಒಂದೇ ಒಂದು ಜಿರಲೆ ಹಿಡಿಯಲ್ಲ, ನಾನು ಸಾಯ್ಸಿದ ಜಿರಲೇನ ತಿನ್ನೋಕೆ ಮಾತ್ರ ಬಂದ್ಬಿಡುತ್ತೆ ಸೋಮಾರಿ ಎಂದಾಗ ನನಗೆ ನಗು ತಡೆಯಲಾಗಲಿಲ್ಲ. ಹಲ್ಲಿ  ಅಲ್ಲಿದ್ದ ಸೋಫಾದ ಕೆಳಗೆ ನುಣುಚಿ ಕೊಂಡಿತು. ಅಲ್ಲ ಅತ್ತಿಗೆ ಇಷ್ಟು ಸಮಯದಿಂದ ನಾನು ಈ ಮನೆಗೆ ಬರ್ತಾ ಇದ್ದೀನಿ. ಆದ್ರೆ ಒಂದಿನಾನೂ ನಂಗೆ ಜಿರಲೆ ಕಾಣಿಸಿಲ್ಲ ಎಂದು ನನ್ನ ಸಂದೇಹ ವ್ಯಕ್ತ ಪಡಿಸಿದೆ. ಅದಕ್ಕವರು, ಓ ಅದಾ ನಿಮ್ಮಣ್ಣ ಯಾವಾಗಲೂ ದೂರದ ಊರಿಗೆ ಹೋಗಬೇಕಾದ್ರೆ ನಾಲ್ಕು ದಿನ ಮುಂಚೆನೇ ಹೇಳುತ್ತಿದ್ದರು. ಅವರಿಗೂ ಗೊತ್ತು ನಿಂಗೆ ಜಿರಲೆ ಕಂಡ್ರೆ ಭಯ ಅಂತ! ನಾನು ನೀನು ಬರುವ ಮೊದಲೇ ಔಷಧಿ ಹಾಕಿ ಜಿರಲೆ ಸಂಹಾರ ಮಾಡಿ ಮುಗಿಸ್ತಿದ್ದೆ. ಆದ್ರೆ ಈ ಸಲ ಅವರಿಗೇನೋ ಬಹಳ ಅರ್ಜೆಂಟಾಗಿ ಹೋಗಬೇಕಾಗಿ ಬಂತು. ಹಾಗಾಗಿ ನಂಗೆ ಔಷಧಿ ಹಾಕೋಕೆ ಸಮಯ ಸಿಕ್ಕಿಲ್ಲ ಎಂದರು. ಅಣ್ಣ ಅತ್ತಿಗೆಗೆ ನನ್ನ ಮೇಲಿರುವ ಕಾಳಜಿ ಕಂಡು ನನಗೆ ಅಭಿಮಾನ ಮೂಡಿತು.

ಆಗ ನನಗೆ ಒಮ್ಮೆ ಯಾರೋ ಜಿರಲೆಗಳಿಗೆ ಅಂತ ಬಾಂಬ್ ಇದೆ, ಅದನ್ನು ಉಪಯೋಗಿಸೋವಾಗ ಮನೆಯವರು ಮಾತ್ರ ಎರಡು ದಿನ ಮನೇಲಿ ಇರಬಾರದಂತೆ ಅಂತ ಹೇಳಿದ್ದು ನೆನಪಾಯಿತು, ಅದನ್ನೇ ಅತ್ತಿಗೆಗೆ ಹೇಳಿದೆ, ಎರಡು ದಿನ ನೀವಿಬ್ಬರೂ ನಮ್ಮನೆಗೆ ಬಂದ್ಬಿಡಿ, ನಿಮ್ಮ ಸಮಸ್ಯೆ ಪರಿಹಾರವಾದ ಹಾಗೆನೇ ಎಂದೆ. ಅತ್ತಿಗೆ, ಏನೂ ಬಾಂಬಾ, ಮನೇಲಿ ಗ್ಯಾಸ್ ಅದೂ ಇದೂ ಎಲ್ಲ ಇದೆ ಕಣೆ, ಮನೆನೇ ಸುಟ್ಟು ಹೋದರೆ ಎಂದು ಆತಂಕ ವ್ಯಕ್ತ ಪಡಿಸಿದರು. ನಾನು ನಗುತ್ತ, ಅಯ್ಯೋ ಅತ್ತಿಗೆ ಅಂಥಾ ಬಾಂಬ್ ಅಲ್ಲ, ಏನೂ ಆಗಲ್ಲ ಎಂದೆ. ಅದರ ಬಗ್ಗೆ ನನಗೆ ಜಾಸ್ತಿ ಏನೂ ಮಾಹಿತಿ ಇರಲಿಲ್ಲ.

ಆಗ ಅತ್ತಿಗೆ, ಒಂದು ದಿನ ಮನೆಗೆ ಬೀಗ ಇದ್ರೆ ಕಳ್ರು ನುಗ್ತಾರೆ, ಇನ್ನು ಎರಡು ದಿನ ಮನೆ ಬಿಟ್ಟಿದ್ದರೆ ಕಳ್ಳರು ಬಂದು ಮನೆನ ಗುಡ್ಸಿ ಗುಂಡಾಂತರ ಮಾಡಿ ಬಿಡ್ತಾರೆ, ಆಮೇಲೆ ಮನೆಯೆಲ್ಲ ಖಾಲಿ ಖಾಲಿ,ಜಿರಲೆಗಳೂ ಇಲ್ಲ, ಮನೆ ಸಾಮಾನೂ ಇಲ್ಲ ಎನ್ನುತ್ತಾ ನಕ್ಕರು, ನಾನೂ ನಕ್ಕೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ನಾನು ಓಡಿ ಹೋಗಿ ಬಾಗಿಲು ತೆರೆದೆ, ಅಣ್ಣ ಬಂದಿದ್ದ, ಅತ್ತಿಗೆ ಅವನನ್ನು ಕಂಡು ಆಶ್ಚರ್ಯದಿಂದ, ಏನು ಇವತ್ತು ಬಂದ್ರಿ, ನಾಳೆ ಬರ್ತೀನಿ ಅಂತಿದ್ರಿ ಎಂದಾಗ ಅಣ್ಣ ಅಲ್ಲಿ ಕೆಲಸವೆಲ್ಲ ಬೇಗ ಮುಗೀತು ಅದಕ್ಕೆ ಬಂದೆ, ಸುಮ್ನೆ ನಮ್ಮ ಸುಮಾಗೆ ಯಾಕೆ ತೊಂದ್ರೆ ಎನ್ನುತ್ತಾ ಸೋಫಾದ ಮೇಲೆ ಉಶ್ ಎನ್ನುತ್ತಾ ಕುಕ್ಕರಿಸಿದರು.

ಹೆಂಡತಿಯೊಬ್ಬಳು…

ಮುಸ್ಸಂಜೆಯ ಸಮಯ. ನಾನು ನಮ್ಮ ಬೀದಿಯ ಕೊನೆಯ ಮನೆಯವನ ಜೊತೆ ಹೆಜ್ಜೆ ಹಾಕುತ್ತಿದ್ದೆ. ನಮ್ಮ ಮನೆ ಸಮೀಸುತ್ತಿದ್ದಂತೆ ಆತ ಅರೆ ! ನಿಮ್ಮ ಮನೆಯಲ್ಲಿ ಅಮಾವಾಸ್ಯೆಯಾಗಿದೆಯಲ್ಲ, ಯಾಕೆ ? ಹೆಂಡತಿ ಮನೆಯಲ್ಲಿಲ್ಲವೇ ಎಂದು ಉತ್ಸುಕನಾಗಿ ಕೇಳಿದ. ನಾನು ಅವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಆಕಾಶವನ್ನು ದಿಟ್ಟಿಸಿದೆ. ಮಿಂಚೊಂದು ಆಗಾಗ ಫಳಾರನೆ ಮಿಂಚಿ ಮರೆಯಾಗುತ್ತಿತ್ತು. ಅದರ ಜೊತೆ ಮೆಲ್ಲನೆ ಗುಡುಗಿನ ಸದ್ದು ಕೇಳಿಸಿತು. ಅದನ್ನು ನೋಡಿ ನನ್ನ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮೂಡಿತು.

ನನ್ನ ಮೌನ ಕಂಡು ನನ್ನ ಸ್ನೇಹಿತ, ಯಾಕೋ, ಈ ಸಲ ಬಿಲ್ ಕಟ್ಟಿಲ್ಲವೇನೋ ಎಂದು ಅನುಕಂಪದಿಂದ ಮತ್ತೆ ಪ್ರಶ್ನಿಸಿದ. ನಾನು ನಗುತ್ತ, “ಛೆ, ಹಾಗೇನಿಲ್ಲಪ್ಪ, ನನ್ನ ಹೆಂಡತಿ ಮನೆಯಲ್ಲೇ ಇದ್ದಾಳೆ. ಜೊತೆಗೆ ಬಿಲ್ ಯಾವೊತ್ತೋ ಕಟ್ಟಿದೀನಿ…  ನಾನು ಕಾರಣ ಹೇಳುವ ಮೊದಲೇ ಆತ ನನ್ನ ಮಾತನ್ನು ಮಧ್ಯದಲ್ಲೇ ತುಂಡರಿಸಿ ಮತ್ತಷ್ಟು ಕುತೂಹಲದಿಂದ, ಹಾಗಾದ್ರೆ ನಿಮ್ಮನೆಯಲ್ಲಿ ಕತ್ತಲ್ಯಾಕೋ ಎಂದು ಕೇಳಿದ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಂದವಾದ ಬೆಳಕು ಕಾಣಿಸಿತು. ಅದನ್ನು ಕಂಡು ನಾನು ಮುಗುಳ್ನಗುತ್ತ,  ಅವಳಿಗೆ ಬೇರೆ ಕೆಲಸ ಇಲ್ಲ. ಮುನ್ನೆಚ್ಚರಿಕೆ ಕ್ರಮ ತೊಗೊಂಡಿದಾಳೆ ಎಂದೆ.  ಅವನಿಗೆ ಏನೂ ಅರ್ಥವಾಗದೆ, ಏನೋ ಹಾಗಂದ್ರೆ ಎಂದ. ಮೇಲ್ನೋಡು, ಮಿಂಚು ಬರ್ತಾ ಇದೆಯಲ್ವ, ಎಲ್ಲಾದ್ರೂ ಸಿಡಿಲು ನಮ್ಮನೆಗೆ ಬಡಿದು ಬಿಟ್ರೆ ಅಂತಾ ನನ್ನಾಕೆ ಮೈನ್ ಸ್ವಿಚ್ ಆಫ್ ಮಾಡಿ ಬಿಟ್ಟಿದಾಳೆ. ಮಿಂಚು ಗುಡುಗು ಮರೆಯಾಗೊವರೆಗೂ ನಮಗೆ ಅಮವಾಸ್ಯೇನೆ, ಟೀವಿ ನೋಡೋ ಹಾಗಿಲ್ಲ, ಕರೆಂಟಿದ್ರೂ ಮೊಂಬತ್ತಿ ಬೆಳಕಲ್ಲಿ ಕೂರೋ ಯೋಗ ಎಂದು ಲಘುವಾಗಿ ನಕ್ಕೆ. 

ಅವನು ನಕ್ಕು ಲೇವಡಿ ಮಾಡಬಹುದು ಅಂತಿದ್ದ ನನ್ನೆಣಿಕೆ ಸುಳ್ಳಾಯಿತು. ಆತ ನಗಲಿಲ್ಲ. ಬದಲಾಗಿ ಅವನ ಮುಖ ಗಂಭೀರವಾಯಿತು. ಈಗ ಕುತೂಹಲ ಪಡುವ ಸರದಿ ನನ್ನದಾಯಿತು. ನಾನು ಬೀದಿ ದೀಪದ ಬೆಳಕಿನಲ್ಲಿ ಅವನ ಮುಖವನ್ನೇ ದಿಟ್ಟಿಸಿದೆ. ಆತನ ಮುಖ ಮಂಕಾಗಿ, ನೀನು ಪುಣ್ಯ ಮಾಡಿದ್ದೀಯಾ ನಿಮ್ಮನೆ ಬಗ್ಗೆ ಇಷ್ಟೊಂದು ಕಾಳಜಿ ವಹಿಸೋ ಹೆಂಡತಿ ನಿನಗೆ ಸಿಕ್ಕಿದ್ದಾಳೆ ನೀನು ಅದೃಷ್ಟವಂತ ಕಣೋ ಎನ್ನುತ್ತಾ ನನ್ನ ಬೆನ್ನು ತಟ್ಟಿದ.

ನಾನು ಗಲಿಬಿಲಿಯಿಂದ ಅವನತ್ತಲೇ ನೋಡಿದೆ. ಆಗ ಅವನು, ಹಿಂದೊಮ್ಮೆ ನಮ್ಮ ಮನೆಗೆ ಸಿಡಿಲು ಬಡಿದಿತ್ತು. ಮನೆಯಲ್ಲಿದ್ದ ಟೀವಿ, ಫ್ರಿಜ್ಜು, ಎಲ್ಲ ಸುಟ್ಟು ಹೋಯಿತು. ಕೊನೆಗೆ ಲೈಟ್ ಬಲ್ಬ್ ಕೂಡ ಉಳೀಲಿಲ್ಲ, ಎಲ್ಲ ಸುಟ್ಟು ಭಸ್ಮವಾಗಿ ಬಿಟ್ಟಿತ್ತು. ಇಷ್ಟೆಲ್ಲಾ ಆಗುವಾಗ ನನ್ನ ಹೆಂಡತಿ ಮಧ್ಯಾಹ್ನದ ಸವಿ ನಿದ್ದೆಯಲ್ಲೇ ಮುಳುಗಿದ್ದಳು. ಮನೆಯೆಲ್ಲ ಸುಟ್ಟ ವಾಸನೆ ತುಂಬಿದಾಗಲೇ ಅವಳಿಗೆ ಎಚ್ಚರಾವಾಗಿದ್ದು… ಅವನು ಮಾತು ಮುಗಿಸುವ ಮೊದಲೇ ನಾನು, ನಿನ್ನ ಪುಣ್ಯ ಕಣೋ, ಹೆಂಡತಿ ಬದುಕಿಕೊಂಡಳಲ್ಲ ಎಂದು ಉದ್ಗರಿಸಿದೆ. ಆದರೆ ಅವನು ಮಾತ್ರ ಏನೂ ಹೇಳಲ್ಲಿಲ್ಲ.

ಅಷ್ಟರಲ್ಲಿ ಸ್ವಲ್ಪ ದೊಡ್ಡ ಮಿಂಚೊಂದು ಮಿಂಚಿ ಮರೆಯಾಯಿತು. ನನ್ನ ಸ್ನೇಹಿತ, ನಾನು ಹೋಗ್ತಿನೋ, ನಾಳೆ ಸಿಗೋಣ ಎಲ್ಲರೂ ನಿನ್ನಷ್ಟು ಅದೃಷ್ಟವಂತರಲ್ಲಪ್ಪ,ನಾನೇ ಮನೆಗೆ ಹೋಗಿ ಎಲ್ಲ ಕನೆಕ್ಷನ್ ಕಿತ್ತಾಕಬೇಕು ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೆ ತನ್ನ ಮನೆಯತ್ತ ಅವಸರದ ಹೆಜ್ಜೆ ಹಾಕಿದ. ನಾನು ನಮ್ಮ ಮನೆಯ ಗೇಟು ತೆರೆದು ಒಳಹೊಕ್ಕೆ.

 ಶ್ರೀಮತಿ ನನ್ನನ್ನು ಕಂಡು, ರೀ ರೇಗಾಡಬೇಡಿ, ಹೊರಗೆ ಮಿಂಚು ಬರ್ತಿದೆ ಅದಕ್ಕೆ … ಎನ್ನುತ್ತಾ ನನ್ನ ಮುಖವನ್ನು ನೋಡಲು ಧೈರ್ಯ ಸಾಲದೇ  ತಲೆತಗ್ಗಿಸಿದಳು. ನಾನು ಅವಳನ್ನು ಅಪ್ಪಿಕೊಂಡು, ನೀನು ನನ್ನ ಪಾಲಿನ ಅದೃಷ್ಟ ದೇವತೆ ಕಣೆ ಇನ್ಯಾವತ್ತೂ ನಿನ್ನ ಮೇಲೆ ರೇಗಲ್ಲ ಎಂದು ಅವಳ ಕಿವಿಯಲ್ಲಿ ಮೆಲ್ಲನುಸುರಿದೆ.

ಅವಳಿಗೆ ದಿಗ್ಭ್ರಮೆಯಾಗಿ, ರೀ ಏನಾಯ್ತು ನಿಮಗೆ ಇದ್ದಕ್ಕಿದ್ದಂತೆ, ಯಾವಾಗಲೂ ನಾನು ಸಿಡಿಲು ಬರುತ್ತೇಂತ ಮೇನ್ ಸ್ವಿಚ್ ಆಫ್ ಮಾಡಿ ಕೇಬಲ್ ಕನೆಕ್ಷನ್ ಫೋನ್ ಕನೆಕ್ಷನ್ ಎಲ್ಲ ತೆಗೆದು ಬಿಟ್ರೆ ರಂಪ ರಾಮಾಯಣ ಮಾಡ್ತಿದ್ರಿ ಇವತ್ತೇನಾಯ್ತು, ಹೊಸದಾಗಿ ಕುಡಿಯೋ ಅಭ್ಯಾಸ ಶುರು ಮಾಡಿಲ್ಲ ತಾನೇ ಎಂದಳು.

ನಾನು ಮಾತ್ರ  ನನ್ನಲ್ಲಾದ ಬದಲಾವಣೆಯ ಗುಟ್ಟು ಬಿಟ್ಟು ಕೊಡದೆ, ನೀನು ಏನು ಬೇಕಾದರೂ ಹೇಳು, ಒಂದು ರೀತೀಲಿ ಇವತ್ತು ನನಗೆ ಜ್ಞಾನೋದಯ ಆಯ್ತು ಅಂತಾನೆ ತಿಳ್ಕೋ. ನೀನು ಇಷ್ಟೆಲ್ಲಾ ಜಾಗ್ರತೆ ವಹಿಸೋದು ನಮ್ಮ ಒಳ್ಳೆಯದಕ್ಕೆ ತಾನೇ. ಅದಕ್ಯಾಕೆ ನಾನು ರೇಗಬೇಕು, ಇನ್ಮೇಲೆ ಯಾವಾತೂ ನಿನ್ಮೇಲೆ ರೇಗಲ್ಲ ಎಂದು ಅವಳಿಗೆ ಭರವಸೆ ಇತ್ತೆ.

