ನೋಟು ನಿಷೇಧ

ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳು ನಿಷೇಧವಾಗಿ ನಿನ್ನೆಗೆ 42 ದಿನಗಳು ಕಳೆದವು. ನಾನು ನನ್ನಲ್ಲಿದ್ದ ಎರಡು ಪಿಂಕ್ ನೋಟುಗಳನ್ನು ತೆಗೆದುಕೊಂಡು ಚಿಲ್ಲರೆ ಮಾಡಿಸಲು ಬ್ಯಾಂಕಿನತ್ತ ಹೆಜ್ಜೆ ಹಾಕಿದೆ. ಅಲ್ಲಿನ ಜನಜಂಗುಳಿ ನೋಡಿ ಜಾತ್ರೆಯ ನೆನಪಾಯಿತು. ನವೆಂಬರ್ 9 ರಂದು ಜನಜಂಗುಳಿ ಹೇಗಿತ್ತೋ ಹಾಗೆಯೇ ಇನ್ನೂ ಇದೆ. ಪರಿಸ್ಥಿತಿ ಕೊಂಚವಾದರೂ ಬದಲಾಗಿಲ್ಲವಲ್ಲ ಎಂದು ಆಶ್ಚರ್ಯವಾಯಿತು. ನನ್ನ ಮುಸ್ಲಿಂ ಗೆಳತಿ ಕೂಡ ಸರತಿ ಸಾಲಿನಲ್ಲಿ ನಿಂತಿದ್ದಳು.

ಅವಳನ್ನು ಕಂಡು ಸಂತಸದಿಂದ ಹಬ್ಬ ಹೇಗಾಯ್ತು ಎಂದು ಕೇಳಿದೆ. ಅದಕ್ಕವಳು, ನಮ್ಮ ಹಬ್ಬವೆಲ್ಲ ಕ್ಯೂನಲ್ಲಿ ನಿಂತೇ ಕಳೆದು ಹೋಯಿತು. ದುಡ್ಡಿಲ್ಲದೆ ಹಬ್ಬ ಹೇಗೆ ಮಾಡಲಿ, ಮನೆಯವರೆಲ್ಲ ಸೇರಿ ಕ್ಯೂನಲ್ಲಿ ನಿಂತೂ ನಿಂತೂ ಕಾಲು ನೋಯಿಸಿ ಕೊಂಡಿದ್ದೇ ಬಂತು. ಬಡವರಿಗೆ ದಾನ ಮಾಡೋದಿಕ್ಕೆ ನಮ್ಮ ಬಳಿಯೇ ದುಡ್ಡಿಲ್ಲ, ಎಂಥ ಗತಿ ಬಂದಿತು ನಮಗೆ ಎನ್ನುವಾಗ ಅವಳ ಕಣ್ಣಂಚಿನಲ್ಲಿ ನೀರು ಜಿನುಗಿತು. ಅವಳಿಗೆ ಹೇಗೆ ಸಮಾಧಾನ ಮಾಡಬೇಕೆಂದು ನನಗೆ ತಿಳಿಯಲಿಲ್ಲ. ನಮ್ಮೆಲ್ಲರ ಪರಿಸ್ಥಿತಿಯೂ ಅವಳಿಗಿಂತ ಭಿನ್ನವಾಗಿಲ್ಲ. ನಾನು ಕ್ಯೂನಲ್ಲಿ ನಿಂತುಕೊಂಡೆ. ನನ್ನ ಸರದಿ ಬಂದಾಗ ಚಿಲ್ಲರೆ ಕೊಡಪ್ಪ ಎಂದು ಪಿಂಕ್ ನೋಟು ಕೊಟ್ಟರೆ ನೂರು ಹಾಗೂ ಐವತ್ತರ ನೋಟುಗಳಿಲ್ಲ, ಹತ್ತರ ಬಂಡಲ್ ಆಗಬಹುದೇ ಎಂದು ಆತ ಕೇಳಿದಾಗ ಇಷ್ಟು ದಿನಗಳಾದರೂ ಪರಿಸ್ಥಿತಿ ಕೊಂಚವೂ ಸುಧಾರಿಸಿಲ್ಲವಲ್ಲ ಎಂದು ಆಶ್ಚರ್ಯ ವಾಯಿತು.

ಕಾಳಧನಿಕರನ್ನು ಮಟ್ಟ ಹಾಕಲು ಮಾಡಿದ ನೋಟು ನಿಷೇಧ ಸಾಮಾನ್ಯ ಜನರ ಬದುಕನ್ನು ಘೋರವಾಗಿಸಿ ಬಿಟ್ಟಿತು. ಹಳೆಯ ನೋಟುಗಳ ನಾಲ್ಕು ಸಾವಿರ ರೂಪಾಯಿಗಳನ್ನು ಮಾತ್ರ ವಿನಿಮಯ ಮಾಡಿಸಿಕೊಂಡು ಉಳಿದ ಹಣವನ್ನೆಲ್ಲ ತಮ್ಮ ಖಾತೆಗೆ ಜಮೆ ಮಾಡಿದ ರೈತರಿರ ಕೈಗೆ ದಕ್ಕಿದ್ದು ಎರಡು ಪಿಂಕ್ ನೋಟುಗಳು. ಅದನ್ನು ಚಿಲ್ಲರೆ ಮಾಡಿಸಲು ಕೊಟ್ಟ ಬ್ಯಾಂಕುಗಳಿಗೆ ಹೋದರೂ ಚಿಲ್ಲರೆ ಇಲ್ಲವೆನ್ನುತ್ತಿದ್ದಾರೆ. ಇದರಿಂದಾಗಿ ರೈತರಿಗೆ ತಾವು ಬೆಳೆದ ಫಸಲನ್ನು ಕಟಾವು ಮಾಡಿಸಲಾಗುತ್ತಿಲ್ಲ. ಕಷ್ಟ ಪಟ್ಟು ಹೇಗೋ ಕಟಾವು ಮಾಡಿಸಿ ಮಾರುಕಟ್ಟೆಗೆ ತಂದರೆ ಕೊಳ್ಳುವವರಿಲ್ಲ ಕಾರಣ ಕೊಳ್ಳುವವರ ಬಳಿ ಹಣವಿಲ್ಲ. ಕೂಲಿಯಾಳುಗಳಿಗೆ ಕೆಲಸವೇ ದೊರಕುತ್ತಿಲ್ಲ. ಕೆಲಸ ಸಿಕ್ಕಿದರೂ ಸಂಬಳ ಸಿಗುತ್ತಿಲ್ಲ. ಈ ಪರಿಸ್ಥಿತಿಯ ದುರ್ಲಾಭ ಮಾಡಿಕೊಂಡು ಕೆಲವರು ಕೆಲಸದವರಿಗೆ ಕಡಿಮೆ ಸಂಬಳ ಕೊಡುತ್ತಿದ್ದಾರೆ. ಆದರೂ ಅವರು ಪಾಪ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಕೆಲಸ ಮಾಡುತ್ತಿದ್ದಾರೆ. ಹೊಟ್ಟೆ ಪಾಡಿಗೋಸ್ಕರ ಕೆಲಸ ಮಾಡಲೇ ಬೇಕಲ್ಲವೇ.

ಇನ್ನು ಅನೇಕ ಅಶಕ್ತರು, ಅನಾರೋಗ್ಯ ಪೀಡಿತರು, ವಯಸ್ಸಾದವರು ಬ್ಯಾಂಕಿನ ಕ್ಯೂನಲ್ಲಿ ನಿಲ್ಲಲಾಗದೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ವ್ಯಾಪಾರಿಗಳು ಗ್ರಾಹಕರಿಗಾಗಿ ಕಾದು ಕಾದೂ ಸೋತುಹೋದರೇ ವಿನಃ ಒಂದು ಪೈಸೆಯ ವ್ಯಾಪಾರ ಕೂಡ ಆಗದೆ ಒದ್ದಾಡುತ್ತಿದ್ದಾರೆ. ಸಾಲಸೋಲ ಮಾಡಿ ಬಂಡವಾಳ ಹಾಕಿ ಅಂಗಡಿ ಹಾಕಿದವರ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾರಿಗೂ ವ್ಯಾಪಾರವಿಲ್ಲ. ಯಾರ ಮುಖದಲ್ಲೂ ಲವಲವಿಕೆ ಇಲ್ಲ, ಇನ್ನು ದುಡ್ಡಿದ್ದವರ ಪರಿಸ್ಥಿತಿಯೂ ಅಷ್ಟೇ. ತಮ್ಮದೇ ಹಣ ಬ್ಯಾಂಕಿನಲ್ಲಿ ಬೇಕಾದಷ್ಟು ಇದ್ದರೂ ತೆಗೆಯಲಾರದಂಥ ಪರಿಸ್ಥಿತಿ. ಆದರೂ ಅವರಿಗೆಲ್ಲ ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮುಂತಾದ ಸೌಲಭ್ಯಗಳಿದ್ದುದರಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು. ತೀವ್ರವಾದ ಹೊಡೆತ ಬಿದ್ದಿದ್ದು ಸಾಮಾನ್ಯ ಜನರಿಗಷ್ಟೇ. ಆದರೂ ಜನ ಎಲ್ಲವನ್ನು ಸಹಿಸಿಕೊಂಡು ದೇಶಕ್ಕೆ ಒಳಿತಾಗುವುದಾದರೆ ಆಗಲಿ ಎಂದು ಸುಮ್ಮನಿದ್ದಾರೆ.

ಆದರೆ ಮೋದಿಯವರು ಹೇಳಿದಂತೆ ಡಿಸೆಂಬರ್ ಕಳೆದ ಬಳಿಕ ಎಲ್ಲವೂ ಸರಿಯಾಗುವುದೇ ಎಂದು ಈಗೀಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ನವೆಂಬರ್ 8 ರಂದು ಮೋದಿ ಹೇಳಿದ ಮಾತಿನಂತೆ ಇದುವರೆಗೂ ನಡೆದಿಲ್ಲ. ಅವರಿಂದ ಕಾಳ ಧನಿಕರನ್ನು ಮಟ್ಟ ಹಾಕಲು ಆಗಲಿಲ್ಲ. ಸರಕಾರ ಚಾಪೆ ಕೆಳಗೆ ತೂರಿದರೆ ಕಾಳಧನಿಕರು ರಂಗೋಲಿಯಡಿ ತೂರಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಇರುವ ಕಾಳಧನಿಕರೆಲ್ಲ ಏನೇನೋ ಉಪಾಯ ಮಾಡಿ ತಮ್ಮಲ್ಲಿದ್ದ ಹಳೆಯ ನೋಟುಗಳನ್ನೆಲ್ಲ ಬದಲಾಯಿಸಿಕೊಂಡರು. ಅವರ ಪ್ರಯತ್ನಗಳನ್ನು ನಿಷ್ಫಲಗೊಳಿಸಲು ಸರಕಾರ ದಿನಕ್ಕೊಂದು ಆದೇಶ ಹೊರಡಿಸಿತು. ಆದರೆ ಅವರ ಆದೇಶಗಳಿಂದ ಸಾಮಾನ್ಯ ಜನರಿಗೆ ಮತ್ತಷ್ಟು ಹೊಡೆತಗಳು ಬಿದ್ದವೇ ಹೊರತು ಕಾಳಧನಿಕರು ಮಾತ್ರ ಆರಾಮವಾಗಿ ಇದ್ದಾರೆ.

ನವೆಂಬರ್ 8 ರಂದು ಮೊದಲಿಗೆ ಕೇವಲ ನಾಲ್ಕು ಸಾವಿರ ರೂಪಾಯಿಗಳನ್ನಷ್ಟೇ ವಿನಿಮಯ ಮಾಡಿಕೊಳ್ಳಬಹುದು ನವೆಂಬರ್ 24ರ ಬಳಿಕ ಇದನ್ನು ಸಡಿಲಿಸಲಾಗುವುದು ಎಂದರು. ಆದರೆ ದಿನಗಳು ಕಳೆದಂತೆ ನಿಯಮಗಳು ಮತ್ತಷ್ಟು ಬಿಗಿಯಾಗುತ್ತಲೇ ಹೋದವು. ಡಿಸೆಂಬರ್ 30ರವರೆಗೆ ಕಾಲಾವಕಾಶವಿದೆ ಜನರು ಆತಂಕ ಪಡಬೇಕಿಲ್ಲ ಎಂದರು. ಆದರೆ ನಿನ್ನೆ ಇದುವರೆಗೂ ಯಾಕೆ ಹಳೆನೋಟುಗಳನ್ನು ಜಮೆ ಮಾಡಿಲ್ಲ ಎನ್ನುವುದಕ್ಕೆ ಜನ ಸ್ಪಷ್ಟೀಕರಣ ನೀಡಬೇಕು ಎನ್ನುತ್ತಿದ್ದಾರೆ. ಈ ಲೇಖನ ಬರೆಯುತ್ತಿದ್ದಂತೆ ಟೀವಿಯಲ್ಲಿ ಇನ್ನು ಮುಂದೆ ಹಳೇ ನೋಟುಗಳನ್ನು ಖಾತೆಗಳಲ್ಲಿ ಜಮೆ ಮಾಡುವಾಗ ಸ್ಪಷ್ಟೀಕರಣ ನೀಡಬೇಕಾಗಿಲ್ಲ ಜೊತೆಗೆ ಜನರು ತಮ್ಮ ಬಳಿ ಇದ್ದ ಹಣವನ್ನೆಲ್ಲ ಜಮೆ ಮಾಡಬಹುದು ಅದಕ್ಕೆ ಯಾವುದೇ ಮಿತಿ ಇಲ್ಲ ಎಂದು ಜನರ ತೀಕ್ಷ್ಣ ಪ್ರತಿಕ್ರಿಯೆಗೆ ಬೆದರಿ ತಮ್ಮ ಆದೇಶವನ್ನು ಹಿಂಪಡೆದರು ಎಂದು ಮಾಹಿತಿ ಬಂದಾಗ ಬಗ್ಗಿದವನಿಗೆ ಗುದ್ದು ಹೆಚ್ಚು ಎಂಬ ನಾಣ್ನುಡಿ ನೆನಪಾಯಿತು.

ಜನರಲ್ಲಿ ಪ್ರಮುಖವಾಗಿ ಇದ್ದ ನೋಟುಗಳನ್ನು ನಿಷೇಧ ಮಾಡಿದರೆ ಅದಕ್ಕೆ ಬದಲಾಗಿ ಸಣ್ಣ ನೋಟುಗಳನ್ನುಮೊದಲೇ ಬ್ಯಾಂಕು ಗಳಿಗೆ ಸರಕಾರ ಒದಗಿಸಬೇಕಿತ್ತು. ಸರಕಾರ ಅದನ್ನೂ ಮಾಡಲಿಲ್ಲ.ಇದೆಲ್ಲವನ್ನು ನೋಡುತ್ತಿದ್ದರೆ ಮೋದಿಯವರಿಗೆ ನೋಟು ನಿಷೇಧ ಮಾಡಿದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿರಲಿಲ್ಲವೋ ಅಥವಾ ಅವರು ಕೇವಲ ಕಾಳಧನಿಕರನ್ನು ಮಾತ್ರ ಗುರಿಯಾಗಿಟ್ಟುಕೊಂಡರೋ ಎಂದು ಸಂಶಯ ಮೂಡುತ್ತದೆ. ಅವರು ಕೊಟ್ಟ ಕಾರಣಗಳು ನೋಟುಗಳ ನಿಷೇಧದಿಂದ ಕಪ್ಪು ಹಣ ಮತ್ತು ಕಳ್ಳ ನೋಟುಗಳ ಹಾವಳಿ ಮತ್ತು ಭಯೋತ್ಪಾದನೆಗೆ ಬಳಸಲ್ಪಡುವ ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಸಹಾಯವಾಗಲಿದೆ ಎಂದು. ಆದರೆ ನಿಜವಾಗಿಯೂ ಹಾಗೆ ಆಗುತ್ತಿದೆಯೇ, ಭಯೋತ್ಪಾದಕರ ಬಳಿ ಸಿಕ್ಕ ಹೊಸ ನೋಟುಗಳು, ಕಾಳ ಧನಿಕರು ಏನೇನೋ ಸರ್ಕಸ್ ಗಳನ್ನೂ ಮಾಡಿಕೊಂಡು ತಮ್ಮಲ್ಲಿದ್ದ ಕಪ್ಪು ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಂಡಿದ್ದು ನೋಡಿದರೆ ಅನುಮಾನ ಮೂಡುತ್ತದೆ. ಜೊತೆಗೆ ಇನ್ನು ಮುಂದೆಯೂ ಅವರೆಲ್ಲ ಕಾಳ ಧನ ಕೂಡಿಡುವ ಕೆಲಸ ಮಾಡುವದಿಲ್ಲ ಎನ್ನುವುದು ಏನು ಗ್ಯಾರಂಟಿ.

ಜನ ಸಾಮಾನ್ಯರಿಗೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ದೊರಕದ ಹಣ ಕಾಳ ಧನಿಕರಿಗೆ ಅದೆಲ್ಲಿಂದ ದೊರಕಿತು. ಇನ್ನು ಕಳ್ಳ ನೋಟಿನ ಜಾಲದವರು ಹೊಸ ನೋಟುಗಳ ಪರಿಚಯವೇ ಇಲ್ಲದ ಮುಗ್ಧ ಜನರಿಗೆ ಹೊಸನೋಟಿನ ನಕಲಿ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿ ಜನ ನರಳುತ್ತಿರುವಾಗಲೇ ಸರಕಾರ ಎಲ್ಲರೂ ಆದಷ್ಟೂ ತಂತ್ರಜ್ಞಾನ ಉಪಯೋಗಿಸಿ ವ್ಯವಹಾರ ನಡೆಸಬೇಕು ಎಂದು ಆದೇಶ ಮಾಡಿತು. ಆದರೆ ಸರಕಾರ ಯಾಕೆ ಯೋಚಿಸುತ್ತಿಲ್ಲ. ಆನ್ ಲೈನ್ ವ್ಯವಹಾರ, ಕಾರ್ಡ್ ಬಳಕೆ ಅದೆಷ್ಟು ಸುರಕ್ಷಿತವಾಗಿದೆ, ಎಷ್ಟೋ ಜನ ವಿದ್ಯಾವಂತರೇ ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಅದೆಷ್ಟೋ ಕಾರ್ಡು ಹೊಂದಿರುವವರು ಸುಳ್ಳು ಕರೆಗಳಿಗೆ ಮೋಸ ಹೋಗಿ ಹಣ ಕಳೆದುಕೊಂಡಿದ್ದಾರೆ. ಮೊದಲು ಅದರ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎಂದು.

ನಮ್ಮ ದೇಶದಲ್ಲಿ ಅದೆಷ್ಟೋ ಜನ ಅವಿದ್ಯಾವಂತರಿದ್ದಾರೆ. ಅನೇಕ ಜನರಿಗೆ ಬ್ಯಾಂಕ್ ಖಾತೆಗಳಿಲ್ಲ, ಅದೆಷ್ಟೋ ಜನರ ಬಳಿ ಮೊಬೈಲ್ ಫೋನುಗಳಿಲ್ಲ, ಅದೆಲ್ಲ ಇದ್ದವರಲ್ಲೂ ಎಷ್ಟು ಜನರಿಗೆ ಇಂಟರ್ನೆಟ್ ಬಳಸಲು ಗೊತ್ತಿದೆ. ಅದೆಲ್ಲ ಬಿಡಿ ಇಂಟರ್ನೆಟ್ ಹಳ್ಳಿಗಳಲ್ಲಿ ಸುಸೂತ್ರವಾಗಿ, ನಿಯಮಿತವಾಗಿ ಸಿಗುತ್ತದೆಯೇ, ಮೊಬೈಲ್ ಫೋನುಗಳಿಗೆ ನೆಟ್ ವರ್ಕ್ ಸಿಗದ ಹಳ್ಳಿಗಳೆಷ್ಟೋ ಇವೆ. ಇನ್ನು ವಿದ್ಯುತ್ ಎಷ್ಟು ಹಳ್ಳಿಗಳಲ್ಲಿ ಇಪ್ಪತ್ನಾಲ್ಕು ತಾಸು ಇರುತ್ತವೆ. ಹಳ್ಳಿಯ ಜನ ಮುಗ್ಧರು, ತಮಗೆ ಆಧುನಿಕ ತಂತ್ರಜ್ಞಾನ ತಿಳಿಯದೆಂದು ಅವರು ಬೇರೆಯವರನ್ನು ಅವಲಂಬಿಸಿ ಬಿಡುತ್ತಾರೆ. ಅವರ ಮುಗ್ಧತೆಯನ್ನು ಬೇರೆಯವರು ದುರುಪಯೋಗ ಮಾಡಿಕೊಂಡರೆ ಅದಕ್ಕೆ ಯಾರು ಹೊಣೆ.

ಬಲವಂತದ ಮಾಘಸ್ನಾನ ಮಾಡಿಸಲು ಹೋದರೆ ಮುಂದೆ ಸಾಮಾನ್ಯ ಜನರಿಗೆ ಆನ್ ಲೈನ್ ಹಾಗೂ ಕಾರ್ಡ್ ಬಳಕೆಯಲ್ಲಿ ವಂಚನೆಗಳು ಅಧಿಕವಾಗಬಹುದು. ಕ್ಯಾಶ್ ಲೆಸ್ ವ್ಯವಹಾರ ಎನ್ನುವುದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವಂತಾಯಿತು. ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಜನ ಒದ್ದಾಟ ನಡೆಸುತ್ತಿರುವಾಗ ಸರಕಾರ ನೋಟು ನಿಷೇಧ ಮಾಡಿ ಇನ್ನಷ್ಟು ಹೊಡೆತ ಕೊಟ್ಟಿದೆ. ಜನ ನೀರಿಗಾಗಿ ಕ್ಯೂ ನಿಲ್ಲುತ್ತಿದ್ದವರು ಈಗ ದುಡ್ಡಿಗಾಗಿ ಕ್ಯೂನಲ್ಲಿ ನಿಲ್ಲಲೋ ಅಥವಾ ನೀರಿಗೋ ಎಂದು ಗೊಂದಲ ಪಡುವಂತಾಗಿದೆ.

ಮೊದಲು ಸರಕಾರ ಜನರನ್ನು ವಿದ್ಯಾವಂತರನ್ನಾಗಿ ಮಾಡಲಿ. ಅವರಿಗೆ ಜೀವನಾವಶ್ಯಕವಾದ ನೀರು, ರಸ್ತೆ,ವಿದ್ಯುತ್ ಗಳನ್ನೂ ಒದಗಿಸಲಿ, ನಂತರ ಕ್ಯಾಶ್ ಲೆಸ್ ಮಾಡುವತ್ತ ಚಿತ್ತ ಹರಿಸಲಿ. ದೇಶ ಅಭಿವೃದ್ಧಿಯಾಗುವುದನ್ನು ಯಾವ ಪ್ರಜೆ ತಾನೇ ನೋಡಲು ಬಯಸುವುದಿಲ್ಲ. ಬದಲಾವಣೆ ತರಬೇಕು ನಿಜ ಆದರೆ ರಾತೋ ರಾತ್ರಿ ಬದಲಾವಣೆ ಅಸಾಧ್ಯ. ಅಂತಹ ಪ್ರಯತ್ನಗಳನ್ನು ಮಾಡಲು ಹೋದರೆ ಇಡೀ ದೇಶವೇ ಸಂಕಷ್ಟಕ್ಕೀಡಾಗುತ್ತದೆಯೇ ಹೊರತು ಲಾಭವೇನಿಲ್ಲ. ಮುಖ್ಯವಾಗಿ ತಾಳ್ಮೆ ಹಾಗೂ ಸಹನೆ ಇರಬೇಕು. ಅದು ಇವತ್ತಿನವರೆಗೆ ಜನರಲ್ಲಿ ಇದೆ ಆದರೆ ಸರಕಾರಕ್ಕೆ ಮಾತ್ರ ಇಲ್ಲ. ಯಾರೋ ಕೆಲವರು ಮಾಡುವ ತಪ್ಪಿಗೆ ಸರಕಾರ ಎಲ್ಲರನ್ನೂ ಶಿಕ್ಷಿಸುತ್ತಿದೆ. ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿದೆ ಇದು ಎಷ್ಟು ಸರಿ ?

