ಈ ವರ್ಷದ ಆರಂಭದಿಂದಲೇ ಎಲ್ಲರೂ ಕಷ್ಟ, ದುಃಖ, ನಷ್ಟ, ನೋವುಗಳನ್ನು ಅನುಭವಿಸುವಂತಾಯಿತು. ಇದೆಲ್ಲವೂ ಇಲ್ಲಿಯೇ ಕೊನೆಯಾಗಲಿ. ಈ ದೀಪಾವಳಿಯು ಎಲ್ಲರ ಬಾಳಿನಲ್ಲಿ ಬೆಳಕು, ಸಂತಸ, ಸಮೃದ್ಧಿ, ಆಯುರಾರೋಗ್ಯ, ಸಂತಸ ಹಾಗೂ ನೆಮ್ಮದಿ ಕರುಣಿಸಲಿ ಎಂದು ನನ್ನ ಹಾರೈಕೆ. ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಹಾಡಿನ ಚಾಟಿ
ಅದೊಂದು ಅಪಾರ್ಟ್ಮೆಂಟ್. ಅಲ್ಲಿ ರಾಘವೇಂದ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕರೆಂಟ್ ಹೋದರೆ ಜನರೇಟರ್ ಹಾಕುವ ಕೆಲಸ ಅವನದ್ದು. ಆದರೆ ಅವನು ಬಹಳ ಸೋಮಾರಿಯಾಗಿದ್ದ. ಕರೆಂಟ್ ಹೋಗಿ ಬಹಳ ಹೊತ್ತಾದರೂ ಅವನಿಗೆ ಜನರೇಟರ್ ಹಾಕಬೇಕೆಂದು ಅನಿಸುತ್ತಿರಲ್ಲಿಲ್ಲ. ಅಲ್ಲಿನ ಮನೆಯವರೆಲ್ಲ ಜನರೇಟರ್ ಹಾಕೋ ಎಂದು ಗಲಾಟೆ ಮಾಡಿದಾಗಲೇ ಅವನು ಎದ್ದು ಹೋಗಿ ಹಾಕುತ್ತಿದ್ದ. ಇವನ ಕಾಟ ತಡೆಯಲು ಅಸಾಧ್ಯವಾಗಿತ್ತು. ಅದೊಂದು ದಿನ ಕತ್ತಲಾದ ಮೇಲೆ ಕರೆಂಟ್ ಕೈ ಕೊಟ್ಟಿತು. ಯಥಾ ಪ್ರಕಾರ ರಾಘವೇಂದ್ರ ಜನರೇಟರ್ ಹಾಕದೇ ಸುಮ್ಮನೆ ಕುಳಿತಿದ್ದ. ಫ್ಲಾಟ್ ನ ಜನ ಎಲ್ಲ ಒಬ್ಬೊಬ್ಬರಾಗಿ ಅವನನ್ನು ಕರೆದು ಜನರೇಟರ್ ಹಾಕಲು ಹೇಳಿದರೂ ಅವನು ಮಾತ್ರ ತೂಕಡಿಸುತ್ತಾ ಕುಳಿತಿದ್ದ. ಅಷ್ಟರಲ್ಲಿ ಜನರೆಲ್ಲ ರೋಸಿ ಹೋಗಿ ಗಲಾಟೆ ಮಾಡತೊಡಗಿದರು. ಅದರ ಮಧ್ಯೆ ಕೀರಲು ಧ್ವನಿಯೊಂದು ಆಲಾಪ ಶುರು ಮಾಡಿತು. ಆ ..ಆ…ಆ…..ಆ ಕರ್ಣ ಕಠೋರ ಸ್ವರಕ್ಕೆ ಬೆಚ್ಚಿ ಎಲ್ಲರೂ ಸ್ತಬ್ಧರಾಗಿ ಬಿಟ್ಟರು. ಆ ಧ್ವನಿ ಹಾಡಲು ಶುರು ಮಾಡಿತು.
ರಾಘವೇಂದ್ರಾ… ರಾಘವೇಂದ್ರಾ ….
ನೀ ಮೌನವಾದರೆ ನಮ್ಮ ಗತಿಯೇನು….ನಿನ್ನ ಜನರೇಟರ್ ನ ಜ್ಯೋತಿ ನಮ್ಮ ಮನೆಯನು ಬೆಳಗುವ ತನಕಾ .. ಬಿಡೆನು ಇನ್ನು ನಾನು… ಹಾಡದೆ ಇರೆನು ಇನ್ನು ನಾನು …
ಗಂಟಲು ಬಿರಿಯಲಿ… ಕಿವಿಯೂ ಹರಿಯಲಿ.. ಏನೇ ಆದರೂ ಹಾಡದೆ ಬಿಡೆನು.. ಬಿಡೆನು ಇನ್ನು ನಾನು .. ಬಿಡೆನು ಇನ್ನು ನಾನು…
ಜನರೇಟರನು ಹಾಕುವ ತನಕ… ಅಂಧಕಾರವನು ಅಳಿಸುವ ತನಕ ..ಬಿಡೆನು ಇನ್ನು ನಾನು.. ಹಾಡದೇ ಇರೆನು ಇನ್ನು ನಾನು.. ಬಿಡೆನು ಇನ್ನು ನಾನು…
ತಕ್ಷಣವೇ ಜನರೇಟರ್ ಶಬ್ದ ಕೇಳಿಸಿತು. ಅದರ ಜೊತೆಗೆ ದೀಪಗಳೆಲ್ಲ ಬೆಳಗಿದವು. ಹಾಡು ನಿಂತುಹೋಯಿತು. ಮತ್ತೆಂದೂ ಆ ಸ್ವರಕ್ಕೆ ಹಾಡಲು ಅವಕಾಶ ಸಿಗಲೇ ಇಲ್ಲ!!
ಹಾಡಿಗೆ ಪ್ರೇರಣೆ : ಬಿಡೆನು ನಿನ್ನ ಪಾದ – ಚಲನಚಿತ್ರ – ನಾ ನಿನ್ನ ಬಿಡಲಾರೆ .
ಮುದಗೊಂಡಿದೆ ಮನಸು
ಪ್ರಿಯ ಓದುಗರೇ,
ನಾನು ಬರೆದ ಬೇಡವಾದವಳು ಎಂಬ ಕಥೆ ಜುಲೈ ತಿಂಗಳ 2 ನೇ ತಾರೀಖಿನ ತರಂಗ ಸಾಪ್ತಾಹಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ನಾನು ಬರೆದ ಕಥೆಯನ್ನು ಪ್ರಕಟಿಸಿದ ತರಂಗ ಸಾಪ್ತಾಹಿಕ ಪತ್ರಿಕೆಗೆ ಧನ್ಯವಾದಗಳು.
ಸ್ವಾಭಿಮಾನಿ ಪ್ರಿನ್ಸ್
ಪ್ರಿನ್ಸ್ ಎಚ್ಚೆತ್ತು ನೋಡಿದಾಗ ತಾನು ಬೀದಿ ಬದಿಯಲ್ಲಿ ಮಲಗಿದ್ದು ಕಂಡು ಅದಕ್ಕೆ ಆಶ್ಚರ್ಯ ವಾಯಿತು. ಅರೆ ತಾನು ಇಲ್ಲಿಗೆ ಹೇಗೆ ಬಂದೆ ಎಂದು ಆತಂಕವಾಗಿ ಸುತ್ತಲೂ ನೋಡಿತು. ಅಪರಿಚಿತ ಜಾಗ, ಎಲ್ಲಿದ್ದೇನೆಂದು ಕ್ಷಣ ಕಾಲ ತಿಳಿಯಲೇ ಇಲ್ಲ. ಕೊನೆಗೆ ನಿನ್ನೆ ರಾತ್ರಿ ಯಜಮಾನನ ಜೊತೆ ಕಾರಿನಲ್ಲಿ ಕುಳಿತು ಲಾಂಗ್ ಡ್ರೈವ್ ಗೆ ಹೋಗಿದ್ದು ನೆನಪಾಯಿತು.
ಲಾಂಗ್ ಡ್ರೈವ್ ಹೋಗುವುದು ತನಗೆ ಯಾವಾಗಲೂ ಇಷ್ಟವೇ. ರಾತ್ರಿ ಹೊತ್ತಿನಲ್ಲಿ ಹೊರಗಿನ ತಂಪಾದ ಗಾಳಿಯನ್ನು ಆಹ್ಲಾದಿಸುತ್ತ ಹೋಗುವ ಮಜವೇ ಬೇರೆ. ಯಜಮಾನ ಖುಷಿಯಾದಾಗ ಹೀಗೆ ತನ್ನನ್ನು ಲಾಂಗ್ ಡ್ರೈವ್ ಗೆ ಕರೆದೊಯ್ಯುತ್ತಾನೆ. ಅರೆ! ಒಂದು ನಿಮಿಷ, ಲಾಂಗ್ ಡ್ರೈವ್ ಗೆ ಬಂದು ಮನೆಗೆ ಯಾಕೆ ವಾಪಾಸು ಹೋಗಿಲ್ಲ? ತಮ್ಮ ಕಾರು ಎಲ್ಲಿ? ಯಜಮಾನ ಎಲ್ಲಿ ? ಎಂದು ಆತಂಕದಿಂದ ಸುತ್ತಲೂ ನೋಡುತ್ತ ಓಡಾಡಿತು. ತಕ್ಷಣ ಯಜಮಾನ ಕತ್ತಲಲ್ಲಿ ತನಗೆ ಇಳಿಯಲು ಹೇಳಿ ಕಾರಿನಲ್ಲಿ ಭರ್ರೆಂದು ವಾಪಾಸು ಹೋಗಿದ್ದು ನೆನಪಾಗಿ ಖಿನ್ನ ಗೊಂಡಿತು.