ಅವಳು ಮಾತ್ರ ಅತ್ಯಾಶ್ಚರ್ಯದಿಂದ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದಳು. ನಾನು, ನಂಗೆ ತುಂಬಾ ಹಸಿವಾಗ್ತಿದೆ. ಅಡಿಗೆ ಏನು ಮಾಡಿದ್ದೀಯಾ ಎನ್ನುತ್ತಾ ಅವಳ ಗಮನವನ್ನು ಬೇರೆಡೆಗೆ ಹರಿಸಲು ಪ್ರಯತ್ನಿಸಿದೆ. ತಕ್ಷಣ ಅವಳು, ನಿಮಗಿಷ್ಟ ಅಂತಾ ಏನೋ ಮಾಡಿದ್ದೀನಿ. ಬೇಗ ಕೈಕಾಲು ತೊಳ್ಕೊಂಡು ಊಟಕ್ಕೆ ಬನ್ನಿ ಎನ್ನುತ್ತಾ ಅವಸರದಿಂದ ಅಡಿಗೆಮನೆಯತ್ತ ಹೆಜ್ಜೆ ಹಾಕಿದಳು. ಅವಳ ಸಂಭ್ರಮ ಕಂಡು ನಾನೂ ಸಂತಸದಿಂದ ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ.

ಅವತ್ತು ಮಧ್ಯರಾತ್ರಿಯಲ್ಲಿ ಬಾತ್ ರೂಮಿಗೆ ಹೋಗಲು ನಾನು ಎದ್ದು ರೂಮಿನ ಟ್ಯೂಬ್ ಲೈಟು ಸ್ವಿಚ್ ಹಾಕಿದೆ. ನನ್ನಾಕೆ ಗಾಢ ನಿದ್ದೆಯಲ್ಲಿದ್ದಳು. ನಾನು ಅವಳನ್ನೊಮ್ಮೆ ನೋಡಿ ಬಾತ್ ರೂಮಿಗೆ ಇನ್ನೇನು ಹೋಗಬೇಕು ಅನ್ನುವಷ್ಟರಲ್ಲಿ, ಅವಳು ಗಡಬಡಿಸಿ  ಎದ್ದು, ಅಯ್ಯೋ ಎಲ್ಲ ಹೋಯಿತು ಸಿಡಿಲು ಬಡಿದೇ  ಬಿಟ್ಟಿತು. ನಾನು ಮೊದಲೇ ಎಚ್ಚರಿಕೆ ವಹಿಸಬೇಕಿತ್ತು ಎಂದೆಲ್ಲ ಬಡಬಡಿಸ ತೊಡಗಿದಳು.

ನಾನು ಗಾಬರಿಯಿಂದ, ಏನಾಯ್ತು ಕಣೆ, ಯಾಕೆ ಇಷ್ಟೊಂದು ಗಾಬರಿಯಾಗಿದ್ದೀಯ ಎಲ್ಲೂ ಸಿಡಿಲು ಬಡಿದಿಲ್ಲ, ನಾನು ಟ್ಯೂಬ್ ಲೈಟು ಹಾಕಿದ್ದೆ, ಅದು ನಿದ್ದೆಯಲ್ಲಿ ನಿನಗೆ ಮಿಂಚಿನ ಹಾಗೆ ಕಾಣಿಸಿರಬೇಕು, ಹೊರಗಡೆ ಆಕಾಶದಲ್ಲಿ ನಕ್ಷತ್ರ ಕಾಣಿಸ್ತಿದೆ ನೋಡು ಎನ್ನುತ್ತ ಅವಳ ಮುಖದಲ್ಲಿ ಕಾಣಿಸಿಕೊಂಡ ಬೆವರನ್ನು ಒರೆಸುತ್ತಾ ಸಮಾಧಾನ ಮಾಡಿದೆ. ನೀನು ಮಲಕ್ಕೋ ಏನೂ ಆಗಿಲ್ಲ ಎನ್ನುತ್ತಾ ಮಗುವಿನಂತೆ ಅವಳನ್ನು ತಟ್ಟಿ ಮಲಗಿಸಿದೆ. ಅವಳು ಅಲ್ಲೇ ನಿದ್ದೆ ಹೋದಳು.

ನಾನು ಮೆಲ್ಲನೆ ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ. ನನ್ನ ಹೆಂಡತಿ ಎಷ್ಟು ಒಳ್ಳೆಯವಳು, ನಿದ್ದೆಯಲ್ಲೂ ಅವಳಿಗೆ ಮನೆಯ ಚಿಂತೆ. ನಾನು ಮಾತ್ರ ಅವಳ ಒಳ್ಳೆಯ ಗುಣ ನೋಡಿ ಮೆಚ್ಚುವುದನ್ನು ಬಿಟ್ಟು ಇಷ್ಟು ಸಮಯ ರೇಗಾಡುತ್ತಿದ್ದೆನಲ್ಲ, ನನ್ನ ಸ್ನೇಹಿತನ ಹೆಂಡತಿಯಂತೆ ಇವಳೂ ಆಗಿದಿದ್ದರೆ ಇಷ್ಟೊತ್ತು ನನಗದೆಷ್ಟೆಲ್ಲ ನಷ್ಟವಾಗುತ್ತಿತ್ತೇನೋ ಎಂದು ಭಾವುಕನಾಗಿ ಗಂಟಲುಬ್ಬಿ ಬಂದಿತು. 

ಆಗಂತುಕನ ಆಗಮನ!

ಅದೊಂದು ರಾತ್ರಿ ನಿದ್ದೆ ಬಾರದಿದ್ದಾಗ  ಕಿಟಕಿಯಿಂದ ಹೊರ ನೋಡುತ್ತಾ  ಮಲಗಿದ್ದೆ. ಬಾವಲಿಯೊಂದು ಕಿಟಕಿಯ ಬಳಿಯೇ ಹಾರಾಡುತ್ತಿತ್ತು. ಅದನ್ನು ನೋಡುತ್ತಾ ನಾನು ಕಣ್ಣು ಮುಚ್ಚಿದೆ. ಸುಮಾರು ಹೊತ್ತಿನ ಬಳಿಕ ಕಣ್ತೆರೆದು ನೋಡಿದಾಗ  ಸೀಲಿಂಗ್ ನ ಸುತ್ತ ಕತ್ತಲಲ್ಲಿ ಹಕ್ಕಿಯೊಂದು ಹಾರಾಡಿದಂತಾಯಿತು. ಅರೆ! ಇದೇನಾಶ್ಚರ್ಯ! ಈ ಹಕ್ಕಿ ಮನೆಯ ಒಳಗೆ ಬಂದಿದ್ದಾದರೂ ಹೇಗೆ, ಯಾವುದೇ ಕಿಟಕಿ ತೆರೆದಿಟ್ಟಿಲ್ಲ, ಬಾಗಿಲೂ ಮುಚ್ಚಿದೆ. ಹಾಗಿದ್ರೆ ಇದು ಬಂದಿದ್ದಾದರೂ ಎಲ್ಲಿಂದ, ಅದು ನಿಜವಾಗಿಯೂ ಬಂದಿದೆಯೇ ಅಥವಾ ನಾನು ಕನಸು ಕಾಣುತ್ತಿದ್ದೆನೆಯೇ ಎಂದು ನನಗೆ ಗೊಂದಲವಾಯಿತು.

ಕುತೂಹಲದಿಂದ ಕೈಗೆ ಚಿವುಟಿಕೊಂಡೆ. ನೋವಾದಾಗ ಇದು ಕನಸಲ್ಲ ಎಂದು ಅರಿವಾಗಿ ಧಿಗ್ಗನೆದ್ದು ಲೈಟು ಹಾಕಿದೆ. ನೋಡಿದರೆ ಅದು ಹಕ್ಕಿಯಲ್ಲ,  ಕಿಟಕಿಯ ಹೊರಗೆ ಹಾರಾಡುತ್ತಿದ್ದ ಸಣ್ಣ ಬಾವಲಿ ! ಅದನ್ನು ಕಂಡು ನನಗೆ ಧಿಗ್ಭ್ರಮೆಯಾಯಿತು. ಇದು ಮನೆಯೊಳಕ್ಕೆ ಯಾಕೆ ಬಂದಿತು. ಅದು ಬಂದಿದ್ದಾದರೂ ಎಲ್ಲಿಂದ ಎಂದು ಯೋಚಿಸುವಷ್ಟರಲ್ಲಿ ಅದು ನನ್ನ ರೂಮಿನಿಂದ ಹೊರಕ್ಕೆ ಹೋಗಿ ಹಾಲ್ ನಲ್ಲಿ, ಅಡಿಗೆ ಮನೆಯಲ್ಲಿ ಹೀಗೆ ಎಲ್ಲ ರೂಮಿಗೆ ಹೋಗಿ ವೃತ್ತಾಕಾರವಾಗಿ ಹಾರಾಡತೊಡಗಿತು.

ಅದನ್ನು ನೋಡಿ ನನಗೆ ವಿಚಿತ್ರವೆನಿಸಿ ಆದಷ್ಟು ಬೇಗ ಅದು ಹೊರಗೆ ಹೋಗಲಿ ಎಂದು ಮನೆಯ ಹಿಂಬಾಗಿಲನ್ನು ತೆರೆದಿಟ್ಟೆ. ಆದರೆ ಅದು ಬಾಗಿಲ ತನಕ ಹೋಗಿ ಮತ್ತೆ ಪುನಃ ರೂಮಿಗೆ ಬಂದು ಸುತ್ತು ಹಾಕತೊಡಗಿತು. ಸುತ್ತು ಹಾಕುತ್ತ ಪ್ರತೀ ಸಲವೂ ನನ್ನ ಬಳಿಗೆ ಕುಕ್ಕಲು ಬಂದವರಂತೆ ಬರತೊಡಗಿತು. ನನಗೆ ಭಯವಾಗಿ ಪ್ರತೀಸಲವೂ ಚಾಕಚಕ್ಯತೆಯಿಂದ ಅದರಿಂದ ತಪ್ಪಿಸಿಕೊಂಡೆ.

ಎಷ್ಟೇ ಹೊತ್ತಾದರೂ ಅದು ಹೊರಗೆ ಹೋಗುವ ಲಕ್ಷಣ ಕಾಣಿಸದಾಗ ಮೆಲ್ಲನೆ ನಾನು ಅಲ್ಲೇ ಇದ್ದ ದಿಂಬನ್ನು ಗುರಾಣಿಯನ್ನಾಗಿ ಮಾಡಿಕೊಂಡೆ. ಪ್ರತೀ ಸಲವೂ ಅದು ನನ್ನ ಬಳಿ ಬಂದಾಗ ನಾನು ದಿಂಬನ್ನು ಬೀಸಿ ಅದಕ್ಕೆ ಹೊಡೆಯಲು ಪ್ರಯತ್ನಿಸಿದೆ. ಆದರೆ ತಾನೂ ಕೂಡ ಏನೂ ಕಡಿಮೆಯಿಲ್ಲ ಎನ್ನುವಂತೆ ಅದು ಪ್ರತೀ ಸಲವೂ ತಪ್ಪಿಸಿಕೊಳ್ಳತೊಡಗಿತು. ಇದರಿಂದ ಹೇಗೆ ಪಾರಾಗಲಿ ಎಂದು ನನಗೆ ತಿಳಿಯದೇ ಒದ್ದಾಡಿದೆ.

ಬೆಳಕಿನಲ್ಲಿ ಅದಕ್ಕೆ ಕಣ್ಣು ಕಾಣಿಸುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೆ ಲೈಟು ಆರಿಸಲು ಭಯ. ಕತ್ತಲಲ್ಲಿ ಅದು ಎಲ್ಲಿದೆ ಎಂದು ತಿಳಿಯುವುದಾದರೂ ಹೇಗೆ, ಹೀಗೆ ಇದ್ದರೆ ಇವತ್ತು ರಾತ್ರಿಯೆಲ್ಲ ಜಾಗರಣೆ ಎಂದುಕೊಂಡು ಮೆಲ್ಲನೆ ಅದರಿಂದ ತಪ್ಪಿಸಿಕೊಂಡು ಬಂದು ರೂಮಿಗೆ ಬಂದು ಬಾಗಿಲು ಹಾಕಿಕೊಂಡು, ಫೋನಿನಲ್ಲಿ ಬಾವಲಿಯನ್ನು ಹೇಗೆ ಹೊರಕ್ಕೆ ಹಾಕುವುದು ಎಂದು ತಿಳಿಯಲು ಅಂತರ್ಜಾಲದಲ್ಲಿ ತಡಕಾಡಿದೆ.

ಕೆಲವರು ಅದಕ್ಕೆ ಟ್ರಾಪ್ ಬಳಸಬೇಕು ಎಂದರೆ ಇನ್ನು ಕೆಲವರು ನೆಟ್ ಬಳಸಿ ಅದನ್ನು ಹಿಡಿಯಬಹುದು ಎಂದು ತಿಳಿಸಿದ್ದರು. ಅದೆಲ್ಲ ನನ್ನ ಬಳಿ ಇಲ್ಲ, ಈಗೇನು ಮಾಡುವುದು ಎಂದು ಮತ್ತಷ್ಟು ಹುಡುಕಾಡಲು  ಶುರು ಮಾಡಿದೆ. ಒಬ್ಬರಂತೂ ಬಾವಲಿ ಎಲ್ಲಾದರೂ ಕುಳಿತಾಗ ಮೆಲ್ಲನೆ ಅದರ ಮೇಲೆ ಒಂದು ಬಟ್ಟಲನ್ನು ಬೋರಲು ಹಾಕಿ ಪೇಪರ್ ನಿಂದ ಅದನ್ನು ಮುಚ್ಚಿ ಹಿಡಿದು ಹೊರಹಾಕಬಹುದು ಎಂದಿದ್ದರು.

 ಆದರೆ ನಮ್ಮ ಮನೆಗೆ ಬಂದ ಬಾವಲಿ ಎಲ್ಲಾದರೂ ಕೂತಿದ್ದರೆ ತಾನೇ ಹಿಡಿಯುವುದು ಎಂದುಕೊಳ್ಳುತ್ತ ಇನ್ನೂ ಜಾಲಾಡುತ್ತಿದ್ದಾಗ ಬಾವಲಿಗಳಿಗೆ ರೇಬಿಸ್ ಬರುತ್ತದೆಂದೂ ಅದು ಕಚ್ಚಿದರೆ ಅಪಾಯ ಎಂದು ತಿಳಿದಾಗ ನನಗೆ ಮತ್ತಷ್ಟು ಗಾಬರಿಯಾಯಿತು. ಅಯ್ಯೋ ದೇವರೇ ಏನು ಮಾಡಲಿ ಹೇಗೆ ಇದನ್ನು ಹೊರಗೆ ಸಾಗಹಾಕಲಿ ಎಂದು ಯೋಚಿಸುತ್ತ ರೂಮಿನಿಂದ ಹೊರಗೆ ಬಂದು ನೋಡಿದರೆ ಬಾವಲಿ ಎಲ್ಲಿಯೂ ಕಾಣಿಸಲಿಲ್ಲ! ಎಲ್ಲಿ ಹೋಯಿತು ಎಂದು ಕುತೂಹಲದಿಂದ ಅಡಿಗೆಮನೆಯಲ್ಲಿ ಮೆಲ್ಲನೆ ಇಣುಕಿದೆ. ಅಲ್ಲೂ ಇಲ್ಲ, ನನಗೆ ಆಶ್ಚರ್ಯ ವಾಗಿ ಅದನ್ನು ಹುಡುಕುತ್ತಿದ್ದಂತೆ ಅದು ಎಲ್ಲಾದರೂ ಕೂತಿರಬಹುದೇ ಇಷ್ಟು ಹೊತ್ತು ಹಾರಾಡಿ ಅದಕ್ಕೆ ದಣಿವಾಗಿರಬಹುದಲ್ಲವೇ ಎಂದು ಯೋಚಿಸಿದಾಗ ಮತ್ತಷ್ಟು ಭಯವಾಯಿತು.

ಕಿಟಕಿ ಪರದೆ ಸಹ ಮುಟ್ಟಲು ಭಯವಾಯಿತು, ಎಲ್ಲಿ ಅವಿತುಕೊಂಡು ಕುಳಿತು ನಾನು ಹತ್ತಿರ ಬಂದಾಗ ಮೇಲೆರಗಿದರೆ ಎಂದು ಕಂಪಿಸಿದೆ. ಆದರೂ ಬಾವಲಿಯನ್ನು ಹೊರಹಾಕಲೇಬೇಕಿತ್ತು, ಅದಕ್ಕಾಗಿ ನಾನು ಅದನ್ನು ಹುಡುಕಲೇಬೇಕು ಎಂದುಕೊಳ್ಳುತ್ತ ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಹುಡುಕಲು ಶುರು ಮಾಡಿದೆ.

ಆದರೆ ಅದು ಎಲ್ಲಿಯೂ ಕಾಣಿಸದಾಗ ಅದು ತಾನಾಗಿಯೇ ಹೊರಗೆ ಹೋಗಿರಬೇಕೆಂದು ಅನುಮಾನ ಪಟ್ಟೆ. ಸಮಾಧಾನವಾಗಿ ಬಾಗಿಲು ಹಾಕಿಕೊಂಡು ಬಂದು ಮಲಗಿದೆ. ಆದರೆ ನಿದ್ದೆ ಹಾರಿ ಹೋಗಿತ್ತು. ಫೋನ್ ತೆಗೆದುಕೊಂಡು  ಅಂತರ್ಜಾಲದಲ್ಲಿ ನಮ್ಮ ಶಕುನ ಶಾಸ್ತ್ರದ ಪ್ರಕಾರ ಬಾವಲಿ ಬಂದರೆ ಒಳ್ಳೆಯದೋ ಕೆಟ್ಟದೋ ಎಂದು ಜಾಲಾಡಿದೆ.  ಕೆಲವು ಕಡೆ ಬಾವಲಿ ಮನೆಯೊಳಗೇ ಬಂದು ಹಾರಾಡಿದರೆ ಶುಭ ಶಕುನ ಎಂದಿತ್ತು, ಅದನ್ನು ನೋಡಿ ಸಂತೋಷವಾಯಿತು.

ಆದರೆ ನನ್ನ ಸಂತಸ ಬಹಳ ಸಮಯ ಉಳಿಯಲಿಲ್ಲ. ಕೆಲವೆಡೆ ಬಾವಲಿ ಸೂತಕದ ಛಾಯೆಯಂತೆ ಎಂದು ಬಿಂಬಿಸಿದಾಗ ನನಗೆ ದೂರದ ದೇಶಕ್ಕೆ ಕಾನ್ಫರೆನ್ಸ್ ಗೆ ಹೋದ ಪತಿರಾಯರು, ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದ ಮಗ, ಮುಂಬೈನಲ್ಲಿ ಸಂಸಾರ ನಡೆಸುತ್ತಿದ್ದ ಮಗಳು ನೆನಪಾಗಿ ಎದೆ ಝಲ್ಲೆಂದಿತು. ಅಬ್ಬಾ ದೇವರೇ,ಯಾರಿಗೂ ಏನೂ ಆಗದಿರಲಿ ಅವರೆಲ್ಲ ಕ್ಷೇಮವಾಗಿರಲಿ  ಎಂದು ದೇವರಲ್ಲಿ ಮೊರೆಯಿಟ್ಟೆ.