ಕಳೆದ ವರ್ಷ ಕೇಬಲ್ ಟೀವಿ ಗೆ ಸೆಟ್ ಟಾಪ್ ಬಾಕ್ಸ್ ಹಾಕಿಸುವುದು ಅನಿವಾರ್ಯ ಎಂದು ಸರಕಾರ ಆದೇಶ ಹೊರಡಿಸಿತು. ಇದರಿಂದ ಜನರಿಗೆ ಏನು ಲಾಭವಾಯಿತು. ಹೇಳಿಕೊಳ್ಳಲು ಡಿಜಿಟಲ್ ಇಂಡಿಯಾ ಎಂದು ಆಯಿತೇ ಹೊರತು ಜನರಿಗೆ ಮಾತ್ರ ನಷ್ಟವಾಯಿತು. ಸೆಟ್ ಟಾಪ್ ಬಾಕ್ಸ್ ಖರೀದಿಸಲು ಸುಮಾರು ಎರಡು ಸಾವಿರ ರೂಪಾಯಿಗಳನ್ನು ಅನಾವಶ್ಯಕವಾಗಿ ತೆರಬೇಕಾಯಿತು. ಇನ್ನೂರು ಇನ್ನೂರೈವತ್ತು ರೂಪಾಯಿ ಕೊಟ್ಟು ಕೇಬಲ್ ಟೀವಿ ನೋಡುತ್ತಿದ್ದವರು ಅದೇ ಚಾನೆಲ್ ಗಳನ್ನೂ ಇನ್ನೂ ಹೆಚ್ಚಿನ ದರ ಕೊಟ್ಟು ನೋಡಬೇಕಾಗಿದೆ. ಜೊತೆಗೆ ಸೆಟ್ ಟಾಪ್ ಬಾಕ್ಸ್ ನಿಂದ ವಿದ್ಯುತ್ ಖರ್ಚು ಬೇರೆ. ಅದೂ ಅಲ್ಲದೆ ಸೆಟ್ ಟಾಪ್ ಬಾಕ್ಸ್ ಕೆಟ್ಟು ಹೋದರೆ ಅದರ ರಿಪೇರಿ ಖರ್ಚು ಬೇರೆ. ಒಟ್ಟಿನಲ್ಲಿ ಜನಸಾಮಾನ್ಯರಿಗೆ ತೊಂದರೆಯೇ ಹೊರತು ಲಾಭವೇನಾಗಿಲ್ಲ. ಈ ವರುಷ ಗ್ರಾಮೀಣ ಭಾಗದವರಿಗೆ ಸೆಟ್ ಟಾಪ್ ಬಾಕ್ಸ್ ನ ಭೂತ ಕಾಡುತ್ತಿದೆ. ದುಡ್ಡಿಲ್ಲದೆ ಒದ್ದಾಡುತ್ತಿರುವ ಸಮಯದಲ್ಲಿ ಈ ಸಮಸ್ಯೆ ಬೇರೆ. ಇನ್ನು ಮುಂದೆ ಏನೇನು ಕಾದಿದೆಯೋ ? ಇನ್ನು ನೋಟಿನ ಸಮಸ್ಯೆ ಯಾವಾಗ ಬಗೆ ಹರಿಯುವುದೋ ಆ ಭಗವಂತನೇ ಬಲ್ಲ.

ಪಿಂಕ್ ನೋಟು

ಸಾವಿರ ಹಾಗೂ ಐನೂರು ರೂಪಾಯಿ ನೋಟುಗಳು ನಿಷೇಧವಾದ ಮೇಲೆ ಎರಡು ಸಾವಿರ ರೂಪಾಯಿಗಳ ಹೊಸ ನೋಟು ಬ್ಯಾಂಕ್ ಗೆ ಬಂದ ದಿನ ಎಲ್ಲರಿಗೂ ಹೊಸ ಹುಮ್ಮಸ್ಸು, ಹೊಸ ನೋಟು ನೋಡಬೇಕು ಅದನ್ನು ತಮ್ಮದಾಗಿಸಬೇಕು ಎಂದು ಉತ್ಸಾಹದಿಂದಲೇ ಎಲ್ಲರೂ ಬ್ಯಾಂಕಿಗೆ ಓಡಿದ್ದರು. ಟೀವಿಯಲ್ಲಿ ಜನ ತಾವು ಪಡೆದುಕೊಂಡ ನೋಟನ್ನು ಟ್ರೋಫಿ ಪಡೆದವರಂತೆ ಅದನ್ನು ಪ್ರದರ್ಶಿಸುವುದನ್ನು ಕಂಡು ಆಸೆಯಿಂದ ನಾನೂ ಬ್ಯಾಂಕಿಗೆ ಧಾವಿಸಿದೆ.

ಮನೆಯಲ್ಲಿದ್ದ ಹಳೆಯ ನೋಟುಗಳನ್ನೆಲ್ಲ ಲಗುಬಗೆಯಿಂದ ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಜಮಾಯಿಸಿದೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಗರಿ ಗರಿಯಾದ ಪಿಂಕ್ ನೋಟು ಕೈಗೆ ಬರುತ್ತಲೇ ಅದೇನೋ ಅವರ್ಚನೀಯ ಆನಂದ! ಕ್ಯೂನಲ್ಲಿ ನಿಂತ ಬೇಸರ ದಣಿವು ಎಲ್ಲವೂ ಮಾಯವಾಗಿ ಬಿಟ್ಟಿತ್ತು. ಮನೆಗೆ ಬಂದು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟೆ. ಓಹ್, ನಿಮಗೆ ಆಗಲೇ ಸಿಕ್ಕಿಬಿಟ್ಟಿತೇ, ನೀವು ಲಕ್ಕಿ, ನಮಗಿನ್ನೂ ಸಿಕ್ಕೇ ಇಲ್ಲ ಎಂದು ಕಮೆಂಟುಗಳ ಕೊನೆಯಲ್ಲಿದ್ದ ಅಳು ಮೊರೆಯ ಇಮೊಜಿಯನ್ನು ಕಂಡು ನನ್ನನ್ನು ಅದೃಷ್ಟಶಾಲಿ ಇನ್ನಾರೂ ಇಲ್ಲ ಎಂದು ಬೀಗಿದೆ.

ಎರಡು ದಿನ ಬಿಟ್ಟು ಸಾಮಾನು ತರಲು ಅಂಗಡಿಗೆ ಹೋದೆ. ಅಂಗಡಿಯವ ಸಾಮಾನುಗಳನ್ನು ಕೊಟ್ಟು ಬಿಲ್ ನಾಲ್ಕ್ ನೂರ ಮೂವತ್ತು ಎಂದ. ನಾನು ಜಂಭದಿಂದಲೇ ನನ್ನ ಪರ್ಸ್ ನಲ್ಲಿ ಆರಾಮಾವಾಗಿ ಕಾಲು ಚಾಚಿ ಮಲಗಿದ್ದ ಗರಿಗರಿಯಾಗಿದ್ದ ಪಿಂಕ್ ನೋಟನ್ನು ತೆಗೆದು ಅವನತ್ತ ಚಾಚಿದೆ ಅಷ್ಟೇ, ಅವನು ದೆವ್ವ ಕಂಡವನಂತೆ ಬೆಚ್ಚಿ ಅಯ್ಯೋ ಪಿಂಕ್ ನೋಟಾ ಎಂದು ಉದ್ಗರಿಸಿದ. ಅವನು ಪಿಂಕ್ ನೋಟು ನೋಡೇ ಇಲ್ಲವೇನೋ ಅಂದುಕೊಂಡು ಗತ್ತಿನಿಂದ ನಗುತ್ತ, ಹೌದು, ನೀವು ನೋಡೇ ಇಲ್ವಾ ಎಂದು ಕೇಳಿದೆ.

ಅವನು, ಅಲ್ಲ ಮೇಡಂ, ಇಷ್ಟು ದೊಡ್ಡ ನೋಟು ಕೊಡ್ತಿದ್ದೀರಲ್ಲ, ನಾನು ಚಿಲ್ಲರೆ ಎಲ್ಲಿಂದ ಕೊಡಲಿ ನಿಮಗೆ, ಚಿಲ್ಲರೆ ಇಲ್ಲ ಮೇಡಂ, ಚಿಲ್ಲರೆ ಸರಿಯಾಗಿ ಕೊಟ್ರೇನೆ ಸಾಮಾನು ಎನ್ನುತ್ತ ಸಾಮಾನುಗಳನ್ನು ಪಕ್ಕಕ್ಕೆ ತೆಗೆದಿರಿಸತೊಡಗಿದ. ನನಗೆ ಮುಖ ಭಂಗವಾದಂತಾಯಿತು. ಪರ್ಸ್ ನಲ್ಲಿ ಇನ್ನೊಂದು ಪಿಂಕ್ ನೋಟು ಬಿಟ್ಟರೆ ಬರೀ ಇಪ್ಪತ್ತರ ಎರಡು ನೋಟುಗಳು ಮಾತ್ರ ಇದ್ದವು. ಬೇರೆ ನೋಟುಗಳೇ ಇಲ್ಲ, ಛೆ ಹೊಸ ನೋಟಿಗೆ ಎಂಥಾ ಅವಮರ್ಯಾದೆ, ನನಗೂ ಯಾಕೆ ಹೊಳೆದಿಲ್ಲ ಅಷ್ಟೊಂದು ದೊಡ್ಡ ನೋಟಿಗೆ ಚಿಲ್ಲರೆ ಸಿಗುತ್ತದೆಯೇ ಎಂದು. ಈಗ ಸಾಮಾನುಗಳನ್ನು ತೆಗೆದುಕೊಳ್ಳುವುದಾದರೂ ಹೇಗೆ ಎಂದುಕೊಳ್ಳುತ್ತ, ಈಗ ಬಂದೆ, ಚಿಲ್ಲರೆ ಮಾಡಿಸ್ಕೊಂಡು ಬರ್ತೀನಿ ಎಂದಾಗ ಅವನು ಕುಹಕದ ನಗೆ ನಕ್ಕ.

ನಾನು ಅದನ್ನು ಗಮನಿಸದವಳಂತೆ ಪಕ್ಕದ ಅಂಗಡಿಗೆ ನುಗ್ಗಿದೆ. ಚಿಲ್ಲರೆ ಇದ್ರೆ ಕೊಡಪ್ಪ ಎನ್ನುತ್ತಾ ಪಿಂಕ್ ನೋಟು ಹೊರತೆಗೆದಾಗ ಕಿರಾಣಿ ಅಂಗಡಿಯವನಂತೆ ಈತನೂ ಬೆಚ್ಚಿ ಬಿದ್ದ! ಅರೆ ಎಲ್ಲರೂ ಈ ನೋಟನ್ನು ನೋಡಿ ಯಾಕೆ ಬೆಚ್ಚಿ ಬೀಳ್ತಿದ್ದಾರೆ ಎಂದು ಅವನನ್ನೇ ಕೇಳಿದೆ. ಅಲ್ಲ ಮೇಡಂ ಇಷ್ಟು ದೊಡ್ಡ ನೋಟಿಗೆ ನಿಮಗೆ ಚಿಲ್ಲರೆ ಎಲ್ಲಿ ಸಿಗುತ್ತೆ, ನೀವು ಬ್ಯಾಂಕಿಗೇ ಹೋಗಬೇಕು ಎಂದ. ನನ್ನ ಉತ್ಸಾಹ ಆಗಲೇ ಟುಸ್ಸೆನ್ನತೊಡಗಿತು. ಇನ್ಯಾರ ಹತ್ರವೂ ಉಗಿಸಿಕೊಳ್ಳುವ ಮನಸ್ಸಾಗದೆ ಅಲ್ಲಿಂದ ನೇರವಾಗಿ ಬ್ಯಾಂಕಿಗೆ ಧಾವಿಸಿದೆ.

ಅಲ್ಲಿನ ಕ್ಯೂ ನೋಡಿ ನಾನು ಬೆಚ್ಚಿ ಬಿದ್ದೆ. ಹನುಮಂತನ ಬಾಲದಂತಿದ್ದ ಕ್ಯೂ ನೋಡಿ ಇವತ್ತು ಉಪವಾಸವೇ ಗತಿಯೇನೋ ಅಂದುಕೊಂಡೆ. ಹಾಗೂ ಹೀಗೂ ನನ್ನ ಸರದಿ ಬಂದಾಗ ನನ್ನ ಪಿಂಕ್ ನೋಟನ್ನು ಅವನತ್ತ ಚಾಚಿ ಚಿಲ್ಲರೆ ಕೊಡಪ್ಪ ಎಂದೆ. ಆತನ ಅಕ್ಕ ಪಕ್ಕದಲ್ಲಿದ್ದವರು ನನ್ನನ್ನು ನೋಡಿ ನಕ್ಕರು.