ಹಿಂದೆಯೇ ಓಡುತ್ತ ಹೋದರೂ ಯಜಮಾನ ಕಾರು ನಿಲ್ಲಿಸಲೇ ಇಲ್ಲ. ಆದರೂ ಆತ ಕಾರು ನಿಲ್ಲಿಸಬಹುದು ಎಂದು ಆಸೆಯಿಂದ ತಾನು ಹಿಂದೆ ಓಡಿದ್ದೆ ಓಡಿದ್ದು, ಕೊನೆಗೆ ಆಯಾಸದಿಂದ ಸಿಟ್ಟೂ ಬಂದಿತು. ಯಜಮಾನನ ಈ ಹೊಸ ಆಟ ತನಗಿಷ್ಟವಾಗಲಿಲ್ಲ ಎಂದು ತೋರಿಸಲು ಹಿಂದೆ ಓಡುವುದನ್ನು ಬಿಟ್ಟು ಅಲ್ಲೇ ಕಾದು ಕುಳಿತೆ. ಆದರೆ ಯಜಮಾನ ಎಂದಿನ ಹಾಗೆ ಕಾರು ತಿರುಗಿಸಿ ಬರಲೇ ಇಲ್ಲ. ಯಜಮಾನನಿ ಗಾಗಿ ಕಾದು ಕಾದು ಅಲ್ಲೇ ನಿದ್ದೆ ಮಾಡಿ ಬಿಟ್ಟಿದ್ದೆ.
ಛೇ ತಾನು ಹಿಂದೆ ಓಡಿ ಕಾರನ್ನು ತಲುಪಬೇಕಿತ್ತು ಹಾಗೆ ಮಾಡಲಿಲ್ಲ ಎಂದು ಯಜಮಾನ ಸಿಟ್ಟಾಗಿರಬೇಕು ಎಂದು ಯೋಚಿಸುತ್ತ ವಾಸನೆಯಿಂದ ಗ್ರಹಿಸುತ್ತ ಮನೆಯ ಕಡೆ ಓಡಿತು. ಎಷ್ಟು ಓಡಿದ್ರೂ ಮನೆ ಸಿಗುತ್ತಿಲ್ಲ. ಓಡಿ ಓಡಿ ಸುಸ್ತಾಗಿ ಅಲ್ಲೇ ಕುಳಿತು ದಣಿವಾರಿಸುತ್ತಾ ಕುಳಿತಾಗ ಹಸಿವೆನಿಸಿತು.
ಸ್ವಲ್ಪ ದೂರದಲ್ಲಿ ಕಸದ ರಾಶಿ ಗೆ ಬೀದಿ ನಾಯಿಗಳು ಮುತ್ತಿಗೆ ಹಾಕಿದ್ದು ಕಂಡು ಅಲ್ಲಿಗೆ ನಡೆದರೂ ಕೊಳೆತ ವಾಸನೆ ಮೂಗಿಗೆ ಬಡಿದು ಛೇ! ನನಗ್ಯಾಕೆ ಕೊಳೆತ ಆಹಾರ, ಮನೆಗೆ ಹೋದರೆ ಯಜಮಾನ ಪರಿಮಳ ಭರಿತ ರುಚಿ ರುಚಿಯಾದ ಆಹಾರ ಕೊಡುತ್ತಾರೆ ಎಂದು ಜೊಲ್ಲು ಸುರಿಸುತ್ತ ಯಜಮಾನನ ಮನೆಯ ಕಡೆ ಧಾವಿಸಿತು. ಕೊನೆಗೂ ಮನೆ ತಲುಪಿದಾಗ ಗೇಟು ಮುಚ್ಚಿತ್ತು. ಅದನ್ನು ತಳ್ಳಿ ತೆರೆಯಲು ನೋಡಿದರೆ ಆಗುತ್ತಿಲ್ಲ, ಛೇ! ಎಂದುಕೊಳ್ಳುತ್ತ ಕಾಂಪೌಂಡ್ ಗೋಡೆ ಹತ್ತಿ ಹೋಗಲು ಪ್ರಯತ್ನಿಸಿತು. ಆದರೆ ಕುಬ್ಜ ಕಾಲುಗಳಿಂದಾಗಿ ಹಿಡಿತ ಗಟ್ಟಿಯಾಗುತ್ತಿಲ್ಲ, ಧಡೂತಿ ದೇಹದ ಭಾರವನ್ನು ಎತ್ತಿ ಕೊಳ್ಳಲೂ ಆಗದೆ ಅದು ಜಾರಿ ಕೆಳಗೆ ಬಿತ್ತು. ಆದರೆ ಅದಕ್ಕೆ ಹೇಗಾದರೂ ಮಾಡಿ ಮನೆಯೊಳಕ್ಕೆ ಹೋಗಲೇ ಬೇಕಿತ್ತು. ಅದು ಮತ್ತೆ ಮತ್ತೆ ಕಾಂಪೌಂಡ್ ಏರಲು ಪ್ರಯತ್ನಿಸಿತು. ಹಲವು ಬಾರಿ ಪ್ರಯತ್ನಿಸಿದ ಬಳಿಕ ಕಾಂಪೌಂಡ್ ಗೋಡೆ ಹತ್ತಿ ಕೊನೆಗೂ ಒಳಗೆ ಹಾರಿತು. ಹುಲ್ಲು ಹಾಸಿನ ಮೇಲೆ ಬಿದ್ದಿದ್ದರಿಂದ ಅದಕ್ಕೇನೂ ಆಗಲಿಲ್ಲ. ಸಾವರಿಸಿಕೊಂಡು ಎದ್ದು ಮನೆಯ ಮುಖ್ಯ ದ್ವಾರದ ಕಡೆ ಧಾವಿಸಿತು. ಬಾಗಿಲನ್ನು ಮೃದುವಾಗಿ ಕೆರೆಯುತ್ತಾ ಕುಯ್ ಕುಯ್ ಎನ್ನುತ್ತ ಯಜಮಾನನಿಗೆ ತಾನು ಬಂದಿರುವ ವಿಷಯ ತಿಳಿಸಿತು. ಇನ್ನೇನು ಯಜಮಾನ ಅವರ ಮಕ್ಕಳು ಎಲ್ಲ ಬಂದು ಬೇಗನೆ ಬಾಗಿಲು ತೆರೆದು ತನ್ನನ್ನು ಮುದ್ದಾಡಬಹುದು ಎಂದು ನಿರೀಕ್ಷಿಸಿಸುತ್ತ ಕಾದು ಕುಳಿತುಕೊಂಡಿತು.
ಆದರೆ ತುಂಬಾ ಹೊತ್ತಾದರೂ ಯಾರೂ ಬರಲಿಲ್ಲ . ಹೋಗಲಿ ಕಾಲಿಂಗ್ ಬೆಲ್ ಒತ್ತೋಣ, ಯಜಮಾನ ತನ್ನನ್ನು ವಾಕಿಂಗ್ ಗೆ ಕರೆದು ಕೊಂಡು ಹೋಗಿ ವಾಪಾಸು ಬರುವಾಗ ಅಲ್ಲಿ ಬೆಲ್ ಒತ್ತಿದ ಮೇಲೆಯೇ ಬಾಗಿಲು ತೆರೆಯುತ್ತಾಳೆ ಗಂಗಾ. ಹಾಗಾದರೆ ತಾನೂ ಈಗ ಬೆಲ್ ಒತ್ತಬೇಕು ಎಂದುಕೊಳ್ಳುತ್ತ ಮೇಲಕ್ಕೆ ಹಾರಿ ಹಾರಿ ತನ್ನ ಕಾಲಿನಿಂದ ಬೆಲ್ ಒತ್ತಲು ಪ್ರಯತ್ನಿಸಿತು. ಆದರೆ ಅದಕ್ಕೆ ಬೆಲ್ ಇರುವ ಎತ್ತರಕ್ಕೆ ಹಾರಲು ಅದರ ಧಡೂತಿ ದೇಹ, ಕುಬ್ಜ ಕಾಲುಗಳು ಈಗಲೂ ಸಹಾಯ ಮಾಡಲಿಲ್ಲ. ಆದರೂ ಅದು ತನ್ನ ಪ್ರಯತ್ನ ಮುಂದುವರೆಸಿತು. ತಾನು ಈಗ ಬೆಲ್ ಒತ್ತಿದರೆ ಯಜಮಾನನಿಗೆ ಖುಷಿಯಾಗಿ ತನ್ನನ್ನು ಮುದ್ದಾಡಬಹುದು ಎಂದು ಆಸೆಯಿಂದ ಮತ್ತೆ ಮತ್ತೆ ಮೇಲಕ್ಕೆ ಹಾರಿತು. ಆದರೆ ಹಾರಿ ಹಾರಿ ದಣಿವಾಯಿತೇ ಹೊರತು ಬೆಲ್ ಇರುವ ಕಡೆಗೆ ಹಾರಲು ಆಗಲೇ ಇಲ್ಲ . ಇನ್ನು ಉಳಿದಿರುವ ದಾರಿ ಎಂದರೆ ಬೊಗಳುವುದು, ಆಗಲಾದರೂ ಯಜಮಾನ ಓಡೋಡಿ ಬರಬಹುದು ಎಷ್ಟೆಂದರೂ ತಾನು ಆತನ ಮುದ್ದಿನ ಪ್ರಿನ್ಸ್ ಎಂದುಕೊಳ್ಳುತ್ತ ಬೊಗಳಲು ಶುರು ಮಾಡಿತು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಅರೆ! ಯಾರೂ ಮನೆಯಲ್ಲಿ ಇಲ್ಲವೇ ಎಂದು ಯೋಚಿಸುತ್ತ ಕಿಟಕಿ ಬಳಿ ಧಾವಿಸಿತು. ಕಿಟಕಿ ಮುಚ್ಚಿತ್ತು. ಆದರೆ ಮಕ್ಕಳು ಪಿಸು ದನಿಯಲ್ಲಿ ಮಾತನಾಡುವುದು ಕೇಳಿಸಿ ಸಂತಸದಿಂದ ಜೋರಾಗಿ ಬೊಗಳಿತು. ಆದರೆ ಮಕ್ಕಳ ಪಿಸು ದನಿ ನಿಂತು ಹೋಯಿತೇ ಹೊರತು ಅವರ್ಯಾರೂ ಕಿಟಕಿ ಬಳಿಯೂ ಬರಲಿಲ್ಲ, ಬಾಗಿಲೂ ತೆರೆಯಲಿಲ್ಲ. ಪ್ರಿನ್ಸ್ ಗೆ ಬಹಳ ದುಃಖವಾಯಿತು. ಯಾಕೆ ಇವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ? ನಾನು ಮಾಡಿದ ತಪ್ಪಾದರೂ ಏನು? ಎಂದು ಯೋಚಿಸಿತು. ಅಷ್ಟರಲ್ಲಿ ಮನೆಯ ಬಾಗಿಲು ತೆರೆಯಿತು. ಪ್ರಿನ್ಸ್ ಸಂತಸದಿಂದ ಬಾಗಿಲ ಕಡೆ ಧಾವಿಸಿತು. ಆದರೆ ಬಂದವಳು ಗಂಗಾ, ಮನೆಯ ಕೆಲಸದಾಕೆ. ಅವಳ ಕೈಯಲ್ಲೊಂದು ದೊಡ್ಡ ಕೋಲು. ಬಟ್ಟೆಯಿಂದ ಮುಖ ಮುಚ್ಚಿಕೊಂಡೆ ಕೋಲಿನಿಂದ ಹಚ ಹಚಾ ಎನ್ನುತ್ತ ಪ್ರಿನ್ಸ್ ನನ್ನು ಓಡಿಸಲು ಪ್ರಯತ್ನಿಸಿದಳು. ಪ್ರಿನ್ಸ್ ಕಕ್ಕಾಬಿಕ್ಕಿಯಾಗಿ ಯಾಕೆ ಇವಳು ಬೀದಿ ನಾಯಿಯನ್ನು ಓಡಿಸುವಂತೆ ಹಚಾ ಹಚಾ ಎನ್ನುತ್ತಿದ್ದಾಳೆ? ಕೈಯಲ್ಲಿ ಕೋಲು ಯಾಕಿದೆ? ಯಾಕೆ ಇವಳು ನನ್ನನ್ನು ಓಡಿಸಲು ನೋಡುತ್ತಿದ್ದಾಳೆ? ಎಂದು ಅದಕ್ಕೆಅವಮಾನವಾಯಿತು ಜೊತೆಗೆ ಸಿಟ್ಟು ಬಂದಿತು. ಗುರ್ ಗುರ್ ಎನ್ನುತ್ತ ಆಕೆಗೆ ತನ್ನ ಹಲ್ಲುಗಳನ್ನು ಪ್ರದರ್ಶಿಸಿ ಹೆದರಿಸಲು ನೋಡಿತು. ಏ, ಹೋಗೋ ನಾಯಿ, ನಿನ್ನಿಂದ ನಮಗೆಲ್ಲ ಕೋರೋನ ಬಂದು ನಾವು ಸತ್ರೆ.. ? ತೊಲಗು ಪೀಡೆ, ಎನ್ನುತ್ತ ಕೋಲಿನಿಂದ ಬಾರಿಸಲು ಬಂದಾಗ ಪ್ರಿನ್ಸ್ ಗೆ ಅವಮಾನ ದುಃಖ ಎಲ್ಲವೂ ಒಟ್ಟಿಗೆ ಬಂದು ಇವರಿಗೆ ನಾನು ಬೇಡವಾಗಿ ಬಿಟ್ಟೆನೇ ಎಂದು ತಲೆ ತಗ್ಗಿಸಿ ಕೊಂಡು ನಿಧಾನವಾಗಿ ಅಲ್ಲಿಂದ ಹೊರ ಬಂದಿತು.
ಸ್ವಲ್ಪ ದೂರ ನಡೆದಾಗ ಬೀದಿಯ ಬದಿಯಲ್ಲಿ ಪಕ್ಕದ ಮನೆಯ ನಾಯಿ ರಾಣಿ ಅಲ್ಲಿತ್ತು, ಬಹುಶಃ ಅದನ್ನೂ ಮನೆಯ ಯಜಮಾನ ಹೊರ ಹಾಕಿರಬೇಕು ಏನಾಗಿದೆ ಇವರಿಗೆಲ್ಲ? ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ರಾಣಿಯನ್ನು ಕೇಳಿತು. ಎಲ್ಲರೂ ಕೋರೋನ ಕೊರೋನ ಅಂತಿದ್ದಾರೆ, ಅದು ಏನು ಅಂತ ನನಗೂ ಗೊತ್ತಿಲ್ಲ ಅಂದಿತು. ಅಷ್ಟರಲ್ಲಿ ಇಬ್ಬರು ಹರಕಲು ಬಟ್ಟೆಯ ಪುಟ್ಟ ಹುಡುಗರು ಆ ದಾರಿಯಾಗಿ ಬಂದವರು ಮುದ್ದಾದ ನಾಯಿಗಳನ್ನು ಕಂಡು ಎತ್ತಿಕೊಂಡು ಮುದ್ದಾಡಿದರು. ಪ್ರೀತಿಗಾಗಿ ಹಲುಬುತ್ತಿದ್ದ ಪ್ರಿನ್ಸ್ ಮತ್ತು ರಾಣಿ ಆ ಹರಕಲು ಬಟ್ಟೆ ಹುಡುಗರ ಪ್ರೀತಿಗೆ ಕರಗಿ ಹೋದವು. ಇಬ್ಬರೂ ನಾಯಿಗಳನ್ನು ಎತ್ತಿಕೊಂಡು ತಮ್ಮ ಹರಕಲು ಜೋಪಡಿಯತ್ತ ಹೊರಟರು.
ಆ ಹುಡುಗರ ಮನೆಯವರು ನಾಯಿಗಳನ್ನು ಆಶ್ಚರ್ಯದಿಂದ ನೋಡಿ ನಂತರ, ಈ ಕೋರೋನದಿಂದ ನಮ್ಗೆ ಹೊಟ್ಟೆಗೆ ಸರಿಯಾಗಿಲ್ಲ, ಇನ್ನು ಇವಕ್ಕೆ ಎಲ್ಲಿಂದ ತಂದು ಹಾಕ್ತೀಯಾ, ಎಲ್ಲಿಂದ ತಂದ್ರೋ ಅಲ್ಲೇ ಬಿಟ್ಟು ಬನ್ನಿ ಎಂದು ಗದರಿದಾಗ ಪ್ರಿನ್ಸ್ ಮತ್ತು ರಾಣಿ ಮಂಕಾದವು. ಹುಡುಗರು ಮಾತ್ರ, ನಾವು ಏನು ತಿಂತಿವೋ ಅದನ್ನೇ ಅವಕ್ಕೆ ಸ್ವಲ್ಪ ಕೊಟ್ಟರಾಯಿತು. ಬೇಡಿ ಕೊಂಡು ತಂದಾ ದರೂ ಹಾಕ್ತೀವಿ ಬಿಟ್ಟು ಬಾ ಅಂತ ಮಾತ್ರ ಹೇಳಬೇಡ ಎನ್ನುತ್ತಿದ್ದಂತೆ ಅವರ ಅಪ್ಪ ಮನೆಗೆ ಬಂದವನು ದುಬಾರಿ ಜಾತಿಯ ನಾಯಿಗಳು ಮಕ್ಕಳ ಕೈಯಲ್ಲಿರುವುದನ್ನು ಕಂಡು ಲಾಟರಿ ಹೊಡೆದವರಂತೆ ಏ, ಎಲ್ಲಿ ಸಿಕ್ತೋ ಇವು, ಇವನ್ನ ಮಾರಿದ್ರೆ ಲಕ್ಷ ಲಕ್ಷ ಬರುತ್ತೆ ಕಣ್ರೋ ಎಂದಾಗ ಮಕ್ಕಳಿಗೆ ಬೇಸರವಾದರೂ ದುಡ್ಡು ಸಿಗುತ್ತಲ್ಲ ಎಂದು ಖುಷಿ ಪಟ್ಟರು. ಆವತ್ತಿನಿಂದ ಹುಡುಗರ ಅಪ್ಪ ಎಲ್ಲೆಲ್ಲಿಂದನೋ ಮಾಂಸದ ತುಣುಕುಗಳನ್ನು, ಮೀನು ಎಲ್ಲ ನಾಯಿಗಳಿಗಾಗಿ ತರತೊಡಗಿದ. ಹೊಸ ಆಹಾರ ಸ್ವಲ್ಪ ಹಳಸಲಾಗಿದ್ದರೂ ಎಲ್ಲರ ಪ್ರೀತಿ ದೊರಕುತ್ತಲ್ಲ ಎಂದು ಎರಡೂ ನಾಯಿಗಳೂ ಒಗ್ಗಿಕೊಂಡವು. ಅವು ಸ್ವಚ್ಛಂದ ವಾಗಿ ಓಡಾಡುತ್ತಿದ್ದವು. ಹಾಗೆ ಮಾಡಬೇಡ ಹೀಗೆ ಮಾಡಬೇಡ ಎನ್ನುವ ನಿರ್ಭಂದ ಗಳಿಲ್ಲದೆ ನಿರ್ಭಿಡೆಯಾಗಿ ಬದುಕುವ ಈ ಜೀವನ ಹಿಂದಿನ ರಾಜ ವೈಭವದ ಮನೆಯ ಬದುಕಿಗಿಂತ ಬಹಳ ಇಷ್ಟವಾಯಿತು. ಬಂದವರಿಗೆ ಕೈ ಕುಲುಕುವುದು, ಮನೆಯ ಯಜಮಾನ ಹೇಳಿದಂತೆ ಮಾಡಿದರೆ ಬಿಸ್ಕಿಟ್ ಸಿಗುತ್ತಿತ್ತು. ಇಲ್ಲಿ ಹಾಗಿಲ್ಲ ಹಾಗೆ ಮಾಡು ಹೀಗೆ ಮಾಡಬೇಡ ಎನ್ನುವವರೇ ಇಲ್ಲ. ಜೊತೆಗೆ ಸರಪಳಿ ಬಂಧನವೂ ಇಲ್ಲ. ಎರಡೂ ನಾಯಿಗಳು ಹೊಟ್ಟೆಗೆ ಸರಿಯಾಗಿಲ್ಲದೆ ಸ್ವಲ್ಪ ಸೊರಗಿದರೂ ಸಿಕ್ಕಿದ ಸ್ವಾತಂತ್ರ್ಯವನ್ನು ಅನುಭವಿಸುತ್ತ ಹಾಯಾಗಿದ್ದವು.