ಅಲ್ಲದೆ ಅದು ನನಗೂ ಅನ್ವಯಿಸಬಹುದು ಎಂಬ ಯೋಚನೆ ಬಂದಾಗ ಅಧೀರಳಾಗಿ ಬಿಟ್ಟೆ. ದೇವರೇ ಇಷ್ಟು ಬೇಗ ನನ್ನು ಕರೆಸಿಕೊಳ್ಳಬೇಡ. ನನಗೆ ಇನ್ನೂ ಸಾಕಷ್ಟು ಜವಾಬ್ದಾರಿಗಳಿವೆ, ಆಸೆಗಳಿವೆ ಎಂದುಕೊಳ್ಳುತ್ತಿದ್ದಂತೆ ಮನಸ್ಸು ಮುದುಡಿತು. ಬಾವಲಿ ಮನೆ ಬಿಟ್ಟು ಹೋದರೂ ನಿದ್ದೆ ಮಾತ್ರ ಮಾರುದೂರ ಹಾರಿ ಹೋಗಿತ್ತು.

ಮರುದಿನ ಬೆಳಿಗ್ಗೆ ಗಂಡ ಮಕ್ಕಳಿಗೆಲ್ಲ ವಿಷಯ ತಿಳಿಸಿ ಎಲ್ಲರೂ ಸಾಧ್ಯವಾದಷ್ಟು ಜಾಗ್ರತೆ ವಹಿಸಬೇಕು ಎಂದೆ. ಅವರೆಲ್ಲ,  ನೀನು ಅದನ್ನೆಲ್ಲ ನಂಬಬೇಡ ಯಾರಿಗೂ ಏನೂ ಆಗುವುದಿಲ್ಲ. ಆ ಬಾವಲಿ ತಪ್ಪಿ ಬಂದಿರಬೇಕು ಎಂದು ಹೇಳಿದಾಗ ಎಲ್ಲೋ ಒಂದು ಕಡೆ ಸಮಾಧಾನ.

 ಆವತ್ತು ಮನೆ ಕೆಲಸವೆಲ್ಲ ಮುಗಿದಮೇಲೆ, ಇದ್ದಕ್ಕಿದ್ದಂತೆ ಬಾವಲಿ ಬಂದಿದ್ದಾದರೂ ಎಲ್ಲಿಂದ ಎಂದು ಯೋಚನೆ ಬಂದಿತು. ಯಾವ ಕಿಟಕಿಯೂ ತೆರೆದಿಲ್ಲ, ಬಾಗಿಲೂ ಭದ್ರವಾಗಿ ಮುಚ್ಚಿರುವಾಗ ಅದು ಒಳಗೆ ಬರಲು ಹೇಗೆ ಸಾಧ್ಯ ಎಂದುಕೊಳ್ಳುತ್ತ ಮತ್ತೆ ಫೋನು ಕೈಗೆತ್ತಿಕೊಂಡೆ. ಸ್ಮಾರ್ಟ್ ಫೋನ್ ಬಂದ ಮೇಲೆ ನಮ್ಮ ಸಂದೇಹಗಳಿಗೆಲ್ಲ ಅದೆಷ್ಟು ಬೇಗ ಉತ್ತರ ಸಿಗುತ್ತದೆ ಎಂದುಕೊಳ್ಳುತ್ತ ಹೆಮ್ಮೆಯಿಂದ ಮತ್ತೆ ಅಂತರಜಾಲದಲ್ಲಿ ಬಾವಲಿ ಮನೆಯೊಳಕ್ಕೆ ಹೇಗೆ ಬರುತ್ತದೆ ಎಂದು ನೋಡುತ್ತಾ ಹೋದೆ. ಅಲ್ಲಿ ಸಿಕ್ಕ ಮಾಹಿತಿ ಕಂಡು ಬೆರಗಾಗಿ ಬಿಟ್ಟೆ.

ಮೂರರಿಂದ ನಾಲ್ಕು ಇಂಚು ಅಗಲದ ರೆಕ್ಕೆ ಇರುವ ಬಾವಲಿ ಕೇವಲ ಅರ್ಧ ಇಂಚು ಜಾಗವಿದ್ದರೂ ಅದರ ಮೂಲಕ ಅದು ಒಳಕ್ಕೆ ಬರುತ್ತದೆ ಎಂದು ತಿಳಿಯುತ್ತಿದ್ದಂತೆ ಎದ್ದು ಓಡಿ ಹೋಗಿ ಕಿಟಕಿಯ ಬಳಿ ಇದ್ದ ಎಡೆಗಳನ್ನೆಲ್ಲ ಮುಚ್ಚಿ ಬಿಟ್ಟೆ. ಅದರ ಜೊತೆ ಬಾವಲಿ ನಮ್ಮ ಮನೆಯ ಸುತ್ತ ಹಾರಾಡುತ್ತಿದ್ದರೆ ನಮಗೇ ಒಳ್ಳೆಯದು ಎಂದೂ ತಿಳಿಯಿತು. ನಿಮಗೆಲ್ಲ ಆಶ್ಚರ್ಯವಾಗಬಹುದು ಒಂದು ಬಾವಲಿ ಒಮ್ಮೆಗೆ ಇನ್ನೂರು ಮುನ್ನೂರು ಸೊಳ್ಳೆಗಳನ್ನು ತಿನ್ನುತ್ತವಂತೆ. ಒಂದು ರೀತಿಯಲ್ಲಿ ಅದು ನಮ್ಮನ್ನು ಡೆಂಗ್ಯೂ ಮಲೇರಿಯಾ ಚಿಕನ್ ಗುನ್ಯಾದಂತಹ ಮಾರಕ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.

ಅದೇ ಕಾರಣಕ್ಕೋ ಏನೋ ನಮ್ಮ ಮನೆಯ ಸುತ್ತಮುತ್ತ ಸೊಳ್ಳೆಗಳೇ ಇಲ್ಲ. ಅದನ್ನು ಓದಿದ ಬಳಿಕ ಬಾವಲಿಯ ಬಗ್ಗೆ ಇದ್ದ ಭಯ ಹೋಯಿತು. ಬಾವಲಿ ಮನೆಯೊಳಗೆ ಬಂದ ಬಳಿಕ  ನಮಗೆ ಕೆಟ್ಟದ್ದೇನೂ ಆಗಿಲ್ಲ. ಒಳ್ಳೆಯದಂತೂ ಆಗಿದೆ. ಅದು ಬಾವಲಿಯಿಂದಾಗಿ ಆಗಿದ್ದು ಅನ್ನೋದು ಮಾತ್ರ ಖಾತ್ರಿಯಿಲ್ಲ.

ನಯವಂಚಕ

ಬೆಲ್ ಶಬ್ದ ಕೇಳಿ ಯಾರು ಬಂದಿರಬಹುದು ಎಂದು ನಾನು ಯೋಚಿಸುತ್ತ ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಕೈ ತೊಳೆದು ಕೊಂಡು ಟವೆಲ್ ನಿಂದ ಕೈಯೊರೆಸುತ್ತ ಬಾಗಿಲ ಬಳಿ ಬಂದೆ. ಬಾಗಿಲ ತೂತಿನಲ್ಲಿ ನೋಡಿದರೆ ಬೋಳು ತಲೆಯ ಕನ್ನಡಕಧಾರಿ ವ್ಯಕ್ತಿಯೊಬ್ಬ ಅಲ್ಲಿ ನಿಂತಿದ್ದ. ಯಾರಪ್ಪ ಇವನು ಅಂತ ಯೋಚಿಸುತ್ತಿರುವಾಗಲೇ ಆತ ಮತ್ತೊಮ್ಮೆ ಬೆಲ್ ಒತ್ತಿದ. ನಾನು ತಟ್ಟನೆ ಬಾಗಿಲು ತೆರೆದು ಏನು ಎನ್ನುವಂತೆ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದೆ. ಅವನು ನನ್ನತ್ತ ಅನುಮಾನದಿಂದ ನೋಡುತ್ತಾ, “ಕನ್ನಡ” … ಎಂದ. ನಾನು ಹೌದು ಎನ್ನುವಂತೆ ತಲೆಯಾಡಿಸಿದೆ. ಅವನ ಮುಖ ಅರಳಿ, “ಅಬ್ಬಾ, ನೀವು ನಮ್ಮವರೇ! ನನಗೆ ತುಂಬಾ ಖುಷಿಯಾಯಿತು. ನಿಮ್ಮ ಬಿಲ್ಡಿಂಗ್ ನಲ್ಲಿ ಅನ್ಯ ಭಾಷಿಗರು ಜಾಸ್ತಿ ಇದ್ದಾರಲ್ಲವೇ, ಅದಕ್ಕೆ ಹಾಗೆ ಕೇಳಿದೆ. ನಿಮ್ಮನ್ನು ನೋಡಿದ ಕೂಡಲೇ ತಿಳಿಯಿತು, ನೀವು ನಮ್ಮವರೆಂದು. ಆದರೂ ಕೇಳಬೇಕಲ್ಲವೇ” ಎಂದು ನನ್ನ ಪ್ರತ್ಯುತ್ತರಕ್ಕೆ ಕಾದ.

ನಾನು, “ಅದು ಸರಿ, ನೀವು ಯಾರೂಂತ ನನಗೆ ಗೊತ್ತಾಗಲಿಲ್ಲ … ” ಎಂದು ಮಾತು ಮುಂದುವರೆಸುವಷ್ಟರಲ್ಲಿ ಆತ ತನ್ನ ಬ್ಯಾಗಿನಿಂದ ಪ್ಲಾಸ್ಟಿಕ್ ಚೀಲವೊಂದನ್ನು ಹೊರತೆಗೆದ. ಅದರ ಜೊತೆ ಮಾವಿನ ಹಣ್ಣಿನ ಪರಿಮಳ ನನ್ನ ಮೂಗಿಗೆ ಬಡಿಯಿತು. ಆ ಆಹ್ಲಾದಕರ ಪರಿಮಳವನ್ನು ಮೂಗರಳಿಸಿ ಆಘ್ರಾಣಿಸುತ್ತ, ಮಾವಿನ ಹಣ್ಣೇ! ಆಹಾ! ಇದು ನನ್ನ ಅತ್ಯಂತ ಪ್ರೀತಿಯ ಹಣ್ಣು. ಆದರೆ ಇವನೇಕೆ ನನಗೆ ಕೊಡುತ್ತಿದ್ದಾನೆ. ನಾನು ತೆಗೆದುಕೊಳ್ಳಬೇಕೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಅವನು, “ಮೇಡಂ, ನೋಡಿ ಒಳ್ಳೆ ರಸ್ಪೂರಿ ಮಾವಿನ ಹಣ್ಣು. ಎಷ್ಟು ಸಿಹಿಯಾಗಿದೆ ಅಂದರೆ ಅಮೃತ.. ಅಮೃತ, ಒಂದು ತಿಂದು ನೋಡಿ. ಆಮೇಲೆ ನಂಗೆ ದಿನಾ ತರೋಕೆ ಹೇಳ್ತೀರಿ. ನಿಮ್ಮ ಮಕ್ಕಳಿಗೂ ತುಂಬಾ ಇಷ್ಟವಾಗಬಹುದು” ಎಂದೆಲ್ಲ ಅದರ ಗುಣಗಾನ ಆರಂಭಿಸಿದ.

ನಾನು ನಗುತ್ತ, “ನನಗೆ ಮಾವಿನ ಹಣ್ಣೆಂದರೆ ಬಹಳ ಇಷ್ಟ” ಎಂದೆ. ಅವನ ಮುಖ ಊರಗಲವಾಗಿ,”ಹೌದೇನು, ತೊಗೊಳ್ಳಿ ಮೇಡಮ್, ನಿಮಗಾಗಿಯೇ ತಂದಿದ್ದೇನೆ” ಎನ್ನುತ್ತಾ ನನ್ನ ಕೈಗೆ ಪ್ಲಾಸ್ಟಿಕ್ ಚೀಲವನ್ನು ರವಾನಿಸಿದ. ನಾನು ಚೀಲದಲ್ಲಿದ್ದ ಹಣ್ಣುಗಳನ್ನು ಪರೀಕ್ಷಿಸುತ್ತಿರುವಾಗಲೇ ಅವನು, ಇನ್ನೂರು ರೂಪಾಯಿ ಕೊಡಿ ಮೇಡಂ, ಒಂದು ಕೆಜಿ ಇದೆ ಎಂದಾಗ ನಾನು, ಓಹ್ ಇವನು ಮಾರಲು ಬಂದಿದ್ದಾನೆ ಅಂತ ಅಂದುಕೊಂಡೆ. ಅದರ ಜೊತೆ ರೇಟು ಕೇಳಿ ಕರೆಂಟು ಹೊಡೆದ ಹಾಗಾಯಿತು, “ಏನು? ಇನ್ನೂರು ರೂಪಾಯಿನಾ? ನಾನು ಮೊನ್ನೆ ನೂರು ರೂಪಾಯಿಗೆ ಒಂದು ಕೆಜಿ ತೊಗೊಂಡು ಬಂದಿದ್ದೇನೆ” ಎಂದು ನಾನೆಂದಾಗ, ಅವನು , “ಅಯ್ಯೋ ಮೇಡಂ, ಅವರೆಲ್ಲ ನಿಮಗೆ ರಸಪೂರಿ ಅಂತ ಸುಳ್ಳು ಹೇಳಿ ಮೋಸ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೆಲ್ಲ ಈ ಹಣ್ಣು ಸಿಗೋದೇ ಇಲ್ಲ. ಹಣ್ಣುಗಳ ಸೈಜ್ ನೋಡಿ ಮೇಡಮ್” ಎಂದ. ಆದರೆ ನಾನು, ಇನ್ನೂರು ರೂಪಾಯಿ ಹೆಚ್ಚಾಯಿತು ಎನ್ನುತ್ತಾ ಅವನ ಕೈಗೆ ಪ್ಲಾಸ್ಟಿಕ್ ಚೀಲ ಕೊಡಲು ಹೋದೆ, ಅವನು ತೆಗೆದುಕೊಳ್ಳಲಿಲ್ಲ. “ನಿಮಗೆ ಅಂತ ಕಡಿಮೆಗೆ ಕೊಡ್ತಿದ್ದೀನಿ. ಇಲ್ಲಿ ಬೇರೆಯವರಿಗೆಲ್ಲ ಇನ್ನೂರಕ್ಕೆ ಕೊಟ್ಟೆ. ನೀವು ನೂರ ಎಂಭತ್ತು ಕೊಡಿ, ನೀವು ನಮ್ಮವರೇ ಅಲ್ವ” ಅಂದ.

ನನಗೆ ಅದರ ತೂಕದ ಮೇಲೆ ಸಂಶಯವಾಗಿ, “ಇರಿ, ಒಂದು ನಿಮಿಷ, ಒಂದು ಕೆಜಿ ಇದೆಯೋ ಇಲ್ಲವೋ ಅಂತ ನೋಡ್ತೀನಿ” ಅಂತ ಅನ್ನುತ್ತ ಒಳಗೆ ಹೋದೆ. ಸ್ಕೇಲ್ ಮೇಲೆ ಇಟ್ಟು ನೋಡಿದರೆ ಕಾಲು ಕೆಜಿಯಷ್ಟು ಕಡಿಮೆ ಬಂದಿತು. ಅಬ್ಬಾ ಇವನು ಮೋಸ ಮಾಡುತ್ತಿದ್ದಾನೆ, ತೂಕದಲ್ಲೂ ಮೋಸ, ಜೊತೆಗೆ ದುಪ್ಪಟ್ಟು ರೇಟು ಬೇರೆ. ನನಗೇನು ಗ್ರಹಚಾರವೇ ಇದನ್ನು ಕೊಳ್ಳಲು ಎಂದುಕೊಳ್ಳುತ್ತ ಹೊರಗೆ ಬಂದು ಅವನಿಗೆ, “ನನಗೆ ಬೇಡ, ತೂಕ ಬೇರೆ ಕಡಿಮೆ ಇದೆ” ಎಂದೆ. ಅವನು, “ಇಲ್ಲ ಮೇಡಂ ತೂಕ ಸರಿಯಾಗಿಯೇ ಇದೆ. ನಾನು ತೂಕ ಮಾಡಿಯೇ ತಂದಿದ್ದು, ನಿಮ್ಮ ಸ್ಕೇಲ್ ಸರಿ ಇಲ್ಲವೇನೋ” ಎಂದಾಗ ನನಗೆ ರೇಗಿ ಹೋದರೂ ಅವನ ಜೊತೆ ವಾಗ್ವಾದ ಮಾಡಲು ಮನಸ್ಸಿಲ್ಲದೆ, ಏನೇ ಇರಲಿ ದುಪ್ಪಟ್ಟು ದುಡ್ಡು ಕೊಟ್ಟು ಮಾವಿನ ಹಣ್ಣು ಕೊಳ್ಳುವ ಗ್ರಹಚಾರ ನನಗೆ ಬಂದಿಲ್ಲ, ಬೇಡ ಎಂದೆ.

ಆಗಲೂ ಅವನು ಚೀಲ ತೆಗೆದುಕೊಳ್ಳಲಿಲ್ಲ. ನಾನು ಚೀಲವನ್ನು ಅಲ್ಲೇ ನೆಲದ ಮೇಲಿಟ್ಟು ಬಾಗಿಲು ಹಾಕಲು ಹೋದೆ. ತಟ್ಟನೆ ಅವನು, “ಮೇಡಂ ಪ್ಲೀಸ್, ಹಣ್ಣು ತೊಗೊಳ್ಳಿ, ನೀವು ಹಣ್ಣು ತೆಗೆದುಕೊಳ್ಳದಿದ್ದರೆ ನಾನು, ಹೆಂಡತಿ, ಮಕ್ಕಳು ಉಪವಾಸ ಬೀಳಬೇಕಾಗುತ್ತದೆ” ಎನ್ನುತ್ತಿದ್ದಂತೆ ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಬೇರೆಯವರಿಗೆಲ್ಲ ಹಣ್ಣು ಮಾರಿ ಬಂದಿದ್ದೇನೆ ಎಂದವ ಈಗ ಹೀಗೆ ಮಾತನಾಡುತ್ತಾನೆ ಛೆ, ಯಾಕೆ ಬೇಕಿತ್ತು ನನಗೆ ಇವನ ಸಹವಾಸ, ಮನೆಕೆಲಸ ಬೇರೆ ಬಾಕಿ ಇದೆ ಎಂದು ಕಿರಿಕಿರಿಯಾಗಿ ಅವನನ್ನೊಮ್ಮೆ ಸಾಗ ಹಾಕುವ ಉದ್ದೇಶದಿಂದ, ಮತ್ತೆ ಎಷ್ಟಕ್ಕೆ ಕೊಡ್ತೀಯಾ ಎಂದು ಕೇಳಿದೆ. ನೂರೈವತ್ತು ಕೊಡಿ ಮೇಡಂ, ತೂಕ ಕಡಿಮೆ ಇದೆ ಅಂದ್ರಲ್ಲ ನಾಳೆ ಇಷ್ಟೇ ದೊಡ್ಡ ಎರಡು ಹಣ್ಣುಗಳನ್ನು ತಂದು ಕೊಡುತ್ತೇನೆ ನಿಮಗೆ ಎಂದು ಅಂಗಲಾಚಿದ.