ಬ್ಯಾಂಕಿನವ, ದುಡ್ಡು ಬಂದಿಲ್ಲ ಮೇಡಂ, ನಾಳೆ ಬನ್ನಿ ಎಂದ. ಅರೆ! ನಂಗೆ ಸಾಮಾನು ಕೊಳ್ಳೋದಿದೆ. ಈಗಲೇ ಬೇಕು ಎಂದೆ. ಅವನು ನನಗುತ್ತರಿಸುವ ಗೋಜಿಗೆ ಹೋಗದೆ ಬೇರೆಯವರಿಗೆ ಪಿಂಕ್ ನೋಟುಗಳನ್ನು ದಯಪಾಲಿಸತೊಡಗಿದ. ಅದನ್ನು ಕಂಡು ನಾನು ಅವರತ್ತ ಕರುಣಾಜನಕ ದೃಷ್ಟಿ ಬೀರಿದೆ. ಪಾಪ ಇವರಿಗೆಲ್ಲ ಗೊತ್ತಿಲ್ಲ, ಪಿಂಕ್ ನೋಟಿಗೆ ಎಲ್ಲೂ ಚಿಲ್ಲರೆ ಸಿಗುವುದಿಲ್ಲವೆಂದು ಎಂದುಕೊಳ್ಳುತ್ತ ಇನ್ನೊಂದು ಬ್ಯಾಂಕಿಗೆ ಧಾವಿಸಿದೆ.

ಆತನಿಗೆ ನನ್ನ ಪರಿಚಯವಿದ್ದುದರಿಂದ ನನ್ನ ಪಿಂಕ್ ನೋಟು ತೆಗೆದುಕೊಂಡಾಗ, ಅಬ್ಬಾ ಇಲ್ಲಾದರೂ ಚಿಲ್ಲರೆ ಸಿಗುತ್ತಲ್ಲ ಎಂದುಕೊಂಡು ನಿಟ್ಟುಸಿರು ಬಿಟ್ಟೆ. ಆದರೆ ಅವನು ಇಪ್ಪತ್ತು ರೂಪಾಯಿ ನೋಟುಗಳ ಬಂಡಲ್ ಒಂದನ್ನು ತೆಗೆದು ಕೈಗಿತ್ತಾಗ ನಾನು, ಅಯ್ಯೋ, ಇದ್ಯಾಕೆ, ನೂರರ ನೋಟು ಕೊಡಪ್ಪಾ ಎಂದೆ. ಇಲ್ಲ ಮೇಡಂ ನೂರೂ ಇಲ್ಲ ಐವತ್ತೂ ಇಲ್ಲ, ಇದೇ ಇರೋದು ಅನ್ನುತ್ತ ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದ. ಅಷ್ಟರಲ್ಲಿ ನನ್ನ ಹಿಂದುಗಡೆ ನಿಂತಿದ್ದವ, ಮೇಡಂ, ನಿಮಗೆ ಬೇಡಾ ಅಂದ್ರೆ ನಾನು ತೊಗೊಳ್ತಿನಿ ಎನ್ನುತ್ತಾ ತನ್ನ ಕೈಯಲ್ಲಿದ್ದ ಒಂದು ಪಿಂಕ್ ನೋಟನ್ನು ಬ್ಯಾಂಕಿನವನತ್ತ ಚಾಚಿದ. ಅದನ್ನು ನೋಡಿ ನಾನು ಗಾಬರಿಯಿಂದ ಇದನ್ನು ಬಿಟ್ಟರೆ ಇನ್ನು ಹತ್ತು ರೂಪಾಯಿನದ್ದೇ ಸಿಗಬಹುದು ಎಂದುಕೊಂಡು ಬ್ಯಾಂಕಿನವನ ಕೈಯಿಂದ ಬಂಡಲ್ ಕಿತ್ತು ಕೊಂಡು ಅಲ್ಲಿಂದ ಅಂಗಡಿಯತ್ತ ಧಾವಿಸಿದೆ.

ಅಂಗಡಿಯವ ನನ್ನ ಕೈಯಲ್ಲಿದ್ದ ಇಪ್ಪತ್ತರ ಬಂಡಲ್ ಕಂಡು ಕರುಣೆಯಿಂದ, ಮೇಡಂ ಈವಾಗ ಇನ್ನೂರು ರೂಪಾಯಿ ಮಾತ್ರ ಕೊಟ್ಬಿಡಿ, ನಿಮಗೂ ಅರ್ಜೆಂಟಿಗೆ ದುಡ್ಡು ಬೇಕಾಗುತ್ತಲ್ವೆ ಎಂದಾಗ, ಅಯ್ಯೋ ದೇವರೇ, ಇವನ ಬಳಿ ಸಾಲ ಮಾಡಬೇಕೇ, ಇದುವರೆಗೂ ಒಬ್ಬರ ಹತ್ರಾನೂ ಸಾಲ ಪಡೆಯದೇ ಈವಾಗ ಸಾಲಗಾರಳಾಗಬೇಕೆ ಎಂದು ಮನಸ್ಸು ಮುದುಡಿತು. ಆದರೆ ಎಲ್ಲ ಕೊಟ್ಟು ಬಿಟ್ಟರೆ, ಹಾಲಿಗೆ, ತರಕಾರಿಗೆ, ಪೇಪರ್ ಗೆ ಏನು ಮಾಡಲಿ ಎಂದು ಯೋಚನೆಯೂ ಆಯಿತು.

ನಾನು ಅರೆಮನಸ್ಸಿನಿಂದ ಆಗಲೀಪ್ಪ, ಉಳಿದ ದುಡ್ಡು ಬೇಗನೆ ವಾಪಾಸು ಕೊಟ್ ಬಿಡ್ತೀನಿ ಎಂದೆ. ಆತ ನಗುತ್ತ, ಪರವಾಗಿಲ್ಲಮ್ಮ ನಿಧಾನಕ್ಕೆ ಕೊಡಿ. ನೀವು ನಮ್ಮ ಅಂಗಡಿಗೆ ತಾನೇ ಬರೋದು, ನಿಮ್ಮ ಕಷ್ಟಕ್ಕೆ ನಾವು ಸಹಾಯ ಮಾಡಲೇ ಬೇಕಲ್ಲವೇ ಎನ್ನುತ್ತಾ ಸಾಮಾನಗಳನ್ನು ಬ್ಯಾಗಿಗೆ ತುಂಬಿಸಿಕೊಟ್ಟ. ನಾನು ಅವನಿಗೆ ಇನ್ನೂರು ರೂಪಾಯಿ ಕೊಟ್ಟು ಮನೆಯತ್ತ ಹೊರಟೆ. ಅಂಗಡಿಗಳಲ್ಲಿ ಹೊಸ ವಿನ್ಯಾಸದ ಬ್ಯಾಗುಗಳು ನನ್ನನ್ನು ಕೂಗಿ ಕರೆಯುತ್ತಿದ್ದವು. ಕೊಳ್ಳುವ ಆಸೆಯಾದರೂ ಖಾಲಿ ಪರ್ಸ್ ನ ನೆನಪಾಗಿ ಬರೀ ನೋಡಿಯೇ ತೃಪ್ತಿ ಪಡಬೇಕಾಯಿತು. ದಾರಿಯಲ್ಲಿ ಹಣ್ಣಿನ ಅಂಗಡಿ ಕಂಡು ತೆಗೆದುಕೊಳ್ಳುವ ಮನಸ್ಸಾದರೂ ಈಗಲೇ ಎಲ್ಲ ಖರ್ಚು ಮಾಡಿಬಿಟ್ಟರೆ ನಾಳೆಗೆ ಏನು ಗತಿ, ದಿನಾ ಬ್ಯಾಂಕಿಗೆ ಓಡಬೇಕಾದ ಪರಿಸ್ಥಿತಿ ಬಂತಲ್ಲಾ ಎಂದುಕೊಳ್ಳುತ್ತಿದ್ದಂತೆ ಎ ಟಿ ಎಂ ನ ನೆನಪಾಗಿ ಅತ್ತ ಧಾವಿಸಿದೆ.

ಆದರೆ ಅಲ್ಲಿ ಇದ್ದ ದೊಡ್ಡ ಕ್ಯೂ ನೋಡಿ ಗಾಬರಿಯಾಗಿ ಮನೆಯತ್ತ ಕಾಲೆಳೆಯುತ್ತಾ ನಡೆದೆ. ಹೋಗುವಾಗಿನ ಉತ್ಸಾಹ ಬರುವಾಗ ಇರಲಿಲ್ಲ. ಯಾವಾಗಲೂ ಹೊರಗೆ ಹೋದರೆ ಕೈಯಲ್ಲಿ ಎರಡು ಮೂರು ಬ್ಯಾಗುಗಳ ತುಂಬಾ ಸಾಮಾನುಗಳು ಇರುತ್ತಿದ್ದವು. ಕಣ್ಣಿಗೆ ಹಿತವೆನಿಸಿದ್ದೆಲ್ಲವನ್ನು ಕೊಂಡುಕೊಳ್ಳುತ್ತಿದ್ದೆ. ಈಗ ದುಡ್ಡಿದ್ದೂ ಬಡತನದ ಅನುಭವವಾಯಿತು. ಈಗ ಏನಾದರೂ ಕೊಳ್ಳಬೇಕೆಂದರೆ ನೂರು ಬಾರಿ ಯೋಚಿಸಬೇಕು ಎಂದುಕೊಳ್ಳುತ್ತ ಮನೆಗೆ ಬಂದೆ.

ಪಿಂಕ್ ನೋಟಿನ ಮೋಹವೂ ಹೊರಟು ಹೋಯಿತು. ಅದನ್ನು ನೋಡಿದಾಗ ಖಾಲಿ ಕಾಗದವನ್ನೇ ನೋಡಿದಂತಾಯಿತು. ಮನೆಗೆ ಬಂದವಳೇ ಪರ್ಸ್ ತೆಗೆದು ಇಪ್ಪತ್ತರ ಕೆಂಪು ನೋಟುಗಳನ್ನು ನೋಡುತ್ತಾ, ಎಂಥಾ ಗತಿ ಬಂದು ಬಿಟ್ಟಿತಪ್ಪ, ಮೋದಿಯವರು ನಮ್ಮೆಲ್ಲರನ್ನೂ ಒಮ್ಮೆಲೇ ಬಡವರನ್ನಾಗಿ ಮಾಡಿಬಿಟ್ಟರಲ್ಲ, ನೂರು, ಐವತ್ತು ರೂಪಾಯಿಗಳ ನೋಟುಗಳಿಗಾಗಿ ದಿನಾ ಪರದಾಡುವಂತೆ ಮಾಡಿಬಿಟ್ಟರಲ್ಲ ಎಂದುಕೊಳ್ಳುತ್ತಾ ಸೋಫಾದಲ್ಲಿ ಕುಸಿದೆ. ಅಷ್ಟರಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ ಕಾರ್ಡ್ ಮುಖಾಂತರ ಕೊಳ್ಳಬಹುದಲ್ಲವೇ ಎಂದು ನೆನಪಿಗೆ ಬಂದಾಗ ಮನಸ್ಸು ಹಗುರವಾಗಿ ಕಾರ್ಡ್ ತೆಗೆದುಕೊಂಡು ಮತ್ತೆ ಧಾವಿಸಿದೆ. 

ನೋಟಿನ ಏಟು

ಸುಧಾ ಆಸ್ಪತ್ರೆಯಿಂದ ಹೊರಡುವಾಗಲೇ ಲೇಟಾಗಿತ್ತು. ಇವತ್ತೇ ಎ ಟಿ ಎಂ ಗೆ ಹೋಗಿ ದುಡ್ಡು ಡ್ರಾ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತ ಸುಧಾ ತನ್ನ ನಡಿಗೆಯನ್ನು ತೀವ್ರಗೊಳಿಸಿದಳು. ಎ ಟಿ ಎಂ ಹತ್ತಿರ ಬರುತ್ತಲೇ ಅದಕ್ಕೆ ಶಟ್ಟರ್ ಎಳೆದಿರುವುದನ್ನು ನೋಡಿ ಸುಧಾ ಕಂಗಾಲಾದಳು. ಛೆ ಅರ್ಜೆಂಟಿಗೆ ಬೇಕಾದಾಗೆಲ್ಲ ಈ ಎ ಟಿ ಎಂ ತೆರೆದಿರುವುದೇ ಇಲ್ಲ ಎಂದುಕೊಳ್ಳುತ್ತ ಇನ್ನೊಂದು ಬ್ಯಾಂಕಿನ ಎ ಟಿ ಎಂ ಕಡೆ ಧಾವಿಸಿದಳು.