ಕೋರೋನ ಕಾಟ ಮುಗಿದ ಮೇಲೆ ಒಂದು ದಿನ ಪ್ರಿನ್ಸ್ ನ ಹಳೆಯ ಯಜಮಾನನ ಮಕ್ಕಳು ಕಾರಿನಲ್ಲಿ ಹೋಗುವಾಗ ಪ್ರಿನ್ಸ್ ಹರಕಲು ಬಟ್ಟೆಯ ಹುಡುಗನ ಜೊತೆ ನಡೆದುಕೊಂಡು ಹೋಗುವುದನ್ನು ಕಂಡು ಖುಷಿಯಿಂದ “ಅಪ್ಪ, ಪ್ರಿನ್ಸ್ ನೋಡಲ್ಲಿ” ಎನ್ನುತ್ತ “ಪ್ರಿನ್ಸ್, ಪ್ರಿನ್ಸ್” ಎಂದು ಕರೆಯತೊಡಗಿದರು. ಪ್ರಿನ್ಸ್ ಗೆ ಮಕ್ಕಳ ಧ್ವನಿ ಕೇಳಿ ಸಂತಸವಾಗಿ ಅವರತ್ತ ನೋಡುತ್ತಿದ್ದಂತೆ ಅದಕ್ಕೆ ಹಿಂದೆ ಅವರು ಅವಮಾನಿಸಿ ಮನೆಯಿಂದ ಹೊರ ಹಾಕಿದ್ದು ನೆನಪಾಗಿ ಹುಡುಗನ ಮರೆಯಲ್ಲಿ ನಿಂತಿತು. ಹುಡುಗ,”ಏ ಇಲ್ಲಿ ಯಾರೂ ಪ್ರಿನ್ಸ್ ಇಲ್ಲ, ಅದು ನನ್ನ ನಾಯಿ ರಾಜ, ಅಲ್ವೇನೋ” ಎನ್ನುತ್ತ ಅದನ್ನು ಎತ್ತಿ ಮುದ್ದಾಡಿದಾಗ ಅದು ಸಂತಸದಿಂದ ಅವನನ್ನು ನೆಕ್ಕಿತು. ಮಕ್ಕಳು ಮಾತ್ರ ಅದು ತಮ್ಮ ಪ್ರಿನ್ಸ್, ತಮಗೆ ಅದನ್ನು ವಾಪಾಸ್ ಕೊಡುವಂತೆ ಹಠ ಮಾಡಿದರು.
ಅದುವರೆಗೂ ಕಾರಿನಲ್ಲಿ ಸುಮ್ಮನೆ ಕುಳಿತಿದ್ದ ಯಜಮಾನ ಕಾರಿನಿಂದ ಇಳಿದು ಬಂದು, “ಏ, ಈ ನಾಯಿ ನಮ್ದು, ಸುಮ್ನೆ ಕೊಟ್ಬಿಡು, ಇಲ್ಲಾಂದ್ರೆ…” ಎನ್ನುತ್ತ ಹೊಡೆಯಲು ಬಂದಾಗ ಹುಡುಗ ಪ್ರಿನ್ಸ್ ನನ್ನು ಎತ್ತಿಕೊಂಡು ಓಡಿದ. ಮಕ್ಕಳು ಅಳತೊಡಗಿದರು. ಯಜಮಾನ ಪೊಲೀಸರಿಗೆ ಫೋನ್ ಮಾಡಿ, ನಮ್ಮ ನಾಯಿಯನ್ನು ಗುಡಿಸಲ ಹುಡುಗರು ಕದ್ದಿದ್ದಾರೆ ಎಂದು ದೂರು ಕೊಟ್ಟು ತಕ್ಷಣ ಬರಲು ತಿಳಿಸಿದರು. ಪೊಲೀಸರು ಬಂದು ಹುಡುಗನ ಜೋಪಡಿ ಹುಡುಕಿ ಪ್ರಿನ್ಸ್ ಮತ್ತು ಹುಡುಗನನ್ನು ಹೊರ ಕರೆ ತಂದರು.
ಪೊಲೀಸರು ಪ್ರಿನ್ಸ್ ನನ್ನು ಎತ್ತಿಕೊಂಡು ಯಜಮಾನ,ಮಕ್ಕಳ ಬಳಿ ತಂದು ಬಿಟ್ಟಾಗ ಅದು ವಾಪಾಸು ಓಡಿ ಬಂದು ಜೋಪಡಿ ಹುಡುಗನ ಕಾಲು ನೆಕ್ಕಿತು. ಅದನ್ನು ಕಂಡು ಪೊಲೀಸರು “ಇದು ನಿಮ್ಮ ನಾಯಿಯಲ್ಲ, ನಿಮ್ಮದಾಗಿದ್ದರೆ ನಿಮ್ಮನ್ನು ಬಿಟ್ಟು ಓಡುತ್ತಿರಲಿಲ್ಲ. ಇದು ಅದರಂತೆ ಇರುವ ನಾಯಿ, ಅವನಿಗೆ ದಾರಿಯಲ್ಲಿ ಸಿಕ್ಕಿದ್ದಂತೆ” ಎಂದಾಗ ಯಜಮಾನ, “ಇಲ್ಲ ಇದು ನಮ್ಮದೇ ನಾಯಿ” ಎನ್ನುತ್ತ “ಪ್ರಿನ್ಸ್… ಬಾ …ಪ್ರಿನ್ಸ್” ಎನ್ನುತ್ತ ಮುದ್ದಿನಿಂದ ಕರೆಯುತ್ತಾ ಹತ್ತಿರ ಬಂದಾಗ ಪ್ರಿನ್ಸ್ ಗುರ್ ಎಂದಿತು. ತನ್ನೆಲ್ಲ ಹಲ್ಲುಗಳನ್ನು ತೋರಿಸುತ್ತ ಹೆದರಿಸಲು ನೋಡಿದಾಗ ಅವರೆಲ್ಲ ಬೇರೆ ದಾರಿ ಕಾಣದೆ ಹೊರಟು ಹೋದರು. ಜೋಪಡಿ ಹುಡುಗ “ನನ್ನ ಮುದ್ದು ರಾಜ” ಎನ್ನುತ್ತ ಅದನ್ನೆತ್ತಿಕೊಂಡು ಮುದ್ದಿಸಿದಾಗ ಅದು ಸಂತಸದಿಂದ ಅವನ ಮುಖವನ್ನು ನೆಕ್ಕಿತು.
ಕ್ರೂರಿ ಕೊರೋನ
ಕ್ರೂರಿ ಕೊರೋನ ಕುಣಿಯುತಲಿದ್ದ
ಕೈಗೆ ಸಿಕ್ಕವರ ನುಲಿಯುತಲಿದ್ದ
ಕ್ರೂರಿ ಕೊರೋನಾ, ಕ್ರೂರಿ ಕೊರೋನಾ||
ವಿಮಾನದಾಗ ಬರೋ ಮಂದಿ ದೇಹ
ಕದ್ದು ಮುಚ್ಚಿ ಸೇರೋ ಖದೀಮಾ
ಕ್ರೂರಿ ಕೊರೋನಾ||
ಸೀನು ಕೆಮ್ಮ ಲ್ಲಿ ಗಾಳಿಗೆ ಹಾರಿ
ಮಂದಿ ದೇಹ ಸೇರೋ ಠಕ್ಕ
ಕ್ರೂರಿ ಕೊರೋನಾ||
ದೂರ ಸರಿಯೋಣ ಮಂದಿ ಗುಂಪಿಂದ
ಅಂತರ ಇಡೋಣ ಇನ್ನೊಬ್ಬರಿಂದ
ಮನೇಲೇ ಕೂರೋಣ ಪ್ರಾಣ ಕಾಪಾಡೋಣ
ಓಡ್ ಸೋಣ ಕ್ರೂರಿ ಕೋರೋನ ನಾ
ಕ್ರೂರಿ ಕೊರೋನಾ||
(ಸಂಗೀತ: ಕುರುಡು ಕಾಂಚಾಣ)
ಕಷಾಯ
ಕೊರೋನ ಭಯದಿಂದ ಜನ ಅದೆಷ್ಟು ದಿಗಿಲು ಬೀಳುತ್ತಿದ್ದಾರೆ ಅಂದರೆ ಈಗ ಸಾಮಾನ್ಯವಾಗಿ ಕಾಣಿಸಿ ಕೊಳ್ಳುವ ಶೀತ ಜ್ವರ ನೆಗಡಿ ಕೆಮ್ಮು ಬಂದರೂ ಕೊರೋನ ಎಂದೇ ಭಯ ಪಡುತ್ತಿದ್ದಾರೆ. ಕೊರೋನ ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ಮಾತ್ರ ಕೊರೋನ ವೈರಸ್ ಹರಡಲು ಸಾಧ್ಯ. ಆದ್ದರಿಂದ ಅನಗತ್ಯ ಭಯ ಆತಂಕ ಬೇಡ. ಸಾಮಾನ್ಯವಾದ ಶೀತ ನೆಗಡಿ ಗಂಟಲು ನೋವು ಕೆಮ್ಮು ಬಂದರೆ ಶುಂಠಿ ಹಾಗೂ ಕಾಳು ಮೆಣಸಿನ ಕಷಾಯ ಮಾಡಿ ಕುಡಿಯಿರಿ. ಮತ್ತು ಆರೋಗ್ಯ ವಂತರಾಗಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ವೀಡಿಯೋ ನೋಡಿರಿ.
ಕೊರೋನ ರಕ್ಕಸ
ಈಗೀಗ ಎಲ್ಲರ ಬಾಯಲ್ಲೂ ಕೊರೋನ ರಕ್ಕಸನದ್ದೇ ಮಾತು. ಪ್ರಪಂಚವನ್ನೇ ದಿಗಿಲು ಪಡಿಸುತ್ತಾ ರಕ್ಕಸ ತನ್ನ ಕದಂಬ ಬಾಹುಗಳನ್ನು ಚಾಚಿ ಮನುಷ್ಯರನ್ನು ತನ್ನ ಮುಷ್ಟಿಯಲ್ಲಿ ನಲುಗಿಸಲು ನೋಡುತ್ತ ಜನರನ್ನು ಭಯಭೀತಗೊಳಿಸುತ್ತಿದ್ದಾನೆ. ಸಾಮಾನ್ಯ ಕಣ್ಣಿಗೆ ಕಾಣದ ರಕ್ಕಸ ಮನುಷ್ಯನ ದೇಹದೊಳಗೆ ಅಡಗಿ ಕುಳಿತು ಬೃಹದಾಕಾರ ತಾಳಿ ಸದ್ದಿಲ್ಲದೆ ಜನರನ್ನು ನುಂಗುತ್ತಿದ್ದಾನೆ. ಈ ರಕ್ಕಸನ ದಾಳಿಗೆ ಜಗತ್ತೇ ತತ್ತರಿಸಿ ಹೋಗಿದೆ. ದೇಶಗಳ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತವನ್ನೆ ಕೊಡುತ್ತಿದ್ದಾನೆ. ಷೇರು ಮಾರ್ಕೆಟ್ಟುಗಳು ಕೊರೋನ ರಕ್ಕಸನ ದಾಳಿಗೆ ಬೆದರಿ ಪಾತಾಳಕ್ಕಿಳಿದಿವೆ.
ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು ಜಗತ್ತಿನಾದ್ಯಂತ ಹಬ್ಬಲು, ಜನರನ್ನು ಬಲಿ ತೆಗೆದುಕೊಳ್ಳಲೂ ಸಿದ್ಧವಾಗಿದ್ದಾನೆ. ಇಟಲಿ ಯಲ್ಲಿ ಸಾವಿರಕ್ಕೂ ಹೆಚ್ಚು ಜನ ಕೊರೋನ ರಕ್ಕಸನಿಗೆ ಬಲಿಯಾಗಿದ್ದಾರೆ. ನಮ್ಮ ದೇಶದಲ್ಲೂ ಕೊರೋನ ರಕ್ಕಸ ಕಾಲಿಟ್ಟಿದ್ದಾನೆ. ಆದರೆ ಕದೀಮ ರಕ್ಕಸ ವಿದೇಶಗಳಿಂದ ಬಂದವರಲ್ಲಿ ಅಡಗಿ ಕುಳಿತು ಹೊರಬರಲು ನೋಡುತ್ತಿದ್ದಾನೆ. ರಕ್ಕಸನನ್ನು ನಮ್ಮ ದೇಶದ ಜನರ ಬಲಿ ತೆಗೆದುಕೊಳ್ಳಲು ನಾವು ಬಿಡಬಾರದು. ಇದನ್ನು ಪ್ರಮುಖವಾಗಿ ವಿದೇಶಗಳಿಂದ ಬಂದವರು ಅರಿತು ಕೊಳ್ಳಬೇಕು. ಕೊರೋನ ರಕ್ಕಸ ನಿಮ್ಮೊಳಗೇ ಇದ್ದರೂ 5 ದಿನಗಳವರೆಗೆ ಅಡಗಿ ಕುಳಿತಿರುತ್ತಾನೆ. ನಿಮ್ಮ ದೇಹ ತನ್ನ ಉಷ್ಣತೆಯನ್ನು ಹೆಚ್ಚಿಸಿ ವೈರಸ್ ಕೊಲ್ಲಲು ಪ್ರಯತ್ನಿಸುತ್ತದೆ ಅದೇ ಜ್ವರ. ನಂತರ ಗಂಟಲು ನೋವು, ಕೆಮ್ಮು ಶುರುವಾಗುತ್ತದೆ. ನಂತರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರೋಗಿಯ ಕೆಮ್ಮು, ಸೀನಿನ ಹನಿಯಲ್ಲಿ ಕೊರೋನ ರಕ್ಕಸ ಅಡಗಿ ಕುಳಿತು ಇತರರನ್ನು ತನ್ನ ಮುಷ್ಟಿಯೊಳಗೆ ಸೇರಿಸಲು ಪ್ರಯತ್ನ ಪಡುತ್ತಾನೆ.
ಆದ್ದರಿಂದ ವಿದೇಶಗಳಿಂದ ಬಂದವರು ಕದ್ದು ಮುಚ್ಚಿ ಆರೋಗ್ಯಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡಬೇಡಿ. ಬೇರೆಯವರ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡಲು ನಿಮಗೆ ಯಾವ ಹಕ್ಕೂ ಇಲ್ಲ. ವಿದೇಶದಿಂದ ಬಂದ ಮೇಲೆ ಅವರಿಗೆ ವಿಷಯ ತಿಳಿಸಿ, ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿ. ಅವರೊಂದಿಗೆ ಸಹಕರಿಸಿ. ಮನೆಗೆ ಬಂದ ಮೇಲೂ ಮುಕ್ತವಾಗಿ ಬೆರೆಯುವುದು ಬೇಡ. 14 ದಿನಗಳ ಬಳಿಕವೂ ನೀವು ಆರೋಗ್ಯವಾಗಿದ್ದರೆ ನಂತರ ಸಮಸ್ಯೆಯಿಲ್ಲ. ಅದುವರೆಗೂ ಬೇರೆಯವರನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ. ನಿಮಗೆ ಸಣ್ಣ ಜ್ವರ ನೆಗಡಿ ಕಾಣಿಸಿಕೊಂಡರೂ ನಿರ್ಲಕ್ಷ್ಯ ಬೇಡ.
ನಮ್ಮನ್ನು ನಾವು ಕೊರೋನ ರಕ್ಕಸನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಹೊರಗಡೆ ಕಾಲಿಟ್ಟ ಮೇಲೆ ಮೂಗು ಕಣ್ಣು ಬಾಯಿಗಳಿಗೆ ಬೆರಳು ಹಾಕುವುದು ಬೇಡ. ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ. ಕೈಕಾಲುಗಳಿಗೆ ಗಾಯವಿದ್ದರೆ ಪಟ್ಟಿಕಟ್ಟಿ ಕೊಳ್ಳಿ. ಹೆಚ್ಚು ಜನ ಸೇರಿರುವ ಕಡೆ ಓಡಾಡಬೇಡಿ. ಅನಗತ್ಯ ಓಡಾಟ ಬೇಡ. ನಿರ್ಲಕ್ಷ್ಯವೂ ಬೇಡ. ಇತರರ ಜೊತೆ ಕೈ ಕುಲುಕಬೇಡಿ. ನಮ್ಮ ದೇಶದ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ತೆ ಎನ್ನಿ ಸಾಕು. ಪಾಶ್ಚಮಾತ್ಯ ದೇಶಗಳಲ್ಲಿ ಈಗ ಜನ ಕೈ ಕುಲುಕಲಾಗದೆ ಏನೇನೋ ಮಾಡುತ್ತಾರೆ ಬೂಟುಗಾಲಿನಿಂದ ಒಬ್ಬರಿಗೊಬ್ಬರು ತಾಕಿಸುವುದು, ಮೊಣಕೈ ತಾಗಿಸುವುದು, ಏನೇನೋ ಮಾಡಿ ನಗೆಪಾಟಲಿಗೀಡಾಗುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಎಷ್ಟು ಒಳ್ಳೆಯದಲ್ಲವೇ,
ಮನೆಗೆ ಬಂದ ಮೇಲೆ ಮೊದಲ ಕೆಲಸ ಕೈಕಾಲು ಮುಖ ಒಂದಿಂಚೂ ಬಿಡದೆ ಸೋಪಿನಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದುಕೊಳ್ಳಿ, ಸಾಧ್ಯವಾದಲ್ಲಿ ಸ್ನಾನವನ್ನು ಮಾಡಿ. ಧರಿಸಿದ ಬಟ್ಟೆಗಳನ್ನು ಒಗೆದು ಹಾಕಿ. ಮನೆಗೆ ಬಂದ ಮೇಲೆ ಕೈ ತೊಳೆಯದೆ ಎಲ್ಲೆಲ್ಲ ಮುಟ್ಟಿದಿರೋ, ಉದಾ: ಬಾಗಿಲು, ಬೀಗದ ಕೈ, ನಲ್ಲಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ. ಹೊರಗೆ ಹೋಗುವಾಗ ಹಾಕಿಕೊಂಡ ಚಪ್ಪಲಿ ಅಥವಾ ಬೂಟುಗಳನ್ನು ಮನೆಯೊಳಗೆ ಧರಿಸಿಕೊಂಡು ಓಡಾಡಬೇಡಿ. ಸಧ್ಯಕ್ಕೆ ಉಗುರು ಬೆಳೆಸುವ ಫಾಷನ್ ಬೇಡ. ಉಗುರುಗಳನ್ನು ಕತ್ತರಿಸಿ, ರಕ್ಕಸ ಅಲ್ಲಿ ಸಹ ಅಡಗಿ ಕೂರಬಹುದು.
ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ತರಕಾರಿ ನಿಮ್ಮನ್ನು ತಲುಪುವ ಮೊದಲು ಯಾರೆಲ್ಲ ಸೀನಿರಬಹುದು ಯಾರೆಲ್ಲ ಸಿಂಬಳದ ಕೈಯಿಂದ ಮುಟ್ಟಿರಬಹುದು ಎಂದು ತಿಳಿಯದು ಅದಕ್ಕಾಗಿ ಈ ಮುಂಜಾಗರೂಕತೆ. ಮಾಂಸ ಮೊಟ್ಟೆ ತಿನ್ನುವವರು ಎಲ್ಲವನ್ನೂ ಚೆನ್ನಾಗಿ ಬೇಯಿಸಿ ತಿನ್ನಿರಿ. ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಪುಟ್ಟ ಮಕ್ಕಳ ಹಾಗೂ ವೃದ್ಧರ ಹೆಚ್ಚಿನ ಜಾಗ್ರತೆ ಮಾಡಿರಿ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ನಿಮಗೆ ಬೇರೆ ರೋಗಗಳಿದ್ದರೆ ಕೊರೋನ ರಕ್ಕಸ ಬಹಳ ಖುಷಿಯಿಂದಲೇ ನಿಮ್ಮ ದೇಹದಲ್ಲಿ ಆಶ್ರಯ ಪಡುತ್ತಾನೆ. ಆರೋಗ್ಯವಂತರ ಮೇಲೆ ಅವನಾಟ ಹೆಚ್ಚಾಗಿ ನಡೆಯದಿದ್ದರೂ ದುರ್ಬಲ ದೇಹಗಳ ಮೇಲೆ ಅಟ್ಟಹಾಸ ಮೆರೆಯುತ್ತಾನೆ.ಉದಾ: ಮಧುಮೇಹ ಅಥವಾ ಸಕ್ಕರೆ ಕಾಯಿಲೆ ರಕ್ತ ದೊತ್ತಡದ ಸಮಸ್ಯೆ ಇತ್ಯಾದಿ. ಇಂಥವರು ಇನ್ನೂ ಹೆಚ್ಚಿನ ಜಾಗ್ರತೆ ವಹಿಸಿ.