ನನ್ನ ಮನಸ್ಸು ಕರಗಿ, ಹೋಗಲಿ ಯಾವ್ಯಾವುದಕ್ಕೋ ಖರ್ಚು ಮಾಡ್ತೀವಿ, ಹಾಗೆ ಹೋಯಿತು ಎಂದುಕೊಂಡರಾಯಿತು. ಅಲ್ಲದೆ ನಾಳೆ ಹಣ್ಣು ತಂದುಕೊಡುತ್ತಾನೆ ಎಂದನಲ್ಲ, ಮತ್ಯಾಕೆ ಚಿಂತೆ ಎಂದುಕೊಳ್ಳುತ್ತ ಒಳಗೆ ಹೋಗಿ ಪರ್ಸ್ ನಿಂದ ನೂರೈವತ್ತು ರೂಪಾಯಿ ತಂದುಕೊಟ್ಟು ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಕೈಗೆತ್ತಿಕೊಂಡೆ. ಅವನು ನಾನು ಕೊಟ್ಟ ದುಡ್ಡನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಸಂತಸದಿಂದ, ನಾಳೆ ಬರ್ತೀನಿ ಮೇಡಂ ಎಂದು ಹೇಳಿ ಹೊರಟು ಹೋದ.

ನಾನು ಒಳಗೆ ಬಂದು ನನ್ನ ಕೆಲಸದಲ್ಲಿ ಮುಳುಗಿದೆ. ಮಧ್ಯಾಹ್ನ ಗಂಡ ಮಕ್ಕಳು ಊಟಕ್ಕೆ ಮನೆಗೆ ಬಂದಾಗ ಮಾವಿನ ಹಣ್ಣಿನ ನೆನಪಾಗಿ ಹಣ್ಣುಗಳನ್ನು ತೊಳೆದು ಹೋಳುಗಳನ್ನಾಗಿ ಮಾಡಿ ಒಂದು ತಟ್ಟೆಯಲ್ಲಿಟ್ಟು ಟೇಬಲ್ ಮೇಲಿಟ್ಟೆ. ಮಕ್ಕಳು, ವಾವ್! ಮಾವಿನ ಹಣ್ಣು ಎನ್ನುತ್ತಾ ಒಂದೊಂದು ಹೋಳುಗಳನ್ನು ಕೈಗೆತ್ತಿಕೊಂಡರು. ಇವರು ಊಟ ಮಾಡುವುದರಲ್ಲೇ ಮಗ್ನರಾಗಿದ್ದರು. ಮಕ್ಕಳು, “ಮಮ್ಮಿ ಹಣ್ಣು ಭಾರಿ ರುಚಿಯಾಗಿದೆ” ಎಂದಾಗ ನನಗೆ ನೂರೈವತ್ತು ಕೊಟ್ಟೆನಲ್ಲ ಎಂದು ಇದ್ದ ಅಸಮಾಧಾನ ಹೊರಟು ಹೋಯಿತು. ಜೊತೆಗೆ ಸಂತಸವಾಗಿ ನಾನೂ ಒಂದು ಹೋಳನ್ನು ಕೈಗೆತ್ತಿಕೊಂಡೆ, ಇವರಿಗೂ ಕೊಟ್ಟೆ. ಅವನು ಹೇಳಿದಂತೆ ಹಣ್ಣು ಮಾತ್ರ ಬಹಳ ರುಚಿಯಾಗಿತ್ತು. ಇವರೂ ತಿಂದು, ಹಣ್ಣು ಅದ್ಭುತವಾಗಿದೆ ಎಲ್ಲಿ ತೊಗೊಂಡೆ ಎಂದಾಗ ನಾನು ಹಣ್ಣು ಮಾರಲು ಬಂದಿದ್ದ ವಿಷಯ ಹೇಳಿದೆ.

ನೂರೈವತ್ತು ರೂಪಾಯಿ ಕೊಟ್ಟೆ ಎಂದಾಗ ಇವರು ಹುಬ್ಬೇರಿಸಿದರು. “ಇದೇನೂ ಸೀಸನ್ ನ ಮೊದಲ ಹಣ್ಣಲ್ಲ, ಅಷ್ಟೊಂದು ದುಬಾರಿ ರೇಟು ಕೊಟ್ಟು ಕೊಂಡುಕೊಳ್ಳೋಕೆ. ಯಾಕೆ ತೊಗೊಂಡೆ ನೀನು” ಎಂದು ಇವರು ಆಕ್ಷೇಪಿಸಿದಾಗ ನಾಳೆ ಎರಡು ಹಣ್ಣು ಫ್ರೀಯಾಗಿ ತಂದುಕೊಡುತ್ತೇನೆ ಎಂದು ಹೇಳಿದ್ದಾನೆ ಎಂದಾಗ, “ಹೌದು ಹೌದು, ಕಾಯ್ತಾ ಇರು, ಆದ್ರೆ ಅವನು ಮಾತ್ರ ಬರಲ್ಲ, ನಿಮ್ಮಂಥ ಮುಗ್ಧ ಹೆಂಗಸರಿಗೆ ಮೋಸ ಮಾಡೋದು ಅದೆಷ್ಟು ಸುಲಭ, ಸ್ವಲ್ಪ ಕಣ್ಣೀರು ಹಾಕಿದ್ರೆ ಇದ್ದುದೆಲ್ಲ ಕೊಟ್ಟು ಬಿಡ್ತೀರಿ” ಎಂದು ಇವರು ರೇಗಿದಾಗ ನನಗೆ, ನಾನು ನಿಜವಾಗಿಯೂ ಮೋಸ ಹೋದೆನೇ, ಛೆ ಆ ಮನುಷ್ಯ ನೋಡಿದರೆ ಒಳ್ಳೆಯವನ ಹಾಗೆ ಕಾಣುತ್ತಾನೆ ಎಂದುಕೊಳ್ಳುತ್ತಿದ್ದಂತೆ ಮರುಕ್ಷಣ ನನ್ನ ಒಳಮನಸ್ಸು ಅವನು ದುಪ್ಪಟ್ಟು ದರ ಹೇಳಿಲ್ಲವೇ ಅದರ ಜೊತೆ ತೂಕದಲ್ಲೂ ಮೋಸ ಮಾಡಿದ್ದಾನೆ ಅಂದ ಮೇಲೆ ಅವನು ಒಳ್ಳೆಯವನಿರಲು ಹೇಗೆ ಸಾಧ್ಯ. ಹಾಗಿದ್ದರೆ ಮೊಸಳೆ ಕಣ್ಣೀರು ಹಾಕಿಕೊಂಡು ಮಹಿಳೆಯರಿಗೆಲ್ಲ ಮೋಸ ಮಾಡಿ ಹೋಗುವ ಮೋಸಗಾರನೇ, ಆದರೆ ಅವನು ನಾಳೆ ಬರುತ್ತೇನೆ ಎಂದಿದ್ದಾನಲ್ಲವೇ ನೋಡೋಣ ಎಂದುಕೊಳ್ಳುತ್ತ, ಯಾವುದಕ್ಕೂ ನಾಳೆ ನೋಡೋಣ ಎಂದೆ. ಇವರು ಸುಮ್ಮನಾದರು.

ಮಾರನೆಯ ದಿನ ಹಣ್ಣು ಮಾರುವವನಿಗಾಗಿ ಕಾಯುತ್ತ ಕುಳಿತೆ. ಸಂಜೆಯಾದರೂ ಆತನ ಪತ್ತೆಯಿಲ್ಲ. ನನಗೆ ತೀವ್ರ ನಿರಾಸೆಯಾಯಿತು. ಇವರು ಹೇಳಿದ್ದು ನಿಜವಾಯಿತಲ್ಲ ಛೆ, ನನ್ನನ್ನು ಮಾತಿನಿಂದ ಮರುಳು ಮಾಡಿ ಮೋಸ ಮಾಡಿಬಿಟ್ಟನಲ್ಲ, ಇನ್ನು ಬಂದರೆ ಅವನು ಎಷ್ಟೇ ಬೇಡಿಕೊಂಡರೂ ಅವನ ಬಳಿ ಹಣ್ಣುಗಳನ್ನು ಕೊಳ್ಳುವುದಿಲ್ಲ ಎಂದು ಸಿಟ್ಟಿನಲ್ಲೇ ಶಪಥ ಮಾಡಿದೆ. ಇವರು ಮನೆಗೆ ಬಂದಮೇಲೆ, ಹಣ್ಣು ತಂದುಕೊಟ್ಟನೇ ಎಂದು ಕೇಳ ಹೊರಟವರು ನನ್ನ ಸಪ್ಪೆ ಮುಖ ಕಂಡು ಸುಮ್ಮನಾದರು. ಇವತ್ತಲ್ಲ ನಾಳೆ ಬಂದಾನು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆದರೆ ಅವನು ಬರಲೇ ಇಲ್ಲ.

ಆಗ ನನಗೆ ಅವನು ಮೋಸ ಮಾಡಿದ್ದರ ಬಗ್ಗೆ ಕಿಂಚಿತ್ತೂ ಸಂಶಯ ಉಳಿಯಲಿಲ್ಲ. ನನಗೆ ಬಹಳ ಬೇಸರವಾಯಿತು, ಇಂಥಾ ಮೋಸಗಾರರು ಇರುವುದರಿಂದಲೇ ಜನರಿಗೆ ಬೇರೆಯವರನ್ನು ನಂಬುವುದು ಕಷ್ಟವಾಗುವುದು, ತಾವೆಲ್ಲಿ ಮೋಸ ಹೋಗುತ್ತೇವೋ ಎಂಬ ಅನುಮಾನದಿಂದ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಜನ ಸಹಾಯ ಮಾಡಲು ಹಿಂದೇಟು ಹಾಕುವುದು. ಇನ್ನು ಯಾರೇ ಕಣ್ಣೀರು ಹಾಕಿದರೂ ನಾನು ಸಹಾಯ ಮಾಡಲು ಹೋಗುವುದಿಲ್ಲ ಎಂದು ನಾನು ಶಪಥ ಮಾಡಿಕೊಂಡೆ. ನಾನು ಮೋಸ ಹೋಗಿದ್ದು ನನಗೆ ತೀವ್ರ ಮುಜುಗರ ತಂದಿತ್ತು.

ವಾರದ ಬಳಿಕ ಹಣ್ಣಿನವ ನಮ್ಮ ಮನೆಯ ಎದುರು ಮನೆಗೆ ಬಂದು ಬೆಲ್ ಮಾಡಿದ. ಅದನ್ನು ಕಿಟಕಿಯಿಂದ ನೋಡಿದ ನನಗೆ ಅವನು ನಮ್ಮ ಮನೆಗೆ ಬಂದು ಹಣ್ಣು ಕೊಡಬಹುದು. ಇಷ್ಟು ದಿನ ಬರದೇ ಇರಲು ಏನಾದರೂ ಬಲವಾದ ಕಾರಣವಿರಬಹುದು. ಅವನಿಗೆ ಹುಷಾರಿರಲಿಲ್ಲವೇನೋ ಎಂದುಕೊಳ್ಳುತ್ತಿದ್ದಂತೆ ಮತ್ತೆ ಆಸೆ ಚಿಗುರಿತು. ನಾನು ನನ್ನ ಕೆಲಸದಲ್ಲಿ ಮಗ್ನಳಾಗಿ ಬಿಟ್ಟೆ. ಸುಮಾರು ಹೊತ್ತಾದ ಮೇಲೆ ಅವನ ನೆನಪಾಗಿ ಕಿಟಕಿಯಿಂದ ಹೊರ ನೋಡಿದೆ. ಅಲ್ಲಿ ಅವನಿರಲಿಲ್ಲ. ಓಹ್! ಅವನು ನಿಜವಾಗಿಯೂ ಮೋಸಗಾರನೇ ಎಂದುಕೊಳ್ಳುತ್ತಿದ್ದಂತೆ ನಿರುತ್ಸಾಹ ಮೂಡಿತು. ನಮಗೆ ಹಣ್ಣು ಕೊಡಲಿಕ್ಕಿದೆ ಎಂದು ಅವನಿಗೆ ಚೆನ್ನಾಗಿ ನೆನಪಿತ್ತು. ಅದಕ್ಕೇ ನಮ್ಮ ಮನೆಗೆ ಬರಲಿಲ್ಲ. ಇನ್ನು ಬರಲಿ, ಬಾಗಿಲೇ ತೆರೆಯುವುದಿಲ್ಲ ಎಂದು ನಿರ್ಧಾರ ಮಾಡಿಕೊಂಡೆ. ಆದರೆ ಆಮೇಲೆ ಅವನ ಪತ್ತೆಯೇ ಇಲ್ಲ.

ಸುಮಾರು ಒಂದು ತಿಂಗಳಾದ ಮೇಲೆ ಒಂದು ದಿನ ನಮ್ಮ ಮನೆಯ ಡೋರ್ ಬೆಲ್ ಬಾರಿಸಿತು. ಯಾರೆಂದು ಬಾಗಿಲ ತೂತಿನಿಂದ ನೋಡಿದಾಗ ನನಗೆ ಅಚ್ಚರಿಯಾಯಿತು. ಅಲ್ಲಿ ಹಣ್ಣಿನವ ನಿಂತಿದ್ದ! ನಾನು ನಮಗೆ ಕೊಡಬೇಕಾದ ಹಣ್ಣುಗಳ ಬಗ್ಗೆ ಕೇಳಲೇ ಅಥವಾ ಅವನೇ ಹಣ್ಣು ಕೊಡಲು ಬಂದಿರಬಹುದೇ ಎಂದು ತುಡಿತವುಂಟಾಗಿ ಬಾಗಿಲು ತೆರೆದೆ. ನನ್ನನ್ನು ಹೊಸದಾಗಿ ನೋಡುವವನಂತೆ ನೋಡುತ್ತಾ ಕನ್ನಡ ಎಂದು ಪ್ರಶ್ನಾರ್ಥಕವಾಗಿ ನೋಡಿದಾಗ ನನಗೆ ಅವನ ಮೇಲೆ ಜಿಗುಪ್ಸೆ ಉಂಟಾಯಿತು. ಛೆ, ಎಷ್ಟು ನಾಟಕ ಮಾಡ್ತಿದ್ದಾನೆ. ಇನ್ನು ನಾನು ಹಣ್ಣುಗಳ ಬಗ್ಗೆ ಕೇಳಿದರೆ ಏನೂ ಗೊತ್ತಿಲ್ಲದವನಂತೆ ನಟಿಸಬಹುದು, ಇವನ ಬಳಿ ತನಗೇನು ಕೆಲಸ ಎಂದುಕೊಳ್ಳುತ್ತ ನಾನು ಅಲ್ಲವೆನ್ನುವಂತೆ ತಲೆಯಾಡಿಸಿ ಬಾಗಿಲು ಹಾಕಿಬಿಟ್ಟೆ.

ಅವನು ಹೊರಗೆ ನಿಂತು ಹಿಂದಿಯಲ್ಲಿ, ಅರೆಬರೆ ಇಂಗ್ಲಿಷ್ನಲ್ಲಿ, ತಾನು ತಂದ ಹಣ್ಣುಗಳ ವರ್ಣನೆ ಮಾಡುತ್ತಲೇ ಇದ್ದ. ನಾನು ಮಾತ್ರ ಮುಚ್ಚಿದ ಬಾಗಿಲನ್ನು ಮತ್ತೆ ತೆರೆಯಲೇ ಇಲ್ಲ. ಸ್ವಲ್ಪ ಹೊತ್ತು ಅಲ್ಲೆ ನಿಂತಿದ್ದವ ನಂತರ ಹೊರಟು ಹೋದ. ಮಾರನೆಯ ದಿನ ಮತ್ತೆ ಬಂದ. ಆದರೆ ನನಗೆ, ಬಂದ್ದಿದ್ದು ಅವನು ಎಂದು ತಿಳಿದು ಬಾಗಿಲು ತೆರೆಯಲಿಲ್ಲ. ಎಂಥಾ ಮೋಸಗಾರರಿದ್ದಾರೆ ಈ ಜಗತ್ತಿನಲ್ಲಿ, ಇನ್ಯಾರನ್ನೂ ನಂಬಬಾರದು ಎಂದು ನಾನು ದೃಢವಾಗಿ ನಿಶ್ಚಯಿಸಿದೆ.

ವಾರದ ನಂತರ ಮತ್ತೆ ಬಂದು ಬೆಲ್ ಮಾಡಿದ. ಆದರೂ ನಾನು ಬಾಗಿಲು ತೆರೆಯಲಿಲ್ಲ. ಆದರೂ ಅವನು ಎದುರು ಮನೆಗೆ ಬಂದಾಗಲೆಲ್ಲ ನಮ್ಮ ಮನೆಯ ಬೆಲ್ ಬಾರಿಸುವುದು ಮಾತ್ರ ಬಿಡಲಿಲ್ಲ. ಒಂದು ದಿನ ನಾನು ಎದುರು ಮನೆಯವರ ಬಳಿ ಆತನ ವಿಷಯ ಹೇಳಿದೆ. ಅವರು, “ಅದೊಂದು ಕಿರಿಕ್ ಪಾರ್ಟಿ, ಮೇಲಿಂದ ಮೇಲೆ ಬೆಲ್ ಬಾರಿಸ್ತಾನೆ ಅಂತ ಬಾಗ್ಲು ತೆರಿಯೋದು. ಬಾಗಿಲು ತೆರೆದ್ರೆ ತೊಗೊಳ್ಳೊವರೆಗೂ ಬಿಡೋದೇ ಇಲ್ಲ. ನಮಗೂ ಮೋಸ ಮಾಡಿದ್ದಾನೆ ಅದಕ್ಕೇ ತೊಗೊಳ್ಳಲ್ಲ, ಆದ್ರೂ ಬರ್ತಾನೆ ಇರ್ತಾನೆ. ಬರಬೇಡಾ ಅಂತ ಎಷ್ಟೇ ಹೇಳಿದರೂ ಕೇಳಲ್ಲ. ಒಂದು ದಿನ ಬೇಜಾರಾಗಿ ಅವನೇ ಬರೋದನ್ನ ನಿಲ್ಲಿಸಿ ಬಿಡ್ತಾನೆ” ಎಂದರು. ಆಗ ನನಗೆ, ಮೋಸ ಹೋಗಿದ್ದು ನಾನೊಬ್ಬಳೇ ಅಲ್ಲ ಅಂತ ತಿಳಿದು ಸಮಾಧಾನವಾಯಿತು.