ಅಲ್ಲಿ ನೋಡಿದರೆ ಅದೂ ಬಂದ್, ಅರೆ ಏನಿವತ್ತು ಎಲ್ಲ ಬೇಗ ಬಂದ್ ಆಗಿ ಬಿಟ್ಟಿದೆ, ಜನರ ಬಳಿ ದುಡ್ಡು ಜಾಸ್ತಿಯಾಗಿ ಅವರೆಲ್ಲ ದುಡ್ಡು ತೆಗೆದು ತೆಗೆದೂ ಖಾಲಿ ಮಾಡಿರಬೇಕು. ನಾಳೆ ಬೆಳಗ್ಗೆ ಬ್ಯಾಂಕ್ ಗೆ ಹೋಗಿ ತೆಗೆದರಾಯಿತು. ಅಮ್ಮನಿಗೆ ನಾಳೆ ಆಪರೇಶನ್ ಬೇರೆ ಇದೆ, ಡಾಕ್ಟರ್ ಮೂವತ್ತು ಸಾವಿರ ರೂಪಾಯಿ ಜಮೆ ಮಾಡಲು ತಿಳಿಸಿದ್ದಾರೆ. ನಾಳೆ ಬೇಗ ಬ್ಯಾಂಕಿಗೆ ಹೋಗಬೇಕು ಎಂದುಕೊಳ್ಳುತ್ತ ಅವಸರದ ಹೆಜ್ಜೆ ಹಾಕುತ್ತ ಮನೆಯ ಕಡೆ ನಡೆದಳು.

ಮನೆಗೆ ಬಂದು ನೋಡಿದಾಗ ಅವಳ ಅಪ್ಪ ಆಗಲೇ ಊಟ ಮಾಡಿ ಮಲಗಿದ್ದರು. ಇವತ್ತು ಅಪ್ಪನಿಗೆ ಕುಡಿದಿದ್ದು ಜಾಸ್ತಿಯಾಗಿರಬೇಕು ಎಂದುಕೊಳ್ಳುತ್ತ ಕೈ ಕಾಲು ತೊಳೆದುಕೊಂಡು ಒಂದು ತಟ್ಟೆಯಲ್ಲಿ ಊಟ ಬಡಿಸಿಕೊಂಡು ಟೀವಿ ನೋಡುತ್ತಾ ಉಣ್ಣ ತೊಡಗಿದಳು. ಇದ್ದಕ್ಕಿದ್ದಂತೆ ಬ್ರೆಕಿಂಗ್ ನ್ಯೂಸ್ ಎಂದು ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಬಂದ ಸುದ್ದಿ ನೋಡಿ ಸುಧಾಳ ಕೈಯಲ್ಲಿದ್ದ ತುತ್ತು ತಟ್ಟೆಗೆ ಬಿತ್ತು.

ಅಯ್ಯೋ ದೇವರೇ, ಅಮ್ಮನ ಆಪರೇಶನ್ ಗೆ ಎಂದು ಮೊನ್ನೆಯೇ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ತಂದಿಟ್ಟಿದ್ದೆ, ಅದೆಲ್ಲವೂ ಹೋಯಿತೇ ಹಾಗಾದರೆ ಎಂದು ಆತಂಕ ಪಟ್ಟುಕೊಳ್ಳುವಷ್ಟರಲ್ಲಿ ಟೀವಿಯಲ್ಲಿ, ಜನರು ತಮ್ಮಲ್ಲಿದ್ದ ನೋಟುಗಳನ್ನು ಬ್ಯಾಂಕಿಗೆ ಕೊಟ್ಟು ಬದಲಾಯಿಸಿಕೊಳ್ಳಬಹುದು ಎಂಬ ಮಾಹಿತಿ ಬಂದಾಗ ಅವಳಿಗೆ ಹೋದ ಜೀವ ಬಂದಂತಾಯಿತು. ಆದರೆ ಮರುಕ್ಷಣದಲ್ಲೇ ಒಬ್ಬರು ಕೇವಲ ನಾಲ್ಕು ಸಾವಿರ ರೂಪಾಯಿ ಮಾತ್ರ ಬದಲಾಯಿಸಿಕೊಳ್ಳಬಹುದು ಎಂದು ತಿಳಿದಾಗ ಮತ್ತೆ ಅವಳಿಗೆ ಆತಂಕ ಶುರುವಾಯಿತು.

ಗಾಬರಿಯಿಂದ ತಂದೆಯನ್ನು ಎಬ್ಬಿಸಲು ಓಡಿದಳು. ಆದರೆ ಕುಡಿದ ಮತ್ತಿನಲ್ಲಿದ್ದ ಅವಳ ತಂದೆಗೆ ಎಚ್ಚರವಾಗಲಿಲ್ಲ. ಅವಳಿಗೆ ಗಾಬರಿಯಾಗಿ ಏನು ಮಾಡುವುದು ಎಂದು ತಿಳಿಯಲಿಲ್ಲ. ಹಾಗೇ ಯೋಚಿಸುತ್ತ ಕುಳಿತಳು. ತಟ್ಟೆಯಲ್ಲಿದ್ದ ಅನ್ನ ತಣ್ಣಗಾದರೂ ಅವಳಿಗೆ ಏನು ಮಾಡುವುದು ಎಂದು ಹೊಳೆಯಲಿಲ್ಲ. ದೇವರೇ ನೀನೇ ನಮ್ಮನ್ನು ಕಾಪಾಡಬೇಕು. ನನಗೆ ಈ ಜಗತ್ತಿನಲ್ಲಿ ನನ್ನವರು ಅಂತ ಇರೋದು ನನ್ನ ಅಮ್ಮ ಮಾತ್ರ. ಅಪ್ಪ ಇದ್ದರೂ ಹೆಸರಿಗೆ ಮಾತ್ರ. ಕೆಲಸ ಮಾಡುವುದು ಮತ್ತು ಕುಡಿಯುವುದು ಬಿಟ್ಟರೆ ಅವರಿಗೆ ಬೇರೆ ಏನೂ ಬೇಕಾಗಿಲ್ಲ. ಪ್ರೀತಿ ಮಮತೆ ಅವರ ಜಾಯಮಾನದಲ್ಲೇ ಇಲ್ಲ ಎಂದುಕೊಳ್ಳುತ್ತ ಊಟ ಬಿಟ್ಟು ಎದ್ದಳು.

ನಾಳೆಯೇ ದುಡ್ಡು ಕಟ್ಟಬೇಕೆಂದು ಡಾಕ್ಟರ್ ಮೊದಲೇ ತಾಕೀತು ಮಾಡಿದ್ದರು. ಈಗ ದುಡ್ಡು ಕಟ್ಟದಿದ್ದರೆ ಅಮ್ಮನಿಗೆ ಆಪರೇಶನ್ ಮಾಡುವುದಿಲ್ಲ, ಸಧ್ಯದ ಪರಿಸ್ಥಿತಿಯಲ್ಲಿ ಆಪರೇಶನ್ ಮಾಡದಿದ್ದರೆ ಅಮ್ಮ ಉಳಿಯುವುದಿಲ್ಲ. ನಾಳೆ ಬೇಗನೆ ಬ್ಯಾಂಕಿಗೆ ಹೋಗಬೇಕು ಎಂದುಕೊಳ್ಳುತ್ತ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಬೇಗನೆ ಮಲಗಿದಳು. ಸುಸ್ತಾದ ಜೀವಕ್ಕೆ ಸೊಂಪಾದ ನಿದ್ರೆ ಬಂದಿತು.

ಬೆಳಿಗ್ಗೆ ಬೇಗನೆ ಎದ್ದು ಮನೆ ಕೆಲಸವನ್ನೆಲ್ಲಾ ಮುಗಿಸಿ ಅಪ್ಪನಿಗೆ ತಿಂಡಿ ಕೊಟ್ಟು ಟೀವಿಯಲ್ಲಿ ಬಂದ ಸುದ್ದಿಯ ಬಗ್ಗೆ ಹೇಳಿದಾಗ ಆತ ಅದು ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಎತ್ತಲೋ ನೋಡುತ್ತಾ ತಿಂಡಿ ಮುಗಿಸಿ ಹೊರಗೆ ಹೊರಟಾಗ ಅವಳಿಗೆ ಇಂಥಾ ಕಷ್ಟ ಕಾಲದಲ್ಲೂ ತಂದೆಯಿಂದ ತನಗೆ ಯಾವುದೇ ರೀತಿಯ ಸಹಾಯ ಇಲ್ಲದ್ದು ಕಂಡು ದುಃಖವಾಗಿ ಅಳು ಒತ್ತರಿಸಿ ಬಂದಿತು. ಆದರೂ ಈಗ ಅಳುತ್ತ ಕೂರುವ ಸಮಯವಲ್ಲ ಎಂದುಕೊಂಡು ಬಂದ ಅಳುವನ್ನು ನುಂಗಿಕೊಂಡು ಮನೆಗೆ ಬೀಗ ಹಾಕಿ ಬ್ಯಾಂಕ್ ನತ್ತ ಓಡಿದಳು. ಗಂಟೆ ಒಂಭತ್ತುವರೆಯಾದರೂ ಉದ್ದದ ಜನರ ಸಾಲು ಕಂಡು ಅವಳಿಗೆ ಕಣ್ಣು ಕತ್ತಲು ಬಂದಂತಾಯಿತು.

ದೇವರೇ ಇಷ್ಟೊಂದು ಜನರಿದ್ದಾರೆ. ತನ್ನ ಸರದಿ ಬರಲು ಎಷ್ಟು ಹೊತ್ತಾಗುವುದೋ ಏನೋ ಎಂದುಕೊಳ್ಳುತ್ತ ಎ ಟಿ ಎಂ ನತ್ತ ಧಾವಿಸಿದಳು. ಅಲ್ಲಿಯೂ ಉದ್ದದ ಸರತಿಯ ಸಾಲು ಕಂಡು ಕಂಗಾಲಾಗಿ, ದೇವರೇ ನೀನೆ ಏನಾದರೂ ದಾರಿ ತೋರಿಸಬೇಕು, ನನ್ನ ತಾಯಿಯನ್ನು ಉಳಿಸಿಕೊಳ್ಳಲು ನನಗೆ ದುಡ್ಡು ಬೇಕು, ಅದಕ್ಕೆ ದಾರಿ ತೋರಿಸು, ನನ್ನ ಕೈ ಬಿಡಬೇಡ ಎಂದು ಮನಸ್ಸಿನಲ್ಲೇ ಬೇಡಿಕೊಳ್ಳುತ್ತ ಮತ್ತೆ ಬ್ಯಾಂಕ್ ನತ್ತ ಓಡಿದಳು. ಸರತಿಯ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದಿತು. ಅರ್ಧ ಗಂಟೆಯಾದರೂ ಅವಳ ಮುಂದೆ ನಿಂತಿದ್ದ ಸಾಲು ಕರಗುವ ಸೂಚನೆಯೇ ಕಾಣಲಿಲ್ಲ.