ಆದಷ್ಟೂ ಜನ ಜನ ಜಂಗುಳಿಯಿಂದ ದೂರವಿರಿ. ಮುಖಕ್ಕೆ ಮಾಸ್ಕ್ ಕೊರೋನ ತೆಕ್ಕೆಗೆ ತುತ್ತಾದವರು ಮಾತ್ರ ಹಾಕಿದರೆ ಒಳ್ಳೆಯದು. ಅವರು ತಮ್ಮ ಸೀನು ಕೆಮ್ಮುಗಳ ಮುಖಾಂತರ ರೋಗವನ್ನು ಇತರರಿಗೆ ಹರಡದಂತೆ ಅದು ತಡೆಯುತ್ತದೆ. ಆದಷ್ಟೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ವಿಟಮಿನ್ ಸಿ ಪೋಷಕಾಂಶವಿರುವ ಹಣ್ಣು ತರಕಾರಿ ಸೇವಿಸಿ.ಕಿತ್ತಳೆ ಹಣ್ಣು, ನೆಲ್ಲಿ ಕಾಯಿ ನಿಂಬೆ ಹಣ್ಣು ಇತ್ಯಾದಿ
ವಿಟಮಿನ್ ಇ ಪೋಷಕಾಂಶವಿರುವ ಬಾದಾಮಿ, ವೆಜಟೇಬಲ್ ಆಯಿಲ್, ಪಾಲಕ್, ಹಸಿರು ಸೊಪ್ಪುಗಳು, ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ವಿಟಮಿನ್ ಬಿ 6 ಅಂಶವಿರುವ ಮೊಟ್ಟೆ, ಕೋಳಿ ಮಾಂಸ, ಬ್ರೆಡ್, ಮೀನು ತರಕಾರಿಗಳು, ಸೋಯಾ ಬೀನ್ಸ್ ಬಳಸಿರಿ. ನಿಮ್ಮ ದೈನಂದಿನ ಅಡುಗೆಯಲ್ಲಿ ಅರಶಿನ, ಬೆಳ್ಳುಳ್ಳಿ ಲವಂಗ, ಶುಂಠಿ ಇತ್ಯಾದಿಗಳನ್ನು ಬಳಸಿ. ಪ್ರತಿಯೊಬ್ಬರೂ ತಮಗೆ ಕಾಯಿಲೆ ಬರದಂತೆ ಜಾಗ್ರತೆ ವಹಿಸಿ ಎಚ್ಚರಿಕೆಯಿಂದ ಇದ್ದರೆ ಕೊರೋನ ರಕ್ಕಸನನ್ನು ನಾವೆಲ್ಲರೂ ಸೇರಿ ಹಿಮ್ಮೆಟ್ಟಿಸಬಹುದು.
ವಿಧಿ
ಅವನು ಹೆಣ್ಣು ನೋಡಲು ತನ್ನ ತಂದೆ ತಾಯಿ ಜೊತೆ ಹೊರಟಿದ್ದ. ಇದುವರೆಗೂ ಅದೆಷ್ಟೋ ಹೆಣ್ಣುಗಳನ್ನು ನೋಡಿದರೂ ಯಾವುದೂ ಸರಿಯಾಗಿ ಕೂಡಿ ಬಂದಿರಲಿಲ್ಲ. ಅವನು ಒಪ್ಪಿದರೆ ಹೆಣ್ಣಿನ ಮನೆಯವರು ಯಾವ್ಯಾವುದೋ ಕಾರಣಕ್ಕೆ ಒಪ್ಪುತ್ತಿರಲಿಲ್ಲ. ಇನ್ನು ಇವನು ಬೇಡವೇ ಬೇಡ ಎಂದು ಬಿಟ್ಟ ಹೆಣ್ಣಿನ ಕಡೆಯವರು ಉತ್ಸಾಹ ತೋರಿಸುತ್ತಿದ್ದರು. ಅವನ ಜೀವನದಲ್ಲಿ ಮೊದಲಿನಿಂದಲೂ ಹೀಗೆ, ಎಲ್ಲವೂ ಉಲ್ಟಾ. ಅವನು ಬೇಕೆಂದೆದು ಅವನಿಗೆ ಸಿಗುತ್ತಿರಲಿಲ್ಲ. ಇದು ಅವನಿಗೆ ಚಿಕ್ಕವನಿದ್ದಾಗಲೇ ತಕ್ಕಮಟ್ಟಿಗೆ ಅಂದಾಜಾ ಗಿದ್ದ ರೂ ಕಾಲೇಜಿಗೆ ಓದಲು ಹೋದ ಮೇಲಂತೂ ಖಾತ್ರಿಯಾಗಿಬಿಟ್ಟಿತು. ಓದಿನಲ್ಲಿ ಸದಾ ಮುಂದಿದ್ದ ಅವನು
ಪಿ ಯು ಸಿ ನಲ್ಲಿ ಡಿಸ್ಟಿಂಕ್ಷನ್ ಬಂದೇ ಬರುತ್ತದೆ, ತಾನು ಇಂಜಿನೀಯರಿಂಗ್ ಓದುತ್ತೇನೆ ಎಂದುಕೊಂಡು ವಿಜ್ಞಾನ ವಿಷಯ ಆರಿಸಿಕೊಂಡರೂ ಅವನು ಬರೇ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದ. ಅವನಿಗೆ ಒಳ್ಳೆಯ ಕಾಲೇಜು ಕೂಡ ಸಿಗದೇ ಕೊನೆಗೆ ಬಿಕಾಂ ಓದಿ ಸಿ. ಎ ಪರೀಕ್ಷೆ ಕಟ್ಟಿದ. ಅವನು ಪರೀಕ್ಷೆಗಳನ್ನು ನಿರುತ್ಸಾಹದಿಂದಲೇ ಬರೆಯುತ್ತಿದ್ದರೂ ಅವನಿಗೆ ಆಶ್ಚರ್ಯ ಆಗುವಷ್ಟು ಅಂಕಗಳು ದೊರೆಯುತ್ತಿದ್ದವು. ಕೊನೆಗೆ ಸಿ ಎ ಕೊನೆಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಯಲ್ಲಿ ಪಾಸಾದಾಗ ಅವನಿಗಂತೂ ನಂಬಲಸಾಧ್ಯವಾಯಿತು. ಕೂಡಲೇ ಒಳ್ಳೆಯ ಕೆಲಸ ಕೂಡ ಸಿಕ್ಕಿತು. ಪ್ರೀತಿಸಿ ಮದುವೆಯಾಗಬೇಕು ಎಂಬ ಹಂಬಲದದಿಂದ ಕಾಲೇಜಿನ ಅದೆಷ್ಟೋ ಹುಡುಗಿಯರ ಹಿಂದೆ ಬಿದ್ದರೂ ಯಾರೂ ಅವನನ್ನು ಇಷ್ಟ ಪಡಲಿಲ್ಲ. ಕೊನೆಗೆ ತನ್ನ ಹಣೆಯಲ್ಲಿ ಪ್ರೀತಿಸಿ ಮದುವೆಯಾಗಿ ಬರೆದಿಲ್ಲವೇನೋ ಎಂದು ನಿರಾಶನಾಗಿ ಅಪ್ಪ ಅಮ್ಮ ನೋಡಿದ ಹೆಣ್ಣನ್ನೇ ಮದುವೆಯಾಗುವುದು ಎಂದು ನಿರ್ಧರಿಸಿದ್ದ. ಅವರು ತೋರಿಸುವ ಹೆಣ್ಣುಗಳನ್ನು ನೋಡುವುದೇ ಅವನ ಕೆಲಸವಾಯಿತು. ಇಂದೂ ಕೂಡ ಹಾಗೇ ಹೊರಟಿದ್ದ.
ಈ ಹುಡುಗಿ ಹೇಗೆ ಇರಲಿ, ನನಗವಳು ಬೇಡ ಫೋಟೋ ನೋಡಿದರೆ ಗೊತ್ತಾಗುತ್ತದೆ
ಅವಳೆಷ್ಟು ಅಲಂಕಾರ ಪ್ರಿಯಳು ಅಂತ. ನನಗೆ ಸರಳವಾಗಿರುವ ಹುಡುಗಿ ಬೇಕು, ನೊಡಲೇನೋ ಸುಂದರವಾಗಿದ್ದಾಳೆ, ಅವಳು ನನ್ನನ್ನು ಒಪ್ಪಬೇಕಲ್ಲ, ಅವಳು ನನ್ನನ್ನು ನಿರಾಕರಿಸುವ ಮೊದಲೇ ನಾನೇ ನಿರಾಕರಿಸಿ ಬಿಡಬೇಕು ಎಂದೆಲ್ಲ ಯೋಚಿಸಿದ.
ಹುಡುಗಿ ಮನೆಯಲ್ಲಿ ಭವ್ಯ ಸ್ವಾಗತ ಕಂಡು ಖುಷಿಯಾದರೂ ಅದೇನೋ ಪೆಚ್ಚು ಕಳೆ ಎಲ್ಲರ ಮುಖದ ಮೇಲಿತ್ತು. ಬಹುಶಃ ನಾನಿವರಿಗೆ ಇಷ್ಟವಾಗಿಲ್ಲ ಅಂತ ಕಾಣುತ್ತೆ, ಪರವಾಗಿಲ್ಲ ನಾನೂ ಹುಡುಗಿ ಬೇಡ ಎಂದು ಮೊದಲೇ ಹೇಳುತ್ತೇನೆ ಎಂದುಕೊಂಡ.