ಆ ಘಟನೆ ನಡೆದು ಒಂದು ವರುಷವಾದರೂ ಅವನು ನಮ್ಮ ಮನೆಗೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ನಾನು ಬಾಗಿಲು ತೆರೆದರೆ ನನಗೆ ಮತ್ತೊಮ್ಮೆ ಮೋಸ ಮಾಡೋಣ ಎನ್ನುವ ಆಸೆಯಿಂದಲೋ ಅಥವಾ ನಾವಿದ್ದ ಮನೆಗೆ ಬೇರೆಯವರು ಬಂದಿದ್ದರೆ ಅವರಿಗೆ ಮೋಸ ಮಾಡೋಣವೆಂಬ ಉದ್ದೇಶದಿಂದಲೋ ಅಂತೂ ಬೆಲ್ ಬಾರಿಸುವುದನ್ನು ಮಾತ್ರ ಇನ್ನೂ ಬಿಟ್ಟಿಲ್ಲ.
ಆಗೋ, ಡೋರ್ ಬೆಲ್ ಬಾರಿಸಿತು. ಅವನೇ ಬಂದನೇನೋ !?

ಪಿಂಕ್ ನೋಟು

ಸಾವಿರ ಹಾಗೂ ಐನೂರು ರೂಪಾಯಿ ನೋಟುಗಳು ನಿಷೇಧವಾದ ಮೇಲೆ ಎರಡು ಸಾವಿರ ರೂಪಾಯಿಗಳ ಹೊಸ ನೋಟು ಬ್ಯಾಂಕ್ ಗೆ ಬಂದ ದಿನ ಎಲ್ಲರಿಗೂ ಹೊಸ ಹುಮ್ಮಸ್ಸು, ಹೊಸ ನೋಟು ನೋಡಬೇಕು ಅದನ್ನು ತಮ್ಮದಾಗಿಸಬೇಕು ಎಂದು ಉತ್ಸಾಹದಿಂದಲೇ ಎಲ್ಲರೂ ಬ್ಯಾಂಕಿಗೆ ಓಡಿದ್ದರು. ಟೀವಿಯಲ್ಲಿ ಜನ ತಾವು ಪಡೆದುಕೊಂಡ ನೋಟನ್ನು ಟ್ರೋಫಿ ಪಡೆದವರಂತೆ ಅದನ್ನು ಪ್ರದರ್ಶಿಸುವುದನ್ನು ಕಂಡು ಆಸೆಯಿಂದ ನಾನೂ ಬ್ಯಾಂಕಿಗೆ ಧಾವಿಸಿದೆ.

ಮನೆಯಲ್ಲಿದ್ದ ಹಳೆಯ ನೋಟುಗಳನ್ನೆಲ್ಲ ಲಗುಬಗೆಯಿಂದ ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಜಮಾಯಿಸಿದೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಗರಿ ಗರಿಯಾದ ಪಿಂಕ್ ನೋಟು ಕೈಗೆ ಬರುತ್ತಲೇ ಅದೇನೋ ಅವರ್ಚನೀಯ ಆನಂದ! ಕ್ಯೂನಲ್ಲಿ ನಿಂತ ಬೇಸರ ದಣಿವು ಎಲ್ಲವೂ ಮಾಯವಾಗಿ ಬಿಟ್ಟಿತ್ತು. ಮನೆಗೆ ಬಂದು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟೆ. ಓಹ್, ನಿಮಗೆ ಆಗಲೇ ಸಿಕ್ಕಿಬಿಟ್ಟಿತೇ, ನೀವು ಲಕ್ಕಿ, ನಮಗಿನ್ನೂ ಸಿಕ್ಕೇ ಇಲ್ಲ ಎಂದು ಕಮೆಂಟುಗಳ ಕೊನೆಯಲ್ಲಿದ್ದ ಅಳು ಮೊರೆಯ ಇಮೊಜಿಯನ್ನು ಕಂಡು ನನ್ನನ್ನು ಅದೃಷ್ಟಶಾಲಿ ಇನ್ನಾರೂ ಇಲ್ಲ ಎಂದು ಬೀಗಿದೆ.

ಎರಡು ದಿನ ಬಿಟ್ಟು ಸಾಮಾನು ತರಲು ಅಂಗಡಿಗೆ ಹೋದೆ. ಅಂಗಡಿಯವ ಸಾಮಾನುಗಳನ್ನು ಕೊಟ್ಟು ಬಿಲ್ ನಾಲ್ಕ್ ನೂರ ಮೂವತ್ತು ಎಂದ. ನಾನು ಜಂಭದಿಂದಲೇ ನನ್ನ ಪರ್ಸ್ ನಲ್ಲಿ ಆರಾಮಾವಾಗಿ ಕಾಲು ಚಾಚಿ ಮಲಗಿದ್ದ ಗರಿಗರಿಯಾಗಿದ್ದ ಪಿಂಕ್ ನೋಟನ್ನು ತೆಗೆದು ಅವನತ್ತ ಚಾಚಿದೆ ಅಷ್ಟೇ, ಅವನು ದೆವ್ವ ಕಂಡವನಂತೆ ಬೆಚ್ಚಿ ಅಯ್ಯೋ ಪಿಂಕ್ ನೋಟಾ ಎಂದು ಉದ್ಗರಿಸಿದ. ಅವನು ಪಿಂಕ್ ನೋಟು ನೋಡೇ ಇಲ್ಲವೇನೋ ಅಂದುಕೊಂಡು ಗತ್ತಿನಿಂದ ನಗುತ್ತ, ಹೌದು, ನೀವು ನೋಡೇ ಇಲ್ವಾ ಎಂದು ಕೇಳಿದೆ.

ಅವನು, ಅಲ್ಲ ಮೇಡಂ, ಇಷ್ಟು ದೊಡ್ಡ ನೋಟು ಕೊಡ್ತಿದ್ದೀರಲ್ಲ, ನಾನು ಚಿಲ್ಲರೆ ಎಲ್ಲಿಂದ ಕೊಡಲಿ ನಿಮಗೆ, ಚಿಲ್ಲರೆ ಇಲ್ಲ ಮೇಡಂ, ಚಿಲ್ಲರೆ ಸರಿಯಾಗಿ ಕೊಟ್ರೇನೆ ಸಾಮಾನು ಎನ್ನುತ್ತ ಸಾಮಾನುಗಳನ್ನು ಪಕ್ಕಕ್ಕೆ ತೆಗೆದಿರಿಸತೊಡಗಿದ. ನನಗೆ ಮುಖ ಭಂಗವಾದಂತಾಯಿತು. ಪರ್ಸ್ ನಲ್ಲಿ ಇನ್ನೊಂದು ಪಿಂಕ್ ನೋಟು ಬಿಟ್ಟರೆ ಬರೀ ಇಪ್ಪತ್ತರ ಎರಡು ನೋಟುಗಳು ಮಾತ್ರ ಇದ್ದವು. ಬೇರೆ ನೋಟುಗಳೇ ಇಲ್ಲ, ಛೆ ಹೊಸ ನೋಟಿಗೆ ಎಂಥಾ ಅವಮರ್ಯಾದೆ, ನನಗೂ ಯಾಕೆ ಹೊಳೆದಿಲ್ಲ ಅಷ್ಟೊಂದು ದೊಡ್ಡ ನೋಟಿಗೆ ಚಿಲ್ಲರೆ ಸಿಗುತ್ತದೆಯೇ ಎಂದು. ಈಗ ಸಾಮಾನುಗಳನ್ನು ತೆಗೆದುಕೊಳ್ಳುವುದಾದರೂ ಹೇಗೆ ಎಂದುಕೊಳ್ಳುತ್ತ, ಈಗ ಬಂದೆ, ಚಿಲ್ಲರೆ ಮಾಡಿಸ್ಕೊಂಡು ಬರ್ತೀನಿ ಎಂದಾಗ ಅವನು ಕುಹಕದ ನಗೆ ನಕ್ಕ.

ನಾನು ಅದನ್ನು ಗಮನಿಸದವಳಂತೆ ಪಕ್ಕದ ಅಂಗಡಿಗೆ ನುಗ್ಗಿದೆ. ಚಿಲ್ಲರೆ ಇದ್ರೆ ಕೊಡಪ್ಪ ಎನ್ನುತ್ತಾ ಪಿಂಕ್ ನೋಟು ಹೊರತೆಗೆದಾಗ ಕಿರಾಣಿ ಅಂಗಡಿಯವನಂತೆ ಈತನೂ ಬೆಚ್ಚಿ ಬಿದ್ದ! ಅರೆ ಎಲ್ಲರೂ ಈ ನೋಟನ್ನು ನೋಡಿ ಯಾಕೆ ಬೆಚ್ಚಿ ಬೀಳ್ತಿದ್ದಾರೆ ಎಂದು ಅವನನ್ನೇ ಕೇಳಿದೆ. ಅಲ್ಲ ಮೇಡಂ ಇಷ್ಟು ದೊಡ್ಡ ನೋಟಿಗೆ ನಿಮಗೆ ಚಿಲ್ಲರೆ ಎಲ್ಲಿ ಸಿಗುತ್ತೆ, ನೀವು ಬ್ಯಾಂಕಿಗೇ ಹೋಗಬೇಕು ಎಂದ. ನನ್ನ ಉತ್ಸಾಹ ಆಗಲೇ ಟುಸ್ಸೆನ್ನತೊಡಗಿತು. ಇನ್ಯಾರ ಹತ್ರವೂ ಉಗಿಸಿಕೊಳ್ಳುವ ಮನಸ್ಸಾಗದೆ ಅಲ್ಲಿಂದ ನೇರವಾಗಿ ಬ್ಯಾಂಕಿಗೆ ಧಾವಿಸಿದೆ.

ಅಲ್ಲಿನ ಕ್ಯೂ ನೋಡಿ ನಾನು ಬೆಚ್ಚಿ ಬಿದ್ದೆ. ಹನುಮಂತನ ಬಾಲದಂತಿದ್ದ ಕ್ಯೂ ನೋಡಿ ಇವತ್ತು ಉಪವಾಸವೇ ಗತಿಯೇನೋ ಅಂದುಕೊಂಡೆ. ಹಾಗೂ ಹೀಗೂ ನನ್ನ ಸರದಿ ಬಂದಾಗ ನನ್ನ ಪಿಂಕ್ ನೋಟನ್ನು ಅವನತ್ತ ಚಾಚಿ ಚಿಲ್ಲರೆ ಕೊಡಪ್ಪ ಎಂದೆ. ಆತನ ಅಕ್ಕ ಪಕ್ಕದಲ್ಲಿದ್ದವರು ನನ್ನನ್ನು ನೋಡಿ ನಕ್ಕರು.

ಬ್ಯಾಂಕಿನವ, ದುಡ್ಡು ಬಂದಿಲ್ಲ ಮೇಡಂ, ನಾಳೆ ಬನ್ನಿ ಎಂದ. ಅರೆ! ನಂಗೆ ಸಾಮಾನು ಕೊಳ್ಳೋದಿದೆ. ಈಗಲೇ ಬೇಕು ಎಂದೆ. ಅವನು ನನಗುತ್ತರಿಸುವ ಗೋಜಿಗೆ ಹೋಗದೆ ಬೇರೆಯವರಿಗೆ ಪಿಂಕ್ ನೋಟುಗಳನ್ನು ದಯಪಾಲಿಸತೊಡಗಿದ. ಅದನ್ನು ಕಂಡು ನಾನು ಅವರತ್ತ ಕರುಣಾಜನಕ ದೃಷ್ಟಿ ಬೀರಿದೆ. ಪಾಪ ಇವರಿಗೆಲ್ಲ ಗೊತ್ತಿಲ್ಲ, ಪಿಂಕ್ ನೋಟಿಗೆ ಎಲ್ಲೂ ಚಿಲ್ಲರೆ ಸಿಗುವುದಿಲ್ಲವೆಂದು ಎಂದುಕೊಳ್ಳುತ್ತ ಇನ್ನೊಂದು ಬ್ಯಾಂಕಿಗೆ ಧಾವಿಸಿದೆ.

ಆತನಿಗೆ ನನ್ನ ಪರಿಚಯವಿದ್ದುದರಿಂದ ನನ್ನ ಪಿಂಕ್ ನೋಟು ತೆಗೆದುಕೊಂಡಾಗ, ಅಬ್ಬಾ ಇಲ್ಲಾದರೂ ಚಿಲ್ಲರೆ ಸಿಗುತ್ತಲ್ಲ ಎಂದುಕೊಂಡು ನಿಟ್ಟುಸಿರು ಬಿಟ್ಟೆ. ಆದರೆ ಅವನು ಇಪ್ಪತ್ತು ರೂಪಾಯಿ ನೋಟುಗಳ ಬಂಡಲ್ ಒಂದನ್ನು ತೆಗೆದು ಕೈಗಿತ್ತಾಗ ನಾನು, ಅಯ್ಯೋ, ಇದ್ಯಾಕೆ, ನೂರರ ನೋಟು ಕೊಡಪ್ಪಾ ಎಂದೆ. ಇಲ್ಲ ಮೇಡಂ ನೂರೂ ಇಲ್ಲ ಐವತ್ತೂ ಇಲ್ಲ, ಇದೇ ಇರೋದು ಅನ್ನುತ್ತ ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದ. ಅಷ್ಟರಲ್ಲಿ ನನ್ನ ಹಿಂದುಗಡೆ ನಿಂತಿದ್ದವ, ಮೇಡಂ, ನಿಮಗೆ ಬೇಡಾ ಅಂದ್ರೆ ನಾನು ತೊಗೊಳ್ತಿನಿ ಎನ್ನುತ್ತಾ ತನ್ನ ಕೈಯಲ್ಲಿದ್ದ ಒಂದು ಪಿಂಕ್ ನೋಟನ್ನು ಬ್ಯಾಂಕಿನವನತ್ತ ಚಾಚಿದ. ಅದನ್ನು ನೋಡಿ ನಾನು ಗಾಬರಿಯಿಂದ ಇದನ್ನು ಬಿಟ್ಟರೆ ಇನ್ನು ಹತ್ತು ರೂಪಾಯಿನದ್ದೇ ಸಿಗಬಹುದು ಎಂದುಕೊಂಡು ಬ್ಯಾಂಕಿನವನ ಕೈಯಿಂದ ಬಂಡಲ್ ಕಿತ್ತು ಕೊಂಡು ಅಲ್ಲಿಂದ ಅಂಗಡಿಯತ್ತ ಧಾವಿಸಿದೆ.

ಅಂಗಡಿಯವ ನನ್ನ ಕೈಯಲ್ಲಿದ್ದ ಇಪ್ಪತ್ತರ ಬಂಡಲ್ ಕಂಡು ಕರುಣೆಯಿಂದ, ಮೇಡಂ ಈವಾಗ ಇನ್ನೂರು ರೂಪಾಯಿ ಮಾತ್ರ ಕೊಟ್ಬಿಡಿ, ನಿಮಗೂ ಅರ್ಜೆಂಟಿಗೆ ದುಡ್ಡು ಬೇಕಾಗುತ್ತಲ್ವೆ ಎಂದಾಗ, ಅಯ್ಯೋ ದೇವರೇ, ಇವನ ಬಳಿ ಸಾಲ ಮಾಡಬೇಕೇ, ಇದುವರೆಗೂ ಒಬ್ಬರ ಹತ್ರಾನೂ ಸಾಲ ಪಡೆಯದೇ ಈವಾಗ ಸಾಲಗಾರಳಾಗಬೇಕೆ ಎಂದು ಮನಸ್ಸು ಮುದುಡಿತು. ಆದರೆ ಎಲ್ಲ ಕೊಟ್ಟು ಬಿಟ್ಟರೆ, ಹಾಲಿಗೆ, ತರಕಾರಿಗೆ, ಪೇಪರ್ ಗೆ ಏನು ಮಾಡಲಿ ಎಂದು ಯೋಚನೆಯೂ ಆಯಿತು.

ನಾನು ಅರೆಮನಸ್ಸಿನಿಂದ ಆಗಲೀಪ್ಪ, ಉಳಿದ ದುಡ್ಡು ಬೇಗನೆ ವಾಪಾಸು ಕೊಟ್ ಬಿಡ್ತೀನಿ ಎಂದೆ. ಆತ ನಗುತ್ತ, ಪರವಾಗಿಲ್ಲಮ್ಮ ನಿಧಾನಕ್ಕೆ ಕೊಡಿ. ನೀವು ನಮ್ಮ ಅಂಗಡಿಗೆ ತಾನೇ ಬರೋದು, ನಿಮ್ಮ ಕಷ್ಟಕ್ಕೆ ನಾವು ಸಹಾಯ ಮಾಡಲೇ ಬೇಕಲ್ಲವೇ ಎನ್ನುತ್ತಾ ಸಾಮಾನಗಳನ್ನು ಬ್ಯಾಗಿಗೆ ತುಂಬಿಸಿಕೊಟ್ಟ. ನಾನು ಅವನಿಗೆ ಇನ್ನೂರು ರೂಪಾಯಿ ಕೊಟ್ಟು ಮನೆಯತ್ತ ಹೊರಟೆ. ಅಂಗಡಿಗಳಲ್ಲಿ ಹೊಸ ವಿನ್ಯಾಸದ ಬ್ಯಾಗುಗಳು ನನ್ನನ್ನು ಕೂಗಿ ಕರೆಯುತ್ತಿದ್ದವು. ಕೊಳ್ಳುವ ಆಸೆಯಾದರೂ ಖಾಲಿ ಪರ್ಸ್ ನ ನೆನಪಾಗಿ ಬರೀ ನೋಡಿಯೇ ತೃಪ್ತಿ ಪಡಬೇಕಾಯಿತು. ದಾರಿಯಲ್ಲಿ ಹಣ್ಣಿನ ಅಂಗಡಿ ಕಂಡು ತೆಗೆದುಕೊಳ್ಳುವ ಮನಸ್ಸಾದರೂ ಈಗಲೇ ಎಲ್ಲ ಖರ್ಚು ಮಾಡಿಬಿಟ್ಟರೆ ನಾಳೆಗೆ ಏನು ಗತಿ, ದಿನಾ ಬ್ಯಾಂಕಿಗೆ ಓಡಬೇಕಾದ ಪರಿಸ್ಥಿತಿ ಬಂತಲ್ಲಾ ಎಂದುಕೊಳ್ಳುತ್ತಿದ್ದಂತೆ ಎ ಟಿ ಎಂ ನ ನೆನಪಾಗಿ ಅತ್ತ ಧಾವಿಸಿದೆ.

ಆದರೆ ಅಲ್ಲಿ ಇದ್ದ ದೊಡ್ಡ ಕ್ಯೂ ನೋಡಿ ಗಾಬರಿಯಾಗಿ ಮನೆಯತ್ತ ಕಾಲೆಳೆಯುತ್ತಾ ನಡೆದೆ. ಹೋಗುವಾಗಿನ ಉತ್ಸಾಹ ಬರುವಾಗ ಇರಲಿಲ್ಲ. ಯಾವಾಗಲೂ ಹೊರಗೆ ಹೋದರೆ ಕೈಯಲ್ಲಿ ಎರಡು ಮೂರು ಬ್ಯಾಗುಗಳ ತುಂಬಾ ಸಾಮಾನುಗಳು ಇರುತ್ತಿದ್ದವು. ಕಣ್ಣಿಗೆ ಹಿತವೆನಿಸಿದ್ದೆಲ್ಲವನ್ನು ಕೊಂಡುಕೊಳ್ಳುತ್ತಿದ್ದೆ. ಈಗ ದುಡ್ಡಿದ್ದೂ ಬಡತನದ ಅನುಭವವಾಯಿತು. ಈಗ ಏನಾದರೂ ಕೊಳ್ಳಬೇಕೆಂದರೆ ನೂರು ಬಾರಿ ಯೋಚಿಸಬೇಕು ಎಂದುಕೊಳ್ಳುತ್ತ ಮನೆಗೆ ಬಂದೆ.