ಇದರ ನಡುವೆ ಬ್ಯಾಗಿನಲ್ಲಿದ್ದ ಬಿಸಿಯಾದ ತಿಂಡಿಯ ಡಬ್ಬ ಅವಳ ಕೈಗೆ ತಗಲಿದಾಗ ತಾಯಿಗೆ ತಿಂಡಿ ತೆಗೆದುಕೊಂಡು ಹೋಗಬೇಕಿತ್ತು ಎಂದು ನೆನಪಾಯಿತು. ಈ ಸರತಿಯ ಸಾಲಿನಲ್ಲಿ ನಿಂತರೆ ಅಮ್ಮ ಉಪವಾಸ ಇರಬೇಕಾಗುತ್ತದೆ. ನಾನೊಬ್ಬಳೇ ಇಲ್ಲಿಯೂ ನಿಂತು ಅಮ್ಮನಿಗೂ ಹೇಗೆ ತಿಂಡಿ ಕೊಡಲಿ. ಬೇರೆ ಯಾರನ್ನಾದರೂ ಕಳುಹಿಸೋಣ ಎಂದರೆ ತನಗೆ ಸಹಾಯ ಮಾಡುವವರು ಬೇರೆ ಯಾರಿದ್ದಾರೆ. ಕಷ್ಟಕಾಲದಲ್ಲಿ ಎಲ್ಲರೂ ದೂರ ಸರಿಯುವವರೇ, ಏನು ಮಾಡಲಿ ಈಗ ಸಾಲಲ್ಲಿ ನಿಲ್ಲಲೇ ಅಥವಾ ಅಮ್ಮನಿಗೆ ತಿಂಡಿ ಕೊಟ್ಟು ನಂತರ ಪುನಃ ಬರಲೇ ಎಂದು ಯೋಚಿಸಿದಳು.

ಅಮ್ಮ ಅಲ್ಲಿ ಹಸಿವಿನಿಂದ ಕಂಗಲಾಗಿರುತ್ತಾರೆ, ಅವರಿಗೆ ಮಾತ್ರೆ ಬೇರೆ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ನಿಂತುಕೊಳ್ಳದಿದ್ದರೆ ದುಡ್ಡು ಸಿಗುವುದಿಲ್ಲ ಏನು ಮಾಡಲಿ ಎಂದು ತೀವ್ರವಾಗಿ ಯೋಚಿಸಿದಳು. ಇದ್ದಕ್ಕಿದ್ದಂತೆ ಅವಳಿಗೆ ಡಾಕ್ಟರ್ ಗೆ ತಾನು ಚೆಕ್ ಕೊಡಬಹುದಲ್ಲವೇ ಎಂದು ಹೊಳೆಯಿತು. ಅಬ್ಬ ಬದುಕಿದೆ ಎನ್ನುತ್ತಾ ಮೊದಲು ಅಮ್ಮನಿಗೆ ತಿಂಡಿ ಕೊಟ್ಟು ಡಾಕ್ಟರ್ ಗೆ ಚೆಕ್ ಕೊಟ್ಟು ನಂತರ ಬಂದು ದುಡ್ಡು ವಿನಿಮಯ ಮಾಡಿಕೊಳ್ಳಲು ಸಾಲಲ್ಲಿ ನಿಲ್ಲೋಣ ಎಂದುಕೊಂಡು ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದಳು. ಇವತ್ತು ಸಂಜೆ ಅಮ್ಮನಿಗೆ ಅಪರೇಷನ್ ಮಾಡುತ್ತೇನೆ ಎಂದಿದ್ದರು ಡಾಕ್ಟರ್ ಅವರ ಬಳಿ ಮಾತನಾಡಬೇಕು ಎಂದುಕೊಳ್ಳುತ್ತ ಆಸ್ಪತ್ರೆಗೆ ದಾಪುಗಾಲು ಹಾಕುತ್ತ ನಡೆದಳು.

ಆಸ್ಪತ್ರೆಯಲ್ಲಿ ಅಮ್ಮನಿಗೆ ದುಡ್ಡಿನ ಪರಿಪಾಟಲಿನ ಬಗ್ಗೆ ಹೇಳದೆ ಎಂದಿನಂತೆ ನಗುತ್ತ ತಿಂಡಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದಳು. ಅವರ ತಿಂಡಿ ಮುಗಿಯುತ್ತಲೇ ಅವರಿಗೆ ಕೊಡಬೇಕಾದ ಮಾತ್ರೆಗಳನ್ನು ಕೊಟ್ಟು ತಾನು ಡಾಕ್ಟರನ್ನು ನೋಡಲು ಹೋಗುವುದಾಗಿ ತಾಯಿಗೆ ಹೇಳಿ ಡಾಕ್ಟರ್ ನ ಕೊಠಡಿಯತ್ತ ತೆರಳಿದಳು. ಅವಳ ಪುಣ್ಯಕ್ಕೆ ಅಲ್ಲಿ ಡಾಕ್ಟರ್ ಇದ್ದರು. ಅವಳು ಡಾಕ್ಟರ್ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ತಾನು ಇಪ್ಪತ್ತು ಸಾವಿರಕ್ಕೆ ಚೆಕ್ ಕೊಟ್ಟು ಉಳಿದ ಹಣವನ್ನು ಕ್ಯಾಶ್ ಕೊಡಬಹುದೇ ಎಂದಾಗ ಡಾಕ್ಟರ್ ಮೊದಲು ಒಪ್ಪದಿದ್ದರೂ ನಂತರ ಕ್ಷಣ ಕಾಲ ಯೋಚಿಸಿ ಆಗಲಿ ಆದರೆ ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳು ಬೇಡ ಎಂದಾಗ ಅಬ್ಬ ಅಷ್ಟಕ್ಕಾದರೂ ಒಪ್ಪಿದರಲ್ಲ ಎಂದು ಅವಳಿಗೆ ಹೋದ ಜೀವ ಬಂದಂತಾಯಿತು.

ತಾನು ತಂದಿದ್ದ ಇಪ್ಪತ್ತು ಸಾವಿರದ ಚೆಕ್ ಡಾಕ್ಟರ್ ಗೆ ಕೊಟ್ಟಾಗ ಅವರು ಸಂಜೆಯ ಹೊತ್ತಿಗೆ ಇನ್ನುಳಿದ ಹತ್ತು ಸಾವಿರ ಕೊಟ್ಟರೆ ಮಾತ್ರ ಆಪರೇಶನ್ ಮಾಡಲಾಗುವುದು ಎಂದು ಧೃಡವಾಗಿ ಹೇಳಿದಾಗ ಅವಳು ಸುಮ್ಮನೆ ತಲೆಯಾಡಿಸಿದಳು. ಆದರೂ ಅವಳಿಗೆ ಹತ್ತು ಸಾವಿರ ಹೊಂದಿಸುವುದು ಹೇಗೆ ಎಂದು ಯೋಚನೆಯಾಯಿತು. ಅಮ್ಮನ ಬಳಿ ತನಗೆ ಸ್ವಲ್ಪ ಕೆಲಸವಿದೆ ಬೇಗನೆ ಬರುತ್ತೇನೆ ಎನ್ನುತ್ತಾ ಅಲ್ಲಿಂದ ಬ್ಯಾಂಕಿಗೆ ಓಡಿದಳು. ಸರತಿಯ ಸಾಲು ಈಗ ದ್ವಿಗುಣಗೊಂಡಿತ್ತು. ಆಗಲೇ ಗಂಟೆ ಹನ್ನೊಂದುವರೆಯಾಗಿತ್ತು. ಅವಳಿಗೆ ಅಲ್ಲಿ ನಿಲ್ಲಲಾಗದೆ ಬ್ಯಾಂಕ್ ಮ್ಯಾನೇಜರನ್ನು ಹುಡುಕಿಕೊಂಡು ಹೋದಳು.

ತನ್ನ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡಾಗ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತ, ಇಲ್ಲಿಗೆ ಬಂದಿರುವ ಎಷ್ಟೋ ಜನ ನಿಮ್ಮಂತೆಯೇ ದುಡ್ಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಈ ನೋಟಿನ ಸಮಸ್ಯೆಯಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ಕೆಲವರಿಗೆ ಒಂದು ಹೊತ್ತು ಊಟಕ್ಕೂ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ದುಡ್ಡಿದ್ದವರೂ ಬಡತನವನ್ನು ಅನುಭವಿಸುತ್ತಿದ್ದಾರೆ. ನಾನೇನೂ ಮಾಡುವ ಹಾಗಿಲ್ಲ. ದಯವಿಟ್ಟು ಸಾಲಿನಲ್ಲಿ ನಿಂತುಕೊಳ್ಳಿ ಎಂದು ಅವರು ಸೂಚಿಸಿದಾಗ ಅವಳಿಗೆ ಅಳು ಒತ್ತರಿಸಿ ಬಂದಿತು. ಬೇರೆ ಬ್ಯಾಂಕುಗಳಿಗೆ ಹೋಗಿ ನೋಡೋಣ ಎಂದು ಅಲ್ಲಿಂದ ಓಡಿದಳು.

ಅಲ್ಲಿಯೂ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಇರಲಿಲ್ಲ. ಅಲ್ಲಿಂದ ಪೋಸ್ಟ್ ಆಫೀಸ್ ಗೆ ಓಡಿದಳು. ಅಲ್ಲಿ ಸರತಿಯ ಸಾಲು ಚಿಕ್ಕದಾಗಿರುವುದು ಕಂಡು ಸಮಾಧಾನವಾಗಿ ಸಾಲಿನಲ್ಲಿ ನಿಂತಳು. ಅಲ್ಲಿ ಹಣ ಇನ್ನೂ ಬಂದಿಲ್ಲವೆಂದು ಪೋಸ್ಟ್ ಆಫೀಸಿನವರು ಹೇಳಿದಾಗ ಅವಳು ಕಂಗಾಲಾದಳು. ಆದರೂ ಈಗ ಇಲ್ಲಿಂದ ಹೋದರೆ ಸಾಲು ಮತ್ತಷ್ಟು ಉದ್ದವಾದರೆ ಎಂದು ಅಲ್ಲೇ ನಿಂತುಕೊಂಡಳು. ತನ್ನ ವಾಚ್ ನೋಡಿಕೊಂಡಾಗ ಸಮಯ ಹನ್ನೊಂದು ಮುಕ್ಕಾಲು ಆಗಿತ್ತು. ಪರವಾಗಿಲ್ಲ ಇಲ್ಲಿ ಸಾಲು ಚಿಕ್ಕದಾಗಿದೆಯಲ್ಲ ಬೇಗನೆ ದುಡ್ಡು ಸಿಗಬಹುದು ಎಂದುಕೊಳ್ಳುತ್ತ ಸಮಾಧಾನದ ನಿಟ್ಟುಸಿರು ಬಿಟ್ಟಳು. ಸುಮಾರು ಹತ್ತು ನಿಮಿಷಗಳ ಬಳಿಕ ಸಾಲಿಗೆ ಜೀವ ಬಂದಂತಾಗಿ ಎಲ್ಲರೂ ಮುಂದೆ ಮುಂದೆ ಹೋದಾಗ ಅವಳಿಗೆ ಮತ್ತಷ್ಟು ಸಮಾಧಾನವಾಯಿತು.

ತನ್ನ ಸರದಿ ಬಂದಾಗ ನಾಲ್ಕು ಸಾವಿರ ವಿನಿಮಯ ಮಾಡಿಕೊಂಡು ತನ್ನ ತಾಯಿಗೆ ಆಪರೇಶನ್ ಇದೆ, ತನಗೆ ಅರ್ಜೆಂಟಾಗಿ ದುಡ್ಡು ಬೇಕಾಗಿದೆ ಉಳಿದ ಆರು ಸಾವಿರವನ್ನು ಬದಲಾಯಿಸಿ ಕೊಡುವಿರಾ ಎಂದು ವಿನಮ್ರವಾಗಿ ಬೇಡಿಕೊಂಡಳು. ಆದರೆ ಅವರು ಸರಕಾರದ ನಿರ್ದೇಶನದ ಪ್ರಕಾರ ಒಬ್ಬರಿಗೆ ನಾಲ್ಕು ಸಾವಿರ ಮಾತ್ರ ಕೊಡಬಹುದು ತಾವೇನೂ ಮಾಡುವ ಹಾಗಿಲ್ಲ ಎಂದು ಕೈ ಚೆಲ್ಲಿದರು. ಅವಳಿಗೆ ನಿರಾಶೆಯಾದರೂ ಇಷ್ಟಾದರೂ ಸಿಕ್ಕಿತಲ್ಲ ಎಂದುಕೊಂಡು ಉಳಿದ ಹಣಕ್ಕೆ ತನ್ನ ಬಾಸನ್ನು ಕೇಳಿದರಾಯಿತು ಎಂದುಕೊಂಡು ಅಲ್ಲಿಂದ ಬಸ್ಸಿನಲ್ಲಿ ಆಫೀಸಿಗೆ ಹೋದಳು.