ಹುಡುಗಿ ಬಂದಾಗ ಅವನಿಗೆ ಅಚ್ಚರಿಯಾಯಿತು. ಅವಳು ಸರಳವಾಗಿ ಅಲಂಕಾರ ಮಾಡಿಕೊಂಡಿದ್ದಳು. ಫೋಟೋ ಗಿಂತ ನೋಡೋಕೆ ಚೆನ್ನಾಗಿದ್ದಾಳೆ ಅಂತ ಅಂದುಕೊಂಡ. ರೂಪವೇನೋ ಹಿಡಿಸಿತು ಆದರೆ ಗುಣ. ಮಾತನಾಡಿ ನೋಡಿದ. ಅವಳ ಗುಣ ಸ್ವಭಾವ ಕೂಡ ಅವನಿಗೆ ಹಿಡಿಸಿತು. ಆಗ ತಟ್ಟನೆ ಅವನಿಗೆ ನೆನಪಾಯಿತು, ತಾನು ಇಷ್ಟ ಪಟ್ಟಿದ್ದೆಲ್ಲ ಸಿಗುವುದಿಲ್ಲ ಅಂದರೆ ಈ ಹುಡುಗಿ ನನಗೆ ಸಿಗಲಾರಳು ಎಂದು ಬೇಜಾರು ಪಟ್ಟುಕೊಂಡ. ಅವನ ತಾಯಿ ಹುಡುಗಿ ಫೋಟೋಗಿಂತ ಚೆನ್ನಾಗಿದ್ದಾಳೆ ಎಂದು ಹೇಳಿದಾಗ ಹುಡುಗಿಯ ಅಜ್ಜಿ, “ಅವಳ ಅಮ್ಮ ಅಲಂಕಾರ ಪ್ರಿಯೆ, ಅದಕ್ಕೆ ಇವಳು ಬೇಡ ಅಂದ್ರೂ ಮೇಕಪ್ ಮಾಡಿಸಿ ಫೋಟೋ ತೆಗೆಸಿದ್ದು” ಎನ್ನುತ್ತಾ ಸೊಸೆ ಕಡೆ ನೋಡಿ “ನೋಡಿದ್ಯಾ, ಇನ್ಮೇಲೆ ಹಾಗೆಲ್ಲ ಮೇಕಪ್ ಮಾಡಿಸಬೇಡ. ಅವಳು ಹಾಗೇ ಚೆನ್ನಾಗಿದ್ದಾಳೆ” ಎಂದಾಗ ಅವನಿಗೆ ಟುಸ್ಸೆನಿಸಿತು. ಅಂದರೆ ಅಜ್ಜಿಗೆ ನಾನು ಇಷ್ಟವಾಗಿಲ್ಲ ಅಂದಾಯಿತು ಅಂತ ಅನಿಸಿ ಸಪ್ಪೆ ಮೋರೆ ಹಾಕಿದ. ಅವನ ತಾಯಿ ಇವನ ಬಳಿ ಮೆಲುದನಿಯಲ್ಲಿ” ಏನೋ ನಿಂಗೆ ಹಿಡಿಸಿ ದ್ಲೇನೋ ಅಂತ ಕೇಳಿದಾಗ “ಮೊದ್ಲು ಅವರನ್ನು ಕೇಳು, ಇಷ್ಟೊಂದು ಹುಡುಗೀರನ್ನ ನೋಡಿದಾಗ ಆದ ಅನುಭವ, ಅವಮಾನ ಸಾಕು. ಮೊದ್ಲು ಅವರನ್ನೇ ಕೇಳು ಎಂದವನು ಪಿಸುದನಿಯಲ್ಲಿ ನುಡಿದಾಗ ಅವನ ತಾಯಿ ಹುಡುಗಿಯನ್ನು ನೇರವಾಗಿ ಕೇಳಿದರು. “ಏನಮ್ಮ ನನ್ನ ಮಗ ಇಷ್ಟವಾದನಾ” ಆಕೆ ನಿಧಾನವಾಗಿ ಹೌದೆಂದು ತಲೆಯಾಡಿಸಿದಳು. ಒಂದು ಕ್ಷಣ ಅವನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅಂದರೆ ಹುಡುಗಿಗೂ ನಾನು ಇಷ್ಟವಾದೇ ಅಂದರೆ ಈ ಮದುವೆ ನಡೆಯುತ್ತದೆ, ಕೊನೆಗೂ ನನ್ನ ಜೀವನದಲ್ಲಿ ಉಲ್ಟಾ ನಡೆಯುವುದು ನಿಲ್ಲುತ್ತೆ ಎಂದು ಬಹಳ ಸಂತೋಷ ಪಟ್ಟ. ಅದೇ ಖುಷಿಯಲ್ಲಿ ನನಗೂ ಒಪ್ಪಿಗೆ ಅಂತ ಗಟ್ಟಿಯಾಗಿ ಹೇಳಿದಾಗ ಎಲ್ಲರೂ ನಕ್ಕರು. ಹುಡುಗಿ ಮನೆಯವರು ಇವತ್ತೇ ನಿಶ್ಚಿತಾರ್ಥ ನಡೆಯಲಿ ಎಂದಾಗ ಇವನಿಗೆ ರೋಗಿ ಬಯಸಿದ್ದೂ ಹಾಲು ವೈದ್ಯರೂ ಹೇಳಿದ್ದೂ ಹಾಲು ಎಂದಂತಾಯಿತು. ಸರಳವಾಗಿ ನಿಶ್ಚಿತಾರ್ಥ ದ ಶಾಸ್ತ್ರ ಕೂಡ ಮುಗಿಯಿತು.
ಮದುವೆ ಗೊತ್ತಾದ ಮೇಲಂತೂ ಅವನು ಆಕಾಶದಲ್ಲಿ ತೇಲಾಡುತ್ತಿದ್ದ. ಅಬ್ಬಾ
ಇನ್ನೇನೂ ಚಿಂತೆಯಿಲ್ಲ, ಇನ್ನು ಮುಂದೆ ತಾನು ಇಷ್ಟ ಪಟ್ಟಿದ್ದು ತನಗೆ ಸಿಗುತ್ತದೆ. ಇನ್ನು ತನ್ನ ಜೀವನದಲ್ಲಿ ಉಲ್ಟಾ ಆಗಲಿಕ್ಕಿಲ್ಲ. ಸುಂದರವಾದ ಒಳ್ಳೆ ಗುಣಗಳಿರುವ ಸರಳವಾದ ಹುಡುಗಿ ತನಗೆ ಸಿಕ್ಕಿದ್ದಾಳೆ ಎಂದು ಸ್ನೇಹಿತರಿಗೆ ಹೇಳಿಕೊಂಡು ತಿರುಗಿದ. ಅವನ ಸ್ನೇಹಿತರು ಕೊನೆಗೂ ಜಾಕ್ ಪಾಟ್ ಹೊಡೆದೆಯಲ್ಲೋ ಎಂದು ಮತ್ಸರದಿಂದ ನುಡಿದಾಗ ಅವನು ಉಬ್ಬಿಹೋದ.
ಮದುವೆ ಆದಷ್ಟೂ ಬೇಗನೆ ಆದರೆ ಒಳ್ಳೆಯದು ಎಂದು ಅಮ್ಮನನ್ನು ಕಾಡಿ ಬೇಡಿ, ತಿಂಗಳಲ್ಲೇ ಮದುವೆ ನಿಶ್ಚಯಿಸಿದ. ಹುಡುಗಿ ಜೊತೆ ದಿನವೂ ಫೋನಿನಲ್ಲಿ ಮಾತು, ವಾರಕ್ಕೊಮ್ಮೆ ಪಾರ್ಕ್ ಸಿನಿಮಾ ಹೋಟೆಲು ಎಂದೆಲ್ಲ ಸುತ್ತಾಡಿ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡ.
ಮದುವೆ ದಿನವಂತೂ ಅವನ ಸಂತೋಷ ಹೇಳತೀರದು. ಮದುವೆ ಮಂಟಪದಲ್ಲಿ ತನ್ನ ಮನದರಸಿ ಬರುವುದನ್ನೇ ಕಾದು ಕುಳಿತ. ಆದರೆ ಹುಡುಗಿಯ ಅಲಂಕಾರ ಮುಗಿದಿಲ್ಲ, ಬಟ್ಟೆ ಸಿಗ್ತಾ ಇಲ್ಲ ಅಂತ
ಏನೇನೋ ಸಬೂಬು ಹೇಳುತ್ತ ಇನ್ನಷ್ಟು ಕಾಯುವಂತಾದಾಗ ಅವನಿಗೆ ಯೋಚನೆ ಯಾಯಿತು. ದೇವರೇ ಕೊನೆ ಘಳಿಗೆಯಲ್ಲಿ ಉಲ್ಟಾ ಮಾಡಬೇಡಪ್ಪ, ನಂಗೆ ಈ ಹುಡುಗಿ ಜೊತೆ ಮದುವೆಯಾಗೋ ಯೋಗ ಕರುಣಿಸು ಅಂತ ದೇವರಲ್ಲಿ ಬೇಡಿಕೊಂಡ.