ಪಿಂಕ್ ನೋಟಿನ ಮೋಹವೂ ಹೊರಟು ಹೋಯಿತು. ಅದನ್ನು ನೋಡಿದಾಗ ಖಾಲಿ ಕಾಗದವನ್ನೇ ನೋಡಿದಂತಾಯಿತು. ಮನೆಗೆ ಬಂದವಳೇ ಪರ್ಸ್ ತೆಗೆದು ಇಪ್ಪತ್ತರ ಕೆಂಪು ನೋಟುಗಳನ್ನು ನೋಡುತ್ತಾ, ಎಂಥಾ ಗತಿ ಬಂದು ಬಿಟ್ಟಿತಪ್ಪ, ಮೋದಿಯವರು ನಮ್ಮೆಲ್ಲರನ್ನೂ ಒಮ್ಮೆಲೇ ಬಡವರನ್ನಾಗಿ ಮಾಡಿಬಿಟ್ಟರಲ್ಲ, ನೂರು, ಐವತ್ತು ರೂಪಾಯಿಗಳ ನೋಟುಗಳಿಗಾಗಿ ದಿನಾ ಪರದಾಡುವಂತೆ ಮಾಡಿಬಿಟ್ಟರಲ್ಲ ಎಂದುಕೊಳ್ಳುತ್ತಾ ಸೋಫಾದಲ್ಲಿ ಕುಸಿದೆ. ಅಷ್ಟರಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ ಕಾರ್ಡ್ ಮುಖಾಂತರ ಕೊಳ್ಳಬಹುದಲ್ಲವೇ ಎಂದು ನೆನಪಿಗೆ ಬಂದಾಗ ಮನಸ್ಸು ಹಗುರವಾಗಿ ಕಾರ್ಡ್ ತೆಗೆದುಕೊಂಡು ಮತ್ತೆ ಧಾವಿಸಿದೆ. 

ಮುಂಗಾರು

ರಾತ್ರಿಯ ಸಮಯ. ಚೂರು ಪಾರು ಮೋಡಗಳೆಲ್ಲ ಅಲ್ಲಲ್ಲಿ ಒಂಟಿಯಾಗಿ ವಿಹರಿಸುತ್ತಿದ್ದ ಸಮಯದಲ್ಲಿ ವಾಯುದೇವ ಮೆರವಣಿಗೆಯ ಸಮಯವಾಯಿತು ಎಂದು ಎಲ್ಲರನ್ನೂ ಒಗ್ಗೂಡಿಸುತ್ತ ಮುಂದೆ ಹೋದ. ಮೋಡಗಳೆಲ್ಲ ಜೊತೆಯಾಗಿ ಸೇರಿ ಬೃಹತ್ ಕಾರ್ಮೋಡಗಳಾಗಿ ಮಾರ್ಪಾಡು ಹೊಂದಲು ಹವಣಿಸತೊಡಗಿದವು. ಮಧ್ಯರಾತ್ರಿ ಕಳೆದು ತಾಸಾಗುತ್ತಿದ್ದಂತೆ ಮೋಡಗಳೆಲ್ಲ ಆಗಲೇ ಗುಂಪಾಗಿ ಸೇರಿ ಮೆರವಣಿಗೆಗೆ ಸಜ್ಜಾಗಿ ನಿಂತಿದ್ದವು. ವರುಣ ರಾಜನ ಆಗಮನಕ್ಕೆ ವಾಯುದೇವ ಬಹು ಪರಾಕ್ ಹೇಳಿದೊಡನೆಯೇ ಶುರುವಾಯಿತು ಮೇಘರಾಜನ ಘರ್ಜನೆ, ಕಣ್ಣು ಕೋರೈಸುವ ಬೆಳಕಿನ ಚಾಟಿಯನ್ನು ಆಗಾಗ ಬೀಸುತ್ತ, ಘರ್ಜಿಸುತ್ತ ಮೇಘಗಳ ಮೆರವಣಿಗೆ ಮುನ್ನಡೆಯಿತು. ಅವುಗಳ ಘರ್ಜನೆಗೆ ಗಾಢ ನಿದ್ದೆಯಲ್ಲಿದ್ದ ಕಂದಮ್ಮಗಳು ಬೆಚ್ಚಿ ಎದ್ದು ಅಳತೊಡಗಿದಂತೆ ತಾಯಂದಿರು ಕಂದಮ್ಮಗಳನ್ನು ಎದೆಗವಚಿಕೊಂಡಾಗ ಸುರಕ್ಷತೆಯ ಅರಿವಾಗಿ ಬೆಚ್ಚನೆಯ ಆಲಿಂಗನದಲ್ಲಿ ಮತ್ತೆ ನಿದ್ರಾವಶರಾದರು.

ದೂರದ ಗುಡ್ಡದಲ್ಲಿ ನಲಿದಾಡುತ್ತಿದ್ದ ನವಿಲುಗಳು ಮೋಡಗಳ ಘರ್ಜನೆಗೆ ಬೆದರಿ ಕೂಗತೊಡಗಿದವು. ಮನೆಯ ಗಂಡಸರು ಎದ್ದು ಬೆಳಕಿನ ಚಾಟಿ ತಮ್ಮ ಮನೆಗೆ ಬಡಿದರೆ ಎಂದು ಆತಂಕದಲ್ಲಿ ವಿದ್ಯುತ್ ನ್ನು ನಿಷ್ಕ್ರಿಯಗೊಳಿಸಿದರು. ಪೃಥ್ವಿ ಗೆ ತನ್ನ ಆಗಮನ ತಿಳಿಸಲು ಆಗಾಗ ಬೆಳಕಿನ ಚಾಟಿಯಿಂದ ಚುರುಕು ಮುಟ್ಟಿಸುತ್ತ ಮೇಘಗಳು ಚುರುಕುಗೊಂಡಂತೆ ಅವುಗಳ ಆರ್ಭಟ ಇನ್ನಷ್ಟು ಜೋರಾಗತೊಡಗಿತು. ಬೆಳಕಿನ ಚಾಟಿ ಕೆಲ ಬಡಪಾಯಿಗಳ ಮನೆ ಮೇಲರಗಿದರೆ ಇನ್ನು ಕೆಲವು ಎತ್ತರದ ಮರಗಳನ್ನು ಸುಟ್ಟವು. ವರುಣನ ಜೊತೆ ವಾಯುದೇವನ ವಿಹಾರದಿಂದ ಬಡ ಜನರ ಮನೆಗಳು ನಲುಗಿದವು. ತೋಟಗಳಲ್ಲಿನ ಮರಗಿಡಗಳು ಧರೆಗೆ ಶರಣಾದವು. ಜನರನ್ನು ಬೆಚ್ಚಿ ಬೀಳಿಸುತ್ತ ಅವರ ಸುಖದ ನಿದ್ದೆಗೆ ಭಂಗ ತರುತ್ತ ಸಾಕಷ್ಟು ಚುರುಕು ಮುಟ್ಟಿಸಿದ ಮೇಲೆ ತಾನು ಬರುತ್ತಿದ್ದೇನೆಂದು ಎಲ್ಲರಿಗೂ ಅರಿವಾಗಿರಬೇಕು ತನ್ನ ಸ್ವಾಗತದ ತಯಾರಿ ಭರ್ಜರಿಯಾಗಿದೆ ಎಂದುಕೊಂಡು ಭಾವುಕಗೊಂಡ ಮೋಡಗಳು ಕರಗಿ ನೀರಾದವು.

ತಟಪಟನೆ ಸದ್ದು ಮಾಡುತ್ತಾ ಬಂದ ವರುಣ ಗೆಳೆಯ ವಾಯುದೇವನಿಂದಾಗಿ ಮತ್ತಷ್ಟು ಹುರುಪಿನಿಂದ ಪೃಥ್ವಿಗೆ ನೀರ ಅಭಿಷೇಕ ಮಾಡತೊಡಗಿದ. ಕಾಡು ಪ್ರಾಣಿಗಳು, ಪಕ್ಷಿಗಳು ಸುರಕ್ಷಿತ ತಾಣವನ್ನು ಹುಡುಕಿ ಓಡಾಡಿದವು. ಇಷ್ಟು ದಿನಗಳ ಕಾಲ ಮಳೆಯಿಲ್ಲದೆ ಧೂಳಿನಿಂದ ತುಂಬಿಕೊಂಡು ಕಳೆಗುಂದಿದ ಮರಗಿಡಗಳು ವರುಣನ ಕೃಪೆಯಿಂದ ಧೂಳನ್ನು ಕೊಡವಿಕೊಂಡು ಮತ್ತೆ ಹಸಿರಿನಿಂದ ನಳ ನಳಿಸಳಿಸತೊಡಗಿದವು. ಮಳೆಯ ಸಿಂಚನ ಅವುಗಳ ಪಾಲಿಗೆ ಅಮೃತದಂತಾಗಿ ಗಟಗಟನೆ ನೀರು ಕುಡಿದು ತಮ್ಮ ದಾಹವನ್ನು ತೀರಿಸಿಕೊಂಡು ಸಂತಸದಿಂದ ತಲೆದೂಗತೊಡಗಿದವು. ಕಾದ ಹೆಂಚಿನಂತಾಗಿದ್ದ ಭೂಮಿ ಮಳೆಯ ಸಿಂಚನದಿಂದ ತನ್ನ ಮೈಯನ್ನು ತಂಪಾಗಿಸುತ್ತ ಮಣ್ಣಿನ ಕಂಪನ್ನು ಬೀರತೊಡಗಿತು. ಧೂಳಿನಿಂದ ಬಣ್ಣಗೆಟ್ಟು ಮುದುರಿ ಮಲಗಿದ್ದ ಟಾರು ರಸ್ತೆಗಳು ಮಳೆಯ ನೀರಿನಿಂದಾಗಿ ಧೂಳೆಲ್ಲ ತೊಳೆದು ಹೋಗಿ ಕಪ್ಪನೆ ಮಿರಮಿರ ಮಿಂಚುತ್ತ ಕರಿನಾಗರ  ಹರಿದಂತೆ ಕಾಣತೊಡಗಿತು. ಸೆಖೆಯಿಂದ ನರಳಿ ಬೆವರಿಳಿಸಿ ಸುಸ್ತಾದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನೀರಿಲ್ಲದೆ ಒದ್ದಾಡುತ್ತಿದ್ದ ಜನ ಇನ್ನು ನೀರಿಗೆ ತೊಂದರೆಯಿಲ್ಲ ಎಂದು ನಿರಾಳವಾದರು.

ಬೆಳಗಾದರೂ ಮೋಡಗಳ ಘರ್ಜನೆ ನಿಲ್ಲಲಿಲ್ಲ. ವರುಣ ತನ್ನ ಕೆಲಸ ಮುಂದುವರೆಸಿಕೊಂಡೇ ಇದ್ದ. ಹಗಲೂ ರಾತ್ರಿ ಜನರ ಬೆವರಿಳಿಸಿದ ರವಿ ಸದ್ದಿಲ್ಲದೇ ಮೋಡಗಳ ಹಿಂದೆ ಅವಿತು ಕುಳಿತಿದ್ದ. ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದ ಮಕ್ಕಳು ಮಳೆಯಲ್ಲೇ ಶಾಲೆಗೆ ಹೋಗುವುದು ಎಂದುಕೊಳ್ಳುತ್ತಾ ರೋಮಾಂಚನಗೊಂಡು ಶಾಲೆಗೆ ಹೋಗಲು ಉತ್ಸಾಹದಿಂದ ಸಜ್ಜಾಗತೊಡಗಿದರು. ಹರಿಯುವ ನೀರಲ್ಲಿ ದೋಣಿ ಮಾಡಿ ಬಿಡಲು ಅಮ್ಮನಿಗೆ ಗೊತ್ತಾಗದಂತೆ ತಮ್ಮ ಪುಸ್ತಕಗಳ ಪುಟಗಳನ್ನು ಹರಿದು ದೋಣಿ ತಯಾರಿಸತೊಡಗಿದರು. ನೀರಲ್ಲಿ ಕಾಲು ಬಡಿಯುತ್ತ, ಬೇರೆಯವರ ಮೇಲೆ ನೀರು ಚಿಮ್ಮಿಸುತ್ತಾ ಹೋಗುವುದೆಷ್ಟು ಮಜಾ ಎಂದುಕೊಂಡು ಸಂತಸ ಪಟ್ಟರು. ದೇವಸ್ಥಾನಗಳಲ್ಲಿ ಮರುಣನ ಕೃಪೆಗಾಗಿ ಮಾಡಿಸಿದ ಪೂಜೆ ಫಲ ಕೊಟ್ಟಿತು ಎಂದು ಅರ್ಚಕರು ಬೀಗತೊಡಗಿದರು. ಕೆಲಸಕ್ಕೆ ಹೋಗುವ ಮಹಿಳೆಯರು ಮತ್ತು ಗಂಡಸರು ಇನ್ನು ಒದ್ದೆ ಬಟ್ಟೆಯಲ್ಲೇ ಕೆಲಸಕ್ಕೆ ಹೋಗಬೇಕು, ಶಿಸ್ತಾಗಿ ಸಿಂಗರಿಸಿಕೊಂಡು ಹೋದರೂ ವರುಣ ಅದನ್ನೆಲ್ಲ ಕೆಡಿಸಿ ಬಿಡುತ್ತಾನೆ ಎಂದು ಕೋಪಿಸಿಕೊಂಡರು. ಗೃಹಿಣಿಯರು ಇನ್ನು ಬಿಸಿಲಿಗೆ ಏನೂ ಒಣ ಹಾಕುವಂತಿಲ್ಲ, ಬಟ್ಟೆಗಳೂ ಬೇಗನೆ ಒಣಗುವುದಿಲ್ಲ ಎಂದು ಬೇಸರಿಸಿಕೊಂಡರೂ ವರುಣನ ಆಗಮನ ಅವರಲ್ಲಿ ಸಂತಸ ತಂದಿತ್ತು. ಮನೆಯಲ್ಲಿ ಎಣ್ಣೆಯಲ್ಲಿ ಕರಿಯುವ ತಿಂಡಿಗಳಿಗೆ ಇನ್ನು ಬೇಡಿಕೆ ಜಾಸ್ತಿ ಎಂದುಕೊಂಡು ಮಂದಸ್ಮಿತರಾದರು.

ಕೆಲಸಕ್ಕೆ ಹೋಗುವ ಸಮಯವಾದಂತೆ ರಸ್ತೆಯ ತುಂಬಾ ಅಣಬೆಗಳಂತೆ ಬಣ್ಣ ಬಣ್ಣದ ಕೊಡೆಗಳು ಅರಳತೊಡಗಿದವು. ಇದುವರೆಗೂ ಅನಾಥವಾಗಿ ಮನೆಯ ಮೂಲೆಯಲ್ಲಿ ಬಿದ್ದುಕೊಂಡಿದ್ದ ಕೊಡೆಗಳು ಮೈ ಮೇಲಿನ ಧೂಳು ಕೊಡವಿಕೊಂಡು ಮರು ಜೀವ ತಾಳಿದವು. ಹೊಸ ಕೊಡೆಯನ್ನು ಕೊಂಡವರು ಸಂಭ್ರಮದಿಂದ ತಮ್ಮ ಕೊಡೆಯನ್ನು ಅರಳಿಸಿ ಹೆಮ್ಮೆಯಿಂದ ಬೀಗುತ್ತ ಮುನ್ನಡೆಯತೊಡಗಿದರು. ಇದನ್ನು ಮಹಡಿಯ ಮೇಲೆ ನಿಂತು ನೋಡುತ್ತಿದ್ದ ವೃದ್ಧನೊಬ್ಬ ಮುಂಗಾರಿನ ಆಗಮನವಾಯಿತು ಎಂದುಕೊಂಡು ಇನ್ನು ಸೆಖೆಯಿಂದ ಒದ್ದಾಡಬೇಕಿಲ್ಲ ಎಂದು ಮುಗುಳ್ನಕ್ಕ. ಐಸ್ ಕ್ರೀಂ ಮಾರುವವ ಇನ್ನು ತನಗೆ ವ್ಯಾಪಾರವಿಲ್ಲ ಎಂದು ಕೊರಗತೊಡಗಿದ. ಕೊಡೆ ಮಾರುವವರು ಸಂಭ್ರಮದಿಂದ ತರಹೇವಾರಿ ಕೊಡೆಗಳನ್ನು ಅಂಗಡಿಗಳ ಮುಂದೆ ನೇತು ಹಾಕಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಗ್ರಾಹಕರನ್ನು ಸೆಳೆಯತೊಡಗಿದರು. ರಸ್ತೆ ಬದಿ ಕುಳಿತು ಮಾರುತ್ತಿದ್ದವರು ಇನ್ನು ತಮಗೆ ಇಲ್ಲಿ ಕುಳಿತು ವ್ಯಾಪಾರ ಮಾಡಲಾಗುವುದಿಲ್ಲವಲ್ಲ ಎಂದು ಬೇಜಾನ್ ಬೇಸರ ಪಟ್ಟುಕೊಂಡರು. ಮಳೆಯಲ್ಲಿ ಮಕ್ಕಳ ಆಟ, ದೊಡ್ಡವರ ಸಿಡಿಮಿಡಿ ನೋಡುತ್ತಾ ಯಾರು, ಹೇಗೂ ತನ್ನನ್ನು ಸ್ವಾಗತಿಸಿದರೂ ಇನ್ನು ಮೂರು ನಾಲ್ಕು ತಿಂಗಳುಕಾಲ ತನ್ನದೇ ರಾಜ್ಯಭಾರ ಎಂದುಕೊಂಡು ವರುಣ ರಾಜ ಗಾಂಭೀರ್ಯ ತೋರಿದ. ನಾಡಿಗೆ ಮುಂಗಾರಿನ ಪ್ರವೇಶವಾಗಿತ್ತು.

ನಮ್ಮ ಮನೆಯ ನೆಂಟರು !