ಆದರೆ ಬಾಸ್ ಅಲ್ಲಿರಲಿಲ್ಲ. ತನ್ನ ಸಹೋದ್ಯೋಗಿಗಳ ಬಳಿ ಸಹಾಯ ಯಾಚಿಸಿದಳು. ಆದರೆ ಅವರೆಲ್ಲ ತಾವೂ ದಿನನಿತ್ಯದ ಖರ್ಚಿಗೆ ಪರದಾಡುತ್ತಿದ್ದೇವೆ. ನಿನಗೆಲ್ಲಿಂದ ಕೊಡಲಿ, ಬೇಕಿದ್ದರೆ ಐನೂರರ ನೋಟು ಕೊಡುತ್ತೇವೆ ಎಂದು ಅಸಹಾಯಕರಾಗಿ ಹೇಳಿದಾಗ ಸುಧಾ ತಲ್ಲಣಗೊಂಡಳು. ದೇವರೇ ಏನಾದರೂ ಮಾಡಿ ದಾರಿ ತೋರಿಸು. ಸರಕಾರ ಯಾಕೆ ಇವತ್ತೇ ಈ ನಿರ್ಧಾರ ಕೈಗೊಂಡಿತು. ಒಂದು ದಿನ ಬಿಟ್ಟು ಈ ನಿರ್ಧಾರ ಮಾಡಿದಿದ್ದರೆ ತನ್ನ ತಾಯಿಯ ಆಪರೇಶನ್ ಆದರೂ ಸುಸೂತ್ರವಾಗಿ ನಡೆಯುತ್ತಿತ್ತು ಎಂದು ದುಃಖ ಪಡುತ್ತಿರುವಾಗ ಅವಳ ಸಹೋದ್ಯೋಗಿ ಅವಳಲ್ಲಿದ್ದ ಉಳಿದ ಹಣವನ್ನು ಅವಳ ಖಾತೆಗೆ ಹಾಕಿ ನಂತರ ಅದನ್ನು ಅವಳು ತೆಗೆಯಬಹುದಲ್ಲವೇ ಎಂದಾಗ ಅವಳಿಗೆ ಆಶಾ ಕಿರಣ ಮೂಡಿದಂತಾಗಿ ಅಲ್ಲೇ ಇದ್ದ ತನ್ನ ಬ್ಯಾಂಕಿನ ಬೇರೊಂದು ಬ್ರಾಂಚ್ ಗೆ ಓಡಿದಳು.

ಖಾತೆಗೆ ಹಣ ಹಾಕುವ ಸರತಿಯ ಸಾಲು ಚಿಕ್ಕದಾಗಿರುವುದನ್ನು ನೋಡಿ ಸಮಾಧಾನವಾಗಿ ಬೇಗನೆ ಸ್ಲಿಪ್ ನಲ್ಲಿ ವಿವರ ನಮೂದಿಸಿ ಸಾಲಿನಲ್ಲಿ ನಿಂತುಕೊಂಡಳು. ಆದರೆ ಅವಳ ಸರದಿ ಬಂದಾಗ ಬ್ಯಾಂಕಿನವರ ಊಟದ ಸಮಯವಾದ್ದರಿಂದ ಮಧ್ಯಾಹ್ನ ಎರಡು ಗಂಟೆಯ ನಂತರ ಬರುವಂತೆ ತಿಳಿಸಿದಾಗ ಅವಳಿಗೆ ತುಂಬಾ ನಿರಾಶೆಯಾಯಿತು. ಛೆ ತಾನು ಬೇಗನೆ ಬರಬೇಕಿತ್ತು. ತನಗೆ ಮೊದಲೇ ತಿಳಿದಿದ್ದರೆ ತಾನು ಆಫೀಸಿಗೆ ಹೋಗುವ ಬದಲು ಇಲ್ಲೇ ನಿಂತು ದುಡ್ಡು ತನ್ನ ಖಾತೆಗಾದರೂ ಬೀಳುವಂತೆ ನೋಡಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ಮನೆಯ ಕಡೆ ಧಾವಿಸಿದಳು.

ಮನೆಗೆ ಹೋಗಿ ಬೆಳಿಗ್ಗೆ ಮಾಡಿದ ಅಡಿಗೆಯನ್ನು ಬಿಸಿ ಮಾಡುತ್ತಿರುವಾಗ ಆಸ್ಪತ್ರೆಯಿಂದ ಫೋನ್ ಬಂದಿತು. ಸುಧಾ ಆತಂಕದಲ್ಲಿ ಫೋನ್ ಕೈಗೆತ್ತಿಕೊಂಡಾಗ ಅವಳ ತಾಯಿಯ ಆರೋಗ್ಯ ಹದಗೆಟ್ಟಿರುವುದರಿಂದ ಆಪರೇಶನ್ ಬೇಗನೆ ಮಾಡಬೇಕಾಗಿದೆ. ಉಳಿದ ಹಣವನ್ನು ಜಮೆ ಮಾಡಿದರೆ ಮಧ್ಯಾಹ್ನ ಎರಡುವರೆಗೆ ಆಪರೇಶನ್ ಮಾಡಬಹುದು ಎಂದು ಅವರು ತಿಳಿಸಿದಾಗ ಅವಳಿಗೆ ಕಾಲಬುಡದಲ್ಲಿ ಕುಸಿದ ಅನುಭವ. ದೇವರೇ ಏನು ಮಾಡಲಿ ಯಾರ ಸಹಾಯ ಕೇಳಲಿ ಎಂದುಕೊಳ್ಳುತ್ತ ಅಕ್ಕಪಕ್ಕದ ಮನೆಯವರ ಬಳಿ ಸಹಾಯ ಯಾಚಿಸಲು ಧಾವಿಸಿದಳು.

ಆದ್ರೆ ಅವರೆಲ್ಲರ ಪರಿಸ್ಥಿತಿ ಅವಳಿಗಿಂತ ಭಿನ್ನವಾಗಿರಲಿಲ್ಲ. ಮನೆಗೆ ಸಾಮಾನು ತರಲೂ ಅವರ ಬಳಿ ದುಡ್ಡಿರಲಿಲ್ಲ. ದೇವರೇ ಎಂಥಾ ಕಷ್ಟ ತಂದು ಬಿಟ್ಟೆ. ನಿನ್ನೆವರೆಗೆ ಅಮ್ಮನ ಆಪರೇಶನ್ ಮಾಡಲು ಏನೂ ತೊಂದರೆಯಿಲ್ಲ ಅಂದುಕೊಂಡು ನಿರಾಳವಾಗಿದ್ದವಳಿಗೆ ಈಗೆಂಥಾ ದುರ್ಗತಿ ತಂದು ಬಿಟ್ಟೆ. ನಾನು ಮಾಡಿದ ಅಪರಾಧವಾದರೂ ಏನು ಎಂದುಕೊಳ್ಳುತ್ತ ಗಳಗಳನೆ ಅತ್ತಳು. ಕೈಯಲ್ಲಿದ್ದ ನಾಲ್ಕು ಸಾವಿರ ಕೊಟ್ಟು ಉಳಿದ ಆರು ಸಾವಿರ ನಂತರ ಕೊಡುತ್ತೇನೆ ಎಂದರೆ ಡಾಕ್ಟರ್ ಒಪ್ಪಬಹುದೇನೋ, ಎಷ್ಟಾದರೂ ಡಾಕ್ಟರ್ ಜೀವ ಉಳಿಸುವವರು ಹೃದಯವಂತರು ಎಂದು ಯೋಚಿಸಿ ಆಶಾ ಕಿರಣ ಮೂಡಿದಂತಾಗಿ ಮನೆಗೆ ಬೀಗ ಹಾಕಿ ಆಸ್ಪತ್ರೆಗೆ ಓಡಿದಳು.

ಆದರೆ ಡಾಕ್ಟರ್ ಉಳಿದ ಆರು ಸಾವಿರ ಹಣ ಕೊಟ್ಟರೆ ಮಾತ್ರವೇ ಆಪರೇಶನ್ ಮಾಡುವುದು ಎಂದು ಖಡಾಖಂಡಿತವಾಗಿ ಹೇಳಿದಾಗ ಅವಳು ನಿಂತಲ್ಲೇ ಕುಸಿದಳು. ಪ್ರಾಣ ಉಳಿಸಬೇಕಾದ ಡಾಕ್ಟರ್ ಮಾನವೀಯತೆ ಮರೆತು ದುಡ್ಡಿಗೋಸ್ಕರ ನಿರ್ದಯರಾಗಬಹುದು ಎಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಈಗೇನು ಮಾಡುವುದು ಎಂದು ಅವಳಿಗೆ ತಿಳಿಯಲಿಲ್ಲ. ಉಳಿದ ಹಣಕ್ಕೆ ಪೋಸ್ಟ್ ಡೇಟ್ ನ ಚೆಕ್ ಕೊಡುತ್ತೇನೆ ಎಂದರೂ ಡಾಕ್ಟರ್ ಒಪ್ಪಲಿಲ್ಲ. ನಿಮ್ಮ ಹಾಗೆ ಎಲ್ಲರೂ ಹೇಳಿದರೆ ನಾವು ಬದುಕುವುದು ಹೇಗೆ, ನಮ್ಮ ಕಷ್ಟ ಸ್ವಲ್ಪ ಅರ್ಥ ಮಾಡಿಕೊಳ್ಳಿ ಎಂದು ತಾವು ಮಾಡಿದ್ದೆ ಸರಿ ಎನ್ನುವಂತೆ ಮಾತನಾಡಿದಾಗ ಅವಳಿಗೆ ಏನು ಮಾಡುವುದೆಂದು ತೋಚಲಿಲ್ಲ. ದುಃಖ ಉಮ್ಮಳಿಸಿ ಬಂದು ತಡೆಯಲಾಗದೆ ಅಮ್ಮನನ್ನು ನೋಡಲು ಧಾವಿಸಿದಳು.

ಮಗಳ ನಿಸ್ತೇಜಗೊಂಡ ಮುಖ ನೋಡಿ ತಾಯಿ ಹೃದಯ ಆತಂಕ ಪಟ್ಟಿತು. ತಮ್ಮ ನೋವಿಗಿಂತಲೂ ಮಗಳ ನೋವು ಜಾಸ್ತಿಯಾದಂತೆನಿಸಿ ಅವಳನ್ನು ವಿಚಾರಿಸಿದಾಗ ಸುಧಾ ಬೇರೆ ದಾರಿಯಿಲ್ಲದೆ ಎಲ್ಲ ವಿಷಯವನ್ನು ಹೇಳಿ ತಾನಾಗಲೇ ಮತ್ತೆ ಬ್ಯಾಂಕಿಗೆ ಹೋಗಬೇಕಾಗಿದೆ. ದುಡ್ಡು ತೆಗೆಯಬೇಕಿದೆ, ನೀನು ಧೈರ್ಯವಾಗಿರು ನಾನು ದುಡ್ಡು ತಂದೇ ತರುತ್ತೇನೆ ಎಂದಾಗ ಆ ತಾಯಿ ಹೃದಯ, ತನ್ನಿಂದಾಗಿ ಮಗಳಿಗೆ ಎಷ್ಟು ಕಷ್ಟವಾಗ್ತಿದೆ. ದೇವರೇ ಯಾಕೆ ಇಂಥಾ ಕಷ್ಟ ಕೊಡುತ್ತಿಯಾ, ಅವಳ ತಂದೆಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ. ತಾನಾಯಿತು ತನ್ನ ಕುಡಿತವಾಯಿತು, ಹೆಂಡತಿ ಮಕ್ಕಳು ಇದ್ದಾರೆ ಎಂದು ಮರೆತೇ ಬಿಟ್ಟಿದ್ದಾರೆ. ನಾನು ಆಸ್ಪತ್ರೆ ಸೇರಿದ ಮೇಲೆ ಒಮ್ಮೆಯೂ ನೋಡಲು ಬಂದಿಲ್ಲ. ನನಗೇನಾದರೂ ಆದರೆ ನನ್ನ ಮಗಳ ಗತಿಯೇನು, ಮಗಳಿಗೋಸ್ಕರವಾದರೂ ನನ್ನನ್ನು ಬದುಕಿಸು ದೇವರೇ ಎಂದು ಬೇಡಿಕೊಂಡರು.