ಕೊನೆಗೆ ಮುಹೂರ್ತ ಮೀರುವ ಸಮಯವಾದಾಗ ಪುರೋಹಿತರು ಹೆಣ್ಣನ್ನು ಬೇಗನೆ ಕರೆದುಕೊಂಡು ಬನ್ನಿ ಮುಹೂರ್ತ ಮೀರುತ್ತಿದೆ, ಆಮೇಲೆ ಈ ಮದುವೆ ನಡೆಯಲ್ಲ ಎಂದಾಗ ಹುಡುಗಿಯ ತಂದೆ ಮುಂದೆ ಬಂದು ತಲೆ ತಗ್ಗಿಸಿ ನಿಂತು ಪುರೋಹಿತರೇ, ಈ ಮದುವೆ ನಡೆಯುವುದಿಲ್ಲ ಎಂದಾಗ ಅವನಿಗೆ ಎದೆ ಧಸಕ್ಕೆಂದಿತು. “ಅರೆ, ಯಾಕೆ ಏನಾಯಿತು ಅವಳ ಜೊತೆ ನಾನು ಮಾತಾಡಿದ್ದೆ, ಎಲ್ಲೆಲ್ಲೋ ಸುತ್ತಾಡಿದೆವು, ಈಗ ಅಂಥಾದ್ದು ಏನಾಯ್ತು” ಎಂದವನು ಆತಂಕದಿಂದ ಕೇಳಿದಾಗ “ಅವಳು ಪ್ರೀತಿಸಿದವನ ಜೊತೆ ಓಡಿ ಹೋದಳು, ನಮ್ಮ ಮರ್ಯಾದೆ ಕಳೆದು ಬಿಟ್ಟಳು. ಈ ಮದುವೆ ಒಪ್ಪಿಕೊಂಡ ಹಾಗೆ ನಾಟಕ ಮಾಡಿ ನಮ್ಮ ಮುಖಕ್ಕೆ ಮಸಿ ಬಳಿದು ಬಿಟ್ಟಳು” ಎಂದವರು ಬಿಕ್ಕಿದಾಗ ಅವನಿಗೆ ಭೂಮಿಯೇ ಬಾಯಿ ಬಿಟ್ಟಂತಾಯಿತು. ಆದರೂ ಕೂಡ ಅವನ ಜೀವನದಲ್ಲಿ ಇದುವರೆಗೂ ಅವನಿಷ್ಟದ ವಿರುದ್ಧ ನಡೆಯುವುದೆಲ್ಲ ಅವನ ಒಳ್ಳೆಯದಕ್ಕೆ ಎಂದು ಮಾತ್ರ ಅವನಿಗರಿವಾ ಗಲೇ ಇಲ್ಲ. ಅವನು ತನ್ನ ಗ್ರಹಚಾರ, ದುರಾದೃಷ್ಟ ಎಂದೆಲ್ಲ ಹಳಿದುಕೊಂಡಿದ್ದರೂ ವಿಧಿ ಮಾತ್ರ ಪ್ರತೀ ಸಲವೂ ಅವನನ್ನು ಕಷ್ಟದಿಂದ ಪಾರು ಮಾಡಲು ಪ್ರಯತ್ನಿಸುತ್ತಿತ್ತು.
ಹರುಷವಾಗಿದೆ ಮನಕೆ
ಪ್ರಿಯ ಓದುಗರೇ,
ನಾನು ಬರೆದ ಕಸ ಎಂಬ ಕಥೆಯು ಈ ತಿಂಗಳ ಅಂದರೆ ಜನವರಿ ತಿಂಗಳ, ನಿಮ್ಮೆಲ್ಲರ ಮಾನಸ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಅನೇಕ ವರುಷ ಗಳಿಂದ ಈ ಬ್ಲಾಗ್ ನಲ್ಲಿ ಕಥೆಗಳನ್ನು ಬರೆಯುತ್ತಿದ್ದರೂ ಇದುವರೆಗೂ ಯಾವ ಪತ್ರಿಕೆಗೂ ಕಳುಹಿಸುವ ಸಾಹಸ ಮಾಡಿರಲಿಲ್ಲ. ಆದರೆ ನಿಮ್ಮೆಲ್ಲರ ಮಾನಸ ಎಂಬ ಪತ್ರಿಕೆ ಓದಿದ ಮೇಲೆ ಯಾಕೋ ಮನಸ್ಸಿಗೆ ಹತ್ತಿರವಾಗಿದೆ ಎಂದೆನಿಸಿ ಕಥೆಯನ್ನು ಕಳುಹಿಸಿದ್ದೆ. ಒಂದು ತಿಂಗಳಲ್ಲೇ ನನ್ನ ಕಥೆ ಪ್ರಕಟಗೊಳ್ಳಲು ಆಯ್ಕೆಗೊಂಡಿದೆ ಎಂದು ಸಂಪಾದಕರಿಂದ ಸಂದೇಶ ಬಂದಾಗ ಬಹಳ ಸಂತೋಷ ವಾಯಿತು. ಬಹು ದಿನಗಳ ಕನಸು ಇಂದು ನನಸಾಗಿದೆ. ನಿಮ್ಮೆಲ್ಲರ ಮಾನಸ ಪತ್ರಿಕೆಗೆ ಧನ್ಯವಾದಗಳು
ಈರುಳ್ಳಿ ಬಳಸದೇ ಮಾಡುವ ಅಡುಗೆಗಳು.
ಈರುಳ್ಳಿ ಬಳಸದೇ ಅಡುಗೆ ಮಾಡಿ ಈರುಳ್ಳಿ ಬೆಲೆಯನ್ನು ಜನರೇ ನಿಯಂತ್ರಿಸಲು ಸಾಧ್ಯ. ನಿತ್ಯದ ಅಡುಗೆಗಳನ್ನು ಈರುಳ್ಳಿ ಬಳಸದೇ ಮಾಡಿ. ಈರುಳ್ಳಿ ಬೆಲೆ ತಾನಾಗಿಯೇ ಕಡಿಮೆಯಾಗುತ್ತದೆ. ನನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಹಲವು ಬಗೆಯ ಖಾದ್ಯಗಳನ್ನು ಪರಿಚಯಿಸಿದ್ದೇನೆ. ಅವುಗಳಲ್ಲಿ ಕೆಲವು ಖಾದ್ಯಗಳಿಗೆ ಈರುಳ್ಳಿ ಬೇಕಿಲ್ಲ. ಚಿಕ್ಕದಾಗಿ ಸರಳವಾಗಿರುವ ವಿಡಿಯೋ ಗಳು ಜೊತೆಗೆ ಅಷ್ಟೇ ಸುಲಭವಾಗಿ ಮಾಡುವಂತಹ ಅಡುಗೆಗಳು. ಇಲ್ಲಿ ಕೆಲವೊಂದನ್ನು ಅಷ್ಟೇ ಪರಿಚಯಿಸುತ್ತಿದ್ದೇವೆ. ಉಳಿದವುಗಳನ್ನು ನೋಡಲು ಎಪಿಕ್ ಫ್ಲೇವರ್ಸ್ ಯೂ ಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ.https://www.youtube.com/channel/UCbQ6YinNNDEtWiIKLeuH5cA
ಬೆಂಡೆಕಾಯಿ ಮಸಾಲ ಫ್ರೈ :
ಇದಕ್ಕೆ ಈರುಳ್ಳಿಯ ಆವಶ್ಯಕತೆ ಇರುವುದಿಲ್ಲ.ಖಾರವಾಗಿದ್ದು ಅನ್ನದ ಜೊತೆ, ಚಪಾತಿ ಜೊತೆ, ದೋಸೆ ಜೊತೆ ತಿನ್ನಲು ಬಹಳ ರುಚಿ.ಇದನ್ನು ತಯಾರಿಸುವ ವಿಧಾನ ತಿಳಿಯಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.
ಮುಳ್ಳು ಸೌತೆ ಕಾಯಿ ಚಟ್ನಿ :
ಈ ಅಡುಗೆಗೆ ಈರುಳ್ಳಿ ಬೇಕಿಲ್ಲ, ಗ್ಯಾಸ್ ಕೂಡ ಬೇಕಿಲ್ಲ. ಅನ್ನದ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ತಯಾರಿಸಲೂ ಬಹಳ ಸುಲಭ. ಇದು ಮುಖ್ಯವಾಗಿ ಜಿ ಎಸ್ ಬಿ ಕೊಂಕಣಿ ಸಮಾಜದ ಪ್ರಿಯ ಖಾದ್ಯವಾಗಿದೆ. ಇದನ್ನು ತಯಾರಿಸುವ ವಿಧಾನ ತಿಳಿಯಲು ಈ ಕೆಳಗಿನ ವಿಡಿಯೋ ನೋಡಿರಿ.
ಬಾಳೆಕಾಯಿ ಪೋಡಿ.
ಈ ಅಡುಗೆಗೂ ಈರುಳ್ಳಿ ಬೇಕಿಲ್ಲ. ತಯಾರಿಸಲೂ ಸುಲಭ. ಜಾಸ್ತಿ ಎಣ್ಣೆಯೂ ಬೇಡ. ಅನ್ನದ ಜೊತೆ ಒಳ್ಳೆಯ ಕಾಂಬಿನೇಶನ್. ಇದನ್ನು ತಯಾರಿಸಲೂ ಸುಲಭ. ಬೇಗನೆ ತಯಾರಾಗುತ್ತದೆ.
ಇದನ್ನು ತಯಾರಿಸುವ ವಿಧಾನವನ್ನು ತಿಳಿಯಲು ಈ ಕೆಳಗಿನ ವಿಡಿಯೋ ವೀಕ್ಷಿಸಿರಿ.
ದೊಣ್ಣೆ ಮೆಣಸಿನಕಾಯಿ ಬಜ್ಜಿ:
ಈ ಖಾದ್ಯವನ್ನು ಅನ್ನದ ಜೊತೆ ತಿನ್ನಲು ರು ಚಿಕರವಾಗಿರುತ್ತದೆ. ಬಿಸಿಯಾಗಿದ್ದಾ ಗ ಗರಿಗರಿಯಾಗಿ ಚೆನ್ನಾಗಿರುತ್ತದೆ. ಈ ಅಡುಗೆಯನ್ನೂ ಮಾಡುವ ವಿಧಾನ ತಿಳಿಯಲು ಈ ವೀಡಿಯೊವನ್ನು ನೋಡಿರಿ.
ಆಲೂಗಡ್ಡೆ ಪಲ್ಯ:
ಅತೀ ಸುಲಭವಾಗಿ ಹಾಗೂ ಬೇಗನೆ ಮಾಡಬಹುದಾದ ಪಲ್ಯ. ಅನ್ನ, ಚಪಾತಿ, ದೋಸೆ ಜೊತೆ ರುಚಿಕರವಾಗಿರುತ್ತದೆ. ಈರುಳ್ಳಿಯ ಅಗತ್ಯವಿಲ್ಲ. ಉದ್ದಿನ ಹಪ್ಪಳ ದ ಜೊತೆ ತಿಂದರೆ ಆ ರುಚಿಯನ್ನು ಮರೆಯಲಾರಿರಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ಕೆಳಗಿನ ವೀಡಿಯೊ ನೋಡಿರಿ.
ಇನ್ನು ಮುಂದೆಯೂ ಅನೇಕ ಅಡುಗೆ ವೀಡಿಯೋ ಗಳನ್ನು ನನ್ನ ಯು ಟ್ಯೂಬ್ ಚಾನಲ್ ನಲ್ಲಿ ಹಾಕಲಿದ್ದೇನೆ. ತಪ್ಪದೆ ವೀಕ್ಷಿಸಿ.