ನಾವು ಹೊಸ ಮನೆಗೆ ಬಂದಾಗ ಮನೆಯ ಸುತ್ತಲೂ ಹಸಿರರಾಶಿ ಕಂಡು ಪುಳಕಗೊಂಡಿದ್ದೆ. ಮಾರನೆಯ ದಿನ ಬಾಲ್ಕನಿಗೆ ಹೋದಾಗ ಅಲ್ಲಿ ಮತ್ತೊಬ್ಬರು ನಮಗಿಂತ ಮೊದಲೇ ವಾಸಿಸುತ್ತಿರುವುದು ಕಂಡು ದಂಗಾದೆ. ಗಾಬರಿಯಾಗಿ ಬಿಟ್ರಾ ? ಮನುಷ್ಯರಲ್ಲ, ಹಕ್ಕಿಗಳು ! ಎ. ಸಿ ಬಾಕ್ಸ್ ನ ಹಿಂದೆ ಪುಟ್ಟ ಗೂಡು ಕಟ್ಟಿಕೊಂಡು ಚಿಲಿಪಿಲಿ ಮಾಡುತ್ತಿದ್ದವು. ನನ್ನನ್ನು ಕಂಡು ಬೆದರಿ, ಅತಿಕ್ರಮಣ ಮಾಡಿದ್ದಕ್ಕೆ ಶಿಕ್ಷಿಸುವೇನೋ ಎಂಬ ಭೀತಿಯಿಯಿಂದ ಪುರ್ರನೆ ಹಾರಿ ಹೋಗಿದ್ದವು ಜೋಡಿ ಹಕ್ಕಿಗಳು. ನನಗೆ ಅದು ಯಾವ ಹಕ್ಕಿ ಎಂದು ನಿರ್ಧಿಷ್ಟವಾಗಿ ತಿಳಿಯದಿದ್ದರೂ ಅವು ಗಾತ್ರದಲ್ಲಿ ಗುಬ್ಬಚ್ಚಿಯಷ್ಟೇ ಇದ್ದರೂ ಅದರ ಹಾಗೆ ದುಂಡು ದುಂಡಾಗಿರದೆ ತೆಳ್ಳಗೆ ಇತ್ತು. ಮೈ ಬಣ್ಣ ತಿಳಿ ಕಂದು ಬಣ್ಣ ಹೊಟ್ಟೆಯ ಬಳಿ ಬಿಳಿ ಬಣ್ಣ. ಎಲ್ಲರೂ ಪಂಜರದಲ್ಲಿ ಹಕ್ಕಿಗಳನ್ನಿಟ್ಟು ಸಾಕುತ್ತರಲ್ಲವೇ, ನಾನು ಪಂಜರವಿಲ್ಲದೆ ಅವರನ್ನು ಸಾಕುತ್ತೇನೆ ಎಂದು ಹುರುಪಿನಿಂದ ಅಡಿಗೆ ಮನೆಗೆ ಹೋಗಿ ಕೆಲವು ಧಾನ್ಯಗಳನ್ನು ಅಕ್ಕಿ,ಗೋಧಿ ಕಾಳುಗಳನ್ನು ಸೇರಿಸಿ ಒಂದು ಪುಟ್ಟ ತಟ್ಟೆಯಲ್ಲಿಟ್ಟು ಅವುಗಳ ಗೂಡಿನ ಬಳಿ ಇಟ್ಟೆ. ಸಂಜೆ ನಾನು ಬಾಗಿಲು ಮುಚ್ಚುತ್ತಿದ್ದಂತೆ ಅದನ್ನೇ ಕಾಯುತ್ತ ಕುಳಿತ ಹಕ್ಕಿಗಳು ಹಾರಿ ಬಂದು ಗೂಡನ್ನು ಸೇರಿಕೊಂಡವು.

ಮರುದಿನ ಬೆಳಗ್ಗೆ ನೋಡಿದರೆ ಹಕ್ಕಿಗಳು ಅದಾಗಲೇ ಆಹಾರ ಹುಡುಕಿಕೊಂಡು ಹೊರಟಿದ್ದವು. ನಾನು ಇಟ್ಟ ಧಾನ್ಯಗಳ ತಟ್ಟೆಯನ್ನು ಮುಟ್ಟಲೇ ಇಲ್ಲ. ಅದನ್ನು ನೋಡಿ ಹಕ್ಕಿಗಳನ್ನು ಸಾಕುವ ಉತ್ಸಾಹ ಟುಸ್ಸೆಂದಿತು. ನೀನು ನಮ್ಮ ತಂಟೆಗೆ ಬರಬೇಡ ನಾವು ನಿಮ್ಮ ತಂಟೆಗೆ ಬರುವುದಿಲ್ಲ ಎಂದು ಅವು ಈ ಮೂಲಕ ಹೇಳುತ್ತಿವೆಯೇನೋ ಅನಿಸಿ ಮನಸಿಗೆ ಪಿಚ್ಚೆನಿಸಿತು. ನಂತರ ನಾನು ಅದೆಷ್ಟು ವಿಧದ ತಿನಿಸು ಅನ್ನ ಎಲ್ಲ ಇಟ್ಟು ನೋಡಿದೆ. ನಿನ್ನ ಹಂಗು ನಮಗೆ ಬೇಡ ನಮ್ಮ ಹೊಟ್ಟೆಯನ್ನು ನಾವೇ ತುಂಬಿಸಿ ಕೊಳ್ಳುತ್ತೇವೆ ಎನ್ನುವ ಹಾಗೆ. ಬಹಳ ಸ್ವಾಭಿಮಾನಿ ಹಕ್ಕಿಗಳೇನೋ ಅಂದುಕೊಂಡು ನಾನು ಅದಕ್ಕೆ ತಿಂಡಿ ಇಡುವುದನ್ನು ಬಿಟ್ಟು ಬಿಟ್ಟೆ. ಅದರ ತಂಟೆಗೂ ಹೋಗದೆ ನನ್ನ ಪಾಡಿಗೆ ನಾನಿದ್ದರೆ ಅವು ಅವುಗಳ ಪಾಡಿಗೆ ಇದ್ದವು. ಸಂಜೆ ಮಾತ್ರ ಬಾಲ್ಕನಿಯಲ್ಲಿ ಅತ್ತಿತ್ತ ಹಾರಿಕೊಂಡು ಕತ್ತಲಾದ ಮೇಲೆ ಗೂಡು ಸೇರುತ್ತಿದ್ದವು.

ಒಂದು ದಿನ ಸಂಜೆ ನಾನು ತಿಂಡಿ ತಿನ್ನುತ್ತಿರುವಾಗ ನನಗೆ ನೆತ್ತಿಗೇರಿ ಒಮ್ಮೆಲೇ ವಿಪರೀತ ಕೆಮ್ಮು ಶುರುವಾಯಿತು. ನಾನು ಖೊಕ್ ಖೊಕ್ ಎಂದು ಕೆಮ್ಮುವುದು ಕೇಳಿಸಿ ಹಕ್ಕಿಗಳು ಗಾಬರಿಗೊಂಡವು. ಅವುಗಳ ಚಿಲಿಪಿಲಿ ಜೋರಾಗಿ ನಂತರ ಅವು ಗೂಡಿನಿಂದ ಹಾರಿ ಹೋದವು. ಬಹುಶಃ ನನ್ನ ಕೆಮ್ಮು ಅವುಗಳಿಗೆ ಕರ್ಣ ಕಠೋರವಾಗಿರಬೇಕು ! ನಾನು ಅವುಗಳನ್ನು ಹೆದರಿಸಿದೆನಲ್ಲ ಎಂದು ಬೇಸರವಾಯಿತು. ನಂತರ ರಾತ್ರಿಯಾದರೂ ಅವುಗಳ ಸುಳಿವಿಲ್ಲ. ಮರುದಿನವೂ ಪತ್ತೆಯಿಲ್ಲ. ನನ್ನ ಕೆಮ್ಮು ಅವುಗಳನ್ನು ಅಷ್ಟೊಂದು ಹೆದರಿಸಿ ಬಿಟ್ಟಿತೆ ಎಂದು ನನಗೆ ನಗು ಬಂದಿತು. ವಾರವಾದರೂ ಹಕ್ಕಿಗಳ ಸುಳಿವಿಲ್ಲ. ಅವು ಇನ್ನು ಬರಲಿಕ್ಕಿಲ್ಲವೆಂದು ನಾನು ಸುಮ್ಮನಾಗಿ ಬಿಟ್ಟೆ.

ಕೆಲವು ತಿಂಗಳ ಬಳಿಕ ಒಂದು ದಿನ ಹಕ್ಕಿಗಳ ಚಿಲಿಪಿಲಿ ಕೇಳಿಸಿತು. ಧಾವಿಸಿ ಬಂದು ನೋಡಿದೆ. ಹಕ್ಕಿಗಳು ಗೂಡಿಗೆ ಮರಳಿದ್ದವು. ಬಹುಶ ನನ್ನ ಕೆಮ್ಮನ್ನು ಅವುಗಳು ಮರೆತಿರಬಹುದು ಎಂದುಕೊಂಡು ಅಂದಿನಿಂದ ಜೋರಾಗಿ ಕೆಮ್ಮದ ಹಾಗೆ ಜಾಗ್ರತೆ ವಹಿಸಿದೆ. ಅವು ತಮ್ಮ ಗೂಡನ್ನು ರಿಪೇರಿ ಮಾಡುತ್ತಿದ್ದವು. ಅತ್ತಿಂದಿತ್ತ ಹಾರುತ್ತ ಬಾಯಲ್ಲಿ ಹುಲ್ಲನ್ನು ಕಚ್ಚಿಕೊಂಡು ಬಂದು ಗೂಡಿಗೆ ಜೋಡಿಸುತ್ತಿದ್ದವು. ನಾವು ಕೆಲಕಾಲ ಮನೆಗೆ ಬೀಗ ಹಾಕಿ ನಂತರ ಪುನಃ ಬಂದು ವಾಸಿಸುವ ಮೊದಲು ಎಲ್ಲವನ್ನು ಚೊಕ್ಕ ಮಾಡುವ ಹಾಗೆ ಮಾಡುತ್ತದಲ್ಲವೇ ಎಂದು ನನಗೆ ಸೋಜಿಗವಾಯಿತು. ನಂತರ ಕೆಲವು ದಿನಗಳು ಕಳೆದ ಮೇಲೆ ಒಂದು ದಿನ ಹಕ್ಕಿಗಳು ಗೂಡಿನಿಂದ ಬೆಳಗ್ಗೆ ಆರು ಗಂಟೆಗೆ ಹೊರಡುವ ಮುನ್ನ ಚೀವ್ ಚೀವ್ ಎಂದು ಲಯಬದ್ಧವಾಗಿ ಹಾಡಲು ಶುರು ಮಾಡಿದವು. ಆದರೆ ಜೊತೆ ಎಳೆಯ ಸ್ವರಗಳೂ ಕೇಳಿಸಿ ಹಕ್ಕಿ ಮರಿ ಹಾಕಿರಬೇಕು ಎಂದು ಸಂತಸ ಪಟ್ಟೆ.

ಎಷ್ಟು ಮರಿಗಳಿರಬಹುದು, ನೋಡಲು ಹೇಗಿರಬಹುದು, ಅದರ ಫೋಟೋ ತೆಗೆಯಬೇಕು ಎಂದೆಲ್ಲ ಕೌತುಕವಾಯಿತು. ಹಕ್ಕಿಗಳು ಎಂದಿನಂತೆ ಆರು ಗಂಟೆಗೆ ಹಾರಿ ಹೋದರೂ ತಾಯಿ ಹಕ್ಕಿ ಮಾತ್ರ ಗೂಡನ್ನು ನಿಮಿಷಕ್ಕೊಂದು ಸಲ ಬಂದು ಮರಿಗಳು ಕ್ಷೇಮವಾಗಿವೆಯೇ ಎಂದು ನೋಡಿ ಹೋಗುತ್ತಿತ್ತು. ಅದನ್ನು ನೋಡಿ ಹಕ್ಕಿಯಾದರೂ ತಾಯ ಹೃದಯ, ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ಅಂತ ಅಂದುಕೊಂಡೆ. ಅದಕ್ಕೆ ಆತಂಕ ಕೊಡುವುದು ಬೇಡ ಎಂದು ಮರಿಗಳನ್ನು ನೋಡುವ ಆಸೆ ಕೈ ಬಿಟ್ಟೆ. ಮನುಷ್ಯರು ಮುಟ್ಟಿದರೆ ಮತ್ತೆ ಆ ಮರಿಗಳನ್ನು ಹಕ್ಕಿಗಳು ತಮ್ಮ ಬಳಿ ಸೇರಿಸಿಕೊಳ್ಳುವುದಿಲ್ಲ ಎಂದು ಕೇಳಿದ್ದೆ. ಹಾಗೇನಾದರೂ ಆದರೆ ಮರಿಗಳಿಗೆ ನಾನೇ ಆಹಾರ ಕೊಡಬೇಕಾಗುತ್ತದೆ. ಆದರೆ ಅಷ್ಟು ಪುಟ್ಟ ಮರಿಗಳಿಗೆ ಏನು ಕೊಡುವುದು ಅಲ್ಲದೆ ತಾಯಿಯಿಂದ ಮರಿಗಳನ್ನು ದೂರ ಮಾಡುವ ಪಾಪಕಾರ್ಯ ಮಾಡಲು ಮನಸ್ಸಾಗಲಿಲ್ಲ. ಅವುಗಳು ಚೆನ್ನಾಗಿರಲಿ ಎಂದು ಅವುಗಳ ಗೂಡಿನತ್ತ ಹೋಗುವುದನ್ನು ಬಿಟ್ಟೆ.

ದಿನವೂ ಬೆಳಿಗ್ಗೆ ಹಕ್ಕಿಗಳು ಹೊರಹೋಗುವ ಮುನ್ನ ಅವುಗಳ ಸಂಗೀತ ಕಚೇರಿ ನಡೆಯುತ್ತಿತ್ತು. ಚೀವ್ ಚೀವ್ ಎಂದು ಲಯಬದ್ಧವಾಗಿ ಹಾಡುತ್ತಿದ್ದವು. ಬಳಿಕ ದೊಡ್ಡ ಹಕ್ಕಿಗಳು ಸಂಜೆ ಮರಳಿ ಬರುವವರೆಗೂ ಮರಿಗಳು ತೆಪ್ಪಗೆ ಸದ್ದು ಮಾಡದೆ ಬಿದ್ದು ಕೊಂಡಿರುತ್ತಿದ್ದವು. ಅವುಗಳು ಸಂಜೆ ಬಂದ ಕೂಡಲೇ ಮತ್ತೆ ಸಂಗೀತ ಕಚೇರಿ ಶುರುವಾಗುತ್ತಿತ್ತು. ಕೆಲವೊಮ್ಮೆ ಅದು ಎಷ್ಟು ತಾರಕ್ಕೇರುತ್ತಿತ್ತೆಂದರೆ ನಂಗೆ ಟಿವಿಯ ದ್ವನಿ ಕೇಳಿಸುತ್ತಿರಲಿಲ್ಲ ! ನಾನು ಅವುಗಳ ಗಾಯನವನ್ನು ಅವುಗಳಿಗೆ ತಿಳಿಯದ ಹಾಗೆ ರೆಕಾರ್ಡ್ ಮಾಡಿಕೊಂಡೆ. ಒಂದು ದಿನ ದೊಡ್ಡ ಹಕ್ಕಿಗಳು ಗೂಡಿನಿಂದ ಹೋದಮೇಲೆ ನಾನು ಅದನ್ನು ಹಾಕಿ ಮರಿಗಳ ಪ್ರತಿಕ್ರಿಯೆ ಏನಿರಬಹುದು ಎಂದು ಕುತೂಹಲದಿನ ಗಮನಿಸಿದೆ. ಆದರೆ ಅವುಗಳು ತುಟಿ ಪಿಟಿಕ್ಕೆನ್ನದೆ ಮೌನವಾಗಿ ಕುಳಿತಿದ್ದವು. ಸಂಜೆ ದೊಡ್ಡ ಹಕ್ಕಿಗಳು ಬಂದ ಮೇಲೆ ಗಾಯನ ಮತ್ತೆ ಶುರುವಾಯಿತು. ಇದು ದಿನವೂ ತಪ್ಪದೆ ನಡೆಯುತ್ತಿತ್ತು, ಸಂಗೀತಾಭ್ಯಾಸ ಮಾಡುವವರು ನಿತ್ಯವೂ ಹಾಡುವ ಹಾಗೆ!

ಕೆಲವು ಸಮಯದ ನಂತರ ಮರಿಗಳೆಲ್ಲ ಒಂದೊಂದಾಗಿ ಹಾರಲು ಪ್ರಯತ್ನಿಸುತ್ತಾ ಇರುವುದನ್ನು ಕಂಡು ಮರಿಗಳೆಷ್ಟು ಎಂದು ನೋಡಿದೆ. ಆದರೆ ಮರಿಗಳು ಯಾವುವು ? ದೊಡ್ದಹಕ್ಕಿಗಳು ಯಾವುವು ಎಂದು ತಿಳಿಯದಷ್ಟು ಮರಿಗಳು ದೊಡ್ಡದಾಗಿ ಬೆಳೆದಿದ್ದವು. ಒಟ್ಟು ಆರು ಹಕ್ಕಿಗಳಿದ್ದವು. ಹಾಗಿದ್ದರೆ ನಾಲ್ಕು ಮರಿಗಳಿರಬೇಕು ಎಂದು ಯೋಚಿಸಿದೆ. ಈಗ ಅವುಗಳಿಗೆ ನನ್ನ ಭಯ ಅಷ್ಟೊಂದು ಇರಲಿಲ್ಲ. ಕಿಟಕಿ ತೆರೆದಿಟ್ಟರೆ ಒಂದೊಂದಾಗಿ ಒಳಬಂದು ಹಾರಾಡಿ ಮತ್ತೆ ಹೊರಗೆ ಹೋಗುತ್ತಿದ್ದವು. ಹೀಗೆ ಆದರೆ ನನ್ನ ಹಾಗೂ ಅವುಗಳ ಸ್ನೇಹಕ್ಕೆ ಸಧ್ಯದಲ್ಲೇ ನಾಂದಿ ಹಾಡಬಹುದು ಎಂದುಕೊಂಡು ಖುಷಿ ಪಟ್ಟೆ. ಆದರೆ ಅವುಗಳು ಒಳ ಬಂದಾಗ ನಾನು ಕುಳಿತಲ್ಲಿಂದ ಸ್ವಲ್ಪ ಅಲುಗಾಡಿದರೂ ಹಾರಿ ಹೋಗುತ್ತಿದ್ದವು. ಹೀಗೆ ಬಂದು ಹೋಗುತ್ತಾ ಇದ್ದಾರೆ ಅವುಗಳ ಭಯ ಕಡಿಮೆಯಾಗಿ ನನ್ನ ಜತೆ ಸ್ನೇಹ ಬೆಳೆಸಬಹುದು ಎಂದುಕೊಂಡು ಆ ದಿನಕ್ಕಾಗಿ ಕಾತರದಿಂದ ಕಾಯತೊಡಗಿದೆ. ನಂತರ ದಿನವೂ ಎಲ್ಲ ಹಕ್ಕಿಗಳು ಬೆಳಗ್ಗೆ ಆರಕ್ಕೆ ಗೂಡನ್ನು ಬಿಟ್ಟರೆ ಸಂಜೆ ಗೂಡಿಗೆ ಮರಳುವುದು ಅವುಗಳ ದಿನಚರಿಯಾಯಿತು. ಅಷ್ಟು ಪುಟ್ಟ ಗೂಡಲ್ಲಿ ಅದು ಹೇಗೆ ಆರು ಹಕ್ಕಿಗಳು ವಾಸ ಮಾಡುತ್ತವೋ ಎಂದು ಆಶ್ಚರ್ಯ ಪಟ್ಟೆ. ಆದರೆ ಒಂದು ದಿನ ಹಾರಿಹೋದ ಹಕ್ಕಿಗಳು ಮತ್ತೆ ಗೂಡಿಗೆ ಮರಳಲಿಲ್ಲ. ನಾನು ಚಾತಕ ಪಕ್ಷಿಯಂತೆ ಅವುಗಳ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದೆ. ವಾರಗಳು ಉರುಳಿ ತಿಂಗಳಾದರೂ ಅವುಗಳ ಪತ್ತೆಯೇ ಇಲ್ಲ. ಇನ್ನು ಅವು ಬರುವುದಿಲ್ಲವೇನೋ ಎಂದು ಆಸೆಯನ್ನೇ ಬಿಟ್ಟೆ.