ಸುಧಾ ಬ್ಯಾಂಕಿನತ್ತ ನಡೆದಾಗ ಅಲ್ಲಿ ಮತ್ತೆ ಉದ್ದನೆಯ ಸರತಿಯ ಸಾಲು ಕಂಡು ಅವಳಿಗೆ ಜೋರಾಗಿ ಅಳುವಂತಾಯಿತು. ಅಯ್ಯೋ ದೇವರೇ ನಾನು ಸಾಲು ಬಿಟ್ಟು ಮನೆಗೆ ಹೋಗಲೇ ಬಾರದಿತ್ತು. ಈಗ ಸಾಲಲ್ಲಿ ನಿಂತರೆ ಅಮ್ಮನ ಆಪರೇಶನ್ ಆದ ಹಾಗೆ ಎಂದುಕೊಳ್ಳುತ್ತ ಅಲ್ಲಿ ನಿಂತಿದ್ದ ಜನರಲ್ಲಿ ತನಗೆ ಮೊದಲ ಅವಕಾಶ ಕೊಡುವಂತೆ ಬೇಡಿಕೊಂಡಳು. ತನ್ನ ತಾಯಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಆಪರೇಶನ್ ಗೆ ಅರ್ಜೆಂಟಾಗಿ ದುಡ್ಡು ಬೇಕಿದೆ, ದಯವಿಟ್ಟು ನನಗೆ ಮೊದಲು ಹೋಗಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದಳು. ಆದರೆ ಅಲ್ಲಿದ್ದವರ ಯಾರ ಹೃದಯವೂ ಮಿಡಿಯಲಿಲ್ಲ.

ಕೆಲವರು ಮನೆಯಲ್ಲಿ ತಮ್ಮ ಹೆಂಡತಿ ಮಕ್ಕಳು ಹಸಿದುಕೊಂಡಿದ್ದಾರೆ. ಅವರಿಗೆ ನಾವು ತಿಂಡಿ ಕೊಡುವುದು ಬೇಡವೇ ನಮಗೂ ನಿಮ್ಮಂತೆ ಕಷ್ಟ ಇದೆ ಎಂದರೆ ಇನ್ನು ಕೆಲವರು ದುಡ್ಡು ತೆಗೆದುಕೊಳ್ಳೋದಿಕ್ಕೆ ಇದೊಂದು ನಾಟಕ ಮಾಡ್ತಿರಬಹುದು ಎಂದುಕೊಳ್ಳುತ್ತ, ನೋಡಮ್ಮಾ ನಿನ್ನ ನಾಟಕಕ್ಕೆಲ್ಲ ನಾವು ಕರಗೋದಿಲ್ಲ, ನಿನಗೆ ದುಡ್ಡು ಬೇಕಾದರೆ ಸಾಲಲ್ಲಿ ನಿಂತ್ಕೋ, ನೀನು ಲೇಟು ಮಾಡಿದಷ್ಟು ನಿನಗೇ ತೊಂದರೆ ಎನ್ನುತ್ತಾ ತಮ್ಮ ತಮ್ಮ ತಾಪತ್ರಯಗಳನ್ನು ಹೇಳಿ ಕೊಳ್ಳ ತೊಡಗಿದರು.

ಸುಧಾ ಮದ್ಯಾಹ್ನ ಊಟ ಕೂಡ ಮಾಡಿರಲಿಲ್ಲ. ಆದ್ದರಿಂದ ಆಯಾಸ ಹೆಚ್ಚಾಗಿ ಕಣ್ಣು ಕತ್ತಲೆ ಬರುವಂತಾಯಿತು. ಬೆಳಗ್ಗಿನಿಂದಲೂ ಒಂದೇ ಸಮನೆ ದುಡ್ಡಿಗಾಗಿ ಅಲೆದಾಡಿ ಸೋತಿದ್ದಳು. ಇದೆಂಥಾ ಗ್ರಹಚಾರ ಕೈಯಲ್ಲಿ ದುಡ್ಡಿದ್ದರೂ ಇಲ್ಲದಂಥಾ ಪರಿಸ್ಥಿತಿ. ಮೊದಲೇ ಗೊತ್ತಿದ್ದರೆ ಬಾಸ್ ಬಳಿ ತೆಗೆದುಕೊಂಡ ಮುಂಗಡ ಹಣ ತಾನು ಬ್ಯಾಂಕ್ ನಲ್ಲೆ ಇಡುತ್ತಿದ್ದೆ. ಈಗ ಕೇವಲ ಆರು ಸಾವಿರ ಹೊಂದಿಸಲು ಅದೆಷ್ಟು ಕಷ್ಟ ಪಡಬೇಕು. ದೇವರೇ ಯಾಕಿಂಥಾ ಕಷ್ಟ ಕೊಡುತ್ತಿಯಾ ಎಂದುಕೊಳ್ಳುತ್ತಿದ್ದಂತೆ ಅವಳಿಗೆ ಅಳು ಒತ್ತರಿಸಿ ಬಂದು ಜೋರಾಗಿ ಅಳತೊಡಗಿದಳು.

ಅವಳ ಅಳು ನೋಡಿ ಮುದುಕನೊಬ್ಬ, ಬಾಮ್ಮ ನನ್ನ ಜಾಗದಲ್ಲಿ ನಿಂತ್ಕೋ, ನಾನು ನಾಳೆ ಬರುತ್ತೇನೆ ಎಂದು ಹೇಳಿದಾಗ ಸುಧಾಗೆ ಎಲ್ಲಿಲ್ಲದ ಸಂತೋಷವಾಗಿ ಆ ಮುದುಕನನ್ನು ಅಪ್ಪಿಕೊಂಡು ತನ್ನ ಸಂತಸ ವ್ಯಕ್ತ ಪಡಿಸಿದಳು. ಥಾಂಕ್ಸ್ ಅಂಕಲ್, ನಿಮ್ಮಿಂದ ತುಂಬಾ ಉಪಕಾರವಾಯಿತು, ನನ್ನ ತಾಯಿ ಜೀವ ಉಳಿಸಿದ ಪುಣ್ಯ ನಿಮಗೆ ಬರುತ್ತೆ ಎಂದು ಮನಪೂರ್ವಕವಾಗಿ ಹೇಳಿದಾಗ ಆತ ನಗುತ್ತ, ಸರಿಯಮ್ಮ ದುಡ್ಡು ತೆಗೆದುಕೊಂಡು ಅಮ್ಮನಿಗೆ ಆಪರೇಶನ್ ಮಾಡಿಸು ಎಂದು ಹೇಳಿ ಆತ ಹೊರಟುಹೋದ.

ಸುಧಾ ಸಮಯ ನೋಡಿದಾಗ ಎರಡು ಗಂಟೆಯಾಗಿತ್ತು. ಅಯ್ಯೋ ದೇವರೇ ಇನ್ನು ಅರ್ಧ ಗಂಟೆಯಲ್ಲಿ ಆಪರೇಶನ್ ಮಾಡುತ್ತೇನೆ ಎಂದಿದ್ದರು. ಈಗ ದುಡ್ಡು ಕೊಡದೆ ಹೋದರೆ ಆಪರೇಶನ್ ಮಾಡುವುದಿಲ್ಲ ಎಂದು ಗಾಬರಿಯಾಗಿ ತನಗಿಂತ ಮುಂದೆ ನಿಂತಿದ್ದವರನ್ನು ತನಗೆ ಮೊದಲು ಹೋಗಲು ಅವಕಾಶ ಮಾಡಿಕೊಡಿ ಎಂದು ಇನ್ನಿಲ್ಲದಂತೆ ಬೇಡಿಕೊಂಡಳು. ಆದರೆ ಅಲ್ಲಿ ನಿಂತಿದ್ದವರ ಮನಸ್ಸು ಕರಗಲಿಲ್ಲ. ಜನರು ಒಬ್ಬೊಬ್ಬರಾಗಿ ಮುಂದಕ್ಕೆ ಹೋಗುತ್ತಿದ್ದಂತೆ ಸುಧಾ ನಿಂತಲ್ಲೇ ಚಡಪಡಿಸಿದಳು. ದುಡ್ಡು ಡ್ರಾ ಮಾಡಿಕೊಂಡವರ ಬಳಿ ಹಣ ಕೊಡಲು ಕೇಳಿ ಅದರ ಬದಲು ತಾನು ಚೆಕ್ ನೀಡುವೆ ಎಂದು ಬೇಡಿಕೊಂಡಳು.

ಆದರೂ ಜನ ಅವಳ ಮಾತಿಗೆ ಕಿವಿಕೊಡದೆ ತಮಗೆ ದುಡ್ಡು ಸಿಕ್ಕಿದ ಸಂತಸದಿಂದ ಮನೆಯ ಕಡೆ ಧಾವಿಸ ತೊಡಗಿದರು. ಕೊನೆಗೆ ಮಹಿಳೆಯೊಬ್ಬಳು ಅವಳ ಮನವಿಗೆ ಕರಗಿ ತಾನು ತೆಗೆದ ದುಡ್ಡಿನಲ್ಲಿ ಆರು ಸಾವಿರ ರೂಪಾಯಿ ಕೊಟ್ಟು ಅವಳ ಬಳಿ ಚೆಕ್ ಬರೆಸಿಕೊಂಡಳು. ಸುಧಾ ಅತ್ಯಂತ ಸಂತಸದಿಂದ ಆಕೆಗೆ ಧನ್ಯವಾದ ತಿಳಿಸಿ ಆಸ್ಪತ್ರೆಯತ್ತ ಓಡಿದಳು. ಸಮಯ ನೋಡಿದಾಗ ಎರಡು ಮುಕ್ಕಾಲಾಗಿತ್ತು. ಅಯ್ಯೋ ದೇವರೇ ಡಾಕ್ಟರ್ ಅಮ್ಮನಿಗೆ ಆಪರೇಶನ್ ಮಾಡಲು ಶುರು ಮಾಡಿರಬಹುದೇ ಅಥವಾ ನಾನು ಬರಲೆಂದು ಕಾಯ್ತಾ ಕೂತಿರಬಹುದೇ, ಅಮ್ಮ ಹೇಗಿರಬಹುದು ಅವಳಿಗೇನೂ ಆಗದೇ ಇರಲಿ ಎಂದು ಆಶಿಸುತ್ತ ಮತ್ತೆ ಓಡಿದಳು.

ಅಷ್ಟರಲ್ಲಿ ಅವಳ ಫೋನ್ ರಿಂಗಣಿಸಿತು. ಸುಧಾಗೆ ಭಯವಾಗಿ ಬೇಗನೆ ತೆಗೆದು ನೋಡಿದಳು. ಆಸ್ಪತ್ರೆಯಿಂದ ಫೋನ್ ಬಂದಿತ್ತು. ಅವಳು ಫೋನ್ ಎತ್ತಿ ತಕ್ಷಣ, ನಾನು ದುಡ್ಡು ತೆಗೆದುಕೊಂಡು ಬರ್ತಿದ್ದೀನಿ, ಅಮ್ಮನಿಗೆ ಆಪರೇಶನ್ ಶುರು ಮಾಡಿ ಎಂದು ಹೇಳಿದಾಗ ಅತ್ತ ಕಡೆಯಿಂದ, ಇನ್ನು ಅವರಿಗೆ ಆಪರೇಶನ್ ಅಗತ್ಯವಿಲ್ಲ, ನಿಮ್ಮ ತಾಯಿ ತೀರಿಕೊಂಡರು ಎಂದು ಹೇಳಿದಾಗ ಸುಧಾಗೆ ಆಘಾತವಾಗಿ ಅಲ್ಲೇ ಕುಸಿದಳು. ಅಯ್ಯೋ ದೇವರೇ, ಏನಾಗಿ ಹೋಯ್ತಮ್ಮ, ಕೈಯಲ್ಲಿ ಕಾಸಿದ್ದೂ ನಿನ್ನ ಆಪರೇಶನ್ ಮಾಡಿಸಲಾಗಲಿಲ್ಲವಲ್ಲ. ನಿನ್ನನ್ನು ಬಿಟ್ಟು ಬೇರೆ ಯಾರಿದ್ದಾರಮ್ಮ ನನಗೆ, ಯಾಕೆ ನನ್ನನ್ನು ಬಿಟ್ಟು ಹೋದೆ, ನಾನು ಬರುವವರೆಗೂ ಕಾಯಬಾರದಿತ್ತೆ, ನೀನಿಲ್ಲದೆ ನಾನು ಹೇಗೆ ಬದುಕಲಮ್ಮ ಎನ್ನುತ್ತಾ ಸುಧಾ ಒಂದೇ ಸಮನೇ ರೋಧಿಸತೊಡಗಿದಳು.