ಹಲವು ತಿಂಗಳುಗಳು ಕಳೆದ ಮೇಲೆ ಆಗೀಗ ಒಂದು ಹಕ್ಕಿ ಆಗಾಗ ಬಂದು ಗೂಡನ್ನು ಪರಿಶೀಲಿಸಿ ಹೋಗುತ್ತಿದೆ. ಬಹುಶ ಅದು ಮರಿ ಇಡುವ ಕಾಲ ಸನ್ನಿಹಿತವಾಗಿದೆಯೇನೋ ಅಂತ ಅಂದುಕೊಂಡೆ. ಇವತ್ತು ಬೆಳಿಗ್ಗೆ ಟಿವಿಯಲ್ಲಿ ಜ್ಯೋತಿಷಿಗಳು ಅಶ್ವಿನಿ ಮೃಗಶಿರಾ ಇತ್ಯಾದಿ ನಕ್ಷತ್ರಗಳ ದಿನ ಹೊಸ ಮನೆಗೆ ಹೋದರೆ ಶುಭ ಎಂದು ಹೇಳಿದರು. ನಂತರ ನಾನು ಬಾಲ್ಕನಿಗೆ ಬಂದು ನೋಡಿದರೆ ಹಕ್ಕಿಗಳು ಬಂದಿದ್ದವು. ಅದು ಮೊದಲು ಬಂದ ಜೋಡಿ ಹಕ್ಕಿಗಳೋ ಅಥವಾ ಮರಿ ಹಕ್ಕಿ ತನ್ನ ಸಂಗಾತಿಯೊಡನೆ ಬಂದಿದೆಯೋ ಎಂದು ಮಾತ್ರ ತಿಳಿಯಲಿಲ್ಲ. ಗೂಡನ್ನು ಶುಚಿ ಹಾಗೂ ರಿಪೇರಿ ಮಾಡುವ ಕೆಲಸ ಭರದಿಂದ ನಡೆಯುತ್ತಿತ್ತು. ನನಗೆ ಸಂತಸವಾಗಿ ಅವುಗಳಿಗೆ ತೊಂದರೆಯಾಗುವುದು ಬೇಡವೆಂದು ಸದ್ದಿಲ್ಲದೆ ಒಳಗೆ ಬಂದೆ. ಅಚಾನಕ್ಕಾಗಿ ನನ್ನ ಗಮನ ಕ್ಯಾಲೆಂಡರ್ ನತ್ತ ಹರಿದಾಗ ಇವತ್ತು ಮೃಗಶಿರಾ ನಕ್ಷತ್ರವೆಂದಿತ್ತು! ಪರವಾಗಿಲ್ಲ, ಹಕ್ಕಿಗಳು ಒಳ್ಳೆ ದಿನ ನೋಡಿ ಬಂದಿವೆ. ಅವುಗಳಿಗೆ ಇವತ್ತು ಮೃಗಶಿರಾ ನಕ್ಷತ್ರ ಎಂದು ಗೊತ್ತಿರಬಹುದೇ ಎಂದು ಪೆದ್ದು ಪೆದ್ದಾಗಿ ಯೋಚಿಸಿದೆ!

ಪುಟ್ಟ ಹುಡುಗಿಯ ಕಿಡ್ನ್ಯಾಪ್ ಪ್ರಕರಣ

ನಾನು ಶಾಪಿಂಗ್ ಮುಗಿಸಿ ನಮ್ಮ ಕಾರಿನತ್ತ ನಡೆಯುತ್ತಿದ್ದಂತೆ ಅಚಾನಕ್ಕಾಗಿ ಎಲ್ಲಿಂದಲೋ ಓಡಿ ಬಂದ ಪುಟ್ಟ ಹುಡುಗಿ ಏದುಸಿರು ಬಿಡುತ್ತ ನನ್ನ ಕೈ ಹಿಡಿದು, ಮಮ್ಮಿ, ನೀನು ಇಲ್ಲಿದ್ದಿಯಾ, ನಾನು ಎಲ್ಲೆಲ್ಲ ನಿನ್ನನ್ನು ಹುಡುಕಾಡಿದೆ ಗೊತ್ತಾ ಎಂದು ಹೇಳಿದಾಗ ನಾನು ಕಕ್ಕಾಬಿಕ್ಕಿಯಾದೆ. ಸ್ವಲ್ಪ ದೂರದಲ್ಲಿ ತರಕಾರಿ ಮಾರುತ್ತಿದ್ದವ ನನ್ನನ್ನೇ ನೋಡಿದ. ಛೆ ಎಂಥಾ ಹೆಂಗಸು ಮಗಳ ಜವಾಬ್ದಾರಿನೇ ಇಲ್ಲ ಎನ್ನುತ್ತಾ ಮುಖ ಸಿಂಡರಿಸಿದ. ನಾನು ಅವನ ಮಾತನ್ನು ನಿರ್ಲಕ್ಷಿಸುತ್ತ, ಯಾರಪ್ಪ ಈ ಹುಡುಗಿ, ನನ್ನನ್ನು ಯಾಕೆ ಮಮ್ಮಿ ಎನ್ನುತ್ತಿದ್ದಾಳೆ ಎಂದು ನಾನು ಆಶ್ಚರ್ಯ ಪಡುತ್ತ, ಯಾರಮ್ಮ ನೀನು, ನನ್ನನ್ನು ಮಮ್ಮಿ … ಎನ್ನುತ್ತಿದ್ದಂತೆ ಅವಳು ತನ್ನ ಪುಟ್ಟ ಕೈಗಳಿಂದ ನನ್ನನ್ನು ಜಗ್ಗುತ್ತ ಗುಟ್ಟು ಹೇಳುವವಳಂತೆ ನನ್ನನ್ನು ಎಳೆದಳು. ನಾನು ಬಗ್ಗಿದಾಗ  ನನ್ನ ಕಿವಿಯಲ್ಲಿ ಗುಟ್ಟಾಗಿ, ಆಂಟಿ, ಸಾರಿ, ನೀವು ಯಾರೋ ಗೊತ್ತಿಲ್ಲ ಆದರೆ ನನ್ನನ್ನು ಯಾರೋ ಕಿಡ್ ನ್ಯಾಪ್ ಮಾಡಲು ನೋಡುತ್ತಿದ್ದಾರೆ. ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎನ್ನುತ್ತಾ  ಅತ್ತಿತ್ತ ನೋಡಿ ಸುಮಾರು ದೂರದಲ್ಲಿ ನಿಂತು ಸುತ್ತಲೂ ನೋಡುತ್ತಿದ್ದ ಯುವಕನ ಕಡೆ ಬೆಟ್ಟು ಮಾಡಿದಳು. ಅವನನ್ನು ನೋಡುತ್ತಿದ್ದಂತೆ ಅವನ ಕಟ್ಟು ಮಸ್ತಾದ ಶರೀರ ಕಂಡು ನನ್ನೆದೆ ಝಲ್ಲೆಂದಿತು. ಅವಳು ನನ್ನ ಕೈ ಬಿಗಿಯಾಗಿ ಹಿಡಿಯುತ್ತ, ಮಮ್ಮಿ, ನಡಿ ಹೋಗೋಣ ಎಂದಳು. ಕೆಲವರು ನಮ್ಮತ್ತಲೇ ನೋಡುತ್ತಿದ್ದರು. ಎಂಥ ತಾಯಿ, ಮಗಳ ಪರಿವೆ ಇಲ್ಲದೆ ಶಾಪಿಂಗ್ ನಲ್ಲಿ ಮಗ್ನಳಾಗಿದ್ದಳಲ್ಲ ಎಂಬ ಭಾವ ಅವರ ಮುಖದಲ್ಲಿ ಕಂಡು ನಾನು ಏನೂ ಹೇಳಲಾಗದೆ ತಲೆ ತಗ್ಗಿಸಿದೆ.

ಹುಡುಗಿ ನೋಡಲು ತುಂಬಾ ಮುದ್ದಾಗಿದ್ದಳು. ಸುಮಾರು ಐದಾರು ವರುಷವಿರಬಹುದು. ಅವಳನ್ನು ನೋಡುತ್ತಿದ್ದರೆ ಮಧ್ಯಮ ವರ್ಗದ ಹುಡುಗಿಯಂತೆ ಕಾಣುತ್ತಿದ್ದಳು. ನಾನು ಅವಳ ಬಳಿ ಪಿಸುದನಿಯಲ್ಲಿ, ನೀನು ಯಾರಮ್ಮ ? ನಿನ್ನ ಅಪ್ಪ ಅಮ್ಮ ಎಲ್ಲಿ ? ಎಂದು ಕೇಳಿದೆ. ಅದಕ್ಕವಳು, ಆಂಟಿ, ಈಗ ಸುಮ್ಮನೆ ನಡೀರಿ ಎಂದು ನನಗೆ ಆಣತಿಯಿತ್ತಳು ! ನಾನು ವಿಧೇಯಳಂತೆ ತಲೆಯಾಡಿಸುತ್ತಾ ಅವಳನ್ನು ಕರೆದುಕೊಂಡು ಕಾರಿನತ್ತ ನಡೆದೆ. ನಮ್ಮ ಡ್ರೈವರ್, ನನ್ನ ಜೊತೆ ಬರುತ್ತಿದ್ದ ಪುಟ್ಟ ಹುಡುಗಿಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದ. ನಾವು ಕಾರಿನ ಬಳಿ ಬಂದ ತಕ್ಷಣ ಡ್ರೈವರ್ ಬಾಗಿಲು ತೆರೆದು, ಯಾರು ಮೇಡಂ, ಈ ಹುಡುಗಿ ಎಂದು ಕೇಳಿದ. ನಾನು ಅವನಿಗೆ ಅವಳ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಆ ಹುಡುಗಿ ನನ್ನ ಕೈ ಕೊಸರಿಕೊಂಡು ಓಡಿದಳು. ನಾನು ಗಾಬರಿಯಿಂದ ಇವಳು ಮತ್ತೆ ಆ ಧಡಿಯನ ಕೈಗೆ ಸಿಕ್ಕಿ ಬಿಡುತ್ತಾಳಲ್ಲ ಎಂಬ ಆತಂಕದಿಂದ ಡ್ರೈವರ್ ಗೆ ಅವಳನ್ನು ಹಿಡಿಯುವಂತೆ ಹೇಳಿ ನಾನೂ ಅವಳ ಹಿಂದೆ ಧಾವಿಸಿದೆ. ಜನರೆಲ್ಲಾ ನಮ್ಮನ್ನೇ ನೋಡುತ್ತಿದ್ದರು. ಆ ಹುಡುಗಿ ಯಾಕೆ ಓಡುತ್ತಿದ್ದಾಳೆ ಎಲ್ಲಿಗೆ ಓಡುತ್ತಿದ್ದಾಳೆ ಎಂದು ಮಿಕಿ ಮಿಕಿ ನೋಡುತ್ತಿದ್ದರು. ನಾನು ನೋಡುತ್ತಿದ್ದಂತೆ ಆ ಹುಡುಗಿ ಅಲ್ಲೇ ನಿಂತಿದ್ದ ಮಹಿಳೆಯೊಬ್ಬಳ ಬಳಿ ಧಾವಿಸಿ ಮಮ್ಮಿ .. ಎಂದಳು.

ನನಗೆ ರೇಗಿ ಹೋಯಿತು. ಇವಳು ಒಮ್ಮೆ ನನ್ನನ್ನು ಮಮ್ಮಿ ಎಂದಳು ಈಗ ಈಕೆಯನ್ನು ಮಮ್ಮಿ ಎನ್ನುತ್ತಿದ್ದಾಳೆ, ಏನಾಗಿದೆ ಈ ಹುಡುಗಿಗೆ ಎಂದುಕೊಳ್ಳುತ್ತಿದ್ದಂತೆ ನಾನು ಅವರನ್ನು ಸಮೀಪಿಸಿದೆ. ಡ್ರೈವರ್ ಕೂಡ ಆಕೆಯನ್ನು ಸಮೀಪಿಸಿ ಹುಡುಗಿಯ ಕೈ ಹಿಡಿದು, ಬಾಮ್ಮ ನಡೀ ಹೋಗೋಣ ಎಂದಾಗ ಅವಳು ಅವನ ಕೈ ಕೊಡವುತ್ತ, ಇವರೇ ನನ್ನ ಮಮ್ಮಿ ಎಂದಳು. ಅಷ್ಟರಲ್ಲಿ ನಾನು ಅವಳನ್ನು ಏನಮ್ಮ ನಾಟಕ ಆಡ್ತಿದ್ದೀಯಾ ಕ್ಷಣಕ್ಕೊಬ್ಬರನ್ನು ಮಮ್ಮಿ ಅನ್ನುತ್ತಿದ್ದೀಯಾ ಏನು ನಿನ್ನ ಕತೆ ಎಂದು ಕೇಳಿದೆ. ಅವಳು ಬೆದರಿ ಆ ಮಹಿಳೆಯನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆ ಮಹಿಳೆ ನನ್ನತ್ತ ನೋಡುತ್ತಾ ಸಾರಿ, ಇವಳು ನನ್ನ ಮಗಳು ರಾಣಿ, ಅವಳಿಗೆ ಡ್ರಾಮಾ ಜೂನಿಯರ್ಸ್ ಗೆ ಹೋಗಬೇಕೆಂದು ಆಸೆ. ಆದ್ರೆ ನಾನು ಬೇಡಾ ಅಂತ ಹೇಳ್ತಿದ್ದೆ ನಿಂಗೆ ಅದೆಲ್ಲ ಮಾಡಕ್ಕೆ ಬರಲ್ಲ ಅಂತ ಅದ್ಕೆ ಅವಳು ನಿಮ್ಮ ಬಳಿ ಬಂದು ನಾಟಕ ಮಾಡಿದ್ಲು ಬೇಜಾರಾಗಿದ್ರೆ ಕ್ಷಮಿಸಿ ಎಂದಳು. ಆ ಹುಡುಗಿ ನನ್ನನ್ನು ಬೇಸ್ತು ಬೀಳಿಸಿದ್ದು ನೋಡಿ ಪೆಚ್ಚಾದೆ. ಅವಳು  ಇಷ್ಟೊತ್ತು ನಾಟಕ ವಾಡಿದಳೆ, ನನಗೆ ಗೊತ್ತಾಗಲೇ ಇಲ್ವಲ್ಲ, ಛೆ! ನಾನೆಂಥಾ ಪೆದ್ದು, ಇಷ್ಟೊಂದು ಜನ ಓಡಾಡೋ ಜಾಗದಲ್ಲಿ ಯಾರಾದರೂ ಕಿಡ್ ನ್ಯಾಪ್ ಮಾಡಲು ನೋಡುತ್ತಾರೆಯೇ ಎಂದುಕೊಂಡು ನಾಚುತ್ತ, ಪರವಾಗಿಲ್ಲಮ್ಮ ನಿಮ್ಮ ಮಗಳು ತುಂಬಾ ಚೆನ್ನಾಗಿ ನಾಟಕ ಮಾಡ್ತಾಳೆ ಅವಳನ್ನು ಆ ಸ್ಪರ್ಧೆಗೆ ಖಂಡಿತ ಕಳುಹಿಸಿ  ನಾವು ಚಿಕ್ಕವವರಿರುವಾಗ ಇಂಥಾ ಸ್ಪರ್ಧೆಗಳಿರಲಿಲ್ಲ ಈಗಿನ ಮಕ್ಕಳಿಗೆ ಅಂಥಾ ಅವಕಾಶವಿರುವಾಗ ಯಾಕೆ ಬೇಡವೆನ್ನುತ್ತೀರಿ ಸ್ಪರ್ಧೆಯಲ್ಲಿ ಜಯ ಗಳಿಸುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪುಟ್ಟ ಭಾಷಣ ಬಿಗಿದೆ. ಆ ಹುಡುಗಿಯ ಬೆನ್ನು ತಟ್ಟುತ್ತ, ತುಂಬಾ ಚೆನ್ನಾಗಿ ಮಾಡಿದೆ, ಶಹಭಾಸ್ ಎಂದೆ. ಅವಳು ತುಂಟ ನಗು ಬೀರುತ್ತ, ಸಾರಿ ಆಂಟಿ ಎಂದಳು. ನಾನು ಪರವಾಗಿಲ್ಲ ಇನ್ನೂ ಚೆನ್ನಾಗಿ ಮಾಡು ಎಂದು ಹೇಳಿ ಡ್ರೈವರ್ ಗೆ ಕಾರು ಅಲ್ಲೇ ತರಲು ತಿಳಿಸಿ ಅತ್ತಿತ್ತ ನೋಡಿದೆ. ಯಾರಾದರೂ ನಾನು ಪೇಚಿಗೆ ಸಿಲುಕಿದ್ದನ್ನು ಕಂಡರೆನೋ ಎಂಬ ಮುಜುಗರ. ದೂರದಲ್ಲಿ ಆ ಧಾಂಡಿಗ ಯುವಕ ಇನ್ನೂ ಅಲ್ಲೇ ಇದ್ದ. ಅವನೂ ಈ ನಾಟಕದಲ್ಲಿ ಶಾಮೀಲಾಗಿರಬಹುದೇ ಎಂದುಕೊಳ್ಳುತ್ತಿದ್ದಂತೆ ಕಾರು ಬಂದು ನಿಂತಿತು. ಕಾರಿನಲ್ಲಿ ಕುಳಿತು ಒಮ್ಮೆ ಹಿಂತಿರುಗಿ ನೋಡಿದಾಗ ಆ ಹುಡುಗಿ ತಾಯಿಯ ಜೊತೆ ಸಂತಸದಿಂದ ಕುಣಿಯುತ್ತ ಹೋಗುತ್ತಿದ್ದಳು. ಬಹುಶ ಅವಳ ಅಮ್ಮ ಸ್ಪರ್ಧೆಗೆ ಕಳುಹಿಸಲು ಒಪ್ಪಿರಬೇಕು ಅಂತ ಅಂದುಕೊಂಡೆ.